Advertisement

ಧರಣಿ ನಿರತರ ಪುರಸಭೆ ಸದಸ್ಯತ್ವ ರದ್ದತಿಗೆ ಬಿಜೆಪಿ ಆಗ್ರಹ

06:29 PM Aug 27, 2022 | Shwetha M |

ಮುದ್ದೇಬಿಹಾಳ: ಪುರಸಭೆ ಕಚೇರಿ ಎದುರು ಸದಸ್ಯರಾದ ಶಿವಪ್ಪ ಶಿವಪುರ, ಮಹಿಬೂಬ ಗೊಳಸಂಗಿ ನಡೆಸುತ್ತಿರುವ ಧರಣಿ ಸಮಂಜಸವಾದುದಲ್ಲ. ಇವರು ನಡೆಸುತ್ತಿರುವ ಧರಣಿಯಿಂದ ಕಚೇರಿ ಕೆಲಸ ಕಾರ್ಯಗಳಿಗೆ ಮಾತ್ರವಲ್ಲದೆ ಸಾರ್ವಜನಿಕರ ಸೇವೆಗೂ ಅಡ್ಡಿ ಉಂಟಾಗುತ್ತಿದೆ. ಜಿಲ್ಲಾಧಿಕಾರಿಯವರು ಕೂಡಲೇ ಇವರಿಬ್ಬರ ಸದಸ್ಯತ್ವ ರದ್ದುಗೊಳಿಸಲು ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಪುರಸಭೆಯಲ್ಲಿ ವಿರೋಧ ಪಕ್ಷವಾಗಿರುವ ಬಿಜೆಪಿ ಸದಸ್ಯರು ಆಗ್ರಹಿಸಿದರು.

Advertisement

ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ 8 ಚುನಾಯಿತ, 3 ನಾಮನಿರ್ದೇಶಿತ ಸದಸ್ಯರು ಹಾಗೂ ಒಬ್ಬ ಆಶ್ರಯ ಕಮಿಟಿ ಸದಸ್ಯರ ಪ್ರತಿನಿಧಿಗಳಾಗಿ ಮಾತನಾಡಿದ ಸಂಗಮ್ಮ ದೇವರಳ್ಳಿ, ಚನ್ನಪ್ಪ ಕಂಠಿ, ಬಸವರಾಜ ಮುರಾಳ ಈ ಆಗ್ರಹ ಮಾಡಿದರು. ಮುಖ್ಯಾಧಿಕಾರಿ ಸುರೇಖಾ ಬಾಗಲಕೋಟ ಸರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರಿಂದ ಸಾರ್ವಜನಿಕರ ಕೆಲಸದ ವಿಷಯದಲ್ಲಿ ಯಾವುದೇ ವಿಳಂಬ ಆಗಿಲ್ಲ. ವಿರೋಧ ಪಕ್ಷದವರಾದ ನಾವು ವಿರೋಧಿಸಬೇಕು. ಆದರೆ ಆಡಳಿತ ಪಕ್ಷದವರೇ ವಿರೋಧ ಮಾಡುತ್ತಿದ್ದಾರೆ ಎಂದರೆ ಆಡಳಿತ ಪಕ್ಷದವರ ಅಕ್ರಮಗಳಿಗೆ ಮುಖ್ಯಾಧಿಕಾರಿ ಮಣೆ ಹಾಕುತ್ತಿಲ್ಲ ಎನ್ನುವುದು ಇದರಿಂದಲೇ ಗೊತ್ತಾಗುತ್ತದೆ ಎಂದರು.

ಮುಖ್ಯಾಧಿಕಾರಿ ವಿರುದ್ಧ ಇಬ್ಬರು ಸದಸ್ಯರು ಮಾತ್ರ ಸತ್ಯಾಗ್ರಹ ಕುಳಿತಿರುವುದು ದುರುದ್ದೇಶದಿಂದ ಕೂಡಿದೆ. ಅವರು ಪಟ್ಟಣದಲ್ಲಿ ನಡೆಯುತ್ತಿರುವ ಕಾಮಗಾರಿ ಬಂದ್‌ ಮಾಡಿಸಲು ಹೇಳುತ್ತಿದ್ದಾರೆ. ಆಸ್ತಿ ಉತಾರ ವಿಳಂಬವಾಗುತ್ತಿದೆ ಎಂದು ದೂರಿದ್ದು ಸರ್ಕಾರದ ಸುತ್ತೋಲೆ ಪ್ರಕಾರ ಆನ್‌ಲೈನ್‌ ಮೂಲಕ ಪೂರೈಸಲಾಗುತ್ತಿದ್ದು ಇದರಿಂದ ವಿಳಂಬ ಆಗಿಲ್ಲ. 2018ರಲ್ಲಿ ಸುರೇಶ ಕಶೆಟ್ಟಿ ಹೆಸರಲ್ಲಿ ವಾಹನ ಬಾಡಿಗೆ ಪಡೆಯಲು ಆಗಿನ ಆಡಳಿತ ಮಂಡಳಿ ಸರ್ವ ಸದಸ್ಯರು ಠರಾವು ಮಾಡಿಕೊಟ್ಟಿದ್ದು ಅದನ್ನೇ ಈಗ ಎತ್ತಿ ಹಿಡಿದು ಆರೋಪ ಮಾಡಿರುತ್ತಾರೆ. ಸರ್ವೇ ನಂ. 73ರಲ್ಲಿ 2018ರಲ್ಲಿ ಆಶ್ರಯ ಸಮಿತಿ ಅಧ್ಯಕ್ಷರು 346 ಫಲಾನುಭವಿಗಳನ್ನು ಆಯ್ಕೆ ಮಾಡಿದ್ದು ಇಲ್ಲಿವರೆಗೂ ನಿಗಮಕ್ಕೆ ಕಳಿಸಿಕೊಟ್ಟಿಲ್ಲ ಎಂದು ಈಗಿನ ಮುಖ್ಯಾಧಿಕಾರಿ ವಿರುದ್ಧ ದುರುದ್ದೇಶದ ಆರೋಪ ಮಾಡಿದ್ದಾರೆ ಎಂದು ಡಿಸಿಗೆ ಸಲ್ಲಿಸಿದ ಪತ್ರದಲ್ಲಿ ತಿಳಿಸಲಾಗಿದೆ ಎಂದರು.

ಈಗ ಧರಣಿ ನಡೆಸುತ್ತಿರುವ ಸದಸ್ಯರು 2016-18ಲ್ಲೂ ಸದಸ್ಯರಾಗಿದ್ದರು. ಈ ಇಬ್ಬರು ಸದಸ್ಯರು ಪುರಸಭೆ ಪಕ್ಕದಲ್ಲಿ ಚಹಾ, ಮೊಬೈಲ್‌ ಅಂಗಡಿ ಇಟ್ಟು, ಬಾಡಿಗೆ ಕೊಟ್ಟು, ಬಾಡಿಗೆ ತಾವೇ ಪಡೆಯುತ್ತಿದ್ದಾರೆ. ಇಂದಿರಾ ಸರ್ಕಲ್‌ನಲ್ಲಿ ಪುರಸಭೆ ಜಾಗದಲ್ಲಿ ಕಟ್ಟಡ ಕಟ್ಟಿ ಅದನ್ನು ಬಾಡಿಗೆ ಕೊಟ್ಟು ಆ ಬಾಡಿಗೆಯನ್ನೂ ಇವರಲ್ಲಿ ಒಬ್ಬರು ಪಡೆಯುತ್ತಿದ್ದಾರೆ. ಇದರಿಂದ ಪುರಸಭೆಗೆ ಯಾವುದೇ ಆದಾಯ ಇಲ್ಲ. ಪುರಸಭೆಯಿಂದ ಕೊಟ್ಟ ಹಕ್ಕುಪತ್ರಗಳನ್ನು ಮನೆಯಲ್ಲಿಟ್ಟುಕೊಂಡು ಬೇಕಾದವರಿಗೆ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.

ಚುನಾಯಿತರಾದ ಸಹನಾ ಬಡಿಗೇರ, ಬಸಪ್ಪ ತಟ್ಟಿ, ಸದಾಶಿವ ಮಾಗಿ, ಅಶೋಕ ವನಹಳ್ಳಿ, ಶಾಂತಾಬಾಯಿ ಪೂಜಾರಿ, ನಾಮನಿರ್ದೇಶಿತರಾದ ಸುನೀಲ ಹಡಲಗೇರಿ, ರಾಜಶೇಖರ ಹೊಳಿ, ಪ್ರಸನ್ನಕುಮಾರ ಮಠ, ಆಶ್ರಯ ಸಮಿತಿಯ ಹನುಮಂತ ನಲವಡೆ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next