Advertisement

ಡಿಕೆಶಿ ಬಂಧನ: ತಟಸ್ಥ ಧೋರಣೆಗೆ ಮುಂದಾದ ಬಿಜೆಪಿ

09:43 AM Sep 14, 2019 | Team Udayavani |

ಬೆಂಗಳೂರು: ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಬಂಧನದ ಅನಂತರದ ಬೆಳವಣಿಗೆ ಮತ್ತು ಇತ್ತೀಚೆಗೆ ಒಕ್ಕಲಿಗ ಸಂಘ ಸಂಸ್ಥೆಗಳ ಒಕ್ಕೂಟ ನಡೆಸಿದ ಬೃಹತ್‌ ಪ್ರತಿಭಟನ ರ್ಯಾಲಿಯ ಪರಿಣಾಮವನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿರುವ ರಾಜ್ಯ ಬಿಜೆಪಿಯು ಸದ್ಯ ಈ ವಿಚಾರಕ್ಕೆ ಸಂಬಂಧಪಟ್ಟಂತೆ ತಟಸ್ಥವಾಗಿ ಉಳಿಯಲು ನಿರ್ಧರಿಸಿದೆ.

Advertisement

ಪ್ರತಿಭಟನ ರ್ಯಾಲಿಯಲ್ಲಿ ಕಾಂಗ್ರೆಸ್‌, ಜೆಡಿಎಸ್‌ನ ಪ್ರಭಾವಿ ನಾಯಕರು, ಪ್ರಮುಖ ಸ್ವಾಮೀಜಿಗಳ ಗೈರು ಹಾಜರಿಯನ್ನು ಗಮನಿಸಿರುವ ರಾಜ್ಯ ಬಿಜೆಪಿ ನಾಯಕರು ಈ ವಿಚಾರಕ್ಕೆ ಹೆಚ್ಚಿನ ಮಹತ್ವ ನೀಡದಿರಲು ತೀರ್ಮಾನಿಸಿದ್ದಾರೆ. ಆ ಮೂಲಕ ಪಕ್ಷದ ವರ್ಚಸ್ಸಿಗೆ ಯಾವುದೇ ರೀತಿಯ ಚ್ಯುತಿ ಬಾರದಂತೆ ಎಚ್ಚರಿಕೆಯ ನಡೆ ಅನುಸರಿಸಲು ಮುಂದಾದಂತಿದೆ.

ದಿಲ್ಲಿಯಲ್ಲಿ ಪತ್ತೆಯಾದ ಹಣಕ್ಕೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯವು ಡಿ.ಕೆ.ಶಿವಕುಮಾರ್‌ ಅವರನ್ನು ಬಂಧಿಸುತ್ತಿದ್ದಂತೆ ಅವರ ಬೆಂಬಲಿಗರು, ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದರು. ಪ್ರಕರಣ ಸಂಬಂಧ ಇಡಿ ಕಾರ್ಯ ವೈಖರಿಯನ್ನು ಖಂಡಿಸುವ ಜತೆಗೆ ಕೇಂದ್ರ ಸರಕಾರ, ಪ್ರಧಾನಿ, ಕೇಂದ್ರ ಗೃಹ ಸಚಿವರ ವಿರುದ್ಧವೂ ಆರೋಪ ಮಾಡುವ ಮೂಲಕ ಬಂಧನ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿತ್ತು. ಕಾಂಗ್ರೆಸ್‌, ಜೆಡಿಎಸ್‌ ನಾಯಕರು ಸಹ ಇದೇ ರೀತಿಯ ಆರೋಪ ಮುಂದುವರಿಸುವ ಮೂಲಕ ಜನಾಂದೋಲನ ರೂಪಿಸುವ ಪ್ರಯತ್ನ ನಡೆಸಿದ್ದರು.

ಹಳೇ ಮೈಸೂರು ಭಾಗದ ಕಾಂಗ್ರೆಸ್‌, ಜೆಡಿಎಸ್‌ ನಾಯಕರನ್ನೇ ಸೆಳೆದು ಪಕ್ಷ ಸಂಘಟನೆಗೆ ಒತ್ತು ನೀಡಿರುವ ಬಿಜೆಪಿಯು ಮೈತ್ರಿ ಸರಕಾರವನ್ನು ಪತನಗೊಳಿಸಿ ಸರಕಾರ ರಚಿಸಿದೆ. ಆ ಮೂಲಕ ಒಕ್ಕಲಿಗ ಮುಖ್ಯಮಂತ್ರಿಯ ನೇತೃತ್ವದ ಸರಕಾರ ಪತನಗೊಳಿಸಿದ ಅಪಖ್ಯಾತಿಯೂ ಬಿಜೆಪಿಗೆ ತಟ್ಟಲಿದೆ ಎಂಬ ಮಾತುಗಳ ನಡುವೆಯೇ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್‌ ಬಂಧನವಾಗಿದೆ. ಹಾಗಾಗಿ ರಾಜ್ಯದಲ್ಲಿ ಒಕ್ಕಲಿಗ ಸಮುದಾಯವನ್ನೇ ಕೇಂದ್ರ ಸರಕಾರ ಗುರಿಯಾಗಿಸಿಕೊಂಡಿದೆ ಎಂಬ ಮಾತು ವ್ಯಾಪಕವಾಗಿ ಕೇಳಿಬಂದಿತ್ತು.

ಡಿ.ಕೆ.ಶಿವಕುಮಾರ್‌ ಬಂಧನ ಖಂಡಿಸಿ ರಾಮನಗರ, ಕನಕಪುರ ಸಹಿತ ಕೆಲವೆಡೆ ಪ್ರತಿಭಟನೆ ನಡೆದರೂ ಬಿಜೆಪಿ ಹೆಚ್ಚಿನ ಮಹತ್ವ ನೀಡಿರಲಿಲ್ಲ. ಈ ಬೆಳವಣಿಗೆ ರಾಜಕೀಯ, ಜಾತಿ ಬಣ್ಣ ಪಡೆದು ಬೇರೆ ಸ್ವರೂಪ ಪಡೆದುಕೊಳ್ಳಲಾರಂಭಿಸುತ್ತಿದ್ದಂತೆಯೇ ಬಿಜೆಪಿಯು ಎಚ್ಚೆತ್ತುಕೊಂಡಿತು.

Advertisement

ಬಿಜೆಪಿಗರಿಂದ ಪ್ರತಿ ಹೇಳಿಕೆ
ಬಿಜೆಪಿ ರಾಷ್ಟ್ರೀಯ ನಾಯಕರ ವಿರುದ್ಧ ವಿಪಕ್ಷಗಳ ನಾಯಕರು ಆರೋಪ ಮಾಡುತ್ತಿದ್ದಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಅವರ ಸೂಚನೆಯಂತೆ ಬಿಜೆಪಿಯ ಒಕ್ಕಲಿಗ ನಾಯಕರು ತುಟಿ ಬಿಚ್ಚಲಾರಂಭಿಸಿದರು. ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಉಪಮುಖ್ಯಮಂತ್ರಿ ಡಾ| ಸಿ.ಎನ್‌.ಅಶ್ವತ್ಥ ನಾರಾಯಣ, ಸಚಿವರಾದ ಆರ್‌.ಅಶೋಕ್‌, ಸಿ.ಟಿ.ರವಿ ಅವರು ಪ್ರತಿ ಹೇಳಿಕೆ ನೀಡಿ ಡಿ.ಕೆ.ಶಿವಕುಮಾರ್‌ ಬಂಧನಕ್ಕೂ ಬಿಜೆಪಿಗೂ ಸಂಬಂಧವಿಲ್ಲ ಎಂಬುದನ್ನು ಪುನರುಚ್ಚರಿಸಿದರು. ಅದರಲ್ಲೂ ಡಾ| ಸಿ.ಎನ್‌.ಅಶ್ವತ್ಥ ನಾರಾಯಣ ಅವರು ತೀವ್ರ ವಾಗ್ಧಾಳಿ ನಡೆಸಿ ಪಕ್ಷದ ಪರ ನಿಂತರು.

ತಟಸ್ಥ ಧೋರಣೆ
ಡಿ.ಕೆ.ಶಿವಕುಮಾರ್‌ ಬಂಧನ ಮತ್ತು ಅನಂತರದ ಬೆಳವಣಿಗೆಗೆ ಸಂಬಂಧಪಟ್ಟಂತೆ ಸದ್ಯ ತಟಸ್ಥ ಧೋರಣೆ ಮುಂದುವರಿಸಲಾಗುವುದು. ಬಂಧನ ಖಂಡಿಸಿ ನಡೆದ ಪ್ರತಿಭಟನೆಯಿಂದ ಕಾಂಗ್ರೆಸ್‌, ಜೆಡಿಎಸ್‌ನ ಹಿರಿಯ ನಾಯಕರು ಅಂತರ ಕಾಯ್ದುಕೊಂಡಿದ್ದಾರೆ. ಜತೆಗೆ ಸಮುದಾಯದ ಪ್ರಮುಖ ಸ್ವಾಮೀಜಿಗಳು, ರಾಜ್ಯ ಒಕ್ಕಲಿಗ ಸಂಘವೂ ದೂರ ಉಳಿದಿದೆ. ಒಕ್ಕಲಿಗ ಸಮುದಾಯದಲ್ಲೂ ಈ ಬಗ್ಗೆ ಭಿನ್ನ ನಿಲುವಿದೆ. ಹಾಗಾಗಿ ಈ ಬೆಳವಣಿಗೆಯಿಂದ ಪಕ್ಷದ ವರ್ಚಸ್ಸಿಗೆ ಯಾವುದೇ ಹಾನಿಯಾಗದು ಎಂದು ರಾಜ್ಯ ಬಿಜೆಪಿ ಪದಾಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಜನರಿಗೆ ವಾಸ್ತವದ ಅರಿವಿದೆ
ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಪಟ್ಟ ಕಾನೂನಾತ್ಮಕ ವಿಚಾರಗಳಲ್ಲಿ ರಾಜಕೀಯ, ಜಾತಿ ತರುವುದು ಸರಿಯಲ್ಲ. ಬದಲಿಗೆ ಕಾನೂನಾತ್ಮಕ ಹೋರಾಟ ಮಾಡಬೇಕು. ಈ ರೀತಿಯ ಒತ್ತಡಗಳಿಗೆ ಯಾರೂ ಬಗ್ಗುವುದಿಲ್ಲ. ಹಿಂದೆಯೂ ಸಾಕಷ್ಟು ಮಂದಿಯ ಬಂಧನ, ವಿಚಾರಣೆಯಾಗಿದೆ. ಅದಕ್ಕೆಲ್ಲ ಹಿಂದಿನ ಪ್ರಧಾನಿಗಳು ಇತರ ನಾಯಕರ ಮೇಲೆ ಆರೋಪ ಹೊರಿಸುವುದು ಸರಿ ಎನಿಸದು. ಜನರು ಮೂರ್ಖರಲ್ಲ. ಜನರಿಗೆ ವಾಸ್ತವದ ಅರಿವಿದೆ. ಈ ರೀತಿಯ ವಿಚಾರಗಳಲ್ಲಿ ಕೇಂದ್ರದ ನಾಯಕರು, ಸರಕಾರದ ವಿರುದ್ಧ ಆರೋಪ ಮಾಡಿದರೆ ಪಕ್ಷದ ವರ್ಚಸ್ಸಿಗೆ ಯಾವುದೇ ರೀತಿಯಲ್ಲಿ ಧಕ್ಕೆಯಾಗದು.
– ನಳಿನ್‌ ಕುಮಾರ್‌ ಕಟೀಲು, ಬಿಜೆಪಿ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next