Advertisement

ಕರಾಳ ಸತ್ಯ ಭೇದಿಸುವ  ಒನ್‌ ಅರೆಂಜ್ಡ್ ಮರ್ಡರ್‌

04:27 PM Jul 18, 2021 | Team Udayavani |

ಮಧ್ಯಾಹ್ನದ ಹೊತ್ತು. ಹೊರಗೆ ಜಡಿಮಳೆ. ಮನೆ ತುಂಬಾ ಕಗ್ಗತ್ತಲು. ಏನಾದರೂ ಪುಸ್ತಕ ಕೈಗೆತ್ತಿಕೊಳ್ಳೋಣವೆಂದರೆ ಕರೆಂಟ್‌ ಹೋಗಿ ಸುಮಾರು ಅರ್ಧ ಗಂಟೆಯಾಗಿದೆ. ನಿದ್ದೆ ಮಾಡಿ ಬಿಡುವ ಎಂದರೆ ಅಜ್ಜಿಯ ಕಿರಿಕಿರಿ ಬೇರೆ. ವಾಟ್ಸಾéಪ್‌, ಫೇಸ್‌ ಬುಕ್‌, ಇನ್‌ಸ್ಟಾಗ್ರಾಂ ಹೀಗೆ ಹತ್ತು ಹಲವು ಸಲ ಬದಲು ಬದಲಾಗಿ ನೋಡಿದ್ದೂ ಆಯಿತು. ಇನ್ನೇನು ಕಣ್ಣಿಗೆ ನಿದ್ದೆ ಹತ್ತಬೇಕು ಎನ್ನುವಷ್ಟರಲ್ಲಿ ಆತ್ಮೀಯರೊಬ್ಬರ ವಾಟ್ಸ್ಯಾಪ್‌ ಸ್ಟೇಟಸ್‌ನಲ್ಲಿ “ಒನ್‌ ಅರೆಂಜ್ಡ್ ಮ್ಯಾರೇಜ್‌ ಮರ್ಡರ್‌’ ಶೀರ್ಷಿಕೆಯ ಪುಸ್ತಕದ ಮುಖಪುಟವೊಂದು ಕಂಡಿತು . ಕುತೂಹಲಕ್ಕಾಗಿ ಅವರ ಬಳಿ ಕೇಳಿ, ಪುಸ್ತಕ ಓದಲು ಆರಂಭಿಸಿದೆ.

Advertisement

“ಒನ್‌ ಅರೆಂಜ್ಡ್ ಮ್ಯಾರೇಜ್‌ ಮರ್ಡರ್‌’ ಲೇಖಕ ಚೇತನ್‌ ಭಗತ್‌ರ ಕಾದಂಬರಿ. ಈ ಕಾದಂಬರಿಯು ಹೊಸದಿಲ್ಲಿಯ ಒಂದು ನಿರ್ದಿಷ್ಟ ವರ್ಗದ ಸೂಕ್ಷ್ಮತೆಗಳನ್ನು ಸೆರೆ ಹಿಡಿಯುವಲ್ಲಿ ಸಮರ್ಥವಾಗಿದೆ. ಪ್ರಸಿದ್ಧ ತನಿಖಾ ಸಂಸ್ಥೆಯಲ್ಲಿ ಕಾರ್ಯ ಪ್ರವೃತ್ತರಾಗಿರುವ ಕೇಶವ ಹಾಗೂ ಸೌರಭ್‌ ಎಂಬ ಇಬ್ಬರು ಗೆಳೆಯರು ಕೊಲೆಗಾರನನ್ನು ಹುಡುಕುವ ತನಿಖೆಯ ಸುತ್ತ ಈ ಕಾದಂಬರಿ ಹೆಣೆದಿದೆ. ಪ್ರೇರಣಾ ಎಂಬಾಕೆ ಸೌರಭನ ಪ್ರಿಯ ತಮೆ. ಶ್ರೀಮಂತರಾದ ಮಲ್ಹೋತ್ರಾ ಕುಟುಂಬದ ಪ್ರೀತಿಯ ಪುತ್ರಿ. ಅತ್ಯಂತ ಚೆಲುವೆ ಹಾಗೂ ಜಾಣೆಯೂ ಆಗಿದ್ದಳು.

ಕಾರ್ತಿಕ ಮಾಸದ ಹುಣ್ಣಿಮೆ ಕಳೆದು ನಾಲ್ಕನೇ ದಿನದ ಕರ್ವ ಚೌತಿಯಂದು ಪ್ರೇರಣಾ ತನ್ನ ಪ್ರಿಯತಮನಾದ ಸೌರಭನ ನಿರೀಕ್ಷೆಯಲ್ಲಿರುತ್ತಾಳೆ. ಪ್ರೇರಣಾಳು ಆಸೆಪಟ್ಟಂತೆ ಅತ್ಯಂತ ವಿಜೃಂಭಣೆಯಿಂದ ಕರ್ವ ಚೌತಿ ಹಬ್ಬದ ತಯಾರಿ ನಡೆಯುತ್ತಿತ್ತು. ಆದರೆ ಸೌರಭ ಬಂದಾಗ ಕಾಣುವಂತದ್ದು ಮಹಡಿಯಿಂದ ಬಿದ್ದು ರಕ್ತದೋಕುಳಿಯಲ್ಲಿ ಮಿಂದ ಪ್ರೇರಣಾಳ ದೇಹ. ಈ ದೃಶ್ಯ ಸೌರಭನ ಹೃದಯಕ್ಕೆ ಆಘಾತವನ್ನು ತರುತ್ತದೆ. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಪ್ರೇರಣಾಳ ನಿಗೂಢ ಸಾವಿನ ಹಿಂದಿನ ಕರಾಳ ಸತ್ಯವನ್ನು ಈ ಕಾದಂಬರಿ ತೆರೆದಿಡುತ್ತದೆ.

ಪ್ರೇರಣಾಳ ಕೊಲೆಯ ಅಂಗವಾಗಿ ಹಲವು ರೀತಿಯ ತನಿಖೆ ನಡೆಸಿದರೂ ಫಲಕಾರಿಯಾಗದ ಕಾರಣ ಪೊಲೀಸರು ಕೇಸನ್ನು ಮುಚ್ಚಿ ಹಾಕುವ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಆದರೆ ಪ್ರೇರಣಾಳ ಪ್ರಿಯತಮ ಸೌರಭ ಹಾಗೂ ಆತನ ಗೆಳೆಯ ಕೇಶವ ಸತ್ಯ ತಿಳಿಯಲೇಬೇಕೆಂದು ನಿರ್ಧರಿಸುತ್ತಾರೆ. ಪ್ರೇರಣಾಳು ಅಚಾನಕ್‌ ಕಾಲುಜಾರಿ ಮಹಡಿಯಿಂದ ಬಿದ್ದಳ್ಳೋ ಅಥವಾ ಆತ್ಮಹತ್ಯೆಯೋ, ಕೊಲೆಯೋ ಎಂಬುದನ್ನು ನಿರ್ಧರಿಸಲು ಸಾಧ್ಯವಾಗದಂತಹ ಪರಿಸ್ಥಿತಿ ಎದುರಾಗುತ್ತದೆ. ಅನಂತರ ನಡೆಯುವ ವಿಚಾರಣೆ, ತನಿಖೆಯೂ ತುಂಬಾ ರೋಚಕ ಘಟವನ್ನು ತಲುಪುತ್ತದೆ. ಈ ಮಧ್ಯೆ ಆಕೆ ತಂದೆಯನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಗುತ್ತಾದರೂ, ಅವರು ನಿರಪರಾಧಿ ಎಂದು ಸಾಬೀತಾಗುತ್ತದೆ. ಇಂತಹ ಹಲವು ಕೌತುಕ ಅಂಶಗಳನ್ನು ಈ ಕಾದಂಬರಿ ಒಳಗೊಂಡಿದೆ.

ಗೆಳೆತನ, ದುಂದುವೆಚ್ಚ ಜೀವನ, ಮಹತ್ವಾಕಾಂಕ್ಷೆಯ ಯುವಪೀಳಿಗೆ, ವೃತ್ತಿಪರ ಬದುಕು, ಪ್ರೀತಿಯ ಬಂಧನ, ಸಾವಿನ ಭಯ, ಪಲಾಯನವಾದ ಮುಂತಾದ ವಿಷಯಗಳಿಂದ ಕೂಡಿದ ಕಾದಂಬರಿ ಇದಾಗಿದೆ. ರಮೇಶನು ತನ್ನ ಕುಟುಂಬದ ಮರ್ಯಾದೆ ಉಳಿಸಲು ಕೇಸನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಾನೆ. ಇಲ್ಲಿ ಆತನಿಗೆ ನ್ಯಾಯಕ್ಕಿಂತಲು ಸ್ಥಾನಮಾನ ಮುಖ್ಯವಾಗುತ್ತದೆ. ಇದಕ್ಕೆ ಪೂರಕವಾಗಿಯೇ ಪೊಲೀಸರು ನಡೆದುಕೊಳ್ಳುತ್ತಾರೆ. ಹಣದ ಆಸೆಗೆ ಬಿದ್ದು ಸತ್ಯವನ್ನು ಮರೆಮಾಚುತ್ತಾರೆ.

Advertisement

ಹರೆಯದ ಪ್ರಾಯದಲ್ಲಿ ಉಂಟಾಗುವ ಮಾನಸಿಕ ತುಮುಲ ಈ ಕಾದಂಬರಿಯ ಇನ್ನೊಂದು ಮುಖ್ಯ ವಿಚಾರ. ಇಲ್ಲಿ ಲೈಂಗಿಕತೆ ಎನ್ನುವುದು ಮುಚ್ಚಿಡುವ ಭಾವನೆಯಲ್ಲ. ಉಳಿದ ಭಾವನೆಯಂತೆಯೇ ಅದನ್ನು ಸಹ ಸಹಜವಾಗಿ ಕಾಣುತ್ತಾರೆ. ಭಾರತದಂತಹ ಸಾಂಸ್ಕೃತಿಕ, ಸಾಂಪ್ರದಾಯಿಕ ಹಿನ್ನೆಲೆ ಇರುವ ದೇಶದಲ್ಲಿ ಈ ರೀತಿಯ ಸಂಬಂಧ ಕಾನೂನು ರೀತಿ ಅಪರಾಧವಾಗುತ್ತದೆ. ಈ ಕಾರಣಕ್ಕಾಗಿಯೇ ಚೇತನರ ಹೆಚ್ಚಿನ ಕೃತಿಗಳು ಸಂಪ್ರದಾಯ ವಾದಿಗಳ ಮೆಚ್ಚುಗೆ ಪಡೆಯದಿರುವುದು.

ಧೂಮಪಾನ, ಮದ್ಯಪಾನ, ಮಾದಕ ವಸ್ತುವಿನ ಸೇವನೆಗೆ ಅಂಜಲಿಯಂತಹ ಹೆಣ್ಣೊಬ್ಬಳು ಬಲಿಯಾಗುವುದು ದೊಡ್ಡ ವಿಷಯವಾಗಿ ಕಾಣುವುದಿಲ್ಲ. ಆಕೆಯ ಸ್ವಭಾವದ ಬಗ್ಗೆ ಇಡೀ ಕುಟುಂಬಕ್ಕೆ ಗೊತ್ತು. ಆದರೂ ಅದನ್ನು ವಿರೋಧಿಸುವವರಿಲ್ಲ. ಇದರೆಡೆಗೆ ಬಲಿಯಾಗುವುದು ಮುಗªಳಾದ ಪ್ರೇರಣ. ಅಂಜಲಿಯ ಅಹಂಕಾರ, ಅಸೂಯೆ ,ಯಾರನ್ನು ಬಲೆಗೆ ಸೆಳೆದು ಮನವೊಲಿಸಿ ಸೋಲಿಸುವ ಗುಣ ಕೊನೆಗೆ ಆಕೆಯನ್ನೇ ಸೋಲಿಸುತ್ತದೆ.

ಈ ಕಾದಂಬರಿಯಲ್ಲಿ ತನ್ನತನದ ಉಳಿವಿಗಾಗಿ ಎರಡು ಪಾತ್ರಗಳು ಹೋರಾಡುತ್ತದೆ. ರಮೇಶ ತಾನು ಕಾಪಾಡಿಕೊಂಡು ಬಂದ ಸಂಸ್ಕೃತಿಯನ್ನು ಸಂಪ್ರದಾಯವನ್ನು ಉಳಿಸಲು ಸೆಣಸಾಡಿದರೆ ಅಂಜಲಿಯು ಅದರಿಂದ ವಿಮೋಚನೆ ಪಡೆಯಲು ಆಸೆಪಡುತ್ತಾಳೆ. ಬದುಕುವ ಮೋಹ ಇಬ್ಬರಲ್ಲೂ ಇದೆ. ಸಂಪ್ರದಾಯವಾದೀ ಮಧ್ಯಮವರ್ಗದ ಕುಟುಂಬವೊಂದು ಆಧುನಿಕತೆಗೆ ತೆರೆದುಕೊಳ್ಳಲು ಪ್ರಯತ್ನಿಸುತ್ತದೆ. ಕೆಲವೊಮ್ಮೆ ಹೆತ್ತವರ ನಿರ್ಧಾರ ಮಕ್ಕಳನ್ನು ಬಲಿ ತೆಗೆದುಕೊಳ್ಳುತ್ತದೆ. ಮುಗª ಪ್ರೇಮಿಗಳನ್ನು ದೂರವಾಗಿಸುತ್ತದೆ. ಕಾದಂಬರಿಯಲ್ಲಿ ಕೊನೆಗೂ ಉಳಿಯುವುದು ಎಲ್ಲವನ್ನು ಮೀರಿ ದ ಗೆಳೆತನ ಮಾತ್ರ, ಕೇಶವ ಹಾಗೂ ಸೌರಭರ ಅನ್ಯೋನ್ಯ ಸ್ನೇಹ.

ಈ ಕಾದಂಬರಿಯಲ್ಲಿ ಹತ್ಯೆ ಎಂಬುದು ಒಂದು ನಿಮಿತ್ತ ಮಾತ್ರ. ಈ ಮೂಲಕ ಹಲವು ಸತ್ಯಗಳನ್ನು ಬಯಲಿಗೆಳೆಯುವುದೇ ಚೇತನರ ಉದ್ದೇಶ.  ಇಂದು ಕಾಲ ಬದಲಾಗಿದೆ. ಸಾರ್ವಕಾಲಿಕ ಮೌಲ್ಯವನ್ನು ಸಾರುವ ಹಳೆಯ ಕಥೆ, ಕವನ ,ಕಾದಂಬರಿಗಳ ಜತೆಗೆ ಆ ಮೌಲ್ಯಗಳನ್ನು ಬಳಸಿಕೊಂಡೇ ರಚಿತವಾದ ಹೊಸ ರಚನೆಯತ್ತ ಇಂದಿನ ಯುವ ಪೀಳಿಗೆ ಆಸಕ್ತಿಯನ್ನು ತೋರುತ್ತದೆ. ಎಲ್ಲವನ್ನು ಬಿಚ್ಚು ಮನಸ್ಸಿನಿಂದ ಹೇಳುವ ಚೇತನರ ಕೃತಿಗಳು ಎಲ್ಲರಿಗೂ ಇಷ್ಟವಾಗಬೇಕೆಂದಿಲ್ಲ. ವ್ಯಕ್ತಿನಿಷ್ಠವಾಗಿ ನೋಡದೆ ವಸ್ತುನಿಷ್ಠವಾಗಿ ಗಮನಿಸಿದಾಗ ಕೃತಿಯ ಸಂಪೂರ್ಣ ಸತ್ವವನ್ನು ನಮಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತದೆ.

 

ಸುನೀತಾ ಮಯ್ಯ

ಕಾಸರಗೋಡು

Advertisement

Udayavani is now on Telegram. Click here to join our channel and stay updated with the latest news.

Next