Advertisement

MUDA ಬಳಿಕ ಮತ್ತೊಂದು ಪಾದಯಾತ್ರೆಗೆ ಬಿಜೆಪಿ ಸಜ್ಜು; ಯತ್ನಾಳ್‌ ಬಣಕ್ಕೆ ಮೇಲುಗೈ?

12:50 AM Sep 12, 2024 | Team Udayavani |

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನ ಲಾದ ಅವ್ಯವ ಹಾರಕ್ಕೆ ಸಂಬಂಧ ಪಟ್ಟಂತೆ ಜಾರಿ ನಿರ್ದೇಶನಾಲಯ (ಇ.ಡಿ.) ಆರೋಪ ಪಟ್ಟಿ ಸಲ್ಲಿಸುತ್ತಿದ್ದಂತೆ ಚುರುಕಾಗಿರುವ ಬಿಜೆಪಿಯು ಈಗ ಮುಡಾ ಮಾದರಿಯಲ್ಲಿ ಮತ್ತೊಂದು ಪಾದಯಾತ್ರೆ ನಡೆಸಲು ತೀರ್ಮಾನಿಸಿದೆ. ಈ ಮೂಲಕ ಸರಕಾರದ ವಿರುದ್ಧ ಮತ್ತೊಂದು ಸಮರಕ್ಕೆ ಸಜ್ಜಾಗಿದ್ದು, ಜನಾಭಿಪ್ರಾಯ ಮೂಡಿಸಲು ಮುಂದಾಗಿದೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ ಬಹಳ ದಿನಗಳಿಂದ ಬಿಜೆಪಿಯ ಒಂದು ಬಣ ನಡೆಸುತ್ತಿದ್ದ ಒತ್ತಾಯಕ್ಕೆ ಕೊನೆಗೂ ವರಿಷ್ಠರು ಒಪ್ಪಿಗೆ ನೀಡಿದ್ದಾರೆ.

Advertisement

ವರಿಷ್ಠರು ಪಾದಯಾತ್ರೆಗೆ ಸಮ್ಮತಿ ನೀಡಿರುವ ವಿಷಯವನ್ನು ವಿಧಾನ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ. ಪಾದಯಾತ್ರೆ ಬಗ್ಗೆ ನಾವು ದಿಲ್ಲಿ ನಾಯಕರ ಮುಂದೆ ಅಭಿಪ್ರಾಯ ಮಂಡಿಸಿದ್ದೆವು. ಅವರು ಒಪ್ಪಿಗೆ ನೀಡಿದ್ದಾರೆ. ಸದ್ಯದಲ್ಲೇ ಈ ಹೋರಾಟದ ಸ್ವರೂಪದ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾಹಿತಿ ನೀಡುತ್ತಾರೆ ಎಂದರು.

ಹಾಗಾದರೆ ಹಿರಿಯ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ಬೇಡಿಕೆಗೆ ವರಿಷ್ಠರು ಒಪ್ಪಿಗೆ ನೀಡಿದಂತಾಯಿತೇ ಎಂಬ ಪ್ರಶ್ನೆಗೆ, ಇದನ್ನು ಯತ್ನಾಳ್‌ ಪಾದಯಾತ್ರೆ ಎಂದು ವ್ಯಾಖ್ಯಾನಿಸಬೇಕಿಲ್ಲ. ಎಲ್ಲ ಬಿಜೆಪಿ ನಾಯಕರು ಸೇರಿ ಪಾದಯಾತ್ರೆ ಮಾಡುತ್ತೇವೆ. ಪಕ್ಷಕ್ಕೆ ಒಬ್ಬ ವ್ಯಕ್ತಿ ಮುಖ್ಯವಲ್ಲ. ರಾಜ್ಯದ ಮಟ್ಟಿಗೆ ಪಕ್ಷದಲ್ಲಿ ರಾಜ್ಯಾಧ್ಯಕ್ಷರೇ ಸುಪ್ರೀಂ. ನಾಳೆ ಯತ್ನಾಳ್‌ ಅವರೇ ರಾಜ್ಯಾಧ್ಯಕ್ಷರಾಗಬಹುದು. ಆಗ ಅವರ ಮಾತು ಕೇಳಬೇಕಾಗುತ್ತದೆ. ಈಗ ವಿಜಯೇಂದ್ರ ರಾಜ್ಯಾಧ್ಯಕ್ಷರು. ಅವರು ಹೋರಾಟದ ಸ್ವರೂಪವನ್ನು ತೀರ್ಮಾನ ಮಾಡುತ್ತಾರೆ. ಇದು ಪಕ್ಷದ ವೇದಿಕೆಯ ಮೂಲಕವೇ ನಡೆಯುವ ಹೋರಾಟ ಎಂದು ಸ್ಪಷ್ಟಪಡಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ 187 ಕೋಟಿ ರೂ. ಅಕ್ರಮದ ಬಗ್ಗೆ ಬಿಜೆಪಿ ಹೋರಾಟ ಮಾಡಿತ್ತು. ಬಳಿಕ ಸರ್ಕಾರ ಎಚ್ಚೆತ್ತುಕೊಂಡು ಎಸ್‌ಐಟಿ ರಚನೆ ಮಾಡಿತ್ತು. ಆರಂಭದಲ್ಲಿ ನಾಗೇಂದ್ರ ಹಾಗೂ ದದ್ದಲ್‌ ಹೆಸರು ಹೇಳಲಿಲ್ಲ. ಈಗ ಇ.ಡಿ. ಆರೋಪ ಪಟ್ಟಿಯಲ್ಲಿ ಅವರ ಹೆಸರನ್ನು ಉಲ್ಲೇಖೀಸಲಾಗಿದೆ. ನಾವು ಮುಡಾ ಪ್ರತಿಭಟನೆಯಲ್ಲಿ ಇದ್ದುದರಿಂದ ಆ ಬಗ್ಗೆ ಅಷ್ಟು ಸದ್ದಾಗಿರಲಿಲ್ಲ. ಈಗ ಪೂರ್ಣ ಪ್ರಮಾಣದಲ್ಲಿ ಹೋರಾಟ ಮಾಡುತ್ತೇವೆ ಎಂದರು.

ಇದು ಸಾಮಾನ್ಯ ಹಗರಣ ಅಲ್ಲ
ಇದು ಸಾಮಾನ್ಯ ಹಗರಣ ಅಲ್ಲ. ಇದನ್ನು ಸರಕಾರ ಬಹಳ ಲಘುವಾಗಿ ಪರಿಗಣಿಸಿದೆ. ಸರಕಾರದ ಹಣ ನೇರವಾಗಿ ಖಾತೆಗೆ ವರ್ಗಾಯಿಸಿಕೊಂಡು ನುಂಗಿದ್ದಾರೆ. ಸಚಿವರ ವಿರುದ್ಧವೇ ಆರೋಪ ಬಂದಿದೆ. ಹಣಕಾಸು ಇಲಾಖೆಯ ನಿರ್ಲಕ್ಷ್ಯದ ಬಗ್ಗೆ ಪ್ರಸ್ತಾವಿಸಲಾಗಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳುತ್ತಾರೆ? ಸಿದ್ದರಾಮಯ್ಯನವರ ಮೇಲೆ ಬಹಳ ಅಪವಾದ ಬಂದಿದೆ. ಹೀಗಾಗಿ ಅವರು ವಿಚಲಿತರಾಗಿದ್ದಾರೆ ಎಂದರು.

Advertisement

ಯತ್ನಾಳ್‌ ಬಣಕ್ಕೆ ಮೇಲುಗೈ?
ಈ ಪಾದಯಾತ್ರೆಗೆ ವರಿಷ್ಠರು ಒಪ್ಪಿಗೆ ನೀಡಿರುವುದರಿಂದ ಬಸನಗೌಡ ಯತ್ನಾಳ್‌ ಬಣ ಪಕ್ಷದಲ್ಲಿ ಮೇಲುಗೈ ಸಾಧಿಸಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಮುಡಾ ಪ್ರಕರಣದಲ್ಲಿ ಸಿಎಂ ರಾಜೀನಾಮೆಗೆ ಆಗ್ರಹಿಸಿ ವಿಜಯೇಂದ್ರ ಪಾದಯಾತ್ರೆ ಘೋಷಣೆ ಮಾಡುತ್ತಿದ್ದಂತೆ, ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರದ ವಿರುದ್ಧ ಉತ್ತರ ಕರ್ನಾಟಕ ಭಾಗದಲ್ಲಿ ಪಾದಯಾತ್ರೆ ನಡೆಸುವಂತೆ ಯತ್ನಾಳ್‌ ಆಗ್ರಹಿಸಿದ್ದರು. ಆದರೆ ಆಗ ವರಿಷ್ಠರು ಒಪ್ಪಿರಲಿಲ್ಲ. ಯತ್ನಾಳ್‌ ಹಾಗೂ ರಮೇಶ್‌ ಜಾರಕಿಹೊಳಿ ಈ ಪಾದಯಾತ್ರೆಯಿಂದ ದೂರ ಉಳಿದಿದ್ದರು. ಈಗ ವರಿಷ್ಠರು ಯತ್ನಾಳ್‌ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿದ್ದಾರೆ.

ಎಲ್ಲಿಂದ ಪಾದಯಾತ್ರೆ?
ಪಾದಯಾತ್ರೆ ಎಲ್ಲಿಂದ ಪ್ರಾರಂ ಭಿಸಬೇಕೆಂಬುದು ಇನ್ನೂ ನಿರ್ಣಯವಾಗಿಲ್ಲ. ಚಿತ್ರದುರ್ಗ ದಿಂದ ಬಳ್ಳಾರಿ ಅಥವಾ ಯಾದಗಿರಿಯಿಂದ ಬಳ್ಳಾರಿಯ ವರೆಗೆ ಪಾದಯಾತ್ರೆ ನಡೆಸುವ ಸಾಧ್ಯತೆ ಇದೆ. ನವರಾತ್ರಿ ಬಳಿಕ ದಿನಾಂಕ ನಿಗದಿಯಾಗಲಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next