Advertisement

ಬಿಜೆಪಿ ನಾಯಕಿ ಪತಿ ಸೇರಿ 8 ಮಂದಿ ಸೆರೆ

03:20 PM Apr 19, 2022 | Team Udayavani |

ಕಲಬುರಗಿ: 545 ಪಿಎಸ್‌ಐ (ಸಿವಿಲ್‌) ನೇಮಕಾತಿ ಸಂಬಂಧ ಕಳೆದ ಅಕ್ಟೋಬರ್‌ನಲ್ಲಿ ನಡೆದಿದ್ದ ಪರೀಕ್ಷೆ ಅಕ್ರಮ ಕುರಿತಾಗಿ ಸಿಐಡಿ ತಂಡ ತನಿಖೆ ಚುರುಕುಗೊಳಿ ಸಿದ್ದು, ಅಕ್ರಮ ನಡೆದಿದೆ ಎನ್ನಲಾದ ನಗರದ ಜಿಡಿಎ ಬಡಾವಣೆಯ ಗೋಕುಲ ನಗರದ ಜ್ಞಾನಜ್ಯೋತಿ ಶಾಲೆಯ ಪರೀಕ್ಷಾ ಕೇಂದ್ರದ ಸಿಸಿ ಕ್ಯಾಮರಾದ ಡಿವಿಆರ್‌ ವಶಪಡಿಸಿಕೊಂಡಿದೆ. ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಪತಿ ರಾಜೇಶ ಹಾಗರಗಿ ಸೇರಿ 8 ಜನರನ್ನು ಬಂಧಿಸಲಾಗಿದೆ.

Advertisement

ಸೋಮವಾರ ಶಾಲೆಗೆ ಭೇಟಿ ನೀಡಿದ್ದ ಸಿಐಡಿ ತಂಡ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದ ಕೊಠಡಿಗಳನ್ನು ಪರಿಶೀಲಿಸಿದ್ದಾರೆ. ಅಲ್ಲದೇ ಇತರ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಸಿಐಡಿ ಡಿಎಸ್ಪಿಗಳಾದ ಶಂಕರಗೌಡ ಪಾಟೀಲ, ಪ್ರಕಾಶ ಅವರನ್ನು ಒಳಗೊಂಡ ತಂಡ ಭೇಟಿ ನೀಡಿ ಮಹತ್ವದ ಮಾಹಿತಿ ಕಲೆ ಹಾಕಿದೆ. ಈಗಾಗಲೇ ಶಾಲೆಯ ಮೇಲ್ವಿಚಾರಕಿಯಾಗಿ ಕಾರ್ಯನಿರ್ವಹಿಸಿರುವ ಸಾವಿತ್ರಿ, ಸಿದ್ಧಮ್ಮ, ಸುಮಾ ಎನ್ನುವರನ್ನು ಬಂಧಿಸಲಾಗಿದೆ. ಸೋಮವಾರ ಇವರನ್ನು ಶಾಲೆಗೆ ಕರೆತಂದು ಹೆಚ್ಚಿನ ವಿಚಾರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಅನೇಕ ಅಂಶಗಳು ಬಯಲಿಗೆ ಬಂದಿವೆ ಎನ್ನಲಾಗಿದೆ.

ಪರೀಕ್ಷೆ ಅಕ್ರಮ ಸಂಬಂಧ ದಿವ್ಯಾ ಹಾಗರಗಿ ಪತಿ ರಾಜೇಶ ಹಾಗರಗಿ ಸೇರಿ ಒಟ್ಟಾರೆ ಎಂಟು ಜನರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಎರಡು-ಮೂರು ದಿನದೊಳಗೆ ಮತ್ತೆ ಕೆಲವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. ಶಾಲೆ ಮುಖ್ಯಸ್ಥೆ, ಬಿಜೆಪಿ ನಾಯಕಿ ಹಾಗೂ ಕರ್ನಾಟಕ ನರ್ಸಿಂಗ್‌ ಕೌನ್ಸಿಲ್‌ ಸದಸ್ಯರಾಗಿರುವ ದಿವ್ಯಾ ಹಾಗರಗಿ ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದು, ಪೊಲೀಸರು ತೀವ್ರ ಶೋಧನಾ ಕಾರ್ಯ ಮುಂದುವರಿಸಿದ್ದಾರೆ. ಅವರ ಮೊಬೈಲ್‌ ಅಫ‌ಜಲಪುರದಲ್ಲಿ ಸ್ವಿಚ್‌ ಆಫ್ ಆಗಿದೆ ಎಂದು ತನಿಖೆಯಲ್ಲಿ ಗೊತ್ತಾಗಿದೆ.

ಪರೀಕ್ಷೆ ನಡೆಯುವ ಮುಂಚೆಯೇ ಅಭ್ಯರ್ಥಿಗಳ ಜತೆ ಡೀಲ್‌ ಮಾಡಿಕೊಂಡು ಹಾಲ್‌ ಟಿಕೆಟ್‌ ಬಂದ ದಿನ ಇಷ್ಟು ಮೊತ್ತ, ಪರೀಕ್ಷೆ ದಿನ ಇಷ್ಟು, ಫ‌ಲಿತಾಂಶ ಪ್ರಕಟವಾದ ನಂತರ ಇಂತಿಷ್ಟು ನಿಗದಿ ಮಾಡಿಯೇ ವ್ಯವಹಾರ ಕುದುರಿಸಲಾಗಿದೆ. ಪ್ರಮುಖವಾಗಿ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರೇ ಡೀಲ್‌ ಮಾಡಿಕೊಂಡು ಅಭ್ಯರ್ಥಿಗಳ ಒಎಂಆರ್‌ ಸೀಟ್‌ನಲ್ಲಿ ಟಿಕ್‌ ಮಾಡಿರುವುದನ್ನು ನೋಡಿದರೆ ಇದರ ಹಿಂದೆ ವ್ಯವಸ್ಥಿತ ತಂಡವೊಂದು ಇರುವುದು ಸ್ಪಷ್ಟವಾಗುತ್ತದೆ. ತನಿಖೆಯನ್ನು ಇಲ್ಲಿಗೆ ಸಿಮೀತಗೊಳಿಸದೇ ಎಲ್ಲ ಆಯಾಮಗಳಲ್ಲಿ ಹಾಗೂ ಸಂಶಯ ಬಂದ ಎಲ್ಲರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.

ಬಿಜೆಪಿ ನಾಯಕಿಯಲ್ಲ: ಶಾಸಕ ರಾಜಕುಮಾರ ತೇಲ್ಕೂರ

Advertisement

ಬಿಜೆಪಿ ರಾಜ್ಯ ವಕ್ತಾರ, ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಪತ್ರಿಕಾ ಪ್ರಕಟಣೆ ಹೊರಡಿಸಿ, ದಿವ್ಯಾ ಬಿಜೆಪಿ ನಾಯಕಿಯಲ್ಲ. ಅವರಿಗೂ ಬಿಜೆಪಿಗೂ ಸಂಬಂಧವಿಲ್ಲ. ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಭಾಗಿಯಾದ ಆರೋಪಿ ಜ್ಞಾನಜ್ಯೋತಿ ಶಾಲೆ ಮುಖ್ಯಸ್ಥೆ ದಿವ್ಯಾ ಹಾಗರಗಿ, ಇನ್ಯಾರೆ ಭಾಗವಹಿಸಿದ್ದರೆ ಪಕ್ಷ ಮತ್ತು ಸರ್ಕಾರ ಸಹಿಸಿಕೊಳ್ಳುವುದಿಲ್ಲ. ಅಕ್ರಮ ನಡೆದಿರುವುದು ಸಾಬೀತಾದರೆ ಶಿಕ್ಷೆ ಆಗಲಿದೆ. ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಸಿಒಡಿ ತನಿಖೆ ನಡೆಸಲು ಸೂಚಿಸಿದೆ ಎಂದು ತಿಳಿಸಿದ್ದಾರೆ.

ಸಾರ್ವಜನಿಕರ ಪ್ರಶ್ನೆ: ಹಿಂದಿನ ಅವಧಿಗೆ ಬಿಜೆಪಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿ ದ್ದಲ್ಲದೇ ಸಂಸದರ ಅಧ್ಯಕ್ಷತೆಯ ದಿಶಾ ಸಮಿತಿ ಮತ್ತು ಪ್ರಮುಖವಾಗಿ ಕರ್ನಾಟಕ ನರ್ಸಿಂಗ್‌ ಕೌನ್ಸಿಲ್‌ ಸದಸ್ಯರಾಗಿರುವ ದಿವ್ಯಾ ಹಾಗರಗಿ ಅವರಿಗೂ ಬಿಜೆಪಿ ಸಂಬಧವಿಲ್ಲ ಎನ್ನುವುದು ಸಂಶಯಕ್ಕೆ ಕಾರಣವಾಗಿದೆ.

ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಕೆಲವರು ನನ್ನ ಬಳಿ ಕೂಡ ಬಂದು ಹೇಳಿದ್ದರು. ನಾನು ಸಂಬಂಧಪಟ್ಟವರಿಗೆ ತನಿಖೆಗೆ ಹೇಳಿದ್ದೆ. ತನಿಖೆ ನಡೆಯುತ್ತಿದ್ದು, ಯಾರು ತಪ್ಪಿತಸ್ಥರಿದ್ದರೂ ಅವರಿಗೆ ಶಿಕ್ಷೆಯಾಗಲಿ.

● ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ

ಯಾವ ಕಾಲದಲ್ಲೂ ಇಂತಹ ಅಕ್ರಮ ನಡೆದಿರಲಿಲ್ಲ. ಇಲ್ಲಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರಿಗೆ ಅನ್ಯಾಯವಾಗಿದೆ. ಮುಖ್ಯಮಂತ್ರಿಗಳು ಈ ಬಗ್ಗೆ ಗಮನ ಹರಿಸಿದ್ದಾರೋ ಇಲ್ಲವೋ, ಆದರೆ ಗೃಹಮಂತ್ರಿಗಳು ಅಕ್ರಮ ನಡೆದಿಲ್ಲ ಎಂದು ಹೇಳಿ ಸಿಐಡಿ ತನಿಖೆ ಮಾಡಿಸುತ್ತಿದ್ದಾರೆ. ಪ್ರಕರಣದ ಬಗ್ಗೆ ಸಮಗ್ರ ತನಿಖೆಯಾಗಬೇಕು

ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next