Advertisement

1,320 ಮರಗಳಿಗೆ ಬೀಳಲಿದೆ ಕೊಡಲಿ; ಬ್ರಹ್ಮಾವರ-ಸೀತಾನದಿ ಚತುಷ್ಪಥ ರಸ್ತೆ ಅಭಿವೃದ್ಧಿ

01:23 PM Sep 20, 2022 | Team Udayavani |

ಉಡುಪಿ: ಬ್ರಹ್ಮಾವರ-ಸೀತಾನದಿ ರಸ್ತೆ ಅಭಿವೃದ್ಧಿ ಯೋಜನೆ ಭಾಗವಾಗಿ ಚೇರ್ಕಾಡಿಯಿಂದ ಕೆಳಕರ್ಜೆವರೆಗಿನ 5.5 ಕಿ. ಮೀ. ರಸ್ತೆ ಅಭಿವೃದ್ಧಿ ಮತ್ತು ವಿಸ್ತರಣೆ ಕಾಮಗಾರಿಗಾಗಿ 1,320 (ಚೇರ್ಕಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ 579, ಕರ್ಜೆ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ 741 ವಿವಿಧ ಜಾತಿಯ ಹಳೆಯ ಮರಗಳು) ವಿವಿಧ ಜಾತಿಯ ಮರಗಳಿಗೆ ಕೊಡಲಿ ಏಟು ಬೀಳುತ್ತಿದೆ.

Advertisement

ಹಲವು ವರ್ಷಗಳಿಂದ ಬೇಡಿಕೆಯ ಯೋಜನೆಯಾಗಿರುವ ಈ ರಸ್ತೆ ಅಭಿವೃದ್ಧಿಗೆ (ಚತುಷ್ಪಥ ಹೆದ್ದಾರಿ) ಸರಕಾರ ಮುಂದಾಗಿದ್ದು, ರಾಜ್ಯ ಹೆದ್ದಾರಿ ಯೋಜನೆಯಡಿಯಲ್ಲಿ ಹಂತಹಂತವಾಗಿ ಕಾಮಗಾರಿಯನ್ನು ಕೈಗೊಂಡಿದೆ.

ಉಡುಪಿ ಲೋಕೋಪಯೋಗಿ ಇಲಾಖೆ ಉಪವಲಯ ನೋಡಲ್‌ ಏಜೆನ್ಸಿಯಾಗಿದೆ. ಕಾಮಗಾರಿ ಕಾರ್ಯಾದೇಶ, ಅನುದಾನ ಬಿಡುಗಡೆ, ಗುತ್ತಿಗೆ, ಟೆಂಡರ್‌ ಪ್ರಕ್ರಿಯೆ ಎಲ್ಲವೂ ಬೆಂಗಳೂರಿನಲ್ಲಿ ನಡೆಯುತ್ತದೆ. ಈಗಾಗಲೇ ಬ್ರಹ್ಮಾವರ ಪೇಟೆಯಿಂದ ಚೇರ್ಕಾಡಿ ಶಾರದಾ ಸ್ಕೂಲ್‌ವರೆಗೆ ಎರಡು ಬದಿಯಲ್ಲಿ 7 ಮೀಟರ್‌ (ಡಿವೈಡರ್‌ ಹೊರತುಪಡಿಸಿ) ಅಗಲಕ್ಕೆ ವಿಸ್ತರಿಸಲಾಗುತ್ತದೆ. ಪಿಡಬ್ಲ್ಯುಡಿ ಇಲಾಖೆ ಮಾಹಿತಿಯಂತೆ ಮುಂದಿನ ಹಂತದಲ್ಲಿ 5 ಕಿ.ಮೀ. ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ.

ಪರಿಸರಹಾನಿ ಪ್ರಮಾಣ ಕಡಿಮೆಯಾಗಲಿ

ನಮ್ಮದು “ಸುಸ್ಥಿರ ಅಭಿವೃದ್ಧಿ’ ಮಂತ್ರ. ಅಭಿವೃದ್ಧಿ ಕೆಲಸಗಳೂ ನಡೆಯಬೇಕು, ಪರಿಸರ ಹಾನಿಯನ್ನೂ ಗರಿಷ್ಠ ಪ್ರಮಾಣದಲ್ಲಿ ಕಡಿಮೆ ಮಾಡಬೇಕು. ರಸ್ತೆಯಂತಹ ಕಾಮಗಾರಿಗಳಲ್ಲಿ ಒಂದಿಷ್ಟು ಮರಗಳು ಕೊನೆಯುಸಿರೆಳೆಯುತ್ತವೆ. ಆದರೆ ನಿಯಮಾನುಸಾರ ಇದರ ಹತ್ತು ಪಟ್ಟು ಗಿಡಗಳನ್ನು ನೆಡಬೇಕೆಂದಿದೆ. ಕಡಿಯುವ ಮರಗಳಿಗೆ ಹೋಲಿಸಿದರೆ ನೆಡುವ ಮರಗಳ ಕೊಡುಗೆ ಪ್ರಕೃತ ಏನೇನೂ ಅಲ್ಲ. ಇದನ್ನಾದರೂ ಸರಿಯಾಗಿ ಪಾಲಿಸುತ್ತೇವೆಯೇ ಎಂಬುದು ಜನತೆಯನ್ನು ಸದಾ ಕಾಡುವ ಪ್ರಶ್ನೆ. ಇಷ್ಟನ್ನಾದರೂ ಪಾಲಿಸುವಂತಾಗಲಿ ಎಂದು ಹಾರೈಕೆ.

Advertisement

ಒಂದು ಕಿ. ಮೀ.ಗೆ 3 ಲಕ್ಷ ರೂ. ಪರಿಹಾರ: ಲೋಕೋಪಯೋಗಿ ಗುರುತಿಸಿದ ಮರಗಳನ್ನು ಪಟ್ಟಿ ಮಾಡಿದ್ದಾರೆ. ಈ ಬಗ್ಗೆ ಜಂಟಿ ಸಮೀಕ್ಷೆಯೂ ನಡೆದಿದೆ. ಗ್ರಾ. ಪಂ.ನಲ್ಲಿ ಸಾರ್ವಜನಿಕರ ಸಭೆ ಕರೆದು ಅಭಿಪ್ರಾಯ ಪಡೆಯಲಾಗುವುದು. ಸೆ. 29 ರಂದು ಹೆಬ್ರಿ ಆರ್‌ಎಫ್ಒ ಕಚೇರಿಯಲ್ಲಿ ಅಹವಾಲು ಸಭೆಯನ್ನು ಕರೆಯಲಾಗಿದೆ. ಸರಕಾರಿ ನಿಯಮದಂತೆ ಒಂದು ಮರ ಕಡಿದಲ್ಲಿ 10 ಗಿಡಗಳನ್ನು ನೆಡುವ ಮಾರ್ಗಸೂಚಿ ಇದೆ. ಇದನ್ನು ಅರಣ್ಯ ಇಲಾಖೆ ವ್ಯವಸ್ಥಿತವಾಗಿ ಪಾಲಿಸಲಿದೆ. ಇದರ ಪರಿಹಾರವನ್ನು ರಸ್ತೆ ಕಾಮಗಾರಿ ಕೈಗೊಳ್ಳುವ ಇಲಾಖೆಯೇ ನೀಡಬೇಕು. ಅಲ್ಲದೆ ರಸ್ತೆ ಬದಿಯಲ್ಲಿ ಗಿಡ-ಮರಗಳನ್ನು ಬೆಳೆಸುವ ಸಲುವಾಗಿ ಪ್ರತೀ ಕಿ.ಮೀ.ಗೆ 3 ಲ.ರೂ. ಪರಿಹಾರವನ್ನು ಅರಣ್ಯ ಇಲಾಖೆಗೆ ನೀಡುವ ನಿಯಮವನ್ನು ಸರಕಾರ ರೂಪಿಸಿದೆ. – ಆಶಿಶ್‌ ರೆಡ್ಡಿ, ಡಿಎಫ್ಒ, ಅರಣ್ಯ ಇಲಾಖೆ, ಕುಂದಾಪುರ ಉಪ ವಿಭಾಗ

ವಿದ್ಯುತ್‌, ನೀರು ಪೈಪ್‌ಲೈನ್‌ ಸ್ಥಳಾಂತರ: ಬ್ರಹ್ಮಾವರ ಸೀತಾನದಿ ರಸ್ತೆ ಅಭಿವೃದ್ಧಿ ಯೋಜನೆ ಹಂತಹಂತವಾಗಿ ನಡೆಯುತ್ತಿದೆ. ಮುಂದಿನ ಭಾಗದಲ್ಲಿ 5.5 ಕಿ. ಮೀ. ರಸ್ತೆ ಅಭಿವೃದ್ಧಿಯಾಗಲಿದೆ. ಕಾಮಗಾರಿಗೆ ಸಲುವಾಗಿ ಮರಗಳನ್ನು ತೆರವುಗೊಳಿಸಲು ಸಮೀಕ್ಷೆ ವರದಿ ಕೊಡಲಾಗಿದೆ. ಅರಣ್ಯ ಇಲಾಖೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡು ಅನುಮತಿ ನೀಡಬೇಕಿದೆ. ಈ ಮಾರ್ಗದಲ್ಲಿ ವಿದ್ಯುತ್‌, ಕುಡಿಯುವ ನೀರು ಪೈಪ್‌ಲೈನ್‌ಗಳು ಹಾದುಹೋಗಿದ್ದು, ಇದೆಲ್ಲ ಸಂಪೂರ್ಣ ಸ್ಥಳಾಂತರಿಸಿದ ಬಳಿಕ ಕಾಮಗಾರಿ ಆರಂಭಿಸಲಾಗುತ್ತದೆ. ಈ ನಿಟ್ಟಿನಲ್ಲಿ ಪೂರ್ವ ತಯಾರಿ ನಡೆಯುತ್ತಿದೆ. – ಜಗದೀಶ್‌ ಭಟ್‌, ಎಇಇ, ಲೋಕೋಪಯೋಗಿ ಇಲಾಖೆ ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next