Advertisement

ಬಿಎಂಟಿಸಿ ಹಗರಣಗಳು: ಸಿಐಡಿ ತನಿಖೆಗೆ ಒತ್ತಡ

12:19 PM Aug 06, 2023 | Team Udayavani |

ಬೆಂಗಳೂರು:  ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯಲ್ಲಿನ ಹಗರಣಗಳು ಈಗ ನೀರಿನ ಒರತೆಯಂತೆ ಬಗೆದಷ್ಟೂ ಬಯಲಿಗೆ ಬರುತ್ತಲೇ ಇವೆ. ಕಳೆದ ಸುಮಾರು ಒಂದು ವರ್ಷದ ಅಂತರದಲ್ಲಿ 20ಕ್ಕೂ ಹೆಚ್ಚು ಫೋರ್ಜರಿ ಕಡತಗಳು ಬಯಲಿಗೆ ಬಂದಿದ್ದು, ಪ್ರಭಾವಿಗಳೂ ಶಾಮೀಲಾಗಿರುವ ಶಂಕೆ ವ್ಯಕ್ತವಾಗುತ್ತಿದೆ. ಇದರೊಂದಿಗೆ ಹಗರಣ ತೀವ್ರತೆ ಪಡೆದುಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಸಿಐಡಿ ಅಥವಾ ಲೋಕಾಯುಕ್ತದಂತಹ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂಬ ಕೂಗು ಬಿಎಂಟಿಸಿ ವಲಯದಲ್ಲೇ ಕೇಳಿಬರುತ್ತಿದೆ.

Advertisement

ಬಿಎಂಟಿಸಿ ವ್ಯಾಪ್ತಿಯಲ್ಲಿನ ವಾಣಿಜ್ಯ ಮಳಿಗೆ ಗಳು, ಪಾರ್ಕಿಂಗ್‌ ಜಾಗಗಳು, ಶೌಚಾಲಯಗಳು, ಅಪಾರ್ಟ್‌ಮೆಂಟ್‌ ಫ್ಲ್ಯಾಟ್‌ಗಳು ಸೇರಿದಂತೆ ವಿವಿಧ ಪ್ರಕಾರದ ಟೆಂಡರ್‌ ಮತ್ತು ಪರವಾನಗಿ ನವೀಕರಣ ಹಾಗೂ ಮರುಟೆಂಡರ್‌ನಲ್ಲಿ ಹತ್ತಾರು ಕೋಟಿ ರೂ. ಗುಳುಂ ಮಾಡಿರುವುದು ಕಂಡುಬಂದಿದೆ. ಒಂದಲ್ಲ ಎರಡಲ್ಲ ಇಂತಹ 20ಕ್ಕೂ ಹೆಚ್ಚು ಕಡತಗಳಿಗೆ ಹಿಂದಿದ್ದ (ಈಗಿನವರದ್ದು ಸೇರಿ) ಮೂರರಿಂದ ನಾಲ್ವರು ವ್ಯವಸ್ಥಾಪಕ ನಿರ್ದೇಶಕರ ಸಹಿ ನಕಲು ಮಾಡಿರುವುದು ಇಲಾಖಾ ತನಿಖೆಯಿಂದ ಬೆಳಕಿಗೆ ಬಂದಿದೆ ಹಾಗೂ ಇನ್ನೂ ಬರುತ್ತಲೇ ಇದೆ.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ, ಕೆಲ ಪ್ರಭಾವಿಗಳೂ ಈ ಹಗರಣದಲ್ಲಿ ಶಾಮೀಲಾಗಿರುವುದು ತನಿಖೆಯಿಂದ ಕಂಡು ಬರುತ್ತಿದೆ. ಈ ಮಧ್ಯೆ ಆರೋಪಿಗಳ ವಿರುದ್ಧ ಮೂರು ಎಫ್ಐಆರ್‌ ಅಂತೂ ದಾಖಲಾಗಿದ್ದು, ಇದುವರೆಗೆ ಎಂಟು ಜನರನ್ನು ಅಮಾನತು ಮಾಡಲಾಗಿದೆ. ಇದರಾಚೆಗೆ ಪ್ರಕರಣದ ತನಿಖೆಯಲ್ಲಿ ನಿರೀಕ್ಷಿತ ಮಟ್ಟದ ಪ್ರಗತಿ ಕಂಡುಬರುತ್ತಿಲ್ಲ. ಎಂದಿನಂತೆ ಆರೋಪಿಗಳಿಗೆ ಅರ್ಧದಷ್ಟು ವೇತನ ಪ್ರತಿ ತಿಂಗಳು ಅನಾಯಾಸವಾಗಿ ಖಾತೆಗೆ ಜಮೆ ಆಗುತ್ತಿದೆ. ಪ್ರಕರಣವು ಹತ್ತರೊಂದಿಗೆ ಹನ್ನೊಂದು ಆಗುವ ಎಲ್ಲ ಲಕ್ಷಣಗಳೂ ಕಂಡುಬರುತ್ತಿವೆ.

ನಿರಂತರವಾಗಿ ಮೂರು ವರ್ಷಗಳ ಕಾಲ ಹಲವು ವಿಭಾಗಗಳಲ್ಲಿ ಎಂಡಿಗಳ ಸಹಿಗಳು ಫೋರ್ಜರಿ ಆಗಿವೆ. ಇದರಲ್ಲಿ ಮುಖ್ಯ ಸಂಚಾರ ವ್ಯವಸ್ಥಾಪಕ (ವಾಣಿಜ್ಯ)ರಿಂದ ಹಿಡಿದು ವಿವಿಧ ಹಂತಗಳಲ್ಲಿನ ಅಧಿಕಾರಿಗಳ ತಂಡ ಇದರಲ್ಲಿ ಶಾಮೀಲಾಗಿದೆ. ಹೀಗಿರುವಾಗ, ಇಲಾಖೆ ಹಂತದಲ್ಲಿ ಪಾರದರ್ಶಕ ತನಿಖೆ ಅನುಮಾನ. ಆದ್ದರಿಂದ ಸಂಸ್ಥೆಯಿಂದ ಹೊರತಾದ ಯಾವುದಾದರೂ ತನಿಖಾ ಸಂಸ್ಥೆಯಿಂದ ಹಗರಣದ ತನಿಖೆಯ ಅವಶ್ಯಕತೆ ಇದೆ ಎಂದು ಬಿಎಂಟಿಸಿಯ ಹೆಸರು ಹೇಳಲಿಚ್ಛಿಸದ ಕೆಲ ಅಧಿಕಾರಿಗಳು ಹಾಗೂ ಸಾರಿಗೆ ನೌಕರರ ಸಂಘಟನೆಗಳಿಂದ ಒತ್ತಾಯ ಕೇಳಿಬರುತ್ತಿದೆ.

ಒಂದು ಕಣ್ಣಿಗೆ ಸುಣ್ಣ; ಒಂದು ಕಣ್ಣಿಗೆ ಬೆಣ್ಣೆ!: ಫೋರ್ಜರಿ ಪ್ರಕರಣವು ಕೆಎಸ್‌ಆರ್‌ಟಿಸಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ (ಕೆಎಸ್‌ಆರ್‌ಟಿಸಿ ಎಂಪ್ಲಾಯೀಸ್‌ ಹೌಸಿಂಗ್‌ ಕೋ-ಆಪರೇಟಿವ್‌ ಸೊಸೈಟಿ) ಹಗರಣದ ಮುಂದುವರಿದ ಭಾಗವಾ ಗಿದೆ. ಇಲ್ಲಿಯೂ ಅಧಿಕಾರಿಗಳೇ ಶಾಮೀಲಾಗಿ ಎಂಡಿಗಳ ಸಹಿ ಫೋರ್ಜರಿ ಮಾಡಿದ್ದಾರೆ. ಆದ್ದರಿಂದ ಸಿಐಡಿ ಅಥವಾ ಲೋಕಾಯುಕ್ತರಿಂದ ಈ ಸಂಬಂಧದ ತನಿಖೆ ನಡೆಸುವ ಅವಶ್ಯಕತೆ ಇದೆ ಎಂದು ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್‌ ಆಗ್ರಹಿಸಿದ್ದಾರೆ.

Advertisement

“ಸಾರಿಗೆ ನೌಕರರು ಈ ಹಿಂದೆ ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿದಾಗ ಇದೇ ಅಧಿಕಾರಿಗಳು ನೂರಾರು ನೌಕರರನ್ನು ವಜಾಗೊಳಿಸಿದರು. ವರ್ಷ ಕಳೆದರೂ ಸುಮಾರು ನೂರು ಪ್ರಕರಣಗಳು ಇನ್ನೂ ಇತ್ಯರ್ಥವಾಗಿಲ್ಲ. ಮತ್ತೂಂದೆಡೆ ಹತ್ತಾರು ಕಡೆ ಫೋರ್ಜರಿ ಮಾಡಿ ಲೂಟಿ ಮಾಡಿದ ಅಧಿಕಾರಿಗಳ ತಂಡವನ್ನು ಬರೀ ಅಮಾನತುಗೊಳಿಸಿ, ಅರ್ಧ ಸಂಬಳ ನೀಡುತ್ತಿದೆ. ಒಂದು ಕಣ್ಣಿಗೆ ಬೆಣ್ಣೆ ಮತ್ತೂಂದು ಕಣ್ಣಿಗೆ ಸುಣ್ಣ. ಈ ಧೋರಣೆ ಯಾಕೆ? ಹಗರಣದ ವಿರುದ್ಧ ತೀವ್ರ ಸ್ವರೂಪದ ತನಿಖೆ ನಡೆಸಲು ಆದೇಶಿಸುವಂತೆ ಸಾರಿಗೆ ಸಚಿವರನ್ನು ಖುದ್ದು ಭೇಟಿಯಾಗಿ ಮನವಿ ಮಾಡಲಾಗುವುದು. ಈಗಾಗಲೇ ಸಮಯವನ್ನೂ ಕೇಳಿದ್ದೇವೆ. ಇನ್ನೂ ಸಿಕ್ಕಿಲ್ಲ’ ಎಂದು ಚಂದ್ರಶೇಖರ್‌ ತಿಳಿಸಿದರು.

“ಸ್ವತಃ ಎಂಡಿಗಳ ಸಹಿ ಫೋರ್ಜರಿ ಮಾಡಿರುವುದರಿಂದ ಇಲ್ಲಿ ಪಲಾಯನಕ್ಕೆ ಅವಕಾಶ ಇಲ್ಲ ಎಂಬ ಭಾವನೆ ಇದೆ. ಆದರೆ, ತನಿಖೆ ಇನ್ನಷ್ಟು ತೀವ್ರವಾಗಿ ನಡೆಯಬೇಕಾದ ಅವಶ್ಯಕತೆ ಇದೆ. ಒಂದು ವೇಳೆ ಈಗಿನ ಧೋರಣೆ ಮುಂದುವರಿದರೆ, ಅಲ್ಲಿಗೆ ಹಿರಿಯ ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎಂಬುದು ಸಾಬೀತಾಗುತ್ತದೆ. ಬಿಎಂಟಿಸಿಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ಮತ್ತು ಈಗ ಕಾರ್ಯನಿರ್ವಹಿಸುತ್ತಿರುವವರು ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳಬೇಕು. ಜತೆಗೆ ಸಂಘಟನೆಯಿಂದಲೂ ಹಗರಣದ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಸಚಿವರ ಮೇಲೂ ಒತ್ತಡ ತರುವ ಕೆಲಸ ಆಗಲಿದೆ’ ಎಂದು ಕೆಎಸ್‌ಆರ್‌ಟಿಸಿ ನೌಕರರ ಜಂಟಿ ಕ್ರಿಯಾಸಮಿತಿ ಅಧ್ಯಕ್ಷ ಎಚ್‌.ವಿ. ಅನಂತಸುಬ್ಬರಾವ್‌ ಸ್ಪಷ್ಟಪಡಿಸಿದರು.

 ಒಂದು ಕಡತದ ಕತೆ!:

ವರ್ಷದ ಹಿಂದೆ ಕೇವಲ ಒಂದು ನಂದಿನಿ ಬೂತ್‌ಗೆ ಪರವಾನಗಿ ನವೀಕರಣಕ್ಕೆ ಸಂಬಂಧಿಸಿದ ಕಡತ ಆಕಸ್ಮಿಕವಾಗಿ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರ ಕಣ್ಣಿಗೆ ಬಿತ್ತು. ಅದರ ಜಾಡುಹಿಡಿದು ಹೋದಾಗ ಫೋರ್ಜರಿ ಆಗಿರುವುದು ಬಯಲಾಯಿತು. ಅಂತಹದ್ದೇ “ಫೋರ್ಜರಿ ಕೇಸು’ಗಳು ಗುತ್ತಿಗೆ ನವೀಕರಣ ಕುರಿತ ಕಡತಗಳಲ್ಲೂ ಕಂಡುಬಂತು. ಅಲ್ಲಿಂದ ಬಿಎಂಟಿಸಿಯಲ್ಲಿ ಕಡತ ಶೋಧನೆಯ ಯಜ್ಞ ಶುರುವಾಗಿದ್ದು, ಈಗಲೂ ಮುಂದುವರಿದಿದೆ.  ಬಿಎಂಟಿಸಿ ಮೂಲಗಳ ಪ್ರಕಾರ ಇದುವರೆಗೆ 20ರಿಂದ 25 ಕಡತಗಳಲ್ಲಿ ಫೋರ್ಜರಿ ಆಗಿರುವುದು ಪತ್ತೆಯಾಗಿದೆ. ಸುಮಾರು ಎಂಟು ತಿಂಗಳ ಹಿಂದೆ ಆರೋಪಿ ಮುಖ್ಯ ಸಂಚಾರ ವ್ಯವಸ್ಥಾಪಕ (ವಾಣಿಜ್ಯ)ರಾಗಿದ್ದವರ ವಿರುದ್ಧ ಎಫ್ಐಆರ್‌ ದಾಖಲಾಗಿ, ಬಂಧನಕ್ಕೊಳಪಡಿಸಲಾಗಿತ್ತು. ಪ್ರಕರಣದಲ್ಲಿ ಐವರನ್ನು ಅಮಾನತುಗೊಳಿಸಲಾಗಿತ್ತು. ಈಗ ಅದೇ ತಂಡದ ವಿರುದ್ಧ ಮತ್ತೆರಡು ಎಫ್ಐಆರ್‌ ಆಗಿವೆ.

-ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next