Advertisement

ಬ್ಲ್ಯಾಕ್‌ ಫಂಗಸ್‌; ಜಿಲ್ಲೆಗೆ ಎರಡು ದಿನದಲ್ಲಿ ಔಷಧ

06:03 PM May 25, 2021 | Team Udayavani |

 

Advertisement

ಬಾಗಲಕೋಟೆ: ಬ್ಲ್ಯಾಕ್‌ ಫಂಗಸ್‌ ಹೊಸ ರೋಗವಲ್ಲ. ಇದು ಹಿಂದೆಯೂ ಇತ್ತು. ಮುಂದೆಯೂ ಇರುತ್ತದೆ. ಇದಕ್ಕೆ ಯಾರೂ ಧೈರ್ಯಗೆಡುವ ಅಗತ್ಯವಿಲ್ಲ. ಇನ್ನೆರಡು ದಿನಗಳಲ್ಲಿ ಜಿಲ್ಲೆಗೆ ಔಷಧ ಪೂರೈಕೆಯಾಗಲಿದ್ದು, ಜಿಲ್ಲೆಯಲ್ಲಿ ಈ ರೋಗಕ್ಕೆ ಚಿಕಿತ್ಸೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಹೇಳಿದರು.

ಜಿಲ್ಲೆಯಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಕುರಿತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆಯ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಜಿಲ್ಲೆಯ ಬ್ಲ್ಯಾಕ್‌ ಫಂಗಸ್‌ ರೋಗಿಗಳ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ಕಳುಹಿಸಲಾಗುತ್ತಿದ್ದು, ಔಷಧ ಪೂರೈಕೆಯಾದ ತಕ್ಷಣ ಇನ್ನು ಮುಂದೆ ಬಾಗಲಕೋಟೆಯಲ್ಲಿಯೇ ಚಿಕಿತ್ಸೆ ಆರಂಭಿಸಲಾಗುತ್ತಿದೆ. ಈ ವರೆಗೆ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯನ್ನು ನೋಡಲ್‌ ಸೆಂಟರ್‌ ನ್ನಾಗಿ ಮಾಡಲಾಗಿತ್ತು. ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ತೊಂದರೆಯಾಗುತ್ತಿರುವುದನ್ನು ಕಂಡು ಮುಖ್ಯಮಂತ್ರಿಗಳು ಆಯಾ ಜಿಲ್ಲೆಯಲ್ಲಿಯೇ ಚಿಕಿತ್ಸೆ ಪ್ರಾರಂಭಿಸಲು ತಿಳಿಸಿದ್ದಾರೆ. ಚಿಕಿತ್ಸೆಗೆ ಬೇಕಾದ ಔಷಧಿ ಪೂರೈಕೆಯಾದ ನಂತರ, ಜಿಲ್ಲಾಸ್ಪತ್ರೆ ಹಾಗೂ ಕುಮಾರೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಆರಂಭಿಸಲಾಗುತ್ತಿದೆ ಎಂದು ತಿಳಿಸಿದರು.

ಹೆಚ್ಚಿನ ದರ; ಕ್ರಮಕ್ಕೆ ಸೂಚನೆ: ಜಿಲ್ಲೆಯಲ್ಲಿ ಸ್ಕಾನಿಂಗ್‌ಗೆ ಸರಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರ ಪಡೆಯುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಜಿಲ್ಲೆಯಲ್ಲಿರುವ ಸ್ಕಾನ್‌ ಬಗ್ಗೆ ಮಾಹಿತಿ ಪಡೆದ ಸಚಿವರು ಇದಕ್ಕೆ ಸಂಬಂಧಿಸಿದ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ|ಅರವಿಂದ ಪಟ್ಟಣಶೆಟ್ಟಿ ಅವರಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಹೆಚ್ಚಿನ ದರ ಪಡೆದದ್ದು ಕಂಡುಬಂದಲ್ಲಿ ಅಂತಹ ಸ್ಕಾನಿಂಗ್‌ ಸೆಂಟರ್‌ ಗಳ ಅನುಮತಿ ರದ್ದುಪಡಿಸಲು ಸೂಚಿಸಿದರು.

ಭೇಟಿ ನೀಡಿ ಪರಿಶೀಲಿಸಿದ ಬಗ್ಗೆ ವರದಿ ನೀಡಬೇಕು ಎಂದು ಸೂಚಿಸಿದರು. ಶಾಸಕ ಡಾ|ವೀರಣ್ಣ ಚರಂತಿಮಠ ಮಾತನಾಡಿ, ಕೋವಿಡ್‌ ರೋಗಿಗಳಿಗೆ ಸ್ಟಿರಾಯ್ಡ್ ನಿಗದಿತ ಪ್ರಮಾಣಕ್ಕಿಂತ ಹೆಚ್ಚಾಗಿ ನೀಡುತ್ತಿರುವುದರಿಂದ ಹಾಗೂ ಆಕ್ಸಿಜನ್‌ ನಳಿಕೆಯಲ್ಲಿ ಶುದ್ಧ ನೀರು ಹಾಕದೇ ಅದರ ಬದಲು ಸಾದಾ ನೀರು ಹಾಕುತ್ತಿರುವುದರಿಂದ ಬ್ಲ್ಯಾಕ್‌ ಫಂಗಸ್‌ ಕಂಡು ಬರುತ್ತಿದೆ. ಈ ಬಗ್ಗೆ ಖಾಸಗಿ ಆಸ್ಪತ್ರೆಯ ವೈದ್ಯರ ಸಭೆ ನಡೆಸಿ ಸೂಚನೆ ನೀಡಲಾಗಿದೆ. ಈ ಸೋಂಕು ಹೊಸದೇನಲ್ಲ. ಹಿಂದಿನಿಂದಲೂ ಇರುವ ಕಾಯಿಲೆಯಾಗಿರುವುದಾಗಿ ತಿಳಿಸಿದರು.

Advertisement

ನಿತ್ಯ 2 ಸಾವಿರ ಪರೀಕ್ಷೆ: ಪ್ರತಿದಿನ 2 ಸಾವಿರಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಕೋವಿಡ್‌ ಸ್ಯಾಂಪಲ್‌ ತೆಗೆಯಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಎ.ಎನ್‌ .ದೇಸಾಯಿ ಸಭೆಗೆ ತಿಳಿಸಿದಾಗ ಸ್ಯಾಂಪಲ್‌ ತೆಗೆದ ತಕ್ಷಣ ಪರೀಕ್ಷೆಗೆ ಕಳುಹಿಸದೇ 5-6 ದಿನಗಳ ಕಾಲ ತಮ್ಮಲ್ಲಿಯೇ ಇಟ್ಟುಕೊಳ್ಳುತ್ತಿದ್ದಾರೆ. ಇದರಿಂದ ಪರೀಕ್ಷೆ ತಡವಾಗುತ್ತಿರುವುದರಿಂದ ಸೋಂಕು ಹರಡಲು ಅವಕಾಶ ಕೊಟ್ಟಂತಾಗುತ್ತದೆ. ಈ ಬಗ್ಗೆ ಕ್ರಮ ವಹಿಸುವಂತೆ ರಾಜ್ಯ ಕೈ ಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿದ್ದು ಸವದಿ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಈ ಬಗ್ಗೆ ನಮ್ಮ ಗಮನಕ್ಕೂ ಬಂದಿದ್ದು, ಮುಂದೆ ಈ ರೀತಿಯಾಗದಂತೆ ನಿಗಾ ವಹಿಸಲು ನಿರ್ದೇಶನ ನೀಡುವುದಾಗಿ ತಿಳಿಸಿದರು. ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ|ಕೆ.ರಾಜೇಂದ್ರ ಮಾತನಾಡಿ, ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಬರುತ್ತಿದ್ದು, ಈಗಾಗಲೇ ಮೊದಲನೇ ಡೋಸ್‌ ಪಡೆದವರಿಗೆ ಎರಡನೇ ಡೋಸ್‌ಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಅಲ್ಲದೇ 45 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೂ ಸಹ ಲಸಿಕೆ ನೀಡಲಾಗುತ್ತಿದ್ದು, 18ರಿಂದ 44 ವರ್ಷದೊಳಗಿನ ವಯೋಮಾನದವರಿಗೆ ಮುಂಚೂಣಿಯಲ್ಲಿರುವ ಕಾರ್ಯಕರ್ತರಿಗೆ ಮಾತ್ರ ಮೊದಲ ಡೋಸ್‌ ನೀಡಲಾಗುತ್ತಿದೆ. ಆದರೆ, ಸಾಮಾನ್ಯ ಜನರಿಗೆ‌ ಲಸಿಕೆ ನೀಡುವದನ್ನು ಸರಕಾರದ ಆದೇಶದನ್ವಯ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದರು. ಸಂಸದ ಪಿ.ಸಿ.ಗದ್ದಿಗೌಡರ, ವಿಧಾನಪರಿಷತ್‌ ಸದಸ್ಯ ಹನಮಂತ ನಿರಾಣಿ, ಜಿಪಂ ಸಿಇಒ ಟಿ.ಭೂಬಾಲನ, ಜಿಪಂ ಉಪ ಕಾರ್ಯದರ್ಶಿ ಅಮರೇಶ ನಾಯಕ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪ ವಿಭಾಗಾಧಿಕಾರಿ ಎಂ.ಗಂಗಪ್ಪ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ|ವಿಜಯ ಕಂಠಿ, ತಹಶೀಲ್ದಾರ್‌ ಗುರುಸಿದ್ದಯ್ಯ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next