Advertisement
ಬುಧವಾರ ದೆಹಲಿಯಲ್ಲಿ ಬಿಜೆಪಿ ಸೇರಿದ ಬಳಿಕ ಶುಕ್ರವಾರ ಬೆಂಗಳೂರಿಗೆ ಆಗಮಿಸಿದ ಅವರಿಗೆ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿಗೆ ಉಜ್ವಲ ಭವಿಷ್ಯವಿದೆ ಎಂದು ತಿಳಿಸಿದರು.
Related Articles
Advertisement
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮಾತನಾಡಿ, ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶವೇ ಕರ್ನಾಟಕದಲ್ಲೂ ಪುನರಾವರ್ತನೆಯಾಗಲಿದ್ದು, ಮುಂದಿನ ವರ್ಷ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಮಿಷನ್-150 ಕಾರ್ಯಕ್ರಮಕ್ಕೆ ಎಸ್.ಎಂ.ಕೃಷ್ಣ ಅವರ ಸೇರ್ಪಡೆ ಹೆಚ್ಚು ಬಲ ತಂದುಕೊಟ್ಟಿದೆ. ನಾವು 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದ್ದೇವೆ. ಕಾಂಗ್ರೆಸ್ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಎಸ್.ಎಂ.ಕೃಷ್ಣ ನೆರವೂ ಸಿಗಲಿದೆ ಎಂದು ಹೇಳಿದರು. ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಶಾಸಕರಾದ ಅರವಿಂದ ಲಿಂಬಾವಳಿ, ಲಕ್ಷ್ಮಣ ಸವದಿ, ವಿಧಾನ ಪರಿಷತ್ ಸದಸ್ಯ ರಾಮಚಂದ್ರಗೌಡ ಇತರರಿದ್ದರು.
ಇದಕ್ಕೂ ಮುನ್ನ ದೆಹಲಿಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಎಸ್.ಎಂ.ಕೃಷ್ಣ ಅವರನ್ನು ರಾಜ್ಯ ಬಿಜೆಪಿ ವತಿಯಿಂದ ಸ್ವಾಗತಿಸಿ ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿಗೆ ಕರೆ ತರಲಾಯಿತು. ಈ ಸಂದರ್ಭದಲ್ಲಿ ಪಟಾಸಿ ಸಿಡಿಸಿ ಅವರನ್ನು ಬರಮಾಡಿಕೊಳ್ಳಲಾಯಿತು. ಬಳಿಕ ನಡೆದ ಕಾರ್ಯಕ್ರಮದಲ್ಲಿ ಅವರನ್ನು ಬಿಜೆಪಿ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಖರ್ಗೆ ವಯಸ್ಸು ಗೊತ್ತು, ರಾಹುಲ್ ವಯಸ್ಸೆಷ್ಟು?ಈ ವಯಸ್ಸಿನಲ್ಲಿ ಅಮಿತ್ ಶಾ ಅವರ ಕೈಕೆಳಗೆ ಕೆಲಸ ಮಾಡುವ ಪರಿಸ್ಥಿತಿ ಎಸ್.ಎಂ.ಕೃಷ್ಣ ಅವರಿಗೆ ಏಕೆ ಎಂಬ ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, “ಮಲ್ಲಿಕಾರ್ಜುನ ಖರ್ಗೆ ಅವರ ವಯಸ್ಸು ಎಷ್ಟು ಎಂಬುದು ನನಗೆ ಗೊತ್ತು. ಅವರಿಗೆ 73, 74 ವರ್ಷ ವಯಸ್ಸಾಗಿದೆ. ಆದರೆ, ಅವರ ಪಕ್ಷದ ಉಪಾಧ್ಯಕ್ಷರಿಗೆ ಎಷ್ಟು ವಯಸ್ಸು? ಬೇರೆಯವರನ್ನು ಬೊಟ್ಟು ಮಾಡುವ ಮುನ್ನ ತಾವೇನು ಎಂಬುದನ್ನು ತಿಳಿದುಕೊಳ್ಳಬೇಕು. ಕಾಂಗ್ರೆಸ್ ನಾಯಕರಲ್ಲಿ ಈ ದ್ವಂದ್ವಗಳು ಇರುವುದರಿಂದಲೇ ಕಾಂಗ್ರೆಸ್ ಹಳಿತಪ್ಪಿದೆ’ ಎಂದು ಈ ಸಂದರ್ಭದಲ್ಲಿ ಕಿಡಿ ಕಾರಿದರು. ಕಾಂಗ್ರೆಸ್ ಮೂಡ್ಬಿಟ್ಟು ಹೊರಬರದ ಕೃಷ್ಣ
ಬಿಜೆಪಿ ಸೇರಿದರೂ ಎಸ್.ಎಂ.ಕೃಷ್ಣ ಕಾಂಗ್ರೆಸ್ ಮೂಡ್ನಿಂದ ಹೊರಬಂದಿಲ್ಲ ಎಂಬುದಕ್ಕೆ ಶುಕ್ರವಾರ ಅವರ ಮಾತೇ ಸಾಕ್ಷಿಯಾಯಿತು. ಅಲ್ಲದೆ, ಕಾಂಗ್ರೆಸ್ನಲ್ಲಿ ತಾವು ಮಾಡಿದ ಸುದೀರ್ಘ ರಾಜಕಾರಣವೇ ಇದಕ್ಕೆ ಕಾರಣ ಎಂಬುದನ್ನು ಅವರೂ ಒಪ್ಪಿಕೊಂಡರು. ಡೈನಾಸ್ಟಿ ರಾಜಕಾರಣದ ಕುರಿತು ಮಾತನಾಡುತ್ತಾ, ಅಂತಹ ರಾಜಕಾರಣಕ್ಕೆ ನಿಮ್ಮಲ್ಲಿ (ಬಿಜೆಪಿಯಲ್ಲಿ) ಅವಕಾಶ ಇಲ್ಲ ಎಂದು ಕೃಷ್ಣ ಹೇಳಿದರು. ಅಷ್ಟರಲ್ಲಿ ಮಧ್ಯಪ್ರವೇಶಿಸಿದ ವಿಧಾನ ಪರಿಷತ್ ಸದಸ್ಯ ರಾಮಚಂದ್ರಗೌಡ, ನಿಮ್ಮಲ್ಲಿ ಎಂದು ಹೇಳಬೇಡಿ, ನಮ್ಮಲ್ಲಿ ಎಂದು ಹೇಳಿ ಎಂದು ಮೆತ್ತಗಿನ ಧ್ವನಿಯಲ್ಲಿ ಹೇಳಿದರು. ನಂತರ ತಪ್ಪು ತಿದ್ದಿಕೊಂಡ ಎಸ್.ಎಂ.ಕೃಷ್ಣ, ಸುಮಾರು 46 ವರ್ಷ ಕಾಂಗ್ರೆಸ್ನಲ್ಲಿ ಇದ್ದೆ. ಹೀಗಾಗಿ ಅಲ್ಲಿಂದ ಹೊರ ಬರುವುದು ಕಷ್ಟವಾಗಿದೆ ಎಂದರು.