Advertisement

ಕೈ ಭದ್ರಕೋಟೆಯಲ್ಲಿ ಬಿಜೆಪಿಗೆಷ್ಟು ಮತ?

04:50 PM Apr 22, 2019 | pallavi |

ಬಂಗಾರಪೇಟೆ: ಕೋಲಾರ ಲೋಕಸಭೆ ಕ್ಷೇತ್ರಕ್ಕೆ ಚುನಾವಣೆ ನಡೆದು ಮೂರು ನಾಲ್ಕು ದಿನಗಳು ಕಳೆದಿದ್ದು, ಫ‌ಲಿತಾಂಶಕ್ಕೆ ಇನ್ನೂ ಒಂದು ತಿಂಗಳು ಕಾಯಬೇಕು. ಈಗಾಗಲೇ ವಿಧಾನಸಭೆವಾರು ಎಷ್ಟೆಷ್ಟು ಮತದಾನವಾಗಿದೆ ಎಂಬ ಸ್ಪಷ್ಟ ಚಿತ್ರವೂ ಸಿಕ್ಕಿದೆ. ಇಷ್ಟು ದಿನ ಪ್ರಚಾರದಲ್ಲಿ ತೊಡಗಿಕೊಂಡಿದ್ದ ಸ್ಥಳೀಯ ರಾಜಕೀಯ ಮುಖಂಡರು ಯಾವ ಪಕ್ಷಕ್ಕೆ ಎಷ್ಟು ಮತ ಬಂದಿರಬಹುದು ಎಂಬ ಲೆಕ್ಕಾಚಾರದಲ್ಲಿ ತೊಡಗಿಕೊಂಡಿದ್ದಾರೆ.

Advertisement

ಬಂಗಾರಪೇಟೆ ಕ್ಷೇತ್ರದಲ್ಲಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಪೈಪೋಟಿ ನಡೆದಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್‌ 21ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿತ್ತು. ಜೆಡಿಎಸ್‌ 49 ಸಾವಿರ ಮತ ಪಡೆದು ಕಾಂಗ್ರೆಸ್‌ಗೆ ಪೈಪೋಟಿ ನೀಡಿ ಎರಡನೇ ಸ್ಥಾನ ಪಡೆದಿತ್ತು. ಬಿಜೆಪಿಯು ಕೇವಲ 33 ಸಾವಿರ ಮತ ಪಡೆದು ಮೂರನೇ ಸ್ಥಾನದಲ್ಲಿತ್ತು. ಎರಡನೇ ಬಾರಿಗೆ ಶಾಸಕರಾದ ಎಸ್‌.ಎನ್‌.ನಾರಾಯಣಸ್ವಾಮಿ ಹಾಗೂ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರದ ಕಾಂಗ್ರೆಸ್‌ ಉಸ್ತುವಾರಿ ವಹಿಸಿದ್ದರು. ಕ್ಷೇತ್ರದ ಎಲ್ಲಾ ಗ್ರಾಪಂ ಕೇಂದ್ರಗಳಿಗೆ ಭೇಟಿ ನೀಡಿ ಮೈತ್ರಿ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಪರ ಪ್ರಚಾರ ನಡೆಸಿದ್ದರು. ಆದರೂ ಕಾಂಗ್ರೆಸ್‌ ಹವಾ ಕ್ಷೇತ್ರದಲ್ಲಿ ಎಲ್ಲೂ ಕಾಣಲಿಲ್ಲ.

ಕೈಗೆ ಜೆಡಿಎಸ್‌ ಓಟ್ ಬಂದಿದ್ಯಾ?: ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಇರುವುದರಿಂದ ಜೆಡಿಎಸ್‌ ಪಕ್ಷದಲ್ಲಿ ಯಾವುದೇ ಭಿನ್ನಮತ ಇಲ್ಲದೇ ಇದ್ದರೂ ಸ್ಥಳೀಯ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ, ಕೆ.ಎಚ್.ಮುನಿಯಪ್ಪರಿಗೆ ಟಿಕೆಟ್ ತಪ್ಪಿಸಲು ಸ್ವೀಕರ್‌ ರಮೇಶ್‌ಕುಮಾರ್‌ ಜೊತೆ ಡೆಲ್ಲಿಯಲ್ಲಿ ಲಾಬಿ ಮಾಡಿದ್ದರು. ನಂತರ ನಡೆದ ವಿದ್ಯಾಮಾನಗಳಿಂದ ಕೆ.ಎಚ್.ಮುನಿಯಪ್ಪ ಹಾಗೂ ಎಸ್‌.ಎನ್‌.ನಾರಾಯಣಸ್ವಾಮಿ ಒಗ್ಗಟ್ಟು ಪ್ರದರ್ಶಿಸಿದರು. ಇದರಿಂದ ವಿಧಾನಸಭೆ ಚುನಾವಣೆಯಲ್ಲಿ ಬಂದ ಮತಗಳು ಲೋಕಸಭೆ ಚುನಾವಣೆಯಲ್ಲೂ ಕಾಂಗ್ರೆಸ್‌ ಅಭ್ಯರ್ಥಿಗೆ ಬಂದಿವೆಯೇ, ಇದರ ಮೈತ್ರಿ ಪಕ್ಷ ಜೆಡಿಎಸ್‌ನ ಮತಗಳು ಮುನಿಯಪ್ಪಗೆ ಎಷ್ಟು ಬಂದಿರಬಹುದು ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ ಮುಖಂಡರು ಮಗ್ನರಾಗಿದ್ದಾರೆ.

ಹಣ ಹಂಚಿಕೆ ಮಾಡಿಲ್ಲ: ಮತದಾರರಿಗೆ ಕಾಂಗ್ರೆಸ್‌ನಿಂದ 200 ರೂ.ರಿಂದ 300 ರೂ.ವರೆಗೆ ಹಂಚಲಾಗಿದೆ ಎಂಬ ಮಾತು ಕೇಳಿಬಂದಿದೆ. ಅದೇರೀತಿ ಕಾಂಗ್ರೆಸ್‌ ಭದ್ರಕೋಟೆ ಎಂದು ಹೇಳಲಾಗುವ ಬೂದಿಕೋಟೆ ಹೋಬಳಿಯಲ್ಲಿ ಮತದಾರರಿಗೆ ಹಣ ಹಂಚಿಕೆ ಮಾಡದೇ ಮುಖಂಡರು ಜೇಬಿಗೆ ಹಾಕಿಕೊಂಡಿದ್ದಾರೆ ಆರೋಪವೂ ಕೇಳಿ ಬಂದಿದೆ. ಹೀಗಾಗಿ ಇಲ್ಲಿನ ಕೆಲವು ಓಟು ಬಿಜೆಪಿಗೆ ಹೋಗಿದೆ ಎನ್ನಲಾಗುತ್ತಿದೆ.

ಕಾಂಗ್ರೆಸ್‌ ಹಣ, ಬಿಜೆಪಿಗೆ ಓಟು: ಬಂಗಾರಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಸ್‌.ಮುನಿಸ್ವಾಮಿ ಪರ ಹಣ ಹಂಚಿಕೆ ಮಾಡಿಲ್ಲ. ನಮ್ಮ ಕೈಗೆ ಹಣವೇ ಬರಲಿಲ್ಲ, ಹಂಚೋದು ಎಲ್ಲಿಂದ ಬಂತು ಮಾತು ಸ್ಥಳೀಯ ಬಿಜೆಪಿ ಮುಖಂಡರಿಂದ ಕೇಳಿ ಬರುತ್ತಿದೆ. ದೇಶದಲ್ಲಿ ಪ್ರಧಾನಿ ಮೋದಿಯವರ ಅಲೆ ಹೆಚ್ಚಾಗಿದೆ. ಹೀಗಾಗಿ ಕಾಂಗ್ರೆಸ್‌ ಎಷ್ಟೇ ಹಣ ಹಂಚಿದ್ದರೂ, ಜನ ಅಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿ ಎಸ್‌.ಮುನಿಸ್ವಾಮಿಗೆ ಮತ ಚಲಾಯಿಸಲಿದ್ದಾರೆ ಎಂದು ಮಾತುಗಳೂ ಕೇಳಿ ಬರುತ್ತಿದೆ.

Advertisement

ವಿರೋಧಿ ಅಲೆ ಮತಗಳು ಬಿಜೆಪಿ?: ಕೋಲಾರ ಲೋಕಸಭೆ ಕಾಂಗ್ರೆಸ್‌ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಏಳು ಬಾರಿ ಗೆದ್ದರೂ ಸಹ ಬಂಗಾರಪೇಟೆ ಕ್ಷೇತ್ರದಲ್ಲಿ ಅಭಿವೃದ್ಧಿಯೇ ಮಾಡಿಲ್ಲ ಎಂದು ಕಾಂಗ್ರೆಸ್‌ ಪಕ್ಷದವರೇ ಪ್ರಶ್ನೆ ಮಾಡುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿನ ಗುಂಪುಗಾರಿಕೆಯೇ ಬಿಜೆಪಿ ಅಲೆ ಹೆಚ್ಚಿಸಿಕೊಳ್ಳಲು ಮೂಲ ಕಾರಣವಾಗಿದೆ. ಕೆ.ಎಚ್.ಮುನಿಯಪ್ಪ ವಿರೋಧ ಅಲೆ ಹೆಚ್ಚಾಗಿರುವ ಕಾರಣ ಸಾಮಾನ್ಯ ಜನರೂ ಈ ಬಾರಿ ಬಿಜೆಪಿ ಮತ ಹಾಕುವ ಇಂಗಿತ ವ್ಯಕ್ತಪಡಿಸಿರುವುದರಿಂದ ಬಿಜೆಪಿಗೆ ಹೆಚ್ಚಿನ ಮತಗಳು ಬರಲಿದೆ ಎಂಬ ರಾಜಕೀಯ ಲೆಕ್ಕಾಚಾರಗಳು ನಡೆಯುತ್ತಿವೆ.

ಬಂಗಾರಪೇಟೆ ಕ್ಷೇತ್ರದ 259 ಬೂತ್‌ಗಳ ಪೈಕಿ ಕೆಲವು ಕಾಂಗ್ರೆಸ್‌ ಮುಖಂಡರು ಉದ್ದೇಶಪೂರ್ವಕವಾಗಿಯೇ ಕಾಂಗ್ರೆಸ್‌ ಪರ ಪ್ರಚಾರ ಮಾಡದೇ ಬಿಜೆಪಿಗೆ ಮತ ಹಾಕಿಸುವ ಮೂಲಕ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದರೂ ಬಂಗಾರಪೇಟೆ ಕ್ಷೇತ್ರವು ಕಾಂಗ್ರೆಸ್‌ ಭದ್ರಕೋಟೆಯಾಗಿರುವುದರಿಂದ ತಪ್ಪದೇ ಕಾಂಗ್ರೆಸ್‌ಗೆ ಮತಗಳು ಹೆಚ್ಚಾಗಿ ಬಂದಿವೆ ಹಾಗೂ ಬಿಜೆಪಿಯವರು ಬೂತ್‌ ಮಟ್ಟದ ಕಾರ್ಯಕರ್ತರು ಹಾಗೂ ಮುಖಂಡರು ಇಲ್ಲದೇ ಇರುವುದರಿಂದ ಕಾಂಗ್ರೆಸ್‌ ಪಕ್ಷಕ್ಕೆ ಹೆಚ್ಚಿನ ಲೀಡ್‌ ಬರಲಿದೆ ಎಂಬ ವಿಶ್ವಾಸ ಸ್ಥಳೀಯ ಕೈಮುಖಂಡರಲ್ಲಿದೆ.

ಒಟ್ಟಾರೆಯಾಗಿ ತಾಲೂಕಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷ ನಾಮುಂದು ತಾಮುಂದು ಎಂದು ಹೇಳಿಕೊಳ್ಳುತ್ತಿದೆ. ಆದರೆ, ಮತದಾರ ಪ್ರಭು ಯಾವ ಪಕ್ಷಕ್ಕೆ ಹೆಚ್ಚಿನ ಮತ ನೀಡಿದ್ದಾರೆ ಎಂಬ ಫ‌ಲಿತಾಂಶ ತಿಳಿಯಲು ಮೇ 23ರವರೆಗೂ ಕಾಯಲೇಬೇಕು.

ಎಂ.ಸಿ.ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next