ಬೆಂಗಳೂರು : ಬಿಜೆಪಿ ಒಬಿಸಿ ಮೋರ್ಚಾ ನೂತನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ರಾಜ್ಯದ ಶ್ರೀ ಯಶಪಾಲ್ ಸುವರ್ಣ ಅವರನ್ನು ನೇಮಿಸಲಾಗಿದೆ ಎಂದು ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರಾದ ಡಾ.ಕೆ.ಲಕ್ಷ್ಮಣ್ ಅವರು ತಿಳಿಸಿದ್ದಾರೆ.
ಶ್ರೀ ಯಶ್ಪಾಲ್ ಎ. ಸುವರ್ಣ ಅವರ ಈ ನೇಮಕಾತಿಯನ್ನು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ಶ್ರೀ ನಳಿನ್ಕುಮಾರ್ ಕಟೀಲ್ ಅವರು ಸ್ವಾಗತಿಸಿದ್ದು, ಅವರನ್ನು ಅಭಿನಂದಿಸಿದ್ದಾರೆ.
ಶ್ರೀ ಯಶಪಾಲ್ ಸುವರ್ಣ ಅವರ ಮಾರ್ಗದರ್ಶನದಲ್ಲಿ ಒಬಿಸಿ ಮೋರ್ಚಾವು ಪಕ್ಷದ ಚಟುವಟಿಕೆಗಳಲ್ಲಿ ಇನ್ನಷ್ಟು ಸಕ್ರಿಯವಾಗಿ ಕಾರ್ಯ ನಿರ್ವಹಿಸಲಿ ಎಂದು ಅವರು ಹಾರೈಸಿದ್ದಾರೆ. ಶ್ರೀ ಯಶಪಾಲ್ ಸುವರ್ಣ ಅವರ ಆಯ್ಕೆಯನ್ನು ಪಕ್ಷದ ರಾಜ್ಯ ಘಟಕವು ಸ್ವಾಗತಿಸಿ, ಅವರನ್ನು ಅಭಿನಂದಿಸಿದೆ.
ಶ್ರೀ ಯಶ್ಪಾಲ್ ಎ. ಸುವರ್ಣ ಅವರ ಪರಿಚಯ
ಶ್ರೀ ಯಶ್ಪಾಲ್ ಸುವರ್ಣ ಅವರು ಉಡುಪಿ ತಾಲ್ಲೂಕು ಮತ್ತು ಜಿಲ್ಲೆಯ ಅಜ್ಜರಕಾಡು ನಿವಾಸಿಯಾಗಿದ್ದು. ಅಜ್ಜರಕಾಡು ವಾರ್ಡ್ನಿಂದ 3 ಬಾರಿ ಉಡುಪಿ ನಗರಸಭೆ ಸದಸ್ಯರಾಗಿ ಆಯ್ಕೆಯಾಗಿ ಸೇವೆ ಸಲ್ಲಿಸಿದ್ದಾರೆ. 2008-10ರ ಅವಧಿಯಲ್ಲಿ ಉಡುಪಿ ನಗರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ, 2013-16ರ ಅವಧಿಯಲ್ಲಿ ರಾಜ್ಯ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿಯಾಗಿ ಮತ್ತು 2016-20ರ ಅವಧಿಯಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.
ಪ್ರಸ್ತುತ ರಾಜ್ಯ ಬಿಜೆಪಿ ಮೀನುಗಾರರ ಪ್ರಕೋಷ್ಠದ ಸಂಚಾಲಕರಾಗಿದ್ದು ವಿವಿಧ ಚುನಾವಣೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಅನುಭವ ಅವರಿಗೆ ಇದೆ. ವಿವಿಧ ಹಿಂದೂ ಸಂಘಟನೆಗಳಲ್ಲಿ ಕಾರ್ಯನಿರ್ವಹಿಸಿದ್ದು, ಸಹಕಾರಿ ಕ್ಷೇತ್ರದಲ್ಲೂ ವಿವಿಧ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಮೀನುಗಾರರ ಮುಖಂಡರಾಗಿ ಅಖಿಲ ಭಾರತ ಮತ್ತು ರಾಜ್ಯ ಮಟ್ಟದ ವಿವಿಧ ಸಂಸ್ಥೆಗಳಲ್ಲಿ ಅವರು ಕಾರ್ಯನಿರ್ವಹಿಸಿದ್ದಾರೆ. ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಜವಾಬ್ದಾರಿಯುತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಅವರಿಗೆ ಇದೆ.