Advertisement

ಬಿಜೆಪಿ, ಕಾಂಗ್ರೆಸನ್ನು ಬೆಂಬಲಿಸಿದ್ದ ಉಡುಪಿ ಕ್ಷೇತ್ರ

02:57 AM Mar 25, 2019 | sudhir |

ಉಡುಪಿ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆ/ರಾಜಕೀಯಕ್ಕೆ ಸದ್ಯ ಉಡುಪಿಯೇ ಕೇಂದ್ರಬಿಂದು. ಉಡುಪಿಯನ್ನು ಕಾಂಗ್ರೆಸ್‌ನಿಂದ ಪ್ರತಿನಿಧಿಸಿ ಸಚಿವರೂ ಆಗಿದ್ದ ಪ್ರಮೋದ್‌ಮಧ್ವರಾಜ್‌ ಈ ಬಾರಿ ಕಾಂಗ್ರೆಸ್‌ನಲ್ಲಿದ್ದು ಕೊಂಡೇ ಜೆಡಿಎಸ್‌ ಅಭ್ಯರ್ಥಿಯಾಗಿರುವುದರಿಂದ ವಿಶಿಷ್ಟ, ಗೊಂದಲದ ರಾಜಕೀಯ ವಾತಾವರಣ ನಿರ್ಮಾಣವಾಗಿದೆ. ಜತೆಗೆ ಶೋಭಾ ಕರಂದ್ಲಾಜೆ ವಿರುದ್ಧ ಒಂದೊಮ್ಮೆ ಎದ್ದ “ಗೋ ಬ್ಯಾಕ್‌’ ಎಂಬ ಅಸಮಾಧಾನದ ಹೊಗೆ; ಆದರೆ ಅವರಿಗೇ ಟಿಕೆಟ್‌ ನೀಡಿರುವ ಪಕ್ಷ ಮೊದಲಾದ ಕಾರಣಗಳಿಂದಾಗಿ ಉಡುಪಿ ರಾಜ್ಯದ ಗಮನ ಸೆಳೆಯುತ್ತಿದೆ.

Advertisement

ಬಿಜೆಪಿ ಮತ್ತು ಕಾಂಗ್ರೆಸ್‌ ಎರಡಕ್ಕೂ ಉಡುಪಿ
ವಿಧಾನಸಭಾ ಕ್ಷೇತ್ರದ ಮೇಲೆ ಹೆಚ್ಚಿನ ವಿಶ್ವಾಸ! ಕಳೆದ ಬಾರಿ ಮೋದಿ ಅಲೆಗೆ ಇಲ್ಲಿ ಕಾಂಗ್ರೆಸ್‌ ತರೆಗೆಲೆಯಂತಾಗಿತ್ತು. ಆದರೆ ಅದಕ್ಕಿಂತ ಮೊದಲು ಹಲವು ಬಾರಿ ಇಲ್ಲಿನ ಮತದಾರರು ಕಾಂಗ್ರೆಸ್‌ನ ಕೈ ಹಿಡಿದಿದ್ದರು. 2008ರ ವಿಧಾನ
ಸಭೆ ಚುನಾವಣೆಯಲ್ಲಿ ಬಿಜೆಪಿಯ ರಘುಪತಿ ಭಟ್‌ 2,479 ಮತಗಳಿಂದ ಕಾಂಗ್ರೆಸ್‌ನ ಪ್ರಮೋದ್‌ ಎದುರು ಗೆಲುವು ಸಾಧಿಸಿದ್ದರು. 2012ರಲ್ಲಿ ಲೋಕಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಜಯಪ್ರಕಾಶ್‌ ಹೆಗ್ಡೆ ಬಿಜೆಪಿಯ ಸುನಿಲ್‌ ಕುಮಾರ್‌ ಎದುರು 11,423 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದರು.

ಒಂದೇ ವರ್ಷದಲ್ಲಿ ಉಲ್ಟಾ
2013ರ ವಿಧಾನಸಭೆ ಚುನಾವಣೆಯಲ್ಲಿ ಉಡುಪಿಯಲ್ಲಿ ಕಾಂಗ್ರೆಸ್‌ನ ಪ್ರಮೋದ್‌ 39,524 ಅಂತರದಿಂದ ಜಯ ಗಳಿಸಿದ್ದರು. ಮರುವರ್ಷ ನಡೆದ ಲೋಕಸಭಾ ಚುನಾವಣೆ ಯಲ್ಲಿ ಬಿಜೆಪಿ 32,674ಕ್ಕೂ ಅಧಿಕ ಮತಗಳನ್ನು ಉಡುಪಿ ವಿಧಾನಸಭೆ ಕ್ಷೇತ್ರದಲ್ಲಿ ಗಳಿಸಿತ್ತು! 2013ರಲ್ಲಿ ರಘುಪತಿ ಭಟ್‌ ಸ್ಪರ್ಧಿಸಿರಲಿಲ್ಲ.

ಆರಕ್ಕೇರದ ಜೆಡಿಎಸ್‌
2013ರ ವಿಧಾನಸಭಾ ಚುನಾವಣೆಯಲ್ಲಿ 1,017 ಮತ ಗಳಿಸಿದ್ದ ಜೆಡಿಎಸ್‌ 2018ರ ವಿಧಾನಸಭಾ ಚುನಾವಣೆಯಲ್ಲಿ 1,361 ಮತ ಗಳಿಸಿತ್ತು. 2008ರಲ್ಲಿಯೂ ಜೆಡಿಎಸ್‌ ಠೇವಣಿ ಕಳೆದುಕೊಂಡಿತ್ತು.

2009ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಸದಾನಂದ ಗೌಡ
4,00,812 ಮತ, ಕಾಂಗ್ರೆಸ್‌ನ ಜೆಪಿ ಹೆಗ್ಡೆ 3,74,127 ಮತ ಗಳಿಸಿ
ದ್ದರು. ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಸದಾನಂದ ಗೌಡ 5,225 ಮತಗಳನ್ನು ಹೆಚ್ಚು ಪಡೆದಿದ್ದರು. ಆದರೆ ಉಡುಪಿ ಜಿಲ್ಲೆಯಲ್ಲಿ ಹೆಗ್ಡೆ ಅವರು ಗೌಡರಿಗಿಂತ 12,489 ಮತ ಗಳಿಸಿದ್ದರು.

Advertisement

ಕಹಳೆ ಊದಿಯಾಗಿದೆ
ಬಿಜೆಪಿಯ ರಾಷ್ಟ್ರೀಯ ವಕ್ತಾರೆ ಮೀನಾಕ್ಷಿ ಲೇಖೀ ಅವರು ಚುನಾವಣೆ ಘೋಷಣೆಯಾಗುವ ಮೊದಲೇ ಮಲ್ಪೆಗೆ ಬಂದು ಪಾಂಚಜನ್ಯ ಕಾರ್ಯಕ್ರಮದಲ್ಲಿ ಚುನಾವಣೆಯ ಕಹಳೆ ಊದಿದ್ದರು. ಚುನಾವಣೆ ಘೋಷಣೆಯಾಗುವ ದಿನ ಕಾಂಗ್ರೆಸ್‌ ನಡೆಸಿದ್ದ ಸಮಾವೇಶದಲ್ಲಿ ಸಿದ್ದರಾಮಯ್ಯ ಸಹಿತ ಅನೇಕ ನಾಯಕರು ಉಡುಪಿಯಲ್ಲಿ ಅಬ್ಬರಿಸಿ ತೆರಳಿದ್ದಾರೆ. ಇದರ ಬೆನ್ನಲ್ಲೇ ಸಹಬಾಳ್ವೆ ಸಂಘಟನೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೆಲವು ಮಂದಿ ಚಿಂತಕರು ಪ್ರಧಾನಿ ನರೇಂದ್ರ
ಮೋದಿ ವಿರುದ್ಧ ಹರಿಹಾಯ್ದಿದ್ದಾರೆ. ಚುನಾವಣೆ ನೀತಿಸಂಹಿತೆ ಉಲ್ಲಂಘನೆಯ ಕಳಂಕ ಕೂಡ ಅಂಟಿಸಿಕೊಂಡು ತೆರಳಿದ್ದಾರೆ.

ಉತ್ಸಾಹ, ಉತ್ತರ ಎರಡೂ ಇಲ್ಲ!
ಚುನಾವಣೆಗೆ ಕೆಲವೊಂದು ತಾಲೀಮುಗಳನ್ನು ನಡೆಸಿದ್ದ ಕಾಂಗ್ರೆಸ್‌ಗೆ
ಸಮ್ಮಿಶ್ರ ಸರಕಾರದ ತೀರ್ಮಾನ ತಣ್ಣೀರೆರಚಿದೆ. ಮೊದಲಿದ್ದ ಉತ್ಸಾಹ ಈಗ ಕಂಡುಬರುತ್ತಿಲ್ಲ. ಮಾತ್ರವಲ್ಲದೆ ತನ್ನ ಕಾರ್ಯಕರ್ತರಿಗೆ ಉತ್ತರ ನೀಡುವ ಸ್ಥಿತಿಯಲ್ಲಿ ಕೂಡ ಪಕ್ಷದ ಮುಖಂಡರಿಲ್ಲ. ಇತ್ತ ಬಿಜೆಪಿ ಪಾಳಯದಲ್ಲಿ ಕಳೆದ ಬಾರಿ ಇದ್ದ ಅತ್ಯುತ್ಸಾಹ ಮರೆಯಾದಂತಿದೆ.

Advertisement

Udayavani is now on Telegram. Click here to join our channel and stay updated with the latest news.

Next