ಬೆಂಗಳೂರು: ಭಾರತ್ ಸಂಚಾರ್ ನಿಗಮ ಲಿಮಿಟೆಡ್ (ಬಿಎಸ್ಎನ್ಎಲ್)ಮುಚ್ಚಲಾಗುತ್ತಿದೆ ಎಂದು ಮಾಧ್ಯಮಗಳಲ್ಲಿ ಬಂದಿರುವ ಸುದ್ದಿ ಸತ್ಯಕ್ಕೆ ದೂರವಾಗಿದೆ ಎಂದು ಬಿಎಸ್ಎನ್ಎಲ್ ಸ್ಪಷ್ಟಪಡಿಸಿದೆ.
ಬಿಎಸ್ಎನ್ಎಲ್ ಕರ್ನಾಟಕ ವೃತ್ತದ ಮುಖ್ಯ ಪ್ರಧಾನ ವ್ಯವಸ್ಥಾಪಕ ಸುಶೀಲ್ ಕುಮಾರ್ ಅವರ ಹೇಳಿಕೆ ನಮೂದಿಸಿ, ಕೆಲವೊಂದು ಮಾಧ್ಯಮ ಮತ್ತು ಪತ್ರಿಕೆಗಳಲ್ಲಿ ಬಿಎಸ್ಎನ್ಎಲ್ ಮುಚ್ಚಲಾಗುತ್ತದೆ ಎಂಬ ಸುದ್ದಿ ಬಂದಿದೆ. ಇದು ಸತ್ಯಕ್ಕೆ ದೂರವಾಗಿದ್ದು, ಗ್ರಾಹಕರು ಇದಕ್ಕೆ ಗಮನ ನೀಡುವ ಅಗತ್ಯವಿಲ್ಲ ಎಂದು ತಿಳಿಸಿದೆ.
ಕೇಂದ್ರ ದೂರಸಂಪರ್ಕ ಸಚಿವಾಲಯದ ಮುಂದೆ ಈ ರೀತಿಯ ಯಾವ ಪ್ರಸ್ತಾವನೆಯೂ ಇಲ್ಲ. ಬದಲಿಗೆ ದೂರ ಸಂಪರ್ಕ ವಿಭಾಗವು ಬಿಎಸ್ಎನ್ಎಲ್ ಸೇವೆಯನ್ನು ಉತ್ಕೃಷ್ಟ ಗೊಳಿಸಲು ಬೇಕಾದ ಸೌಕರ್ಯ ಒದಗಿಸುವ ಭರವಸೆ ನೀಡಿದೆ. ಗ್ರಾಮೀಣ ಭಾಗದಲ್ಲಿ ಇನ್ನಷ್ಟು ವಿಸ್ತರಣೆಗೆ ಇದು ಸಹಕಾರಿಯಾಗಲಿದೆ. ಬಿಎಸ್ಎನ್ಎಲ್ನ್ನು ಡಿಜಿಟಲ್ ಕಮ್ಯೂನಿಕೇಷನ್ ಕಮಿಷನ್ ವ್ಯಾಪ್ತಿಗೆ ತರುವ ಪ್ರಸ್ತಾವನೆಗೆ ಅತಿ ಶೀಘ್ರದಲ್ಲಿ ಕೇಂದ್ರ ದೂರಸಂಪರ್ಕಸಚಿವಾಲಯ ಒಪ್ಪಿಗೆ ನೀಡುವ ಸಾಧ್ಯತೆ ಇದೆ ಎಂದು ಬಿಎಸ್ಎನ್ಎಲ್ ಪ್ರಕಟಣೆ ತಿಳಿಸಿದೆ.
ಬಿಎಸ್ಎನ್ಎಲ್ ಕರ್ನಾಟಕ ವೃತ್ತದ ಸೇವೆಯನ್ನು ಇನ್ನಷ್ಟು ಉತ್ಕೃಷ್ಟಗೊಳಿಸಲು ಹಾಗೂ ಮೊಬೈಲ್ ಸೇವೆ ವಿಸ್ತರಣೆಗೆ ಅಗತ್ಯ ಅನುದಾನ ಮೀಸಲಿಡಲಾಗಿದೆ. ಐಪಿ ನೆಟ್ವರ್ಕ ವ್ಯವಸ್ಥೆಯಲ್ಲಿರುವ 2ಜಿಯನ್ನು ಬದಲಾವಣೆ ಮಾಡಲಾಗಿದೆ. ಬೆಂಗಳೂರು,
ಚಿಕ್ಕಮಗಳೂರು ಹಾಗೂ ಮೈಸೂರು ನಗರದಲ್ಲಿ 3ಜಿ ಬದಲಿಗೆ ಅತ್ಯಾಧುನಿಕ ವರ್ಷನ್ ಆಗಿರುವ 3.75ಜಿ ಅಳವಡಿಸಲಾಗಿದೆ. 3ಜಿಯನ್ನು ಇನ್ನೂ 900ಕ್ಕೂ ಅಧಿಕ ಪ್ರದೇಶಕ್ಕೆ ವಿಸ್ತರಿಸಲಾಗುತ್ತದೆ.
ರಾಯಚೂರು, ಬೀದರ್, ವಿಜಯಪುರ, ಕಲಬುರಗಿ ಮತ್ತು ಇತರೆ ಜಿಲ್ಲೆಗಳಲ್ಲಿ ಇದೇ ಮೊದಲ ಬಾರಿಗೆ ಬಿಎಸ್ಎನ್ಎಲ್ 4ಜಿ ಪರಿಚಯಿಸಲಾಗುತ್ತಿದೆ. ಹಾಗೆಯೇ ಡೇಟಾ ಉನ್ನತೀಕರಣಕ್ಕಾಗಿ ಕೊಚ್ಚಿಯಲ್ಲಿ ಡೇಟಾ ಕೇಂದ್ರವನ್ನೂ ವಿಸ್ತರಿಸಲಾಗಿದ್ದು, ಶೇ.80ರಷ್ಟು ವಿಸ್ತರಣಾ ಕಾರ್ಯ ಮುಗಿದಿದೆ. ಉಳಿದ ಶೇ.20ರಷ್ಟು ಕಾರ್ಯ 2019ರ ಮಾ.31ರೊಳಗೆ ಪೂರ್ಣಗೊಳ್ಳಲಿದೆ.
“ಭಾರತ್ ಫೈಬರ್’ ಹೆಸರಿನಲ್ಲಿ ಫೈಬರ್ ಆಧಾರಿತ ಅತಿವೇಗದ ಡೇಟಾ ಸೇವೆ ನೀಡಲಾಗುತ್ತಿದೆ. ದೇಶದ ದೂರಸಂಪರ್ಕ ಕ್ಷೇತ್ರಕ್ಕೆ ಬಿಎಸ್ಎನ್ಎಲ್ ಸಾಕಷ್ಟು ಕೊಡುಗೆ ನೀಡಿದೆ ಮತ್ತು ನೀಡುತ್ತಲೇ ಬರುತ್ತಿದೆ.
ಬಿಎಸ್ಎನ್ಎಲ್ ಸದಾ ಗ್ರಾಹಕರೊಂದಿಗೆ ಇರುತ್ತದೆ. ಹೀಗಾಗಿ ಬಿಎಸ್ಎನ್ಎಲ್ ಮುಚ್ಚುವ ಯಾವ ಪ್ರಸ್ತಾವನೆಯೂ ಕೇಂದ್ರ ದೂರ ಸಂಪರ್ಕ ಸಚಿವಾಲಯದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದೆ.