Advertisement

ಬಿಜೆಪಿ ಆತ್ಮವಿಶ್ವಾಸ ಕಳೆದುಕೊಂಡಿದೆ… : ಡಿ.ಕೆ.ಶಿವಕುಮಾರ್‌

12:28 PM Apr 22, 2023 | Team Udayavani |

ಬೆಂಗಳೂರು, ಎ. 21: “ರಾಜ್ಯದಲ್ಲಿ ಈ ಬಾರಿ ಯಾವುದೇ ಕಾರಣಕ್ಕೂ ಅತಂತ್ರ ಫ‌ಲಿತಾಂಶ ಬರಲು ಸಾಧ್ಯ ವಿಲ್ಲ. ಕಾಂಗ್ರೆಸ್‌ಗೆ ಪೂರ್ಣ ಬಹುಮತ ಬಂದೇ ಬರುತ್ತದೆ. ಎಚ್‌.ಡಿ. ಕುಮಾರ ಸ್ವಾಮಿ ಅವರಿಗೆ ಈ ಸಲ ಅವಕಾಶ ಸಿಗುವುದಿಲ್ಲ…’
-ಇದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವ ಕುಮಾರ್‌ ಅವರ ಆತ್ಮವಿಶ್ವಾಸದ ಮಾತುಗಳು.

Advertisement

“ಉದಯವಾಣಿ” ಕಚೇರಿಯಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾವು ಅತೀ ಆತ್ಮವಿಶ್ವಾಸದಲ್ಲಿ ಇಲ್ಲ, ಆದರೆ ಸುಸ್ಥಿತಿಯಲ್ಲಿದ್ದೇವೆ ಎಂಬ ನಂಬಿಕೆಯಿದೆ. ನನಗೆ ನನ್ನ ಪರಿಶ್ರಮದ ಮೇಲೆ ವಿಶ್ವಾಸವಿದೆ ಎಂದರು.

ಕಾಂಗ್ರೆಸ್‌ 140 ಸ್ಥಾನ ಪಡೆದು ಸ್ವಂತ ಬಲದ ಮೇಲೆ ಸರಕಾರ ರಚಿಸಲಿದೆ. ಕರಾವಳಿ, ಮಲೆನಾಡು, ಕಿತ್ತೂರು -ಕಲ್ಯಾಣ ಕರ್ನಾಟಕ ಸಹಿತ ರಾಜ್ಯದಲ್ಲಿ ಕಾಂಗ್ರೆಸ್‌ ಅಲೆ ಎದ್ದಿದೆ ಎಂದರು.

ಬಿಜೆಪಿಯವರು ಸಮೀಕ್ಷೆ ಮಾಡಿಸಿ ದ್ದಾರೆ, ನಾವೂ ಮಾಡಿಸಿದ್ದೇವೆ. ತಮ್ಮ ಸಮೀಕ್ಷೆ ಏನು ಹೇಳಿದೆ ಎಂಬುದು ಬಿಜೆಪಿ ಯವರಿಗೆ ಗೊತ್ತಿದೆ. ಅವರಿಗೆ ತಾವು ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಸ್ಪಷ್ಟವಾಗಿದ್ದು, ವಿಶ್ವಾಸ ಕಳೆದುಕೊಂಡಿದ್ದಾರೆ.

ಖರ್ಗೆ ನಮಗೆಲ್ಲ ಮಾದರಿ
ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಡುತ್ತೇನೆ ಎಂಬ ನನ್ನ ಮಾತಿನಲ್ಲಿ ಬೇರೆ ಉದ್ದೇಶ ಇಲ್ಲ. ಅವರ ಹಿರಿತನ, ಪಕ್ಷಕ್ಕೆ ದುಡಿದ ಶ್ರಮ, ಪಕ್ಷ ನಿಷ್ಠೆಗೆ ತಲೆಬಾಗಲೇಬೇಕು. ನನಗೆ ಸಿಎಂ ಹುದ್ದೆ ಬೇಡ ಎಂದು ಹೇಳುವುದು ಅವರ ದೊಡ್ಡತನ. ಪಕ್ಷ ಮೊದಲು ಅಧಿಕಾರಕ್ಕೆ ಬರಲಿ ಎಂದು ಹೇಳುವ ಅವರೇ ನಮಗೆ ಮಾದರಿ. ಮೊದಲು ಪಕ್ಷ ಅಧಿಕಾರಕ್ಕೆ ಬರಬೇಕು ಎಂಬುದು ನಮ್ಮ ಆಶಯವೂ ಹೌದು. ಸಿಎಂ ಯಾರು ಎಂಬುದನ್ನು ಹೈಕಮಾಂಡ್‌ ಹಾಗೂ ಶಾಸಕರು ತೀರ್ಮಾನಿಸುತ್ತಾರೆ ಎಂದು ಡಿ.ಕೆ. ಶಿವಕುಮಾರ್‌ ಸ್ಪಷ್ಟಪಡಿಸಿದರು.

Advertisement

ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷದ ಸಾರಥ್ಯ ಒಪ್ಪಿಕೊಳ್ಳಲು ಯಾರೂ ಸಿದ್ಧರಿಲ್ಲದ ಸಂದರ್ಭದಲ್ಲಿ ನಾನು ಧೈರ್ಯ ಮಾಡಿ ಜವಾಬ್ದಾರಿ ತೆಗೆದುಕೊಂಡೆ. ಅಧಿಕಾರ ಸ್ವೀಕರಿಸಿದ ಕ್ಷಣದಿಂದ ನಾನು ಮನೆಯಲ್ಲಿ ಕುಳಿತುಕೊಳ್ಳಲಿಲ್ಲ, ನಮ್ಮ ಕಾರ್ಯಕರ್ತರಿಗೂ ಆ ಅವಕಾಶ ನೀಡ ಲಿಲ್ಲ. ನಾನು ಅತ್ಯಂತ ಆತ್ಮವಿಶ್ವಾಸದಿಂದ ಹೇಳ ಬಲ್ಲೆ, ನಮ್ಮ ಪರಿಶ್ರಮಕ್ಕೆ ಫ‌ಲ ದೊರೆತೇ ದೊರೆ ಯುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ.

ಉದಯವಾಣಿ “ಸಂವಾದ”ದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ನೇಮಕ ಗೊಂಡ ಇದುವರೆಗಿನ ಬೆಳವಣಿ ಗೆಗಳ ಬಗ್ಗೆ ಮನಬಿಚ್ಚಿ ಮಾತನಾ ಡಿದ ಅವರು, ಬಿಜೆಪಿ ನಾಯಕತ್ವದ ಕೊರತೆ ಎದುರಿಸುತ್ತಿದೆ. ಜನತೆಯ ವಿಶ್ವಾಸ, ಆತ್ಮವಿಶ್ವಾಸ ಎರಡನ್ನೂ ಅವರು ಕಳೆದು ಕೊಂಡಿದ್ದಾರೆ. ಜನಾದೇಶ ಇದ್ದ ಮುಖ್ಯ ಮಂತ್ರಿ ಬದಲಾಯಿಸಿದರೆ ಏನಾಗುತ್ತದೆ ಎಂಬುದಕ್ಕೆ ಬಿಜೆಪಿಯೇ ಉದಾಹರಣೆ. ಬಸವರಾಜ ಬೊಮ್ಮಾಯಿ ನಾಯಕತ್ವವನ್ನು ರಾಜ್ಯದ ಜನ ಒಪ್ಪು ತ್ತಿಲ್ಲ. ಅವರ ನಾಯಕತ್ವ ಛಿದ್ರವಾಗಿರುವುದರಿಂದ ದಿಲ್ಲಿ ನಾಯಕರ ಮೊರೆ ಹೋಗುತ್ತಿದ್ದಾರೆ. ಆದರೆ ಈ ಸರ್ಕಾರ ಎಸಗಿದ ಭ್ರಷ್ಟಾಚಾರದ ಬಗ್ಗೆ ಮೋದಿ, ಅಮಿತ್‌ ಶಾಗೂ ಸ್ಪಷ್ಟನೆ ಕೊಡುವುದಕ್ಕೆ ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದರು.

ಲಂಚಕ್ಕೊಂದು, ಮಂಚಕ್ಕೊಂದು: ಬಿಜೆಪಿ ಸರ್ಕಾ ರದಲ್ಲಿ ಒಬ್ಬ ಮಂತ್ರಿ ಲಂಚಕ್ಕೋಸ್ಕರ ಅಧಿಕಾರ ಕಳೆದುಕೊಂಡರೆ, ಇನ್ನೊಬ್ಬ ಮಂಚಕ್ಕಾಗಿ ರಾಜೀನಾಮೆ ಕೊಟ್ಟರು. ಬಿಜೆಪಿ ಆಡಳಿತಾತ್ಮಕವಾಗಿ ಜನರ ವಿಶ್ವಾಸ ಕಳೆದುಕೊಳ್ಳುತ್ತಿರುವುದು ಅರ್ಥವಾಗುತ್ತಿ ದ್ದಂತೆ ಕೋಮು ಧ್ರುವೀಕರಣಕ್ಕೆ ಮುಂದಾದರು. ಜನರ ಭಾವನೆಯನ್ನು ಕೆರಳಿಸಲು ನೋಡಿದರು. ಆದರೆ ಅದು ಕೆಲಸ ಮಾಡಲಿಲ್ಲ. ಕಾಂಗ್ರೆಸ್‌ ಪಕ್ಷ ಬದುಕು ಮುಖ್ಯ ಎಂದು ಪ್ರತಿಪಾದಿಸಿದರೆ, ಬಿಜೆಪಿ ಭಾವನೆಗಳ ಮೇಲೆ ರಾಜಕೀಯ ಮಾಡುತ್ತದೆ. ಹಿಜಾಬ್‌, ಹಲಾಲ್‌ ಕಟ್‌, ಜಾತ್ರೆ-ಸಂತೆಗಳಲ್ಲಿ ಮುಸ್ಲಿಂ ಸಮುದಾಯ ವ್ಯಾಪಾರ ಮಾಡಬಾರದು ಎಂದು ಏನೇನೋ ಸೃಷ್ಟಿಸಲು ಬಿಜೆಪಿಯವರು ಹೊರಟರು. ಶೇ.14ರಿಂದ 15 ಪ್ರತಿಶತದಷ್ಟಿರುವ ಸಮುದಾಯವನ್ನು ದೇಶಬಿಟ್ಟು ಓಡಿಸಲು ಸಾಧ್ಯವೇ? ಆದರೆ, ಅದ್ಯಾವುದೂ ಅವರಿಗೆ ಲಾಭ ವಾಗಲಿಲ್ಲ, ನಮ್ಮ ನೆಲದ ಗುಣವೇ ಬೇರೆ. ಅಂತಹ ಪ್ರಚೋದನಕಾರಿ ವಿಚಾರಗಳಿಗೆ ಶಾಂತಿಪ್ರಿಯ ಜನರು ಬೆಲೆ ಕೊಡುವುದಿಲ್ಲ, ಇದೀಗ ಐಟಿ-ಇಡಿ ಮೂಲಕ ಚುನಾವಣೆ ಸಮಯದಲ್ಲಿ ದಾಳಿ ಮಾಡಿ ನಮ್ಮ ಅಭ್ಯರ್ಥಿಗಳು, ಮುಖಂಡರು, ನಮ್ಮ ಪರ ಇದ್ದವರಲ್ಲಿ ಆತಂಕ ಮೂಡಿಸಲು ಹೊರಟಿದ್ದಾರೆ ಎಂದು ನೇರ ಆರೋಪ ಮಾಡಿದರು.

ಪ್ರಮಾಣ ವಚನ ಸ್ವೀಕಾರಕ್ಕೂ ಬಿಡಲಿಲ್ಲ: ಉಪಚುನಾವಣೆಯ ಸೋಲಿನ ಬಳಿಕ ನಮ್ಮ ವಿಪಕ್ಷ ನಾಯಕರಾದ ಸಿದ್ದರಾಮಯ್ಯನವರು ನೈತಿಕ ಹೊಣೆ ಹೊತ್ತು ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆಗ ಕೆಪಿಸಿಸಿ ಅಧ್ಯಕ್ಷರಾಗಿದ್ದ ದಿನೇಶ್‌ ಗುಂಡೂ ರಾವ್‌ ಕೂಡಾ ಅದೇ ಹಾದಿಯಲ್ಲಿ ಸಾಗಿದರು. ಆಗ ಪಕ್ಷದ ನಾಯಕತ್ವ ಹೊರುವುದು ಯಾರು ಎಂಬ ಪ್ರಶ್ನೆ ಬಂತು. ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಹಿರಿಯರ ಜತೆಗಿನ ಚರ್ಚೆಯ ಬಳಿಕ ನನಗೆ ವರಿಷ್ಠರು ಅವಕಾಶ ನೀಡಿದರು. ಆದರೆ ದುರದೃಷ್ಟವಶಾತ್‌ ಅದೇ ಸಮಯದಲ್ಲಿ ಕೊರೊನಾ ಕಾಣಿಸಿಕೊಂಡಿತು. ಹೀಗಾಗಿ ಬಿಜೆಪಿಯವರು ನನಗೆ ಅಧಿಕಾರ ಸ್ವೀಕರಿಸುವುದಕ್ಕೂ ಅವಕಾಶ ನೀಡಲಿಲ್ಲ.

ಆದರೂ ನಾನು ಕಾಂಗ್ರೆಸ್‌ ಕಚೇರಿ ಮುಚ್ಚಲು ಬಿಡಲಿಲ್ಲ. 11 ಸಾವಿರ ಝೂಮ್‌ ಸಂಪರ್ಕದ ಮೂಲಕ ನಾನು ಪ್ರಮಾಣ ವಚನ ಸ್ವೀಕರಿಸಿದೆ. ಅಧಿಕಾರ ಸ್ವೀಕರಿಸಿದ ಮೇಲೆ ಪಕ್ಷವನ್ನು ಕ್ರಿಯಾಶೀಲ ವಾಗಿಟ್ಟೆ. ನಾನು ಮನೆಯಲ್ಲಿ ಕುಳಿತುಕೊಳ್ಳಲಿಲ್ಲ, ಕಾರ್ಯಕರ್ತರಿಗೂ ಬಿಡಲಿಲ್ಲ. ಮೇಕೆದಾಟು ಪಾದ ಯಾತ್ರೆ, ರಾಹುಲ್‌ ಗಾಂಧಿಯವರ ಭಾರತ ಜೋಡೋ ಪಾದಯಾತ್ರೆ ರಾಜ್ಯದಲ್ಲಿ ಯಶಸ್ವಿಯಾ ಗಿದೆ. ಭ್ರಷ್ಟಾಚಾರ, ಬೆಲೆ ಏರಿಕೆ ವಿರುದ್ಧ ನಿರಂತರ ಹೋರಾಟ ಮಾಡಿದ್ದೇವೆ. ನಮ್ಮ ಶ್ರಮಕ್ಕೆ ಜನರು ತಕ್ಕ ಫ‌ಲ ಕೊಡುತ್ತಾರೆಂಬ ವಿಶ್ವಾಸವಿದೆ ಎಂದರು.

ಭ್ರಷ್ಟಾಚಾರ ರಹಿತ ಸ್ವತ್ಛ ಮತ್ತು ಉತ್ತಮ ಆಡಳಿತ ನಮ್ಮ ವಾಗ್ಧಾನ. ಜತೆಗೆ, 200 ಯೂನಿಟ್‌ ವಿದ್ಯುತ್‌ ಉಚಿತ, ಮಹಿಳೆಯರಿಗೆ ಮಾಸಿಕ 2 ಸಾವಿರ ರೂ. ಸಹಾಯ, ನಿರುದ್ಯೋಗಿ ಯುವ ಸಮೂಹಕ್ಕೆ ಪ್ರೋತ್ಸಾಹ ಧನ, ತಲಾ ಹತ್ತು ಕೆಜಿ ಅಕ್ಕಿ ಗ್ಯಾರಂಟಿಗಳು ಮತದಾರರಲ್ಲಿ ಭರವಸೆ ಮೂಡಿದೆ. ಹೀಗಾಗಿ, ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಟಿಕೆಟ್‌ ಹಂಚಿಕೆಯಲ್ಲಿ ಕೆಲ ಕಡೆ ಸಮಸ್ಯೆ ಆಗಿದೆ ನಿಜ. ಬಂಡಾಯವೂ ಸ್ವಲ್ಪ ಮಟ್ಟಿಗೆ ತೊಂದರೆ ಕೊಡಬಹುದು. ಆದರೆ, ರಾಜ್ಯದಲ್ಲಿ ಕಾಂಗ್ರೆಸ್‌ ಅಲೆ ಯಿಂದಾಗಿ ಇದೆಲ್ಲವೂ ತೆರೆಮರೆಗೆ ಸರಿಯಲಿದೆ. ಟಿಕೆಟ್‌ ಹಂಚಿಕೆಯಲ್ಲಿ ನಾವೂ ರಿಸ್ಕ್ ತೆಗೆದುಕೊಂಡಿ ದ್ದೇವೆ. ಸಾಮಾಜಿಕ ನ್ಯಾಯ ಪಾಲನೆ ನಮ್ಮ ಶಕ್ತಿ. 40 ಕ್ಷೇತ್ರಗಳಲ್ಲಿ ನಾವು ಪ್ರಯೋಗವನ್ನೂ ಮಾಡಿದ್ದೇವೆ. ನಮ್ಮ ಶ್ರಮಕ್ಕೆ ಫ‌ಲ ಸಿಗುವ ನಿರೀಕ್ಷೆಯಿದೆ ಎಂದರು.

ಮತ ಕೇಳಲು ಮುಖ ಇಲ್ಲ
ಯಡಿಯೂರಪ್ಪ ಆವರನ್ನು ಹೀನಾಯವಾಗಿ ಅಧಿಕಾರದಿಂದ ಕೆಳಗೆ ಇಳಿಸಿದ ನಂತರ ರಾಜ್ಯ ಬಿಜೆಪಿ ನಾಯಕರಿಗೆ ಮತ ಕೇಳಲು ಮುಖ ವಿಲ್ಲದೆ ನರೇಂದ್ರ ಮೋದಿ ನೋಡಿ ಮತ ನೀಡಿ ಎಂದು ಕೇಳುತ್ತಿದ್ದಾರೆ. ನರೇಂದ್ರ ಮೋದಿ ಯ ವರು ಬಂದು ರಾಜ್ಯದಲ್ಲಿ ಆಡಳಿತ ನಡೆಸು ತ್ತಾರಾ? ಇವರ 40 ಪರ್ಸೆಂಟ್‌ ಭ್ರಷ್ಟಾಚಾರಕ್ಕೆ ಮತ ಹಾಕಬೇಕಾ ಎಂದು ಡಿ.ಕೆ.ಶಿವಕುಮಾರ್‌ ಪ್ರಶ್ನಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಕ್ಕೆ ಬಂದ ನಂತರ ಆಡಳಿತ ಕುಸಿತ ಅಷ್ಟೇ ಅಲ್ಲದೆ ಬಿಜೆಪಿಯಲ್ಲೂ ಕುಸಿತ ಕಂಡಿದೆ. ಹೀಗಾಗಿ, ಮತ್ತೆ ಯಡಿಯೂರಪ್ಪ ಅವರನ್ನು ಓಲೈಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ಲಿಂಗಾಯತ ಸಮುದಾಯ ಇವರನ್ನು ನಂಬುವುದಿಲ್ಲ ಎಂದು ಹೇಳಿದರು.

ದುರ್ಬಳಕೆ
ನನ್ನ ವಿರುದ್ಧ ನಿರಂತರವಾಗಿ ಐಟಿ, ಇಡಿ ಬೆದರಿಕೆ ಇಟ್ಟರು. ಆಗಾಗ ನೋಟಿಸ್‌ ಕೊಟ್ಟರು. ಕೇಂದ್ರ ತನಿಖಾ ಸಂಸ್ಥೆಗಳ ಮೂಲಕ ನನಗೆ ಕೊಟ್ಟ ಕಿರುಕುಳದ ಪ್ರಮಾಣ ಎಷ್ಟೆಂದು ಹೇಳುವುದಕ್ಕೆ ಸಾಧ್ಯವಿಲ್ಲ. ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸಿದ ಕಾರಣಕ್ಕೆ 12 ಪ್ರಕರಣ ದಾಖಲಿಸಿದ್ದಾರೆ. ಆದರೆ ಯಡಿಯೂ ರಪ್ಪ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಹೇಳಿಕೆ ಕೊಟ್ಟ ಬಸನಗೌಡ ಪಾಟೀಲ್‌ ಯತ್ನಾಳ್‌ಗೆ ಏಕೆ ನೋಟಿಸ್‌ ನೀಡಿಲ್ಲ? ಎಂದು ಪ್ರಶ್ನಿಸಿದರು. ವರ್ಷಗಟ್ಟಲೆ ಅಧಿಕಾರದಲ್ಲಿದ್ದರೂ ಸುಮ್ಮನಿದ್ದ ಬಿಜೆಪಿಯವರು ಇದೀಗ ನಮ್ಮ ಮೇಲೆ ಪ್ರಕರಣ ದಾಖಲಿಸುತ್ತೇವೆ ಎಂದು ಭಯ ಹುಟ್ಟಿಸಲು ನೋಡುತ್ತಿದ್ದಾರೆ. ಆದರೆ, ಇದಕ್ಕೆಲ್ಲಾ ನಾವು ಹೆದರುವ ಪ್ರಶ್ನೆಯೇ ಇಲ್ಲ. ನ್ಯಾಯಾಂಗದ ಮೇಲೆ ನಂಬಿಕೆಯಿದ್ದು, ಎಲ್ಲವನ್ನು ಎದುರಿಸು ತ್ತೇವೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next