Advertisement

ಸರ್ವಸ್ವ ಧಾರೆ ಎರೆದು ಬಿಎಸ್ಪಿ ಸಂಘಟಿಸಿದ್ದೆ; ಶಾಸಕ ಎನ್‌.ಮಹೇಶ್‌

06:24 PM Apr 27, 2022 | Team Udayavani |

ಚಾಮರಾಜನಗರ: 20 ವರ್ಷ ನನ್ನ ಸರ್ವಸ್ವ ಧಾರೆ ಎರೆದು ಬಿಎಸ್‌ಪಿ ಸಂಘಟನೆ ಮಾಡಿದ್ದೆ. ನನ್ನ ವಿರುದ್ಧ ಪಿತೂರಿ ಮಾಡಿ, ಷಡ್ಯಂತ್ರ ರೂಪಿಸಿ ಏಕಾಏಕಿ ಪಕ್ಷದಿಂದಲೇ ಉಚ್ಚಾಟನೆ ಮಾಡಿದರು. ಹಾಗಾಗಿ ನಾನು ಬಿಜೆಪಿ ಸೇರುವುದು ಅನಿವಾರ್ಯವಾಯಿತು ಎಂದು ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಹೇಳಿದರು.

Advertisement

ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ನಡೆದ ಶಾಸಕ ಎನ್‌.ಮಹೇಶ್‌ ಅವರ ಅಭಿಮಾನಿಗಳ ಮತ್ತು ಬೆಂಬಲಿಗರ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಬಿಎಸ್‌ಪಿ ನನ್ನನ್ನು ಉಚ್ಛಾಟಿಸಿದ ಎರಡು ವರ್ಷ ಯಾವುದೇ ಪಕ್ಷಕ್ಕೆ ಸೇರದೆ ತಟಸ್ಥವಾಗಿದ್ದೆ. ಸಿಎಂ ಕುಮಾರಸ್ವಾಮಿ ಸರ್ಕಾರದ ಪತನವಾದ ಐದೇ ನಿಮಿಷದಲ್ಲಿ ನನ್ನನ್ನು ಬಿಎಸ್ಪಿಯಿಂದ ಉಚ್ಚಾಟನೆ ಮಾಡಲಾಯಿತು. ತಕ್ಷಣದಲ್ಲಿಯೇ ಯಾವುದೇ ನಿರ್ಧಾರ ತೆಗೆದುಕೊಳ್ಳಲಿಲ್ಲ ಎಂದು ಹೇಳಿದರು.

ಬಿಎಸ್‌ಪಿ ನಾಯಕಿ ಮಾಯಾವತಿ ಅವರು ನನ್ನನ್ನು ಮತ್ತೆ ಪಕ್ಷಕ್ಕೆ ಬರಮಾಡಿಕೊಳ್ಳುತ್ತಾರೆ ಎಂಬ ಆಶಾಭಾವನೆಯಿಂದ 2 ವರ್ಷ ಕಾದು ಕುಳಿತೆ. ನಂತರ ಬಂದ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರ ನನ್ನನ್ನು ಬಹಳ ಗೌರವಯುತವಾಗಿ ನೋಡಿಕೊಳ್ಳುವ ಜೊತೆಗೆ ಅವರು ಸಿಎಂ ಆಗುವ ವೇಳೆ ನನ್ನ ಜೊತೆಗೆ ಪ್ರಮಾಣ ವಚನ ಸ್ವೀಕರಿಸುವಂತೆ ಆಹ್ವಾನಿಸಿದರು.

ಜೊತೆಗೆ, ಪ್ರಧಾನಿ ಮೋದಿ ಪರಿಶಿಷ್ಟ ವರ್ಗದವರ ಕಲ್ಯಾಣಕ್ಕಾಗಿ ಕೈಗೊಂಡಿರುವ ಯೋಜನೆಗಳು, ಅಂಬೇಡ್ಕರ್‌ ಅವರ ಪಂಚತೀರ್ಥ ಅಭಿವೃದ್ಧಿಪಡಿಸಿದ ಕಾರಣಕ್ಕಾಗಿ ಬಿಜೆಪಿ ಸೇರಿದ್ದೇನೆ ಎಂದು ವಿವರಿಸಿದರು.

ಕ್ಷೇತ್ರದ ಅಭಿವೃದ್ಧಿಗೆ ಬಿಜೆಪಿ ಸೇರಿದೆ: ಬಿಎಸ್ಪಿ ನನ್ನ ಗೆಳೆಯರು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಪೂರ್ವಗ್ರಹ ಪೀಡಿತರಾಗಿ ನನ್ನ ಬಗೆ ನಾನಾರೀತಿಯ ಹೇಳಿಕೆ ದಾಖಲು ಮಾಡುತ್ತಿದ್ದಾರೆ. ಬೆದರಿಕೆ ಹಾಕಿದ್ದಾರೆ. ಇಂಥ ಯಾವುದೇ ಬೆದರಿಕೆಗೆ ನೀವುಗಳು ಹೆದರಬಾರದು. ಬಿಜೆಪಿ, ಬಿಎಸ್ಪಿ ತತ್ವ ಸಿದ್ಧಾಂತಗಳಲ್ಲಿ ಸಾಮ್ಯತೆ ಇದೆ. ಹೀಗಾಗಿ ಬಿಜೆಪಿ ರಾಷ್ಟ್ರದ ಮಟ್ಟದಲ್ಲಿ ಬೆಳೆಯುವ ಜೊತೆಗೆ ರಾಷ್ಟ್ರೀಯತೆ, ದೇಶದ ಜನರ ಬಗ್ಗೆ ಕಾಳಜಿ ಹೊಂದಿದೆ. ಇಂತಹ ಪಕ್ಷದ ಮೂಲಕ ನನ್ನ ಎಸ್ಸಿ, ಎಎಸ್ಟಿ ಜನರ ಅಭಿವೃದ್ಧಿಗಾಗಿ ನಾನು ಬಿಜೆಪಿಗೆ ಹೋಗಿದ್ದೇನೆ. ಕ್ಷೇತ್ರದ ಜನರ ಅಭಿವೃದ್ಧಿ ಗುರಿಯಾಗಿಸಿಕೊಂಡು ಬಿಜೆಪಿ ಸೇರಿದ್ದೇನೆ ಎಂದು ಹೇಳಿದರು.

Advertisement

ರಾಜ್ಯ ಮಟ್ಟದ ಪಟ್ಟಿಯಲ್ಲಿ ಅಗ್ರಸ್ಥಾನ: ಗುಂಡ್ಲುಪೇಟೆ ಶಾಸಕ ಸಿ.ಎಸ್‌.ನಿರಂಜನ್‌ಕುಮಾರ್‌ ಮಾತನಾಡಿ, ಎನ್‌.ಮಹೇಶ್‌ ಅವರು ಪಕ್ಷದ ರಾಜ್ಯ ಮಟ್ಟದ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಇಂದು ಅವರ ದೊಡ್ಡ ಅಭಿಮಾನಿ ಬಳಗ, ಬೆಂಬಲಿಗರು ಬಿಜೆಪಿಗೆ ಸೇರ್ಪಡೆಯಾಗಿರುವುದು ಸಂತಸ ತಂದಿದೆ ಎಂದು ತಿಳಿಸಿದರು.

ಪಕ್ಷ ಮತ್ತಷ್ಟು ಸಂಘಟಿತ:ಬಿಜೆಪಿ ವಿಭಾಗ ಪ್ರಭಾರಿ ಮೈ.ವಿ.ರವಿಶಂಕರ್‌ ಮಾತನಾಡಿ, ಡಾ.ಅಂಬೇಡ್ಕರ್‌, ಬಿಜೆಪಿ ಸಿದ್ಧಾಂತಗಳು ಒಂದಾಗುತ್ತಿದೆ. ಹೋರಾಟದ ಮೂಲಕ ಕೇಂದ್ರ, ರಾಜ್ಯದಲ್ಲಿ ಅಧಿಕಾರ ಹಿಡಿದಿದ್ದೇವೆ. ಬಿಜೆಪಿಗೆ ಸೇರ್ಪಡೆಯಾಗುವ ಮೂಲಕ ರಾಷ್ಟ್ರೀಯ ಮುಖ್ಯವಾಹಿನಿಗೆ ಸೇರ್ಪಡೆಯಾಗುತ್ತಿದ್ದೀರಿ. ಅಂಬೇಡ್ಕರ್‌ ಆಶಯಗಳನ್ನು ಬಿಜೆಪಿ ಈಡೇರಿಸುವ ಕೆಲಸ ಮಾಡುತ್ತಿದೆ. ಇದನ್ನು ನಂಬಿ ನೀವೆಲ್ಲರೂ ಸೇರ್ಪಡೆಯಾಗುತ್ತಿರುವುದು ಪಕ್ಷ ಇನ್ನಷ್ಟು
ಸಂಘಟಿತವಾಗಲಿದೆ ಎಂದರು.

ಬಿಜೆಪಿ ಸೇರ್ಪಡೆ: ಭಾರತೀಯ ಪರಿವರ್ತನಾ ಸಂಘದ ಜಿಲ್ಲಾಧ್ಯಕ್ಷ ಬಿಎಸ್‌ಪಿ ಮುಖಂಡ ಆಲೂರುಮಲ್ಲು, ಸುರೇಶ್‌, ಮಾಂಬಳ್ಳಿ ಮಹದೇವು, ರಾಮಕೃಷ್ಣ ಸಿದ್ದಪ್ಪಾಜಿ ಬಿಜೆಪಿಗೆ ಸೇರ್ಪಡೆಯಾದರು.

ಬಿಜೆಪಿ ಜಿಲ್ಲಾಧ್ಯಕ್ಷ ಆರ್‌.ಸುಂದರ್‌ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ, ಮಾಜಿ ಶಾಸಕಿ ಪರಿಮಳನಾಗಪ್ಪ ಮಾತನಾಡಿದರು. ರಾಷ್ಟ್ರೀಯ ಒಬಿಸಿ ಮೋರ್ಚಾಗಳ ಕಾರ್ಯಕಾರಿಣಿ ಸದಸ್ಯ ನೂರೊಂದುಶೆಟ್ಟಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಂಗಲ ಶಿವಕುಮಾರ್‌, ನಾಗಶ್ರೀ ಪ್ರತಾಪ್‌, ನಾರಾಯಣ ಪ್ರಸಾದ್‌, ನಗರಸಭಾಧ್ಯಕ್ಷೆ ಆಶಾ ನಟರಾಜು, ಉಪಾ ಧ್ಯಕ್ಷೆ ಪಿ.ಸುಧಾ, ಹಾಸನ ಪ್ರಭಾರಿ ನಿಜಗುಣರಾಜು, ಚುಡಾಧ್ಯಕ್ಷ ಶಾಂತಮೂರ್ತಿ ಕುಲಗಾಣ, ಎಸ್‌ಟಿ ಮೋರ್ಚಾ ಜಿಲ್ಲಾಧ್ಯಕ್ಷ ಜಯಸುಂದರ್‌, ಎಸ್ಸಿ ಮೋರ್ಚಾಧ್ಯಕ್ಷ ಕಿನಕಹಳ್ಳಿ ರಾಚಯ್ಯ, ಜಿಲ್ಲಾ ಕೋರ್‌
ಕಮಿಟಿ ಸದಸ್ಯ ಡಾ.ಎ.ಆರ್‌.ಬಾಬು, ಗ್ರಾಮಾಂತರ ಮಂಡಲ ಅಧ್ಯಕ್ಷ ಬಸವಣ್ಣ, ನಗರಾಧ್ಯಕ್ಷ ರಾಜು, ಪ್ರಧಾನ ಕಾರ್ಯದರ್ಶಿ ರಾಮಸಮುದ್ರ ಶಿವು, ಎಸ್‌ಸಿ ಮೋರ್ಚಾದ ಉಪಾಧ್ಯಕ್ಷ ವೇಣುಗೋಪಾಲ್‌ ಮೊದಲಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next