Advertisement

ಪಾಲಿಕೆ ಅಧಿಕಾರಕ್ಕಾಗಿ ಬಿಜೆಪಿ ಕುತಂತ್ರ: ಶರಣಪ್ರಕಾಶ್‌

12:04 PM Nov 14, 2021 | Team Udayavani |

ಕಲಬುರಗಿ: ಚುನಾವಣೆಯಲ್ಲಿ ಮತದಾರ ಬಹುಮತ ಕೊಡದಿದ್ದರೂ ಪಾಲಿಕೆಯಲ್ಲಿ ಈ ಸಲ ಹೇಗಾದರೂ ಮಾಡಿ ಅಧಿಕಾರ ಹಿಡಿಯಬೇಕೆಂಬ ನಿಟ್ಟಿನಲ್ಲಿ ಭಾರತೀಯ ಜನತಾ ಪಕ್ಷ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ ಎಂದು ಕಾಂಗ್ರೆಸ್‌ ವಾಗ್ಧಾಳಿ ನಡೆಸಿದೆ.

Advertisement

ವಿಧಾನ ಪರಿಷತ್‌ ಸದಸ್ಯರಾದ ಲಕ್ಷ್ಮಣ ಸವದಿ, ಭಾರತಿ ಶೆಟ್ಟಿ, ಸಾಯಬಣ್ಣ ತಳವಾರ, ಲೇಹರಸಿಂಗ್‌, ಪ್ರತಾಪಸಿಂಹ ನಾಯಕ್‌, ರಘುನಾಥ ಮಲ್ಕಾಪುರೆ ಹಾಗೂ ಸಚಿವ ಮುನಿರತ್ನ ಸೇರಿ ಏಳು ಮಂದಿ ಹೆಸರನ್ನು ಕಲಬುರಗಿ ಮಹಾನಗರದ ಮತದಾರರ ಪಟ್ಟಿಯಲ್ಲಿ ಸೇರಿಸಿ ವಾಮಮಾರ್ಗದಿಂದ ಗದ್ದುಗೆ ಏರಲು ಬಿಜೆಪಿ ಹುನ್ನಾರ ನಡೆಸುತ್ತಿದೆ ಎಂದು ಕೆಪಿಸಿಸಿ ವಕ್ತಾರ, ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಸುದ್ದಿ ಗೋಷ್ಠಿಯಲ್ಲಿ ಆರೋಪಿಸಿದರು.

ಆಪರೇಷನ್‌ ಕಮಲದ ಮೂಲಕ ಅಧಿಕಾರಕ್ಕೆ ಬರುವುದನ್ನು ರೂಢಿ ಮಾಡಿಕೊಂಡಿರುವ ಬಿಜೆಪಿ ಕಲಬುರಗಿ ಪಾಲಿಕೆಯಲ್ಲಿ ಸ್ಥಳೀಯ ಶಾಸಕರನ್ನು ಹೊರತುಪಡಿಸಿ ಬೇರೆ ಭಾಗದ ಶಾಸಕರನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವ ಯತ್ನ ನಡೆಸಿದೆ. ಕಳೆದ ನ. 9ರಂದು ಎಲ್ಲ ಏಳು ವಿಧಾನ ಪರಿಷತ್‌ ಸದಸ್ಯರು ಕಲಬುರಗಿಯಲ್ಲೇ ಪಾಲಿಕೆ ಸದಸ್ಯರ ಮನೆಯಲ್ಲೇ ಬಾಡಿಗೆ ಇರಲಾಗಿದೆ ಎಂದು ಹೇಳಿ ಆನ್‌ಲೈನ್‌ ಮುಖಾಂತರ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅರ್ಜಿ ಸಲ್ಲಿಸಿದ್ದಾರೆ. ಪಾಲಿಕೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಹೊಂದಾಣಿಕೆಯೊಂದಿಗೆ ಅಧಿಕಾರಕ್ಕೆ ಬರಲಿದೆ ಎಂಬುದನ್ನು ಅರಿತು ಬಿಜೆಪಿ ಇಂತಹ ಮಾನಗೇಡಿ ಕಾರ್ಯಕ್ಕೆ ಮುಂದಾಗಿದೆ ಎಂದು ಟೀಕಿಸಿದರು.

ಇದನ್ನೂ ಓದಿ: ಬೆದರಿಕೆ ಹಾಕುವ ಟಿಎಂಸಿ ನಾಯಕರ ಕೈ, ಕಾಲು ಮುರಿಯಿರಿ:ಬಿಜೆಪಿ ಶಾಸಕ

ಏಳು ಜನ ವಿಧಾನ ಪರಿಷತ್‌ ಸದಸ್ಯರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು ಸ್ವತಃ ಮುಖ್ಯಮಂತ್ರಿಗಳೇ ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರು ಹಾಗೂ ಸಹಾಯಕ ಆಯುಕ್ತರ ಮೇಲೆ ಒತ್ತಡ ಹಾಕಿದ್ದಾರೆ. ಇನ್ನೊಂದೆಡೆ ಬಿಜೆಪಿ ಮುಖಂಡರು ಹಣದ ಆಮಿಷ ಒಡ್ಡುತ್ತಿದ್ದಾರೆ ಎಂದು ಆರೋಪಿಸಿದರು.

Advertisement

ಮುಖ್ಯಮಂತ್ರಿಗಳು ಹಾಗೂ ಬಿಜೆಪಿ ಮುಖಂಡರ ಒತ್ತಡಕ್ಕೆ ಮಣಿದು, ಆಮಿಷಕ್ಕೊಳಗಾಗಿ ಯಾವುದೇ ವಿಚಾರಣೆ ನಡೆಸದೆ ಮತದಾರರ ಪಟ್ಟಿಯಲ್ಲಿ ಈ ಏಳು ಜನರ ಹೆಸರು ಸೇರಿಸಿದರೆ ಕಾಂಗ್ರೆಸ್‌ ಸುಮ್ಮನೇ ಕೂಡುವುದಿಲ್ಲ. ಕಾನೂನು ಹೋರಾಟದ ಜತೆಗೆ ಮುಂದೆ ಕಾಂಗ್ರೆಸ್‌ ಸರ್ಕಾರ ಬಂದಾಗ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳನ್ನು ಸೇವೆಯಿಂದಲೇ ವಜಾ ಮಾಡಲಾಗುವುದು. ಸಾಧ್ಯವಾದರೆ ಜೈಲಿಗೂ ಕಳುಹಿಸಲಾಗುವುದು. ಅಧಿಕಾರಿಗಳು ಐಎಎಸ್‌ ಆಗಿರಲಿ ಇನ್ಯಾರೇ ಆಗಿರಲಿ, ಅವರನ್ನು ಬಿಡೋದಿಲ್ಲ ಎಂದು ಗುಡುಗಿದರು.

ಈಗಾಗಲೇ ಏಳು ವಿಧಾನ ಪರಿಷತ್‌ ಸದಸ್ಯರ ಹೆಸರು ಮತದಾರರ ಪಟ್ಟಿಯಲ್ಲಿ ಸೇರಿಸದಿರುವಂತೆ ಚುನಾವಣಾಧಿಕಾರಿಗಳಿಗೆ ಲಿಖೀತ ದೂರು ಸಲ್ಲಿಸಲಾಗಿದೆ. ಅಲ್ಲದೇ ಕಾನೂನು ಹೋರಾಟದ ನಿಟ್ಟಿನಲ್ಲಿ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದರು.

ಈ ಹಿಂದೆ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಇದೇ ತೆರನಾಗಿ ವಿಧಾನ ಪರಿಷತ್‌ ಸದಸ್ಯರ ಹೆಸರು ಸೇರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಕದ್ದಮೆ ನಡೆದಿದೆ. ಈ ಹಿಂದೆ ತಪ್ಪು ಮಾಡಲಾಗಿದ್ದರೆ ಈಗಲೂ ತಪ್ಪು ಮಾಡುವುದು ಯಾವ ನ್ಯಾಯ? ಡಿಸಿ, ಪಾಲಿಕೆ ಆಯುಕ್ತ ಹಾಗೂ ಕಲಬುರಗಿ ಉಪ ವಿಭಾಗದ ಸಹಾಯಕ ಆಯುಕ್ತರು ಯಾರದ್ದೇ ಒತ್ತಡಕ್ಕೆ ಮಣಿಯದೇ ಮುಂದಿನ ದಿನಗಳಲ್ಲಿ ಕಲಬುರಗಿ ಪಾಲಿಕೆ ಚುನಾವಣೆ ಮಾದರಿಯನ್ನಾಗಿಸಬೇಕು ಎಂದು ಹೇಳಿದರು.

ಮಾಜಿ ಶಾಸಕ ಅಲ್ಲಮಪ್ರಭು ಪಾಟೀಲ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಮಾಜಿ ಮೇಯರ್‌ ಶರಣು ಮೋದಿ, ಡಾ| ಕಿರಣ ದೇಶಮುಖ, ಪ್ರವೀಣ ಹರವಾಳ, ಈರಣ್ಣ ಝಳಕಿ, ಸಂತೋಷ ಪಾಟೀಲ ದುಧನಿ, ಸೈಯದ್‌ ಅಹ್ಮದ ಇದ್ದರು.

ಈಗಾಗಲೇ 55 ಪಾಲಿಕೆ ಸದಸ್ಯರು ಹಾಗೂ ಎಂಟು ಶಾಸಕರು ಹಾಗೂ ವಿಧಾನ ಪರಿಷತ್‌ ಸದಸ್ಯರನ್ನು ಒಳಗೊಂಡ ಮತದಾರರ ಪಟ್ಟಿ ಪ್ರಕಟಿಸಲಾಗಿದೆ. ಆದರೆ ಈಗ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿದರೆ ಅಧಿಕಾರ ದುರ್ಬಳಕೆ ಆಗುತ್ತದೆಯಲ್ಲದೇ ಕ್ರಿಮಿನಲ್‌ ದರ್ಬಾರ್‌ಗೆ ಸಾಕ್ಷಿಯಾಗುತ್ತದೆ. -ಡಾ| ಶರಣಪ್ರಕಾಶ ಪಾಟೀಲ, ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next