Advertisement

ವಲಸಿಗರ ತಾಣ ಬಿಜೆಪಿಗೆ ಮದ್ದು ಸಾಧ್ಯವೇ?

06:17 PM Nov 18, 2020 | Suhan S |

ಸಿಂಧನೂರು: ಸದ್ಯಕ್ಕೆ ಅಧಿಕಾರಸ್ಥ ಸ್ಥಾನಗಳನ್ನು ಬಲವಾಗಿ ಹೊಂದಿರುವ ಬಿಜೆಪಿ ಮಾತ್ರ ಸ್ಥಳೀಯ ವಿಧಾನಸಭೆ ಕ್ಷೇತ್ರದಲ್ಲಿ ದುರ್ಬಲ ಸ್ಥಿತಿಯಲ್ಲಿದ್ದು, ಪಕ್ಷಕ್ಕೆ ಮುಳುವಾಗಿರುವ ಗುಂಪುಗಾರಿಕೆ ವೈರಸ್‌ಗೆ ರಾಜ್ಯ ನಾಯಕರು ಮದ್ದು ಅರಿಯುವರೇ? ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Advertisement

ಮಸ್ಕಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ನಾಯಕರ ದಂಡೇ ಇಲ್ಲಿನ ಕ್ಷೇತ್ರದಲ್ಲಿ ಬಿಡಾರ ಹೂಡುತ್ತಿರುವ ಬೆನ್ನಲ್ಲೇ ಹಲವು ವರ್ಷಗಳಿಂದ ಪಕ್ಷಕ್ಕೆ ಮುಳುವಾದ ವಲಸಿಗರ ಮೇಲೆ ಕಣ್ಣು ಹಾಯಿಸಬಹುದೆಂಬ ನಿರೀಕ್ಷೆ ಆ ಪಕ್ಷದ ಕಾರ್ಯಕರ್ತರಲ್ಲಿ ಚಿಗುರೊಡೆದಿದೆ.

ಅಧಿಕಾರದ ಅವಕಾಶಕ್ಕಾಗಿ ಮಾತ್ರ ಬಿಜೆಪಿ ಆಯ್ಕೆ ಮಾಡಿಕೊಂಡು ಪಕ್ಷಕ್ಕೆ ಆಗಮಿಸಿ ನಿರ್ಗಮಿಸುವ ಅತಿಥಿಗಳ ಸಂಖ್ಯೆಗೆ ಕೊರೆತೆಯಿಲ್ಲ. ಘಟಾನುಘಟಿ ನಾಯಕರು ಸಿಂಧನೂರಿನಲ್ಲಿ ಬಿಜೆಪಿ ಸೇರ್ಪಡೆಯಾಗಿ ಪಕ್ಷ ತೊರೆದಿದ್ದು ಹೇರಳ. ಬಿಜೆಪಿ ಬೆಳೆಸಬೇಕೆಂಬ ಉದ್ದೇಶದೊಂದಿಗೆ ಸತತ ಪರಿಶ್ರಮ ಪಡುತ್ತಿರುವವರ ಪಾಲಿಗೆ ಈ ಬೆಳವಣಿಗೆ ಬಿಸಿ ತುಪ್ಪವಾದರೂ ಸಹಿಸುತ್ತಲೇ ಪಕ್ಷದೊಂದಿಗೆ ಹೆಜ್ಜೆ ಹಾಕುತ್ತಲೇ ಇದ್ದಾರೆ.

ಈಗಿನ ಮಸ್ಕಿ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಸಿಂಧನೂರಿಗೆ ಲಗ್ಗೆ ಹಾಕಲಿರುವ ನಾಯಕರು ಇಲ್ಲಿನ ಸ್ಥಿತಿಗತಿಯತ್ತ ಗಮನಹರಿಸುತ್ತಾರೆಯೇ? ಎಂಬ ಪ್ರಶ್ನೆ ಬಿಜೆಪಿ ಕಾರ್ಯಕರ್ತರಿಂದ ಕೇಳಿಬರಲಾರಂಭಿಸಿದೆ.

ಅಧಿಕಾರದಲ್ಲಿ ಬಲಿಷ್ಠ, ಒಗ್ಗಟ್ಟಿನಲ್ಲಿ ಕನಿಷ್ಟ:

Advertisement

ಸದ್ಯ ಸಿಂಧನೂರು ಬಿಜೆಪಿಯಲ್ಲಿ ಅಧಿಕಾರಸ್ಥರ ಸಂಖ್ಯೆಗೇನು ಕೊರತೆಯಿಲ್ಲ. ಬಿಜೆಪಿಯವರೇ ಆದ ಆದಿಮನೆ ವೀರಲಕ್ಷ್ಮೀ ಜಿಪಂ ಅಧ್ಯಕ್ಷೆಯಾಗಿದ್ದಾರೆ. ಜಾಲಿಹಾಳ ಜಿಪಂ ಸದಸ್ಯ ಅಮರೇಗೌಡ ವಿರೂಪಾಪುರ ಅವರು, ನಗರ ಯೋಜನಾ ಪ್ರಾಧಿಕಾರಕ್ಕೂ ಅಧ್ಯಕ್ಷರು, ಇನ್ನೂ ಜಿಪಂ ಸದಸ್ಯ ಎನ್‌. ಶಿವನಗೌಡ ಗೋರೆಬಾಳ ಜೆಡಿಎಸ್‌ನಿಂದ ಗೆದ್ದರೂ ಬಿಜೆಪಿಯ ಸಖ್ಯದಲ್ಲಿದ್ದಾರೆ. ಸ್ಥಳೀಯ ಸಂಸ್ಥೆಗಳ ನಾಮ ನಿರ್ದೇಶಿತ ಸ್ಥಾನಗಳೆಲ್ಲ ಬಿಜೆಪಿ ಪಾಲಾಗಿವೆ. ಏನೆಲ್ಲ ಅಧಿ ಕಾರವಿದ್ದರೂ ಬಿಜೆಪಿಯಲ್ಲಿ ಒಗ್ಗಟ್ಟಿನ ಕೊರತೆಯಿದೆ.

ಜತೆಗೆ, ಪರೋಕ್ಷವಾಗಿ ಮತ್ತೂಂದು ಪಕ್ಷಕ್ಕೆ ಅನುಕೂಲ ಕಲ್ಪಿಸುವ ಮೂಲಕ ಮಾತೃ ಪಕ್ಷವನ್ನು ಸಾಂದರ್ಭಕವಾಗಿಉಳಿಸಿಕೊಳ್ಳುವ ವಿರೋಧಿಗಳ ಸಂಖ್ಯೆಯೂ ಹೇರಳವಾಗಿದೆ ಎನ್ನುತ್ತಾರೆ ಪಕ್ಷದ ಕಾರ್ಯಕರ್ತರು. ಕೊಲ್ಲಾ ಶೇಷಗಿರಿರಾವ್‌ ಅವರನ್ನು ಬಹುವಾಗಿ ನೆಚ್ಚಿಕೊಂಡಿರುವ ಪಕ್ಷದ ಕಾರ್ಯಕರ್ತರು ಅವರನ್ನು ಹಿಂಬಾಲಿಸಿದರೂ ಭವಿಷ್ಯದಲ್ಲಿ ಸ್ವ ಪಕ್ಷೀಯರೇ ಮುಳುವೆಂಬ ಸಂಗತಿ ಅವರನ್ನು ಕಾಡಲಾರಂಭಿಸಿದೆ.

ಪಕ್ಷ ಒಂದು, ಕಚೇರಿ ಎರಡು: ಸಿಂಧನೂರಿನಲ್ಲಿ ಸದ್ಯಕ್ಕೆ ಬಿಜೆಪಿ ಪಾಲಿಗೆ ಎರಡು ಕಚೇರಿಗಳು ಪಕ್ಷ/ ಜಾತಿ ಆಧರಿತ ಶಕ್ತಿ ಕೇಂದ್ರಗಳಾಗಿ ಮಾರ್ಪಟ್ಟಿವೆ. ರಾಜ್ಯ ನಾಯಕರು ಬಂದಾಗ ಅವರವರ ಶಕ್ತಿ ಅನುಸಾರ ತಮ್ಮ ಕಚೇರಿ, ಮನೆಗಳಿಗೆ ಆಹ್ವಾನಿಸಿ ಪ್ರಾಬಲ್ಯ ಸಾರುವ ಪ್ರಯತ್ನ ಮುಂದುವರಿದಿವೆ. ಯಾವುದೇ ಮಂತ್ರಿಗಳು ತಾಲೂಕಿಗೆ ಬಂದರೂ

ಈ ಎರಡು ಗುಂಪನ್ನು ಮೀರಿ ಶಾಸಕ ವೆಂಕಟರಾವ್‌ ನಾಡಗೌಡ ನಾಯಕರನ್ನು ಊರು ದಾಟಿಸುವ ತನಕ ಜತೆಯಲ್ಲಿರುತ್ತಾರೆಂಬ ದೂರು ಬಲವಾಗಿವೆ. ಹೀಗಿರುವಾಗ ಸೂತ್ರ ಹರಿದ ಗಾಳಿಪಟವಾಗಿರುವ ಬಿಜೆಪಿ ಒಂದೇ ದೋಣಿಯಲ್ಲಿ ಸಾಗಿಸುವತ್ತ ರಾಜ್ಯ ನಾಯಕರು ಗಮನಹರಿಸಬೇಕು ಎಂಬ ಮಾತುಗಳು ಜೋರಾಗಿದೆ.

ಬಿಜೆಪಿಯಲ್ಲಿ ಅನ್ಯ ಪಕ್ಷದ ಹಿತೈಷಿಗಳು :  ಸಿಂಧನೂರು ತಾಲೂಕಿನಲ್ಲಿ ಸದ್ಯ ಮೂವರು ಜಿಪಂ ಸದಸ್ಯರು, ಒಬ್ಬರು ಜಿಪಂ ಅಧ್ಯಕ್ಷರು, ಪ್ರಾಧಿಕಾರದ ಅಧ್ಯಕ್ಷರನ್ನು ಒಳಗೊಂಡಿರುವ ಪಕ್ಷಕ್ಕೆ ಇತರ ಪಕ್ಷಗಳೊಂದಿಗೆ ಸಮಸೆಡ್ಡು ಹೊಡೆಯುವ ಶಕ್ತಿಯಿಲ್ಲವೆಂಬ ಗೋಳು ಕೇಳಿಬರುತ್ತಿದೆ. ಪಕ್ಷಗಳಲ್ಲಿರುವ ಕೆಲವರು ಮತ್ತೂಂದು ಪಕ್ಷಗಳಲ್ಲಿರುವ ನಾಯಕರ ಹಿತೈಷಿಗಳ ರೀತಿ ಈಪಕ್ಷವನ್ನು ಹೆಗ್ಗಳಿಕೆಯಾಗದಂತೆ ತಡೆಯುವಲ್ಲಿ ಅವರ ಪಾತ್ರ ನಿಭಾಯಿಸುತ್ತಾರೆ. ಅಧಿಕಾರ, ಅವಕಾಶಗಳು ಮುಗಿದ ನಂತರ ದಿಢೀರ್‌ ತಮ್ಮ ಅಂಗಳ ಬದಲಾಯಿಸುತ್ತಾರೆಂಬ ಟೀಕೆಗಳು ಸಾಮಾನ್ಯವಾಗಿವೆ. ಇದಕ್ಕೆಲ್ಲ ರಾಜ್ಯ ಬಿಜೆಪಿ ಪರಿಹಾರ ಸೂಚಿಸುವುದೇ ಎಂಬುದಕ್ಕೆ ಮಸ್ಕಿ ಉಪ ಚುನಾವಣೆ ಅವಕಾಶ ಒದಗಿಸಿದೆ.

ನಮ್ಮಲ್ಲಿ ದೊಡ್ಡ ನಾಯಕರು ಬಂದ್ರು, ಹೋದ್ರು. ಹಾಗೆ ಯಾರಾದರೂ ಬರಬಹುದು. ಶಾಸಕ ನಾಡಗೌಡರು ಬಂದರೂ ಸ್ವಾಗತ. ಅವರು ಪಕ್ಷ ಕಟ್ಟುವ ಕೆಲಸ ಮಾಡಲಿ. ಇನ್ಯಾರಾದರೂ ಬರುತ್ತಾರೆಂದರೆ ನಾವಂತು ವಿರೋಧ ಮಾಡುವುದೇ ಇಲ್ಲ.- ಕೊಲ್ಲಾ ಶೇಷಗಿರಿರಾವ್‌, ಬಿಜೆಪಿ ಹಿರಿಯ ಮುಖಂಡ, ಸಿಂಧನೂರು

 

ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next