Advertisement

ಬಿಎಸ್‌ವೈ ಕನಸಿನ ಅನುಭವ ಮಂಟಪಕ್ಕೆ ಹಿನ್ನಡೆ?

06:01 PM Jul 28, 2021 | Team Udayavani |

ಬೀದರ: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಪದತ್ಯಾಗದಿಂದಾಗಿ ಅವರ ಕನಸಿನ ಯೋಜನೆ ಬಸವಕಲ್ಯಾಣದಲ್ಲಿ “ನೂತನ ಅನುಭವ ಮಂಟಪ’ ನಿರ್ಮಾಣ ಕಾರ್ಯಕ್ಕೆ ಹಿನ್ನಡೆ ಆಗಬಹುದೇ ಎಂಬ ಅನುಮಾನ ಬಸವ ಅನುಯಾಯಿಗಳಲ್ಲಿ ಮನೆ ಮಾಡಿದೆ. ನನೆಗುದಿಗೆ ಬಿದ್ದಿದ್ದ 500 ಕೋಟಿ ರೂ. ವೆಚ್ಚದ ಮಹತ್ವಾಕಾಂಕ್ಷಿ ಯೋಜನೆಗೆ ಬಿಎಸ್‌ವೈ ಕಳೆದ ಜ.6ರಂದು ಚಾಲನೆ ನೀಡಿದ್ದರು.

Advertisement

ಬಸವಣ್ಣ ನಡೆದಾಡಿದ ಪವಿತ್ರ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ನೂತನ ಅನುಭವ ಮಂಟಪ ನಿರ್ಮಾಣ ದಶಕದ ಕನಸನ್ನು ಸಾಕಾರಗೊಳಿಸುವತ್ತ ಹೆಜ್ಜೆಯನ್ನಿಟ್ಟದ್ದು ಯಡಿಯೂರಪ್ಪ. ವಿತ್ತ ಸಚಿವರೂ ಆಗಿದ್ದ ಅವರು ಕಳೆದ ಬಜೆಟ್‌ನಲ್ಲಿ 500 ಕೋಟಿ ರೂ. ಪ್ರಕಟಿಸಿ, ಈ ಉದ್ದೇಶಕ್ಕಾಗಿ ಪ್ರಸಕ್ತ ಸಾಲಿನಲ್ಲೇ 100 ಕೋಟಿ ರೂ. ಒದಗಿಸಿದ್ದಲ್ಲದೇ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಹೆಚ್ಚುವರಿ 100 ಕೋಟಿ ರೂ. ಘೋಷಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಲೋಕಾರ್ಪಣೆ ಮಾಡಿಸುವ ವಾಗ್ಧಾನ ಮಾಡಿದ್ದರು.

ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರ (ಬಿಕೆಡಿಬಿ) ಕೈಗೆತ್ತಿಕೊಂಡಿರುವ ಬೃಹತ್‌ ಯೋಜನೆಗೆ ಈಗಾಗಲೇ ಘೋಷಿತ 200 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎನ್ನಲಾಗಿದ್ದು, ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ. ಇತ್ತೀಚಿಗೆ ಯಡಿಯೂರಪ್ಪ ಬಿಕೆಡಿಬಿ ಅಧಿಕಾರಿಗಳು, ಜಿಲ್ಲೆಯ ಶಾಸಕರ ಜತೆ ಮಹತ್ವದ ಸಭೆ ನಡೆಸಿ, ಅನುಭವ ಮಂಟಪಕ್ಕೆ ಅಗತ್ಯವಿರುವ ಭೂಮಿ ಸ್ವಾ ಧೀನ ಕುರಿತು ಚರ್ಚೆ ನಡೆಸಿದ್ದರು.

ಪ್ರಸ್ತುತ ಪ್ರಾಧಿಕಾರದ ಬಳಿ 20 ಎಕರೆ ಮತ್ತು ದಾನವಾಗಿ ಬಂದಿರುವ 11 ಎಕರೆ ಸೇರಿ 31 ಎಕರೆ ಭೂಮಿ ಇದ್ದು, ಇನ್ನುಳಿದ 69 ಎಕರೆ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲು ನಿರ್ದೇಶನ ನೀಡಿದ್ದರು. ಕನಸಿನ ಯೋಜನೆ ಯಾವುದೇ ಅಡೆತಡೆ ಇಲ್ಲದೇ ಎರಡು ವರ್ಷಗಳಲ್ಲೇ ತ್ವರಿತವಾಗಿ ಪೂರ್ಣಗೊಳಿಸಿ ದೇಶಕ್ಕೆ ಲೋಕಾರ್ಪಣೆಗೊಳಿಸುವ ಆಶಯ ಹೊಂದಿದ್ದ ಬಿಎಸ್‌ವೈ, ಈಗ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇಷ್ಟರಲ್ಲೇ ಹೊಸ ಮುಖ್ಯಮಂತ್ರಿ ಘೋಷಣೆ ಆಗಲಿದೆ. ಆದರೆ, ಬಿಎಸ್‌ವೈ ಪದತ್ಯಾಗದಿಂದ ಯೋಜನೆಗೆ ಅಡ್ಡಿ ಆಗಬಹುದೇ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದೆ. ಅನುಭವ ಮಂಟಪ ನಿರ್ಮಾಣಕ್ಕೆ
ಅನುದಾನ ಬಿಡುಗಡೆಯಾದರೂ ನಿರ್ಧಾರಿತ ವೇಗ ಸಿಗಬಹುದೇ? ಮುಂದಿನ ದಿನಗಳಲ್ಲಿ ಅಗತ್ಯ ಅನುದಾನ ದೊರೆತು ಕೆಲಸ ಪೂರ್ಣ ಆಗಬಹುದೇ ಎಂಬ ಚರ್ಚೆ ಕೇಳಿ ಬರುತ್ತಿವೆ.

ಸಮಾನತೆ ಮತ್ತು ಸೌಹಾರ್ದತೆ ಸಂಕೇತವಾಗಿರುವ, ವಿಶ್ವದ ಪ್ರಥಮ ಸಂಸತ್‌ ಎನಿಸಿಕೊಂಡಿರುವ ಅನುಭವ ಮಂಟಪ ನಿರ್ಮಾಣದ ಕನಸು ಬೇಗ ಈಡೇರಲಿ ಎಂಬುದು ಬಸವ ಭಕ್ತರ ಆಶಯ. ಈ ನಿಟ್ಟಿನಲ್ಲಿ ಹೊಸದಾಗಿ ನೇಮಕವಾಗಲಿರುವ ನೂತನ ಸಿಎಂ ಇದನ್ನು ತ್ವರಿತವಾಗಿ ಕಾರ್ಯಗತಗೊಳಿಸುತ್ತಾರೆ, ಇದಕ್ಕೆ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಪ್ರಯತ್ನಿಸುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.

Advertisement

ಅನುಭವ ಮಂಟಪ ಪಕ್ಷಿನೋಟ
ಶರಣರ ಚಳವಳಿ ನೆನಪುಗಳನ್ನು ಮರುಸೃಷ್ಟಿಸುವ ದಿಸೆಯಲ್ಲಿ ಅನುಭವ ಮಂಟಪ ಕಟ್ಟಡದ ರೂಪುರೇಷೆ ತಯಾರಿಸಲಾಗಿದ್ದು, 7.5 ಎಕರೆ ವಿಸ್ತೀರ್ಣ ಮತ್ತು 182 ಅಡಿ ಎತ್ತರದ 6 ಅಂತಸ್ತಿನ ಭವ್ಯ ಕಟ್ಟಡ ನಿರ್ಮಿಸುವ ನೀಲನಕ್ಷೆ ಹೊಂದಿದೆ. ಒಟ್ಟು 100 ಎಕರೆ ಪ್ರದೇಶದಲ್ಲಿ 500 ಕೋಟಿ ರೂ. ವೆಚ್ಚದ ನಿರ್ಮಾಣ ಯೋಜನೆ ಇದಾಗಿದೆ. ಕಟ್ಟಡದ ನೆಲ ಮಾಳಿಗೆಯಲ್ಲಿ ವಿಶಾಲವಾದ ದಾಸೋಹ ಭವನ ನಿರ್ಮಾಣ ಹಾಗೂ ಮೇಲಂತಸ್ತಿನಲ್ಲಿ 770 ಅಮರಗಣಂಗಳ ಸಂಕೇತವಾಗಿ 770 ಆಸನಗಳ ಸಭಾಭವನ. ಎಲ್ಲ ಅಂತಸ್ತುಗಳಲ್ಲಿ ಶರಣರ ವಿಚಾರಧಾರೆಗೆ ಸಂಬಂ ಸಿದ ಚಿಂತನಾ ಮಂಟಪಗಳು, ಅನುಷ್ಠಾನ ಗವಿಗಳು, ಕಂಬಗಳ ಮೇಲೆ ವಚನಗಳ ಕೆತ್ತನೆ, ಭಿತ್ತಿಚಿತ್ರ, ಉಬ್ಬುಚಿತ್ರಗಳು ಇರಲಿವೆ. ತ್ರಿಪುರಾಂತಕ ಕೆರೆಯಲ್ಲಿ ದೋಣಿ ವಿಹಾರದ ವ್ಯವಸ್ಥೆ, ಜತೆಗೆ ವಚನ ವಿವಿ ಸ್ಥಾಪನೆ ಉದ್ದೇಶವೂ ಇದೆ.

ಸಿಎಂ ಯಡಿಯೂರಪ್ಪ ಪದತ್ಯಾಗದಿಂದ ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ ಯಾವುದೇ ಹಿನ್ನೆಲೆ ಆಗದು. ಮಂಟಪ ನಿರ್ಮಾಣ ಕೇವಲ ಯಡಿಯೂರಪ್ಪ, ಲಿಂಗಾಯತರಿಗೆ ಮಾತ್ರ ಸಂಬಂಧಿಸಿದ್ದಲ್ಲ, ಎಲ್ಲರಿಗೂ ಹೆಮ್ಮೆಯ ಪ್ರತೀಕವಾದದ್ದು. ಯಾರೇ ಸಿಎಂ ಆದರೂ ಯೋಜನೆ ತ್ವರಿತವಾಗಿ ಪೂರ್ಣಗೊಂಡು ಬಿಜೆಪಿ ಸರ್ಕಾರದ ಅವಧಿ  ಯಲ್ಲೇ ಲೋಕಾರ್ಪಣೆ ಆಗಲಿದೆ.
ಡಾ| ಬಸವಲಿಂಗ ಪಟ್ಟದ್ದೇವರು, ಅಧ್ಯಕ್ಷರು, ಅನುಭವ ಮಂಟಪ ಟ್ರಸ್ಟ್‌, ಬಸವಕಲ್ಯಾಣ

*ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next