ಪಟ್ನಾ: ರಾಮ ಮಂದಿರ ಲೋಕಾರ್ಪಣೆ ದಿನಗಣೆ ಶುರುವಾಗಿರುವಂತೆಯೇ ಆರ್ಜೆಡಿಯ ಇಬ್ಬರು ನಾಯಕರು ಕಾರ್ಯಕ್ರಮ ವಿರುದ್ಧ ವಿವಾದಿತ ಹೇಳಿಕೆ ನೀಡಿದ್ದಾರೆ. ಶಾಸಕ ಅಜಯ್ ಯಾದವ್ ಗಯಾ ಜಿಲ್ಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತ ನಾಡಿ “ಜ.22ರಂದು ಬಿಜೆಪಿಯವರು ಅಯೋ ಧ್ಯೆಯಲ್ಲಿ ಬಾಂಬ್ ಸ್ಫೋಟ ನಡೆಸಬಹುದು. ಅದಕ್ಕೆ ಪಾಕಿಸ್ಥಾನ ಪ್ರೇರಿತ ಉಗ್ರಗಾಮಿಗಳು ಅಥವಾ ಮುಸ್ಲಿಮರು ಕಾರಣ ಎಂದು ಹೇಳಬಹುದು. ಅದನ್ನು ಮುಂದಿನ ಲೋಕಸಭೆಯ ಚುನಾವಣೆಯಲ್ಲಿ ರಾಜಕೀಯ ಲಾಭಕ್ಕೆ ಬಳಕೆ ಮಾಡಬಹುದು ಎಂದು ಹೇಳಿದ್ದಾರೆ.
ಶೋಷಣೆಯ ತಾಣ
ಇನ್ನೊಂದೆಡೆ ರಾಮ ಮಂದಿರವು ಜೇಬು ತುಂಬಿಸಿಕೊಳ್ಳಲು ಮಾಡಿ ರುವ ಶೋಷಣೆಯ ತಾಣವಾಗಿದೆ ಎಂದು ಬಿಹಾರ ಶಿಕ್ಷಣ ಸಚಿವ ಚಂದ್ರಶೇಖರ್ ಯಾದವ್ ಹೇಳಿದ್ದಾರೆ. “ರಾಮ ಮಂದಿರಕ್ಕೆ ಮಂಜೂರು ಮಾಡಿರುವ ನಿವೇಶನವು ಕೇವಲ ಶೋಷಣೆಯ ತಾಣ. ಇದು ಒಂದು ನಿರ್ದಿಷ್ಟ ಸಮುದಾಯದ ಪಿತೂರಿಗಾರರ ಜೇಬು ತುಂಬುವ ಸ್ಥಳವಾಗಿದೆ’ ಎಂದಿದ್ದಾರೆ. “ದೇವಾಲಯಗಳು ಮಾನಸಿಕ ಗುಲಾಮಗಿರಿಯ ಮಾರ್ಗವಾಗಿದೆ. ಶಾಲೆಗಳು ಜೀವನದಲ್ಲಿ ಬೆಳಕಿನ ಪಥವಾಗಿದೆ’ ಎಂದು ಯಾದವ್ ಹೇಳಿದ್ದಾರೆ.