Advertisement

ವಿವೇಕಾನಂದರ ಪಡೆದ ನಾವೇ ಧನ್ಯರು; ಹರ್ಷನಾರಾಯಣ

05:51 PM Jan 13, 2021 | Nagendra Trasi |

ವಿಜಯಪುರ: ಇಡಿ ಜಗತ್ತೇ ಕಂಡ ಒಬ್ಬ ಮಹಾನ್‌ ವ್ಯಕ್ತಿ ಸ್ವಾಮಿ ವಿವೇಕಾನಂದ ಅವರನ್ನು ಪಡೆದ ಭಾರತೀಯರಾದ ನಾವೇ ಧನ್ಯರು ಎಂದು ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ ಹರ್ಷನಾರಾಯಣ ಹೇಳಿದರು. ಮಂಗಳವಾರ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಹಾಗೂ ವಿವಿಯ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ವತಿಯಿಂದ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 158ನೇ ಜಯಂತಿ ಮತ್ತು ರಾಷ್ಟ್ರೀಯ ಯುವ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.

Advertisement

ವಿವೇಕಾನಂದರು ಜನರ ಸೇವೆಯನ್ನು ಮಾಡುವುದಕ್ಕೆ ಧರೆಗಿಳಿದು ಬಂದ ದೇವ. ಇಡಿ ವಿಶ್ವ ವ್ಯಾಪಕವಾಗಿ ಪ್ರೀತಿಸುವಂತ ವ್ಯಕ್ತಿ ಎಂದರೆ ಅದು ಕೇವಲ
ವಿವೇಕಾನಂದರು. ಅವರು ದೈಹಿಕವಾಗಿ ಗತಿಸಿ ಒಂದೂವರೆ ಶತಮಾನವಾದರೂ ವೈಚಾರಿಕವಾಗಿ ಅವರ ಚಿಂತನೆಗಳು ಇಂದಿಗೂ ಜೀವಂತ ಎಂಬುದನ್ನು ಅರಿಯಲೆಂದೇ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂದರು.

ಇಂದು ನಾವೆಲ್ಲರೂ ಮಹಿಳೆಯರ ಸಮಾನತೆ, ಹಕ್ಕುಗಳ ಬಗ್ಗೆ ಮಾತನಾಡುತ್ತೇವೆ. ಶತಮಾನಗಳ ಹಿಂದೆಯೇ ವಿವೇಕಾನಂದರು ಮಹಿಳೆಯರ ಸಮಾನತೆ
ಪ್ರತಿಪಾದಿಸಿದ್ದರು. ಅಮೆರಿಕದ ಚಿಕಾಗೋದಿಂದ ಹಿಡಿದು ವಿಶ್ವದ ಬಹುತೇಕ ರಾಷ್ಟ್ರಗಳು ವಿವೇಕಾನಂದರ ಜಯಂತಿ ಆಚರಿಸುತ್ತವೆ. ಹೀಗಾಗಿ 39 ವರ್ಷ ಮಾತ್ರ ಬದುಕಿದರೂ, ಇಡಿ ಜಗತ್ತು ತನ್ನತ್ತ ನೋಡುವಂಥ ಆದರ್ಶ ವ್ಯಕ್ತಿತ್ವ ಹೊಂದಿದ್ದ ವಿವೇಕಾನಂದರ ಚಿಂತನೆಗಳು ಇಂದಿಗೂ ಯುವ ಜನರಿಗೆ ಸ್ಫೂರ್ತಿದಾಯಕ ಎಂದರು.

ಪ್ರಸ್ತಾವಿಕ ಮಾತನಾಡಿದ ಎಬಿವಿಪಿ ಜಿಲ್ಲಾ ಸಹಾಯಕ ಕಾರ್ಯದರ್ಶಿ ಸಚಿನ ಕುಳಗೇರಿ, ಮಹಿಳೆಯರು, ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ಮತ್ತು ದೌರ್ಜನ್ಯಗಳ ವಿರುದ್ಧ ಎಬಿವಿಪಿ ಮಿಷನ್‌ ಸಾಹಸ್‌ ಅಭಿಯಾನದ  ಮೂಲಕ ಮಹಿಳೆಯರಿಗೆ ಕರಾಟೆ ತರಬೇತಿ ನೀಡಿ ಆತ್ಮಸ್ಥೈರ್ಯ ತುಂಬುವ ಹಾಗೂ ಸ್ವಯಂ ಆತ್ಮರಕ್ಷಣೆಗೆ ಸಿದ್ಧಗೊಳಿಸುವ ಕೆಲಸ ಮಾಡುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಅಕ್ಕಮಹಾದೇವಿ ಮಹಿಳಾ ವಿವಿ ಪ್ರಭಾರ ಕುಲಪತಿ ನಾಮದೇವಗೌಡ ಮಾತನಾಡಿ, ವ್ಯಕ್ತಿಗೆ ನೈತಿಕ ಸಾಮರ್ಥ್ಯ ಎನ್ನುವುದು ಬಹಳ
ಮುಖ್ಯ. ಎಲ್ಲರು ಬದುಕಿದಂತೆ ಬದುಕದೇ ಸಾರ್ಥಕತೆ ಪಡೆಯುವ ಜೀವನ ನಡೆಸಬೇಕು. ಸಮಾಜ ನಮಗೆ ಏನು ಕೊಡುತ್ತದೆ ಎನ್ನುವುದಕ್ಕಿಂತ ಸಮಾಜಕ್ಕೆ ನಾವೇನು ಕೊಡುತ್ತೇವೆ ಎಂಬುದನ್ನು ಅರಿತು ಸಮಾಜಮುಖೀ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು. ತಮ್ಮ ಗುರು ಹಾಕಿದ ಮಾರ್ಗದಲ್ಲಿ ನಡೆದ ನರೇಂದ್ರ ಸ್ವಾಮಿ ವಿವೇಕಾನಂದ ಆಗಿ ರೂಪುಗೊಂಡರು. ಗುರು ಹಾಕಿದ ಪಥ ಮರೆತ ದಿನವೇ ನಮ್ಮ ಪತನ ಎಂಬುದನ್ನು ಯುವ ಪೀಳಿಗೆ ಅರಿಯಬೇಕು
ಎಂದರು.

Advertisement

ವಿವಿ ಮೌಲ್ಯಮಾಪನ ಕುಲಸಚಿವ ಪಿ.ಜಿ. ತಡಸದ, ಸಿಂಡಿಕೇಟ್‌ ಸದಸ್ಯ ಎಚ್‌.ವೆಂಕಟೇಶ, ಎಬಿವಿಪಿ ನಗರ ಕಾರ್ಯದರ್ಶಿ ಸಿದ್ದು ಪತ್ತಾರ ಇದ್ದರು. ಎಬಿವಿಪಿ ನಗರ ಉಪಾಧ್ಯಕ್ಷೆ ಡಾ| ಸೀಮಾ ಸಾರವಾಡ ಸ್ವಾಗತಿಸಿದರು. ನಿಂಗಣ್ಣ ಮನಗೂಳಿ ಪರಿಚಯಿಸಿದರು. ವಿವೇಕಾನಂದ ಅಧ್ಯಯನ ಕೇಂದ್ರದ ಸಂಯೋಜಕ ಡಾ| ದೀಪಕ ಶಿಂಧೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next