ಕ್ಸಿಯಾಮೆನ್, ಚೀನ : ಏಶ್ಯದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಿಡಲು ಪಂಚಶೀಲ ಒಪ್ಪಂದದ ಮಾರ್ಗದರ್ಶನ ಪ್ರಕಾರ ಜತೆಗೂಡಿ ಶ್ರಮಿಸಲು ಭಾರತ ಮತ್ತು ಚೀನ ಇಂದು ಪಣ ತೊಟ್ಟಿವೆ.
ಬ್ರಿಕ್ಸ್ ಶೃಂಗದ ಪಾರ್ಶ್ವದಲ್ಲಿ ಭಾರತ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನ ಅಧ್ಯಕ್ಷ ಕ್ಸಿ ಜಿನ್ಪಿಂಗ್ ನಡುವೆ ನಡೆದ ದ್ವಿಪಕ್ಷೀಯ ಸಭೆಯಲ್ಲಿ ಉಭಯ ದೇಶಗಳು ಏಶ್ಯದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಿಡಲು ಪರಸ್ಪರ ಸಹಕಾರದೊಂದಿಗೆ ಶ್ರಮಿಸುವ ಸಂಕಲ್ಪವನ್ನು ತಳೆದವು.
ಡೋಕ್ಲಾಂ ಗಡಿ ಬಿಕ್ಕಟ್ಟಿನ ಬಳಿಕದಲ್ಲಿ ಉಭಯ ದೇಶಗಳ ನಾಯಕರು ದ್ವಿಪಕ್ಷೀಯ ಮಾತುಕತೆ ನಡೆಸಿರುವುದು ಇದೇ ಮೊದಲ ಬಾರಿಯಾಗಿದೆ.
ಭಾರತ ಮತ್ತು ಚೀನ ಏಶ್ಯದ ಎರಡು ದಿಗ್ಗಜಗಳಾಗಿದ್ದು ಅತ್ಯಂತ ಬಲಿಷ್ಠ ನೆರೆಹೊರೆಯ ದೇಶಗಳಾಗಿವೆ. ಮಾತ್ರವಲ್ಲದೆ ಈ ಎರಡೂ ದೇಶಗಳು ವಿಶ್ವದ ಅತೀ ದೊಡ್ಡ ಮತ್ತು ನೂತನ ಪ್ರಬಲ ಆರ್ಥಿಕ ಶಕ್ತಿಗಳಾಗಿ ಮೂಡಿ ಬರುತ್ತಿರುವ ರಾಷ್ಟ್ರಗಳಾಗಿವೆ ಎಂದು ಚೀನ ಅಧ್ಯಕ್ಷ ಜಿನ್ಪಿಂಗ್ ಅವರು ಈ ಸಂದರ್ಭದಲ್ಲಿ ಹೇಳಿದರು.
ಐತಿಹಾಸಿಕ ಪಂಚಶೀಲದ ಐದು ತತ್ವಗಳಿಂದ ಮಾರ್ಗದರ್ಶನ ಪಡೆದು ಭಾರತದೊಂದಿಗೆ, ಏಶ್ಯದಲ್ಲಿ ಶಾಂತಿ ಮತ್ತು ಸ್ಥಿರತೆಗಾಗಿ ಹಾಗೂ ಉಭಯತರ ಸರ್ವತೋಮುಖ ಅಭಿವೃದ್ಧಿಗಾಗಿ ದುಡಿಯಲು ಚೀನ ಸಿದ್ದವಿದೆ ಎಂದು ಜಿನ್ಪಿಂಗ್ ಅವರು ಪ್ರಧಾನಿ ಮೋದಿಗೆ ಹೇಳಿದರು.
ಚೀನೀ ನಿಯೋಗದಲ್ಲಿ ಅಧ್ಯಕ್ಷ ಕ್ಸಿ ಜಿನ್ಪಿಂಗ್, ಮುಖ್ಯ ವಕ್ತಾರ ಲೂ ಕಾಂಗ್, ವಿದೇಶ ಸಚಿವ ವಾಂಗ್ ಯೀ ಮತ್ತು ಸ್ಟೇಟ್ ಕೌನ್ಸಿಲರ್ ಯಾಂಗ್ ಜೀಶೀ ಇದ್ದರು.