ಹುಣಸೂರು: ಅನ್ಯಕೋಮಿನ ಯುವಕನನ್ನು ಪ್ರೀತಿಸುತ್ತಿದ್ದ ಯುವತಿಯನ್ನು ಸಹೋದರನೇ ಕೆರೆಗೆ ತಳ್ಳಿದ್ದು, ನೀರಿನಲ್ಲಿ ಮುಳುಗುತ್ತಿದ್ದ ಮಗಳನ್ನು ರಕ್ಷಿಸಲು ಹೋದ ತಾಯಿ ಕೂಡ ನೀರು ಪಾಲಾಗಿದ್ದಾರೆ. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಹಿರಿಕ್ಯಾತನಹಳ್ಳಿಯಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ.
ಹಿರಿಕ್ಯಾತನಹಳ್ಳಿಯ ರೈತ ಸತೀಶ್ ಅವರ ಪುತ್ರಿ, ದ್ವಿತೀಯ ಬಿ.ಕಾಂ.ವಿದ್ಯಾರ್ಥಿನಿ ಧನುಶ್ರೀ (19) ಹಾಗೂ ಈಕೆಯ ತಾಯಿ ಅನಿತಾ (43) ಸಾವನ್ನಪ್ಪಿದವರು. ಆರೋಪಿ ನಿತೀಶ್ ಗೌಡನನ್ನು ಪೊಲೀಸರು ಬಂಧಿಸಿದ್ದಾರೆ.
ಅನ್ಯಧರ್ಮೀಯ ಯುವಕನನ್ನು ಧನುಶ್ರೀ ಪ್ರೀತಿಸುತ್ತಿದ್ದ ವಿಷಯ ತಿಳಿದ ನಿತೀಶ್ ಗೌಡ, ತಂಗಿಗೆ ಸಾಕಷ್ಟು ಬುದ್ಧಿಮಾತು ಹೇಳಿದ್ದ. ಈ ಬಗ್ಗೆ ಮನೆಯಲ್ಲೂ ಸಾಕಷ್ಟು ಗಲಾಟೆ ನಡೆದಿತ್ತು. ಮಂಗಳವಾರ ರಾತ್ರಿ ನಿತೀಶ್ ಅನಾರೋಗ್ಯದಿಂದಿರುವ ಬಂಧುವನ್ನು ನೋಡಲೆಂದು ಹೆಮ್ಮಿಗೆ ಗ್ರಾಮಕ್ಕೆ ತಾಯಿ ಹಾಗೂ ತಂಗಿ ಜತೆ ಬೈಕ್ನಲ್ಲಿ ಹೊರಟಿದ್ದ. ಮಾರ್ಗ ಮಧ್ಯೆ ಮರೂರು ಕೆರೆ ಬಳಿ ಬೈಕ್ ನಿಲ್ಲಿಸಿ ಧನುಶ್ರೀಯನ್ನು ಕೆರೆಗೆ ತಳ್ಳಿದ್ದಾನೆ. ಗಾಬರಿಗೊಂಡ ತಾಯಿ ಮಗಳನ್ನು ರಕ್ಷಿಸಲೆಂದು ನೀರಿಗಿಳಿದಿದ್ದು, ಮೇಲೆ ಬರಲಾಗದೆ ಇಬ್ಬರೂ ಮುಳುಗಿ ಸಾವನ್ನಪ್ಪಿದ್ದಾರೆ.
ನಾನೇ ಸಾಯಿಸಿದೆ
ಅನಂತರ ಮನೆಗೆ ಬಂದ ನಿತೀಶ್ ಗೌಡ, “ಧನುಶ್ರೀಯನ್ನು ನಾನು ಕೆರೆಗೆ ತಳ್ಳಿದ್ದೇನೆ. ಕಾಪಾಡಲು ಹೋದ ಅಮ್ಮನೂ ಮುಳುಗಿದ್ದಾಳೆ. ಅಮ್ಮನನ್ನು ಕಾಪಾಡಲು ಪ್ರಯತ್ನಪಟ್ಟೆ. ಆಗಲಿಲ್ಲ’ ಎಂದು ತಂದೆಗೆ ತಿಳಿಸಿದ್ದಾನೆ. ಬಳಿಕ ತಾನೇ ಬೈಕಿನಲ್ಲಿ ತಂದೆಯನ್ನು ಕೆರೆ ಬಳಿಗೆ ಕರೆದೊಯ್ದು ಸ್ಥಳ ತೋರಿಸಿ ಮತ್ತೆ ಮನೆಗೆ ಬಂದಿದ್ದಾನೆ.