Advertisement

Tungabhadra Dam ಗೇಟ್ ಮುರಿದಿರುವುದು ತುಂಬಾ ನೋವಿನ ಸಂಗತಿ: ಡಿಕೆ ಶಿವಕುಮಾರ್

03:19 PM Aug 11, 2024 | Team Udayavani |

ಕೊಪ್ಪಳ: ತುಂಗಭದ್ರಾ ಜಲಾಶಯದ ಒಂದು ಗೇಟ್ ಮುರಿದಿರುವುದು ತುಂಬಾ ನೋವಿನ ಸಂಗತಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಬೇಸರ ವ್ಯಕ್ತಪಡಿಸಿದರು.

Advertisement

ತುಂಗಭದ್ರಾ ಜಲಾಶಯಕ್ಕೆ ಭಾನುವಾರ ಭೇಟಿ ನೀಡಿದ ನಂತರ ಮಾಧ್ಯಮದವರ ಜೊತೆ ಮಾತನಾಡಿ, ತುಂಗಭದ್ರಾ ಜಲಾಶಯ 12 ಲಕ್ಷ ಎಕರೆ ರೈತರಿಗೆ ನೀರು ಒದಗಿಸುತ್ತದೆ. ಈ ಜಲಾಶಯಕ್ಕೆ ದೊಡ್ಡ ಇತಿಹಾಸವಿದೆ. ಎಲ್ಲ ಕಾಲದಲ್ಲೂ ಈ ಜಲಾಶಯ ಉತ್ತಮವಾಗಿ ಕಾರ್ಯ ನಿರ್ವಹಿಸಿದೆ. ನಿನ್ನೆ ರಾತ್ರಿ 12.50 ರ ವೇಳೆಗೆ 10 ಗೇಟ್ ಗಳು ಕಾರ್ಯ ನಿರ್ವಹಿಸುತ್ತಿರುವ ವೇಳೆ 19 ನೇ ಗೇಟ್ ಮುರಿದು ಅಪಾರ ಪ್ರಮಾಣದ ನೀರು ನದಿಗೆ ಹೋಗಿರುವ ಮಾಹಿತಿಯನ್ನು, ಗೇಟ್ ಮುರಿದ ವಿಷಯವನ್ನು ತಕ್ಷಣ ಸಚಿವ ತಂಗಡಗಿಯಿಂದ ನನಗೆ ಮಾಹಿತಿ ದೊರೆಯಿತು. ಅವರು ಡ್ಯಾಂಗೆ ಅಪಾಯವಾಗುವ ಮುನ್ನೂಚನೆ ಅರಿತು ತಕ್ಷಣ ನನಗೆ ಮಾಹಿತಿ ನೀಡಿದರು ಎಂದರು.

ನಿನ್ನೆ ರಾತ್ರಿಯೇ ಎಲ್ಲ ಗೇಟ್ ಗಳನ್ನು ಓಪನ್ ಮಾಡಲು ತಿರ್ಮಾನ ಮಾಡಿದೆವು. ಗೇಟ್ ಮುರಿದ ಬಗ್ಗೆ ಡ್ಯಾಂಗೆ ಸಂಬಂಧಿಸಿದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇವೆ. 19 ನೇ ಗೇಟ್ ನಿಂದ ಅಪಾರ ಪ್ರಮಾಣದ ನದಿಗೆ ನೀರು ಹೋಗುತ್ತಿದೆ. ಇದನ್ನು ನಿಯಂತ್ರಣ ಮಾಡಲು ಎಲ್ಲ ರೀತಿಯಿಂದ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ಅಲ್ಲದೆ, ಮುರಿದ ಗೇಟಿನ ಬದಲಾಗಿ ಹೊಸ ಗೇಟ್ ನ ನಿರ್ಮಾಣಕ್ಕೆ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಡ್ಯಾಂ ಗೇಟ್ ನ ಡಿಸೈನ್ ನೋಡಿ ಕೊನೆಗೆ ಹೊಸ ಗೇಟನ್ನು ನಿರ್ಮಾಣ ಮಾಡಲಿಕ್ಕೆ ತಿರ್ಮಾನ ಮಾಡಿ, ಸಿದ್ದ ಮಾಡಲಾಗುತ್ತಿದೆ. ಆದರೂ ಹೊಸ ಗೇಟ್ ಅಳವಡಿಕೆ ಮಾಡ ಬೇಕಾದರೇ 50 ರಿಂದ 60 ಟಿಎಂಸಿ ನೀರು ನದಿಗೆ ನೀರು ಬಿಡಬೇಕಾಗಿರುವುದರಿಂದ ಸದ್ಯ ಎಲ್ಲ ಗೇಟ್ ಮೂಲಕ 98 ಸಾವಿರ ಕ್ಯೂಸೆಕ್ ನೀರು ನದಿಗೆ ಬಿಡಲಾಗುತ್ತಿದೆ. ಪ್ರಸ್ತುತ 19ನೇ ಗೇಟ್ ಒಂದರಲ್ಲಿಂದ 35 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿ ಬಿಡಲಾಗಿದೆ. ಡ್ಯಾಂ ಕೆನಾಲ್‌ಗೆ ಸದ್ಯ 25 ನೇ ಟಿಎಂಸಿ ನೀರನ್ನು ಈಗಾಗಲೇ ಬಿಡಲಾಗಿದೆ‌. ಇನ್ನೂ 90 ಟಿಎಂಸಿ ನೀರು ಬಿಡಬೇಕು ಎಂದರು.

Advertisement

ಮುರಿದ ಗೇಟ್ ಕಾಮಗಾರಿ ತ್ವರಿತವಾಗಿ ಮುಗಿಸಿ, ನೀರು ಉಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ರೈತರು ನೀರು ಇಲ್ಲ ಅಂತ ಗಾಬರಿ ಪಟ್ಟುಕೊಳ್ಳಬೇಕಿಲ್ಲ.‌ ನಾವೆಲ್ಲರೂ ಒಟ್ಟಾಗಿ ನಿಂತುಕೊಂಡು ರೈತರಿಗೆ ನೀರು ಕೊಡಲು ಮೊದಲ ಆದ್ಯತೆ ನೀಡುತ್ತೇವೆ. ತುಂಗಭದ್ರಾ ಜಲಾಶಯದ ಗೇಟ್ ಮುರಿದಿರುವುದು ಗಂಭೀರ ವಿಚಾರ, ಈ ಸಂಪತ್ತನ್ನು ನಾವು ಕಾಪಾಡಬೇಕು ಎಂದರು.

ಯಾರನ್ನು ಸದ್ಯಕ್ಕೆ ಈ ಸ್ಥಳಕ್ಕೆ ಬಿಡುವುದಿಲ್ಲ. ಈ ಡ್ಯಾಂ ಆ. 13 ನೇ ತಾರೀಖು ನಾನು ಮತ್ತು ಸಿಎಂ ಬಾಗಿನ ಅರ್ಪಿಸುವ ಕಾರ್ಯಕ್ರಮ ಮುಂದೂಡಿದ್ದೇವೆ. ಮೊದಲು ಮುರಿದ ಗೇಟ್ ರಿಪೇರಿ ಮಾಡಿ ರೈತರನ್ನು ಬದುಕಿಸುವ ಕೆಲಸ ಮಾಡುತ್ತೇವೆ. ನಮ್ಮ ಅಧಿಕಾರಿಗಳು ಈ ವಿಚಾರದಲ್ಲಿ ಪ್ರತಿಕ್ಷಣ ಕೆಲಸ ಮಾಡುತ್ತಿದ್ದಾರೆ. ಬೋರ್ಡ್ ಜಲಾಶಯವನ್ನು ಕಳೆದ ಹಲವು ವರ್ಷಗಳಿಂದ ನಿರ್ವಹಣೆ ಮಾಡುತ್ತಿದೆ. ಸದ್ಯಕ್ಕೆ ಗೇಟ್ ನಿರ್ಮಾಣ ಮಾಡುವುದಕ್ಕೆ ಮೊದಲ ಆದ್ಯತೆ ನೀಡುತ್ತಿದ್ದೇವೆ, ಯಾವ ಅಧಿಕಾರಿಯನ್ನು ಸದ್ಯಕ್ಕೆ ಹೊಣೆ ಮಾಡುವುದಿಲ್ಲ. ಬೇರೆ ಜಲಾಶಯಗಳಿಗೆ ಎರಡು ಗೇಟ್ ಗಳಿವೆ. ಇಲ್ಲಿ ಒಂದಿರುವುದರಿಂದ ಸಮಸ್ಯೆಯಾಗಿದೆ. ನವಲಿ ಜಲಾಶಯ ನಿರ್ಮಾಣ ಮಾಡುವುದು ನಮ್ಮ ಬದ್ಧತೆ, ಅದನ್ನು ಮಾಡಿಯೇ ತೀರುತ್ತೇವೆ ಎಂದರು.

ಈ ವೇಳೆ ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ನಾಲ್ಕು ಜಿಲ್ಲೆಗಳ ಶಾಸಕ, ಸಂಸದರಿದ್ದರು.

ಆತಂಕ ಬೇಡ

ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಗಳನ್ನು 6.50 ಲಕ್ಷ ಕ್ಯುಸೆಕ್ ವರೆಗೆ ನೀರು ಹೊರಬಿಡುವಂತೆ ವಿನ್ಯಾಸಗೊಳಿಸಿ ನಿರ್ಮಿಸಲಾಗಿದ್ದು, ಜಲಾಶಯದ ಇತಿಹಾಸದಲ್ಲಿ ಈವರೆಗೆ 1992ರ ಡಿಸೆಂಬರ್ ನಲ್ಲಿ ಮಾತ್ರ 3.65 ಕ್ಯುಸೆಕ್ ನೀರನ್ನು ಹೊರಬಿಡಲಾಗಿತ್ತು. ಹಾಗಾಗಿ ಕೆಳಭಾಗದಲ್ಲಿ ಆತಂಕಪಡುವ ಅಗತ್ಯವಿಲ್ಲ ಎಂದು ಟಿಬಿ ಬೋರ್ಡ್ ಕಾರ್ಯದರ್ಶಿ ಓ.ಆರ್.ಕೆ.ರೆಡ್ಡಿ ತಿಳಿಸಿದ್ದಾರೆ.

ಈ ವರ್ಷ ಕಳೆದ ಮೇ ತಿಂಗಳಲ್ಲಿ ಅಗತ್ಯ ನಿರ್ವಹಣೆ ಕೆಲಸಗಳನ್ನು ಮಾಡಲಾಗಿತ್ತು. ಗೇಟ್ ಚೈನ್ ಗಳಿಗೆ ಗ್ರೀಸಿಂಗ್, ಆಯಿಲಿಂಗ್ ಕೆಲಸಗಳನ್ನು ಮಾಡಲಾಗಿತ್ತು. ಅಲ್ಲದೆ ಕ್ರಸ್ಟ್ ಗೇಟ್ ಗಳ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಲಾಗಿತ್ತು. ಮುಂಗಾರು ಅವಧಿಗೂ ಮುನ್ನ ಜಲಾಶಯಕ್ಕೆ ಒಳಹರಿವು ಆರಂಭವಾಗಿತ್ತು. ಡ್ಯಾಂ ಬಹುತೇಕ ಭರ್ತಿಯಾದ ಬಳಿಕ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗಿತ್ತು. ಆ.1ರಂದು ಎಲ್ಲ 33 ಗೇಟ್ ಗಳನ್ನು ಎತ್ತಿ ಸುಮಾರು 1.65 ಲಕ್ಷ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗಿತ್ತು.  ಆ.10ರಂದು ಡ್ಯಾಂ ನ 12ರಿಂದ 21ರವರೆಗೆ ಒಟ್ಟು 10 ಕ್ರಸ್ಟ್ ಗೇಟ್ ಗಳನ್ನು 1.5 ಅಡಿ ಎತ್ತರಿಸಿ 22890 ಕ್ಯುಸೆಕ್ ನೀರು ಹೊರಬಿಡಲಾಗಿತ್ತು. ರಾತ್ರಿ 10.50ರ ವೇಳೆಗೆ 19ನೇ ಗೇಟ್ ಚೈನ್ ಲಿಂಕ್ ತುಂಡಾಗಿ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದೆ. ಘಟನೆ ನಡೆದ ಕೂಡಲೇ ಕೆಳಭಾಗದ ಜಿಲ್ಲಾಡಳಿತಗಳಿಗೆ ಎಚ್ಚರಿಕೆ ವಹಿಸುವಂತೆ ಮಾಹಿತಿ ರವಾನಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ‌.‌

Advertisement

Udayavani is now on Telegram. Click here to join our channel and stay updated with the latest news.

Next