Advertisement

ವರ್ಗಾವಣೆಗೂ ಕೃಷಿಗೂ ಏನಿದೇನಿದು ನಂಟು?

11:32 AM Mar 15, 2021 | Team Udayavani |

ಬೆಂಗಳೂರು: ಸುಭಾಶ್‌ ಭೋವಿ ಸುಮಾರು 13 ವರ್ಷಗಳಿಂದ ಬಿಎಂಟಿಸಿ ಬಸ್‌ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮ್ಮೂರು ಮುದ್ದೇಬಿ ಹಾಳದ ಹಿರೇಮುರಾಳದಲ್ಲಿ 4.18 ಎಕರೆ ಜಮೀನು ಇದೆ. ಆದರೆ ಮಳೆಯಾಶ್ರಿತ ಭೂಮಿಯಾಗಿದ್ದರಿಂದ ಬೇರೊಬ್ಬರಿಗೆ ಊಳುಮೆ ಮಾಡಲು ಕೊಟ್ಟು ಬಿಟ್ಟಿದ್ದರು. ಈಗ ಜಮೀನು ಬಿಡಿಸಿಕೊಂಡು ಸ್ವತಃ ಬೇಸಾಯಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಇದಕ್ಕೆ ಎರಡು ಕಾರಣಗಳಿವೆ- ಒಂದು ಅಂತರನಿಗಮ ವರ್ಗಾವಣೆ ಮೂಲಕ ಊರಿಗೆ ಹೋಗುವ ಅವಕಾಶ ಸಿಕ್ಕಿದೆ. ಮತ್ತೂಂದು ತಮ್ಮ ಜಮೀನಿಗೆ ಕೃಷ್ಣ ಭಾಗ್ಯ ಜಲ ನಿಗಮದಡಿ ನೀರು ಹರಿಯಲಿದೆ!

Advertisement

ಮುಂಡರಗಿ ತಾಲೂಕಿನ ಹಮಿಗಿ ಗ್ರಾಮದಮ ಪಂಚಾಕ್ಷರಿ ಭಜಂತ್ರಿ ಇಲ್ಲಿನ ಕೋರಮಂಗಲದಲ್ಲಿ ಅಂದಾಜು ಹತ್ತು ವರ್ಷಗಳಿಂದ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಊರಲ್ಲಿ ನಾಲ್ಕು ಎಕರೆ ಜಮೀನಿದೆ. ಮೂರು ವರ್ಷಗಳ ಹಿಂದೆ ಗಂಗಾ ಕಲ್ಯಾಣದಡಿ ಅದು ನೀರಾವರಿಗೆ ಪರಿವರ್ತನೆಯಾಗಿದ್ದು, ನಿಖರ ಆದಾಯ ಬರುತ್ತಿದೆ. ವರ್ಗಾವಣೆಯಾದ ನಂತರ ಊರಿಗೆ ತೆರಳಿ, ಬೇಸಾಯ ಮಾಡುವ  ಆಲೋಚನೆಯಲ್ಲಿದ್ದಾರೆ.

– ಇವು ಕೇವಲ ಒಂದೆರಡು ಉದಾಹರಣೆಗಳಷ್ಟೇ. ಇಂತಹ ನೂರಾರು ಸಾರಿಗೆ ನೌಕರರ ಲೆಕ್ಕಾಚಾರ ಇದೇ ಆಗಿದೆ. ಇದಕ್ಕೆ ಸಕಾರಣವೂ ಇದೆ. ಇತ್ತೀಚಿನ ವರ್ಷಗಳಲ್ಲಿ ಉತ್ತರ ಕರ್ನಾಟಕದಲ್ಲಿ ಹಲವಾರು ನೀರಾವರಿ ಯೋಜನೆಗಳು ಬರುತ್ತಿವೆ. ರಾಮಥಾಳ (ಪ್ರಾಯೋಗಿಕ ಅನುಷ್ಠಾನ ಆಗಿದೆ), ಸಿಂಗಟಾಲೂರು, ಗುತ್ತಿಬಸವಣ್ಣ ಏತ ನೀರಾವರಿ ಗಂಗಾ ಕಲ್ಯಾಣದಂತಹ ಹಲವಾರು ಯೋಜನೆಗಳು ಬಂದಿವೆ. ಜತೆಗೆ ಮಹದಾಯಿ ಪ್ರಗತಿಯಲ್ಲಿದೆ. ಇದರ ಪರಿಣಾಮ ಆಮ ಭಾಗದ ಕೃಷಿ ಅನಿಶ್ಚಿತತೆಯಿಂದ ನಿಶ್ಚಿತತೆಯ ಕಡೆಗೆ ಮುಖಮಾಡುತ್ತಿದೆ. ಇದೇ ಸಂದರ್ಭದಲ್ಲಿ ಸಾರಿಗೆ ನೌಕರರಿಗೆ ವರ್ಗಾವಣೆ ಭಾಗ್ಯ ಸಿಗುತ್ತಿದೆ.

ಸಿಗಲಿದೆಯೇ ಹೊಸ ತಿರುವು?: ಹತ್ತಾರು ವರ್ಷಗಳಿಂದ ಬೆಂಗಳೂರು, ಮಂಗಳೂರು ಸೇರಿದಂತೆ ದೂರದ ಮಹಾನಗರಗಳಲ್ಲಿ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆ ಒತ್ತಡದಿಂದ ಹೊರಬರುವುದರ ಜತೆಗೆ ನೆಮ್ಮದಿಗಾಗಿ ಹಾತೊರೆಯುತ್ತಿದ್ದಾರೆ. ಪಾಳಿಯಲ್ಲಿ ಕೆಲಸ ಮಾಡುವುದರಿಂದ ಸಮಯವೂ ಉಳಿತಾಯ ಆಗುತ್ತದೆ. ಆ ಉಳಿದ ಸಮಯದಲ್ಲಿ ಬೇಸಾಯ ಮಾಡಬಹುದು ಎಂಬ ಲೆಕ್ಕಾಚಾರ. ಈಗಾಗಲೇ ಲಾಕ್‌ಡೌನ್‌ ಅವಧಿಯಲ್ಲಿ ವೇತನ ವಿಳಂಬವಾದರೂ ಕೃಷಿ ಕೈಹಿಡಿದಿದೆ ಹಾಗೂ ತುಸು ಅನುಭವವೂ ಆಗಿದೆ. ಜತೆಗೆ ಹೆಚ್ಚು ಆದಾಯ ಗಳಿಕೆಯೂ ಆಗಲಿದೆ.

ಈ ಹಿನ್ನೆಲೆಯಲ್ಲಿ ಅಂತರ ನಿಗಮಗಳ ವರ್ಗಾವಣೆ ತವರಿಗೆ ಹಿಂತಿರುಗುವ ಖುಷಿ ಮಾತ್ರವಲ್ಲ; ಜೀವನದ ಹೊಸ ತಿರುವಿಗೂ ಕಾರಣವಾಗಲಿದೆ. ತಂದೆ-ತಾಯಿ, ಸ್ನೇಹಿತರನ್ನು ಬಿಟ್ಟು ಹತ್ತಾರು ವರ್ಷ ದೂರದ ಬೆಂಗಳೂರಲ್ಲಿ ದುಡಿದಿದ್ದಾಯಿತು. ಈಗ ನಮ್ಮೂರಿಗೆ ಕೃಷ್ಣಾ ಭಾಗ್ಯ ಜಲ ನಿಗಮದಿಂದ ನೀರು ಹರಿಯಲಿದೆ. ಈಗಾಗಲೇ ಕಾಲುವೆ ನಮ್ಮ ಹೊಲದ ಪಕ್ಕದಲ್ಲೇ ಹಾದುಹೋಗಿದೆ. ವರ್ಗಾವಣೆಯಾದರೆ, ಕೆಲಸ ಮುಗಿಸಿಕೊಂಡು ಊರಲ್ಲೇ ಬೇಸಾಯವನ್ನೂ ಮಾಡಬಹುದು. ನೆಮ್ಮದಿ ಇರುತ್ತದೆ ಎಂದು ಸುಭಾಶ್‌ ಭೋವಿ ಹೇಳುತ್ತಾರೆ. ಮಹದಾಯಿ ಯೋಜನೆ ವ್ಯಾಪ್ತಿಯಲ್ಲಿ ನಮ್ಮೂರೂ ಬರುತ್ತದೆ. ಯೋಜನೆ ಜಾರಿಯಾದರೆ, ನಮ್ಮ ಜಮೀನಿಗೂ ನೀರು ಹರಿಯುತ್ತದೆ. ಎರಡು ಎಕರೆ ಜಮೀನಿದೆ. ನನ್ನ ತಮ್ಮನಿಗೆ ಕೃಷಿಗೆ ನೆರವಾಗುತ್ತೇನೆ. ಅದರಲ್ಲಿ ಹೆಚ್ಚು ಆದಾಯ ಗಳಿಸಬಹುದು ಎಂದು ನರಗುಂದ ಮೂಲದ ಬಿಎಂಟಿಸಿ ಚಾಲಕ ಬಸವರಾಜ ತಿಳಿಸುತ್ತಾರೆ.

Advertisement

ಇನ್ನು ಕೆಲವರು ಮಹಾನಗರಗಳ ಜೀವನ ಪದ್ಧತಿಗೆ ಹೊಂದಿಕೊಂಡಿದ್ದು, ಮಕ್ಕಳ ಶಿಕ್ಷಣ ದೃಷ್ಟಿಯಿಂದ ಇಲ್ಲಿಯೇ ಉಳಿದುಕೊಳ್ಳುವ ಆಲೋಚನೆಯಲ್ಲೂ ಇದ್ದಾರೆ. ಅದೇನೇ ಇರಲಿ, ಸಾರಿಗೆ ನೌಕರರ ಈ ಬಯಕೆ ಒಮ್ಮೆಲೆ ಈಡೇರುವಂತಹದ್ದೂ ಅಲ್ಲ. ಸರ್ಕಾರ ಪ್ರತಿ ವರ್ಷ ಒಟ್ಟಾರೆ ಸಿಬ್ಬಂದಿಯ ಗರಿಷ್ಠ ಶೇ. 2ರಷ್ಟು ಮಾತ್ರ ವರ್ಗಾವಣೆಗೆ ಅವಕಾಶ ಕಲ್ಪಿಸಿದೆ. ಅದೂ ಜೇಷ್ಠತೆ ಆಧಾರದ ಮೇಲೆ ವರ್ಗಾವಣೆ ಭಾಗ್ಯ ಸಿಗಲಿದೆ. ಇದಕ್ಕೂ ಮುನ್ನ ಆಯಾ ನಿಗಮಗಳಲ್ಲಿನ ಸಿಬ್ಬಂದಿ ಪ್ರಮಾಣ, ಆರ್ಥಿಕ ಸ್ಥಿತಿಗತಿ ಲೆಕ್ಕಾಚಾರವೂ ನಡೆಯಲಿದೆ. ಇದಾದ ಬಳಿಕ ಆನ್‌ಲೈನ್‌ ಅರ್ಜಿ ಸ್ವೀಕಾರ, ಅದರಲ್ಲಿ ಜೇಷ್ಠತಾ ಪಟ್ಟಿ ಸಿದ್ಧಪಡಿಸುವುದು ಸೇರಿದಂತೆ ಇಡೀ ಪ್ರಕ್ರಿಯೆಗೆ ಕನಿಷ್ಠ ನಾಲ್ಕಾರು ತಿಂಗಳು ಕಾಯುವುದು ಅನಿವಾರ್ಯ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸುತ್ತಾರೆ.

ಉ.ಕ.ಕ್ಕೆ ಇತ್ತೀಚೆಗೆ ಬಂದ ನೀರಾವರಿ ಯೋಜನೆಗಳಿವು :

  • ಏತನೀರಾವರಿ ಯೋಜನೆಗಳಾದ ಬೂದಿಹಾಳ, ಚಿಕ್ಕಪಡಸಲಗಿ, ಗುಡ್ಡದ ಮಲ್ಲಾಪುರ, ಸಿಂಗಟಾಲೂರು, ಗುತ್ತಿ ಬಸವಣ್ಣ, ವರದಾ-ಬೇಡ್ತಿ ನದಿ ಜೋಡಣೆ.
  • ಅದೇ ರೀತಿ, ಪ್ರಗತಿಯಲ್ಲಿರುವ ಯೋಜನೆಗಳಾದ ರಾಮಥಾಳ, ಬೆಣ್ಣಿತೊರಾ, ಭದ್ರಾ, ಭೀಮಾ ಏತ ನೀರಾವರಿ, ತುಂಗಾ ಮೇಲ್ದಂಡೆ, ಮಾರ್ಕಂಡೇಯ, ಹಿಪ್ಪರಗಿ ಮುಂತಾದವು ವಿವಿಧ ಹಂತದಲ್ಲಿದೆ.

 

-ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next