Advertisement

ಬೋಲ್ಡ್‌ ರಚಿತಾ, ಡ್ಯಾನ್ಸರ್‌ ಉಪ್ಪಿ

12:03 PM Jun 01, 2019 | mahesh |

‘ಉಪೇಂದ್ರ ಅವರ ಡ್ಯಾನ್ಸ್‌ ನೋಡಿದ ಮೇಲೆ ಇನ್ನು ನಾನು ಕೂಡಾ ಸ್ವಲ್ಪ ಡ್ಯಾನ್ಸ್‌ ಕಡೆ ಗಮನಕೊಡ­ಬೇಕೆನಿ­ಸುತ್ತಿದೆ …’

Advertisement

– ಹೀಗೆ ಹೇಳಿ ಉಪೇಂದ್ರ ಮುಖ ನೋಡಿ ನಕ್ಕರು ನಟ ಕಿಚ್ಚ ಸುದೀಪ್‌. ಮಾತು ಮುಂದುವರೆಯಿತು. ‘ಉಪೇಂದ್ರ ನನ್ನಂತೆ ಒಳ್ಳೆಯ ಡ್ಯಾನ್ಸರ್‌. ಆದರೆ, ‘ಐ ಲವ್‌ ಯು’ ಹಾಡಿನಲ್ಲಿ ಅವರು ಕುಣಿದ ರೀತಿ ನನಗೆ ಕಾಂಪಿಟೇಶನ್‌ ಕೊಡುವಂತಿದೆ’ ಎನ್ನುತ್ತಾ ನಕ್ಕರು ಸುದೀಪ್‌. ಈ ಮಾತಿಗೆ ಕಾರಣವಾಗಿದ್ದು, ‘ಐ ಲವ್‌ ಯು’ ಚಿತ್ರದ ಟ್ರೇಲರ್‌ ಬಿಡುಗಡೆ. ಉಪೇಂದ್ರ ನಾಯಕರಾಗಿರುವ ಆರ್‌.ಚಂದ್ರು ನಿರ್ದೇಶನದ ‘ಐ ಲವ್‌ ಯು’ ಚಿತ್ರದ ಟ್ರೇಲರ್‌ ಬಿಡುಗಡೆಗೆ ಕಿಚ್ಚ ಸುದೀಪ್‌ ಅತಿಥಿಯಾಗಿ ಬಂದಿದ್ದರು. ಟ್ರೇಲರ್‌ ನೋಡಿ ಖುಷಿಯಾದ ಸುದೀಪ್‌, ಆರ್‌.ಚಂದ್ರು ಅವರ ಮೇಕಿಂಗ್‌, ಟ್ರೇಲರ್‌ನಲ್ಲಿ ಅಡಕವಾಗಿರುವ ಕಥಾಹಂದರ, ಉಪೇಂದ್ರ ಡ್ಯಾನ್ಸ್‌ ಬಗ್ಗೆ ಮಾತನಾಡಿ ಚಿತ್ರಕ್ಕೆ ಶುಭಕೋರಿದರು.

ಇದೇ ಸಂದರ್ಭದಲ್ಲಿ ಸುದೀಪ್‌, ಉಪೇಂದ್ರ ಅವರಲ್ಲಿ ಒಂದು ಮನವಿ ಕೂಡಾ ಇಟ್ಟರು. ಅದು ನಿರ್ದೇಶನ. ಉಪೇಂದ್ರ ಒಳ್ಳೆಯ ನಿರ್ದೇಶಕ ಎಂಬುದನ್ನು ಈಗಾಗಲೇ ಸಾಬೀತು ಮಾಡಿದ್ದಾರೆ. ಅವರು ಮಾಡಿರುವ ಒಂದೊಂದು ಸಿನಿಮಾಗಳು ಭಿನ್ನ ಕಾನ್ಸೆಪ್ಟ್ ಮೂಲಕ ಸುದ್ದಿ ಮಾಡಿದೆ. ಆದರೆ, ಉಪೇಂದ್ರ ನಿರ್ದೇಶನಕ್ಕೆ ಆಗಾಗ ಗ್ಯಾಪ್‌ ಕೊಟ್ಟು ನಟನೆಯತ್ತ ಬಿಝಿಯಾಗುತ್ತಿರುತ್ತಾರೆ. ಈ ಬಾರಿಯೂ ಅದೇ ಆಗಿದೆ. ‘ಉಪ್ಪಿ-2’ ಸಿನಿಮಾ ನಂತರ ಉಪೇಂದ್ರ ಯಾವುದೇ ಸಿನಿಮಾ ನಿರ್ದೇಶನ ಮಾಡಿಲ್ಲ. ನಿರ್ದೇಶನ ಯಾವಾಗ ಎಂಬ ಪ್ರಶ್ನೆ ಎದುರಾದಾಗೆಲ್ಲ, ‘ಮಾಡ್ತೀನಿ, ಮಾಡ್ತೀನಿ’ ಎಂಬ ಉತ್ತರ ಉಪೇಂದ್ರ ಅವರಿಂದ ಬರುತ್ತದೆ. ಈ ಮಾತು ಸುದೀಪ್‌ ಅವರ ಕಿವಿಗೂ ಬಿದ್ದಿದೆ. ಅದೇ ಕಾರಣದಿಂದ ಸುದೀಪ್‌, ಉಪೇಂದ್ರ ಅವರಲ್ಲಿ ಮತ್ತೆ ನಿರ್ದೇ­ಶನಕ್ಕೆ ಮರಳುವಂತೆ ಮನವಿ ಮಾಡಿ ದರು. ‘ಕೆಲವರು ರಾಜಕೀಯಕ್ಕೆ ಬರ್ತೀನಿ, ಬರ್ತೀನಿ ಅಂದಂತೆ, ನೀವು ನಿರ್ದೇಶನ ಮಾಡ್ತೀನಿ, ಮಾಡ್ತೀನಿ ಅಂತಿದ್ದೀರಿ, ಬೇಗ ನಿರ್ದೇಶನ ಮಾಡಿ. ಚಿತ್ರರಂಗದ ಕೆಲವು ನಿರ್ದೇಶಕರು ಯಾವತ್ತೂ ಮಲಗಬಾರದು. ಆ ತರಹದ ನಿರ್ದೇಶಕರಲ್ಲಿ ನೀವು ಒಬ್ಬರು.

ಇವತ್ತಿನ ಅನೇಕ ನಿರ್ದೇಶಕರಿಗೆ ನೀವು ಸ್ಫೂರ್ತಿ. ಹಾಗಾಗಿ, ನೀವು ಮತ್ತೆ ನಿರ್ದೇಶನ ಮಾಡಿ, ನೀವೇ ನಟಿಸಬೇಕು’ ಎಂದರು ಸುದೀಪ್‌. ಸುದೀಪ್‌ ಮಾತಿಗೆ ತಲೆದೂಗಿದ ಉಪೇಂದ್ರ ಕೂಡಾ ಕಿಚ್ಚನ ಸಿನಿಮಾ ಪ್ರೀತಿ, ಅವತ್ತಿನ ಜೋಶ್‌ ಅನ್ನು ಇವತ್ತಿಗೂ ಉಳಿಸಿಕೊಂಡು, ಹೆಚ್ಚಿಸುತ್ತಾ ಹೋದ ಬಗ್ಗೆ ಮಾತನಾಡಿದರು.

ಅಂದಹಾಗೆ, ‘ಐ ಲವ್‌ ಯು’ ಟ್ರೇಲರ್‌ ನೋಡಿದವರಿಗೆ ‘ಏನ್‌ ರಚಿತಾ ಇಷ್ಟೊಂದು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರಲ್ಲ’ ಎಂಬ ಪ್ರಶ್ನೆ ಬಾರದೇ ಇರದು. ಆ ಮಟ್ಟಿಗೆ ರಚಿತಾ ಸಖತ್‌ ಬೋಲ್ಡ್ ಆಗಿ ನಟಿಸಿದ್ದಾರೆ. ಇದಕ್ಕೆ ಕಾರಣ ಕಥೆಯಂತೆ. ನಿರ್ದೇಶಕ ಆರ್‌.ಚಂದ್ರು ಅವರು ಹೇಳಿದ ಕಥೆ ಕೇಳಿ ಫಿದಾ ಆದ ರಚಿತಾ, ಚಿತ್ರದ ಬೋಲ್ಡ್ ಹಾಡೊಂದರಲ್ಲಿ ನಟಿಸಲು ಒಪ್ಪಿಕೊಂಡರಂತೆ. ‘ಕೆಲವೊಮ್ಮೆ ನಾವು ಕಲಾವಿದರಾಗಿ ಪಾತ್ರಕ್ಕೆ ನ್ಯಾಯ ಒದಗಿಸಬೇಕಾಗುತ್ತದೆ. ಚಂದ್ರು ಅವರು ಹೇಳಿದ ಕಥೆ ಅಷ್ಟೊಂದು ಚೆನ್ನಾಗಿತ್ತು. ನಾನು ಎಷ್ಟು ಎಕ್ಸೈಟ್ ಆಗಿದ್ದೆ ಎಂದರೆ, ಉಪೇಂದ್ರ ಅವರಿಗೆ ಫೋನ್‌ ಮಾಡಿ, ‘ಆ ಸೀನ್‌ ಕೇಳಿದ್ರಾ, ಈ ಸೀನ್‌ ಕೇಳಿದ್ರಾ’ ಎಂದು ಕೇಳುತ್ತಿದ್ದೆ. ಉಪೇಂದ್ರ ಅವರು ಕೂಡಾ ಅಷ್ಟೇ ಎಕ್ಸೈಟ್ ಆಗಿದ್ದರು. ನಾನಂತೂ ಈ ಸಿನಿಮಾ ಮೇಲೆ ತುಂಬಾ ವಿಶ್ವಾಸ ಇಟ್ಟುಕೊಂಡಿದ್ದೇನೆ’ ಎಂದರು ರಚಿತಾ. ಚಿತ್ರದಲ್ಲಿ ರಚಿತಾ ಧಾರ್ಮಿಕಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿ ದ್ದಾರೆ. ನಾಯಕ ಉಪೇಂದ್ರ ಅವರು ಕೂಡಾ ಸಿನಿಮಾ ಬಗ್ಗೆ ಮಾತನಾಡಿದರು. ‘ಇದು ಹೊಸ ಬಗೆಯ ಸಿನಿಮಾವಾಗಿ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಚಂದ್ರು ನಿರ್ದೇಶಕರಿಗೆ ತುಂಬಾ ಬೆಳೆದಿದ್ದಾರೆಂಬುದು ಈ ಸಿನಿಮಾ ಮೂಲಕ ಗೊತ್ತಾಯಿತು. ಅದ್ಧೂರಿಯಾಗಿ ಮೂಡಿಬಂದಿದೆ’ ಎಂದರು.

Advertisement

ನಿರ್ಮಾಪಕ ಕಂ ನಿರ್ದೇಶಕ ಆರ್‌.ಚಂದ್ರು ಅವರಿಗೆ ಇದು ಹೊಸ ಶೈಲಿಯ ಸಿನಿಮಾ. ತಮ್ಮ ಟಿಪಿಕಲ್ ಶೈಲಿಯನ್ನು ಬಿಟ್ಟು ಔಟ್ ಅಂಡ್‌ ಔಟ್ ಕಮರ್ಷಿಯಲ್ ಸಿನಿಮಾ ಮಾಡಿರುವ ಚಂದ್ರು, ಈ ಸಿನಿಮಾ ಫ್ಯಾಮಿಲಿ ಆಡಿಯನ್ಸ್‌ಗೆ ತುಂಬಾ ಇಷ್ಟವಾಗುತ್ತದೆ ಎನ್ನಲು ಮರೆಯಲಿಲ್ಲ. ಚಿತ್ರ ಜೂನ್‌ 14 ರಂದು ಕನ್ನಡ ಹಾಗೂ ತೆಲುಗಿನಲ್ಲಿ ಬಿಡುಗಡೆಯಾಗುತ್ತಿದೆ. ಸುಮಾರು 1000 ಚಿತ್ರಮಂದಿರಗಳಲ್ಲಿ ಚಿತ್ರ ತೆರೆಕಾಣಲಿದೆ. ಜೂನ್‌ 8 ರಂದು ವಿಶಾಖಪಟ್ಟಣಂ ನಲ್ಲಿ ‘ಐ ಲವ್‌ ಯು’ ಚಿತ್ರದ ತೆಲುಗು ಅವತರಣಿಕೆಯ ಆಡಿಯೋ ಬಿಡುಗಡೆ ಅದ್ಧೂರಿಯಾಗಿ ನಡೆಯಲಿದೆ.

ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next