Advertisement

15 ವರ್ಷ ಬಿಜೆಪಿ ಅಲುಗಾಡಿಸಲು ಆಗಲ್ಲ: ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌

01:17 PM Jan 12, 2021 | Team Udayavani |

ಕಲಬುರಗಿ: ರಾಜ್ಯದಲ್ಲಿ ಲೋಕಸಭೆಯಿಂದ ಹಿಡಿದು ಗ್ರಾಮ ಪಂಚಾಯಿತಿಯವರೆಗೆ ಬಿಜೆಪಿ ಬಲಿಷ್ಠವಾಗಿದೆ. ಮುಂದಿನ 15 ವರ್ಷಗಳ ಕಾಲ ಬಿಜೆಪಿಯನ್ನು
ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬೃಹತ್‌ ಕೈಗಾರಿಕಾ ಸಚಿವ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಹೇಳಿದರು.

Advertisement

ನಗರದ ನೂತನ ವಿದ್ಯಾಲಯದ ಸತ್ಯಪ್ರಮೋದ ತೀರ್ಥ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ವಿಜೇತರಾದ ಬಿಜೆಪಿ ಬೆಂಬಲಿತ ಸದಸ್ಯರಿಗೆ ಅಭಿನಂದನೆ ಮತ್ತು ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸುವ “ಜನ ಸೇವಕ’ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ಆಧೋಗತಿಗೆ ತಲುಪಿದ್ದು, ಅಡ್ರೆಸ್‌ ಇಲ್ಲದಂತಾಗಿದೆ. ಈಗ ಹಳ್ಳಿಗಳಲ್ಲೂ ರಾಜಕೀಯ ಬದಲಾವಣೆ ಕಾಣುತ್ತಿದೆ. ಗ್ರಾಮ ಪಂಚಾಯಿತಿ ಇತಿಹಾಸದಲ್ಲೇ ಈ ಬಾರಿ ಅತಿ ಹೆಚ್ಚು ಬಿಜೆಪಿ ಬೆಂಬಲಿತರು ಗೆಲುವು ಸಾಧಿಸಿದ್ದಾರೆ. ರಾಜ್ಯಾದ್ಯಂತ ಶೇ.60ರಷ್ಟು ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಚುನಾಯಿತರಾಗಿದ್ದಾರೆ ಎಂದರು.

ರಾಜ್ಯದಲ್ಲಿ ಒಟ್ಟು 5,670 ಪಂಚಾಯಿತಿಗಳಿದ್ದು, 86 ಸಾವಿರ ಸದಸ್ಯ ಸ್ಥಾನ ಇದೆ. ಈ ಬಾರಿ 45,246 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಚುನಾಯಿತರಾಗಿದ್ದಾರೆ. 2015ರಲ್ಲಿ 1,934 ಪಂಚಾಯಿತಿಗಳಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದುಕೊಂಡಿತ್ತು. ಪ್ರಸ್ತುತ 3,147  ಪಂಚಾಯಿತಿಗಳಲ್ಲಿ ಬಿಜೆಪಿ ಬಹುಮತ ಪಡೆದಿದೆ. ದೇಶದ ಅಭಿವೃದ್ಧಿಗಾಗಿ ಪ್ರಧಾನಿ ಮೋದಿ ಅವರು ದಿನದ 24 ಗಂಟೆ ಕೆಲಸ ದುಡಿಯುತ್ತಿದ್ದಾರೆ. ಅದೇ ರೀತಿ ಪ್ರತಿ ಗ್ರಾಪಂ ಸದಸ್ಯರು ಕೂಡ ತಮ್ಮ ಗ್ರಾಮದ ಅಭಿವೃದ್ಧಿಗೆ ಶ್ರಮಿಸಬೇಕೆಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮಹಿಳೆಯರೂ ಗೆದ್ದಿದ್ದಾರೆ. ಆದರೆ, ಪತ್ನಿಯರನ್ನು ಮನೆ ಬಿಟ್ಟು ಬಂದು ಪತಿಯಂದಿರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಹಾಗೂ ಸಭೆಗಳಲ್ಲಿ ಭಾಗವಹಿಸುವುದು ಆಗಬಾರದು ಎಂದರು. ಸಂಸದರಾದ ಡಾ.ಉಮೇಶ ಜಾಧವ್‌, ಭಗವಂತ ಖೂಬಾ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್‌ ರೇವೂರ, ಈಶಾನ್ಯ ಕರ್ನಾಟಕ ರಸ್ತೆ ಸಾರಿಕೆ ಸಂಸ್ಥೆ ಅಧ್ಯಕ್ಷ ರಾಜಕುಮಾರ ಪಾಟೀಲ್‌ ತೇಲ್ಕೂರ್‌, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಮಾತನಾಡಿದರು.

Advertisement

ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳಿ, ಕ್ರೆಡಲ್‌ ಅಧ್ಯಕ್ಷ ಚಂದು ಪಾಟೀಲ್‌, ಕೃಷ್ಣ ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ಜಿಪಂ ಅಧ್ಯಕ್ಷೆ
ಸುವರ್ಣ ಮಾಲಾಜಿ, ಶಾಸಕರಾದ ಸುಭಾಷ ಗುತ್ತೇದಾರ, ಬಸವರಾಜ ಮತ್ತಿಮಡು, ಡಾ.ಅವಿನಾಶ ಜಾಧವ್‌,  ವಿಧಾನ ಪರಿಷತ್‌ ಸದಸ್ಯರಾದ ಶಶೀಲ ನಮೋಶಿ, ಬಿ.ಜಿ.ಪಾಟೀಲ್‌, ರಾಜ್ಯ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಡಾ.ಸಂದೀಪಕುಮಾರ, ಬಿಜೆಪಿ ಗ್ರಾಮಾಂತರ  ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ನಗರಾಧ್ಯಕ್ಷ ಸಿದ್ದಾಜಿ ಪಾಟೀಲ, ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ್‌, ವಾಲ್ಮೀಕಿ ನಾಯಕ, ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷ ಪ್ರವೀಣ ತೆಗನೂರ ಸೇರಿ ಹಲವರು ಪಾಲ್ಗೊಂಡಿದ್ದರು.

ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪನವರ ಆಡಳಿತದ ಸುವರ್ಣ ಯುಗದಲ್ಲಿ ನಮಗೆ ಅಧಿಕಾರ ಸಿಕ್ಕಿದೆ. ಗ್ರಾಪಂಗಳಿಗೆ ಅಧಿಕ ಅನುದಾನ ಸಿಗಲಿದ್ದು, ಬಿಜೆಪಿ ಬೆಂಬಲಿತ ಸದಸ್ಯರು ಅದನ್ನು ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿಗೆ ಶ್ರಮಿಸಬೇಕು. ಮುಂದಿನ ತಾಪಂ, ಜಿಪಂ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಿಸಲು ಕಾರ್ಯಕರ್ತರು ದುಡಿಯಬೇಕು.

ದತ್ತಾತ್ರೇಯ ಪಾಟೀಲ್‌ ರೇವೂರ,
ಅಧ್ಯಕ್ಷ, ಕೆಕೆಆರ್‌ಡಿಬಿ

ಬಿಜೆಪಿ ಕೋಮುವಾದಿ ಪಕ್ಷ ಎಂದು ಪ್ರತಿಪಕ್ಷದವರು ಹೇಳುತ್ತಾರೆ. ಆದರೆ, ಬಿಜೆಪಿ ಕೋಮುವಾದಿ ಪಕ್ಷವಲ್ಲ, ರಾಷ್ಟ್ರವಾದಿ ಪಕ್ಷ. ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಪಕ್ಷದಲ್ಲೇ “ಎ’ ಬಣ, “ಬಿ’ ಬಣಗಳಾಗಿ ಕೆಲವರು ಸೋತ್ತಿದ್ದಾರೆ. ಸೋತವರನ್ನು ಗೆದ್ದವರು ಒಟ್ಟಿಗೆ ತೆಗೆದುಕೊಂಡು ಹೋಗಬೇಕು. ಗ್ರಾಮದಲ್ಲಿ ಸರ್ಕಾರ ಯೋಜನೆಗಳನ್ನು ಸರಿಯಾಗಿ ಜಾರಿ ಮಾಡಬೇಕು.
ಡಾ.ಉಮೇಶ ಜಾಧವ್‌, ಸಂಸದ

ಗ್ರಾಮದ ಯುವಕರನ್ನು ನಾಯಕರನ್ನಾಗಿ ಮಾಡುವ ಪಕ್ಷ ಬಿಜೆಪಿ. ಕಾಂಗ್ರೆಸ್‌ನಂತೆ ಯಾವುದೇ ಕೆಲಸ ಮಾಡದೆ ಬಿಜೆಪಿ ಮತ ಕೇಳುವುದಿಲ್ಲ. ಜನರಿಗಾಗಿ ಕೆಲಸ ಮಾಡಿ, ಅದರ ಲೆಕ್ಕ ಕೊಟ್ಟು ಮತ ಕೇಳುತ್ತದೆ. ನರೇಗಾ, ಆವಾಸ್‌ ಯೋಜನೆ, ಉಜ್ವಲ್‌, ಜಲಜೀವನ ಯೋಜನೆಗಳನ್ನು ಜಾರಿಗೆ ತಲುಪಿಸುವ ಹೊಣೆ ಗ್ರಾಪಂ ಸದಸ್ಯರ ಮೇಲಿದೆ.
ಭಗವಂತ ಖೂಬಾ, ಸಂಸದ

ಸರ್ಕಾರದಿಂದ 1 ರೂ. ಬಿಡುಗಡೆ ಮಾಡಿದರೆ ಜನರಿಗೆ 15 ಪೈಸೆ ಮಾತ್ರ ತಲುಪುತ್ತದೆ ಎಂದು ಸ್ವತಃ ರಾಜೀವ್‌ ಗಾಂಧಿ ಹೇಳಿದ್ದರು. ಅದು ಕಾಂಗ್ರೆಸ್‌ನ ಆಡಳಿತ ವೈಖರಿ. ಈಗ ಸರ್ಕಾರದಿಂದ ಬಿಡುಗಡೆಯಾಗುವ ಪ್ರತಿ 1 ರೂ. ಕೂಡ ಜನರಿಗೆ ನೇರವಾಗಿ ಹೋಗುತ್ತದೆ. ಇದು ಪ್ರಧಾನಿ ಮೋದಿ
ನೇತೃತ್ವದ ಬಿಜೆಪಿ ಸರ್ಕಾರದ ಪಾರದರ್ಶಕ ಆಡಳಿತ ಶೈಲಿ.
ರಾಜಕುಮಾರ ಪಾಟೀಲ್‌ ತೇಲ್ಕೂರ್‌,
ಅಧ್ಯಕ್ಷ, ಎನ್‌ಇಕೆಆರ್‌ಟಿಸಿ

ಸೋಲನ್ನು ಒಮ್ಮೆ ನೆನಪಿಸಿಕೊಂಡು ಆ ಕ್ಷಣಕ್ಕೆ ಮರೆತು ಬಿಡುತ್ತೇವೆ. ಆದರೆ, ಗೆಲುವು ಐದು ವರ್ಷಗಳ ಕಾಲ ನಮ್ಮೊಂದಿಗೆ ಇರುತ್ತದೆ. ಎಲ್ಲರಿಗೂ ಪಕ್ಷವೇ ಮುಖ್ಯ. ಹೀಗಾಗಿ ಜಗದೀಶ ಶೆಟ್ಟರ್‌ ಸೇರಿ ಅನೇಕ ಸಚಿವರು ಇಂದು ಅಥವಾ ನಾಳೆ ಸಂಪುಟ ಸಭೆಯ ಬಿಟ್ಟು ಸಮಾವೇಶದಲ್ಲಿ ಭಾಗಿಯಾಗುತ್ತೇವೆ ಎಂದು ಹೇಳಿದ್ದಾರೆ.
ಮಹೇಶ ಟೆಂಗಿನಕಾಯಿ,
ಬಿಜೆಪಿ ಪ್ರಧಾನ ಕಾರ್ಯದರ್ಶಿ.

Advertisement

Udayavani is now on Telegram. Click here to join our channel and stay updated with the latest news.

Next