Advertisement

ಹೈರಾಣಾಗಿಸಿದ ನೀಲಿ ನಾಲಿಗೆ ರೋಗ

03:48 PM Nov 19, 2019 | Suhan S |

ಚಿತ್ರದುರ್ಗ: ಜಿಲ್ಲೆಯಲ್ಲಿ ಸುರಿದ ವಿಪರೀತ ಮಳೆ ಈಗ ಕುರಿಗಳಿಗೆ ಸಂಕಷ್ಟ ತಂದಿಟ್ಟಿದೆ. “ನೀಲಿ ನಾಲಿಗೆ’ ಎಂಬ ವಿಚಿತ್ರ ರೋಗಕ್ಕೆ ಸಾಲು ಸಾಲು ಕುರಿಗಳು ಬಲಿಯಾಗುತ್ತಿವೆ.

Advertisement

ರಾಜ್ಯಾದ್ಯಂತ “ನೀಲಿ ನಾಲಿಗೆ’ ರೋಗ ಉಲ್ಬಣಗೊಂಡಿದ್ದು, ಈ ವೈರಸ್‌ ನಿಂದ ಕುರಿಗಳನ್ನು ಉಳಿಸಿಕೊಳ್ಳಲು ಕುರಿಗಾಹಿಗಳು ಹರಸಾಹಸ ಮಾಡುತ್ತಿದ್ದಾರೆ. ಪಶು ಸಾಕಾಣಿಕೆಯೇ ಪ್ರಮುಖ ಕಸುಬಾಗಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ 15 ದಿನಗಳಲ್ಲಿ 782 ಕುರಿಗಳು ಈ ರೋಗದಿಂದ ಮೃತಪಟ್ಟಿವೆ ಎಂದು ಪಶು ಸಂಗೋಪನಾ ಇಲಾಖೆಯ ಅಂಕಿ-ಅಂಶ ಹೇಳುತ್ತಿದೆ. ಆದರೆ ಕುರಿಗಾಹಿಗಳ ಪ್ರಕಾರ ಈ ಸಂಖ್ಯೆ ಸಾವಿರ ದಾಟಿದೆ. ಇನ್ನೂ 14,986 ಕುರಿಗಳಲ್ಲಿ ರೋಗದ ವೈರಸ್‌ ಇದೆ. ಅತಿಯಾದ ಮಳೆ ಮೆಕ್ಕೆಜೋಳ,ಈರುಳ್ಳಿ, ಕಡಲೆ ಬೆಳೆಗಳಿಗೆ ಕುತ್ತು ತಂದಿತ್ತು. ಈಗ ಮುಂದುವರೆದ ಸರಣಿಯಾಗಿ ಕುರಿಗಳನ್ನು ಆಪೋಷನ ತೆಗೆದುಕೊಳ್ಳುತ್ತಿರುವುದು ಕುರಿಗಾಹಿಗಳಲ್ಲಿ ಆತಂಕ ಮೂಡಿಸಿದೆ. ಜಿಲ್ಲೆಯಲ್ಲಿ 13,48,651 ಕುರಿಗಳಿದ್ದು, ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ, ತುರುವನೂರು ಹೋಬಳಿ ಭಾಗದಲ್ಲಿ ಈ ರೋಗ ಕಾಣಿಸಿಕೊಂಡಿದೆ. ಒಮ್ಮೆ “ನೀಲಿ ನಾಲಿಗೆ’ ರೋಗದ ವೈರಸ್‌ ಬಂದರೆ ಸುಮಾರು 15 ದಿನ ಬಾಧಿಸುತ್ತದೆ.

ರೋಗದ ಹೆಸರೇ ಗೊತ್ತಿರಲಿಲ್ಲ!: ವಿಚಿತ್ರ ಕಾಯಿಲೆಯಿಂದ ಸತ್ತ ಕುರಿಗಳನ್ನು ತಂದು ಜಿಲ್ಲಾಧಿಕಾರಿ ಕಚೇರಿ ಮುಂದಿಟ್ಟು ಕಳೆದ ವಾರ ರೈತರು ಪ್ರತಿಭಟನೆ ನಡೆಸಿದ್ದರು. ಹೆಸರು ಗೊತ್ತಿಲ್ಲದ ರೋಗದಿಂದ ಸಾಲು ಸಾಲು ಕುರಿಗಳು ಸಾಯುತ್ತಿವೆ, ಔಷಧ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದರು. ಕುರಿಗಳು ಸಾಯುತ್ತಿರುವ ಬಗ್ಗೆ ಪಶು ಇಲಾಖೆ ವೈದ್ಯರು, ಅ ಧಿಕಾರಿಗಳನ್ನು ಕೇಳಿದರೆ ನಿರ್ಲಕ್ಷ ಮಾಡುತ್ತಿದ್ದಾರೆ. ಪಕ್ಕದ ಆಂಧ್ರಪ್ರದೇಶದಿಂದ ಔಷಧ ತಂದು ಉಪಚರಿಸಿದರೂ ರೋಗ ವಾಸಿಯಾಗುತ್ತಿಲ್ಲ ಎಂದು ದೂರಿದ್ದರು. ಈ ವೇಳೆ ಎಚ್ಚೆತ್ತ ಅಧಿಕಾರಿಗಳು ಇದು ನೀಲಿ ನಾಲಿಗೆ ರೋಗ. ಮಳೆಗಾಲದಲ್ಲಿ ಬರುತ್ತದೆ. ಇಲಾಖೆಯಿಂದ ಔಷಧ ಸರಬರಾಜು ಮಾಡುತ್ತೇವೆ ಎಂದು ತಿಳಿಸಿದ್ದರು.

ವ್ಯಾಕ್ಸಿನ್‌ ಸಂಗ್ರಹದಲ್ಲಿ ವಿಫಲ: ಪಶು ಸಂಗೋಪನಾ ಇಲಾಖೆ ಅಧಿಕಾರಿಗಳಿಗೆ ಸಾಮಾನ್ಯವಾಗಿ ಯಾವ ಸಂದರ್ಭದಲ್ಲಿ ಯಾವ ರೋಗ ಬರುತ್ತದೆ ಎನ್ನುವ ಮಾಹಿತಿ ಇರುತ್ತದೆ. ಅದರಂತೆ ಈ ವರ್ಷ ಜಿಲ್ಲೆಯಲ್ಲಿ ಮಳೆ ಹೆಚ್ಚಾಗುತ್ತಲೇ ನೀಲಿ ನಾಲಿಗೆ ರೋಗ ಕಾಣಿಸಿಕೊಳ್ಳಬಹುದು ಎನ್ನುವ ಮಾಹಿತಿಯೂ ಇತ್ತು. ಆದರೆ ರೋಗ ನಿವಾರಣೆಗೆ ಅಗತ್ಯ ವ್ಯಾಕ್ಸಿನ್‌ ತಯಾರಿಸಿ ಇಟ್ಟುಕೊಳ್ಳುವಲ್ಲಿ ಎಡವಿದ್ದಾರೆ. ಪರಿಣಾಮ ರೈತರು 300 ರಿಂದ 800 ರೂ.ವರೆಗೆ ಖರ್ಚು ಮಾಡಿ ಪಕ್ಕದ ಆಂಧ್ರಪ್ರದೇಶದ ಅನಂತಪುರದಿಂದ

ವ್ಯಾಕ್ಸಿನ್‌ ಖರೀದಿಸಿ ತಮ್ಮ ಕುರಿಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ರೋಗ ಬಂದ ನಂತರ 30 ಸಾವಿರ ಡೋಸ್‌ ವ್ಯಾಕ್ಸಿನ್‌ ತಂದು ಕುರಿಗಳಿಗೆ ಹಾಕಿದ್ದೇವೆ. ಇನ್ನೂ 50 ಸಾವಿರ ಡೋಸ್‌ ಬರಲಿದೆ ಎನ್ನುವುದು ಪಶು ಇಲಾಖೆ ಅಧಿಕಾರಿಗಳ ಪ್ರತಿಕ್ರಿಯೆ. ಒಟ್ಟಿನಲ್ಲಿ ಕುರಿಗಳಿಗೆ ಮಾರಕವಾಗಿರುವ ನೀಲಿ ನಾಲಿಗೆ ರೋಗ ನಿಯಂತ್ರಣಕ್ಕೆ ಅಧಿಕಾರಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಿದೆ.

Advertisement

 

ಏನಿದು ನೀಲಿ ನಾಲಿಗೆ ರೋಗ?: 1905ರಲ್ಲಿ ಆಫ್ರಿಕಾದಲ್ಲಿ ಕಾಣಿಸಿಕೊಂಡ ಈ ರೋಗ 1964ರಲ್ಲಿ ಭಾರತದಲ್ಲಿ ಪತ್ತೆಯಾಯಿತು. ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಾಣಿಸಿಕೊಂಡಿರುವ ಈ ರೋಗ, ಕುರುಡು ನೊಣಗಳಿಂದ ಹರಡುತ್ತದೆ. ನೊಣ ಕಚ್ಚಿದಾಗ ಹಾಗೂ ನೊಣ ಕುಳಿತ ಹುಲ್ಲನ್ನು ಕುರಿಗಳು ತಿಂದಾಗ ನೀಲಿ ನಾಲಿಗೆ ರೋಗ ಹರಡುತ್ತದೆ.

ವೈರಸ್‌ ಹರಡುವುದು ಹೇಗೆ?: ಮಳೆ ಬಂದು ಎರಡು ಮೂರು ವಾರ ಅಥವಾ ತಿಂಗಳಲ್ಲಿ ಈ ರೋಗ ಕಾಣಿಸಿಕೊಳ್ಳುತ್ತದೆ. ನಿಂತ ನೀರು ಅಥವಾ ಜೌಗು ಪ್ರದೇಶದಲ್ಲಿ ಕುರುಡು ನೊಣಗಳು ಉತ್ಪತ್ತಿಯಾಗುತ್ತವೆ. ಈ ನೊಣಗಳಿಂದ ಜಾನುವಾರುಗಳಿಗೆ ರೋಗ ಹರಡುತ್ತದೆ. ವಿಪರೀತ ಜ್ವರ ಬಂದು ಬಾಯಿಯಲ್ಲಿ ಜೊಲ್ಲು ಸುರಿಯುತ್ತದೆ. ಬಾಯಿ, ಮುಖ, ಮೂಗುಗಳಲ್ಲಿ ಬಾವು ಕಂಡು ಬರುತ್ತದೆ. ಕುರಿ ವೇವು ತಿನ್ನಲು ಆಗದಷ್ಟು ನಿಶ್ಯಕ್ತಿಯಿಂದ ಬಳಲುತ್ತದೆ.

ರೋಗದ ಬಗ್ಗೆ ಆತಂಕ ಬೇಡ. ಈಗಾಗಲೇ ವ್ಯಾಕ್ಸಿನ್‌ ಮಾಡುತ್ತಿದ್ದು, ರೋಗದ ಲಕ್ಷಣ ಕಂಡು ಬಂದರೆ ಹತ್ತಿರದ ಪಶು ಆಸ್ಪತ್ರೆಗೆ ತಿಳಿಸಿ. ಸತ್ತ ಕುರಿಗಳನ್ನು ಬಿಸಾಡದೆ ಸೂಕ್ತ ರೀತಿಯಲ್ಲಿ ಮಣ್ಣು ಮಾಡಿ. ಸತ್ತ ಕುರಿಗಳಿಗೆ ಇಲಾಖೆ ವೈದ್ಯರ ಮೂಲಕ ಪಿಎಂ ಮಾಡಿಸಿ ವರದಿ ಸಲ್ಲಿಸಿದರೆ ಪ್ರತಿ ಕುರಿಗೆ 5 ಸಾವಿರ ರೂ. ಪರಿಹಾರ ಸಿಗಲಿದೆ. –ಡಾ| ಟಿ. ಕೃಷ್ಣಪ್ಪ, ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕರು

 

-ತಿಪ್ಪೇಸ್ವಾಮಿ ನಾಕೀಕೆರೆ

Advertisement

Udayavani is now on Telegram. Click here to join our channel and stay updated with the latest news.

Next