Advertisement

ಸಂಪುಟಕ್ಕೆ ಯಾವ ಸೂತ್ರ? ಸಿಎಂ ದಿಲ್ಲಿ ಭೇಟಿ ಗುಲ್ಲು: ಬಿಜೆಪಿಯಲ್ಲಿ ಕುತೂಹಲ

01:08 AM Apr 19, 2022 | Team Udayavani |

ಬೆಂಗಳೂರು: ಬಿಜೆಪಿ ರಾಜ್ಯ ಕಾರ್ಯಕಾರಿಣಿ ಮುಗಿದ ಬೆನ್ನಲ್ಲೇ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆಯ ಗಾಳಿ ರಾಜ್ಯ ಬಿಜೆಪಿಯಲ್ಲಿ ಬಲವಾಗಿ ಬೀಸುತ್ತಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಿಲ್ಲಿಗೆ ಯಾವಾಗ ಹೋಗುತ್ತಾರೆ ಎಂಬುದರತ್ತ ಆಕಾಂಕ್ಷಿಗಳ ಚಿತ್ತ ನೆಟ್ಟಿದೆ.

Advertisement

ಕಾರ್ಯಕಾರಿಣಿ ಮುಗಿದ ತತ್‌ಕ್ಷಣ ಸಂಪುಟ ವಿಸ್ತರಣೆ ಅಥವಾ ಪುನಾ ರಚನೆ ಖಚಿತ ಎಂದು ಹೇಳಿದ್ದ ರಿಂದ ಮತ್ತು ಸೋಮವಾರ ಬೆಳಗ್ಗೆ ಹೊಸ ಪೇಟೆಯಿಂದ ಬೆಂಗಳೂರಿಗೆ ಬರಬೇಕಿದ್ದ ಸಿಎಂ ರವಿವಾರ ರಾತ್ರಿಯೇ ವಾಪಸಾದ್ದರಿಂದ ರಾಜಕೀಯ ವಲಯಗಳಲ್ಲಿ ಗುಸುಗುಸು ಪ್ರಾರಂಭವಾಗಿದೆ.

ಸಿಎಂ ಬೊಮ್ಮಾಯಿ ಅವರು “ವರಿಷ್ಠರು ಕರೆದಾಗ ಹೋಗುತ್ತೇನೆ’ ಎಂದು ಹೇಳಿರುವುದು ಮತ್ತು ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಕಾರ್ಯಕಾರಿಣಿ ವೇಳೆ ಮುಖ್ಯಮಂತ್ರಿ ಯವರ ಜತೆ ಪ್ರತ್ಯೇಕವಾಗಿ ಚರ್ಚಿಸಿರುವುದು ನಾನಾ ಊಹಾಪೋಹಗಳನ್ನು ಹುಟ್ಟಿಸಿದೆ.

ಸೋಮವಾರ ವಿಧಾನಸೌಧದ ಕಾರಿಡಾರ್‌ ಗಳು ಮತ್ತು ಸಚಿವರ ಕಚೇರಿಗಳಲ್ಲಿ ಸಂಪುಟ ವಿಸ್ತರಣೆ, ಪುನಾ ರಚನೆಯದ್ದೇ ಚರ್ಚೆ ನಡೆದಿತ್ತು. ಸಿಎಂ ದಿಲ್ಲಿಗೆ ತೆರಳುವ ಉದ್ದೇಶದಿಂದಲೇ ಸೋಮವಾರ ತರಾತುರಿಯಲ್ಲಿ ಸಚಿವರ ಜತೆ ಚರ್ಚಿಸಲು ಸಂಪುಟ ಸಭೆ ಕರೆದಿದ್ದರು ಎಂಬ ಮಾತುಗಳೂ ಕೇಳಿ ಬಂದವು. ಸಂಜೆಯ ಹೊತ್ತಿಗೆ ದಿಲ್ಲಿಗೆ ತೆರಳು ತ್ತಾರೆ ಎಂಬ ವದಂತಿಯೂ ಸಾಕಷ್ಟು ಕುತೂಹಲ ಮೂಡಿಸಿತು.

ಇದರ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮ ವಾರ ಬೆಳಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿ, ಸಂಪುಟ ವಿಸ್ತರಣೆ ವಿಚಾರ ದಿಲ್ಲಿಯಲ್ಲಿ ನಿರ್ಧಾರವಾಗಲಿದ್ದು, ವರಿಷ್ಠರು ಕರೆದಾಗ ಹೋಗುತ್ತೇನೆ ಎಂದು ಹೇಳಿದ್ದರು. ಇದು ಸಚಿವ ಸ್ಥಾನಾಕಾಂಕ್ಷಿಗಳು ಸಾಕಷ್ಟು ಕುತೂಹಲ ದಿಂದ ಕಾಯುವಂತೆ ಮಾಡಿತು.

Advertisement

ಸಚಿವರ ಕಚೇರಿಗಳಲ್ಲಿಯೂ ಸಂಪುಟ ಪುನಾರಚನೆ ವಿಚಾರದ ಚರ್ಚೆ ಹೆಚ್ಚು ಮಹತ್ವ ಪಡೆದುಕೊಂಡಿತ್ತು. ಎಷ್ಟು ಜನ ಸಚಿವರು ಅಧಿಕಾರ ಕಳೆದುಕೊಳ್ಳುತ್ತಾರೆ, ಯಾರನ್ನು ಯಾವ ಕಾರ ಣಕ್ಕೆ ಸಂಪುಟದಿಂದ ಕೈಬಿಡಬಹುದು ಎಂಬ ಲೆಕ್ಕಾಚಾರಗಳು ನಡೆದಿವೆ. ಕೆಲವು ಸಚಿವರು ತಮ್ಮನ್ನು ಎಲ್ಲಿ ಕೈ ಬಿಡುತ್ತಾರೋ ಎಂಬ ಆತಂಕದಲ್ಲಿದ್ದು, “ವಿಸ್ತರಣೆ ಸಾಕು’ ಎಂಬ ವಾದ ಮಂಡಿ ಸುತ್ತಿದ್ದಾರೆ. ಮುಖ್ಯಮಂತ್ರಿ ಬಳಿಯೂ ಈ ಬಗ್ಗೆ ಪ್ರಸ್ತಾವಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಮಲ್ಟಿ ಲೆವೆಲ್ ಮಾರ್ಕೆಟಿಂಗ್:ಇಡಿಯಿಂದ ಆ್ಯಮ್‌ವೇ ಇಂಡಿಯಾಗೆ ಸೇರಿದ 757 ಕೋ. ರೂ ಆಸ್ತಿ ಜಪ್ತಿ

ಯಾವ ಸೂತ್ರ?
ಒಂದೊಮ್ಮೆ ಸಂಪುಟ ವಿಸ್ತರಣೆ ಅಥವಾ ಪುನಾರಚನೆಯಾದರೆ ಯಾವ ಸೂತ್ರ ಅನುಸರಿಸಲಾಗುವುದು ಎಂಬ ಬಗ್ಗೆ ಆಕಾಂಕ್ಷಿಗಳು ಮತ್ತು ಹಾಲಿ ಸಚಿವರು ತಲೆಕೆಡಿಸಿಕೊಂಡಿದ್ದಾರೆ. ಹಿರಿಯರನ್ನು ಪಕ್ಷದ ಕೆಲಸಕ್ಕೆ ನಿಯೋಜಿಸಿ ಯುವಕರಿಗೆ ಅವಕಾಶ ಕೊಡಬೇಕು ಎಂಬ ಬೇಡಿಕೆ ಇದ್ದು, ಆ ಬಗ್ಗೆ ಹೆಚ್ಚು ಒತ್ತು ನೀಡಬೇಕು ಎಂಬುದು ಆಕಾಂಕ್ಷಿಗಳ ಬೇಡಿಕೆ. ಆದರೆ ಹಿರಿಯರನ್ನು ಸಂಪುಟದಿಂದ ಕೈ ಬಿಟ್ಟರೆ ಚುನಾವಣೆ ಹತ್ತಿರ ಇರುವಾಗ ಬೇರೆ ರೀತಿಯ ಸಮಸ್ಯೆಗೆ ಕಾರಣವಾಗಬಹುದು. ಹಾಲಿ ಸಚಿವ ಸಂಪುಟದಲ್ಲಿ ಐದು ಸ್ಥಾನಗಳು ಖಾಲಿ ಇದ್ದು, ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಿದರಷ್ಟೇ ಸಾಕೆಂಬ ಮಾತುಗಳೂ ಕೇಳಿಬಂದಿವೆ.

ಆಂಧ್ರ ಮಾದರಿ?
ಸಂಪುಟ ಪುನಾರಚನೆಯೇ ಆಗಲಿದ್ದು, ಬಹುತೇಕ ಹೊಸ ಮುಖಗಳಿಗೆ ಆದ್ಯತೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಸಿಎಂ ಬೊಮ್ಮಾಯಿ ಹೊರತುಪಡಿಸಿ ಉಳಿದ ಎಲ್ಲ ಸಚಿವರನ್ನು ಸಂಪುಟದಿಂದ ಕೈಬಿಟ್ಟು, ಕಾಮರಾಜ್‌ ಸೂತ್ರದಡಿ ಇತ್ತೀಚೆಗೆ ಆಂಧ್ರ ಸಿಎಂ ಜಗನ್‌ ಮೋಹನ್‌ ರೆಡ್ಡಿ ಅವರು ಅನುಸರಿಸಿದಂತೆ ಸಂಪೂರ್ಣವಾಗಿ ಹೊಸ ಸಚಿವ ಸಂಪುಟ ರಚಿಸುವ ಬಗ್ಗೆಯೂ ಚಿಂತನೆ ನಡೆದಿದೆ ಎಂದು ತಿಳಿದು ಬಂದಿದೆ.

ಮುಂದಿನ ವಾರ ದಿಲ್ಲಿಗೆ?
ಮುಖ್ಯಮಂತ್ರಿಗಳು ಎಪ್ರಿಲ್‌ 23ರ ವರೆಗೆ ಕೈಗೊಳ್ಳುವ ರಾಜ್ಯ ಪ್ರವಾಸದ ಕಾರ್ಯ ಕ್ರಮ ಗಳ ಅಧಿಕೃತ ಪಟ್ಟಿಯನ್ನು ಸಿಎಂ ಕಚೇರಿ ಈಗಾಗಲೇ ಬಿಡುಗಡೆ ಮಾಡಿದೆ. ಎ. 24 ಮತ್ತು ಎ. 25ರಂದು ಸಿಎಂ ಬೆಂಗಳೂರಿನಲ್ಲಿ ಇರಲಿದ್ದಾರೆ ಎನ್ನಲಾಗಿದೆ. ಆದರೆ ಪಕ್ಷದ ವರಿಷ್ಠರು ಸೂಚನೆ ನೀಡಿದರೆ ನಿಗದಿತ ಕಾರ್ಯಕ್ರಮ ರದ್ದುಗೊಳಿಸಿ  ದಿಲ್ಲಿಗೆ ಹೋಗ ಬೇಕಾಗುತ್ತದೆ ಎನ್ನಲಾಗುತ್ತಿದೆ.

ಸಂಪುಟ ವಿಸ್ತರಣೆ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಹೊಸದಿಲ್ಲಿಯಲ್ಲಿ ವಿಶೇಷ ಸಭೆ ಕರೆಯುವುದಾಗಿ ತಿಳಿಸಿದ್ದಾರೆ. ಸಭೆಯ ಅನಂತರ ದಿಲ್ಲಿಗೆ ಬರುವಂತೆ ಅವರು ತಿಳಿಸಿದ್ದಾರೆ. ಸಂಪುಟ ವಿಸ್ತ ರಣೆ ಅಥವಾ ಪುನಾರಚನೆ ಬಗ್ಗೆ ಅಲ್ಲಿಯೇ ತೀರ್ಮಾನವಾಗಲಿದೆ.
– ಬಸವರಾಜ ಬೊಮ್ಮಾಯಿ, ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next