Advertisement

ಪತ್ರಕರ್ತರಿಗೆ ಉಡುಗೊರೆ: ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

10:38 PM Oct 29, 2022 | Team Udayavani |

ಬೆಂಗಳೂರು: ದೀಪಾವಳಿ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ಕಚೇರಿಯಿಂದ ಸಿಹಿ ಜತೆಗೆ ಕೆಲವು ಪತ್ರಕರ್ತರಿಗೆ ನೀಡಲಾಗಿದೆ ಎನ್ನಲಾದ ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ವಾಕ್ಸಮರ ನಡೆದಿದೆ.

Advertisement

ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲಾ, ಇಡೀ ಭಾರತದಲ್ಲಿ ಅತ್ಯಂತ ದೊಡ್ಡ ಭ್ರಷ್ಟ ಸರ್ಕಾರ ಎಂದು ಖ್ಯಾತಿ ಪಡೆದಿರುವ ಕರ್ನಾಟಕ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕೆಲವು ಪತ್ರಕರ್ತರಿಗೆ ಲಕ್ಷ ಲಕ್ಷ ಹಣ ಕೊಟ್ಟು ಮಾಧ್ಯಮ ಕ್ಷೇತ್ರ ಖರೀದಿಸುವ ಮಟ್ಟಕ್ಕೆ ಇಳಿದಿದ್ದಾರೆ. ಇದು ದುರಂತದ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿಯವರ ಆಮಿಷವನ್ನು ಪತ್ರಕರ್ತರು ಹಾಗೂ ಪತ್ರಿಕೆಗಳ ವ್ಯವಸ್ಥಾಪಕ ಮಂಡಳಿಗಳು ನಿರಾಕರಿಸಿರುವುದು ಉತ್ತಮ ಬೆಳವಣಿಗೆ. ಆದರೆ, ಬಿಜೆಪಿ ಯಾವ ಮಟ್ಟಕ್ಕಾದರೂ ಇಳಿಯುತ್ತದೆ ಎಂಬುದಕ್ಕೆ ಇದು ಸಾಕ್ಷಿ ಎಂದು ಹೇಳಿದ್ದಾರೆ.

ಬಿಜೆಪಿ ತಿರುಗೇಟು
ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ಈ ಹಿಂದೆ ನಿಮ್ಮ ಕಾಂಗ್ರೆಸ್‌ ಸರ್ಕಾರ ಇದ್ದಾಗ ಕೆಲವು ಪತ್ರಕರ್ತರಿಗೆ ನೀಡಿದ ಉಡುಗೊರೆ, ಭಾರತ್‌ ಜೋಡೋ ಯಾತ್ರೆ ಸಂದರ್ಭದಲ್ಲಿ ನೀಡಿದ ಹಣದ ಬಗ್ಗೆ ಉತ್ತರಿಸಿ. ಮೊದಲು ಕರ್ನಾಟಕದಲ್ಲಿ ಕಾಂಗ್ರೆಸ್‌ ನಾಯಕರು ಏನೆಲ್ಲಾ ಮಾಡಿದ್ದಾರೆ, ಆ ಕುರಿತು ಮಾಹಿತಿ ಪಡೆದುಕೊಂಡು ಮಾತನಾಡಿ ಸುರ್ಜೆವಾಲಾ ಎಂದು ಟ್ವೀಟ್‌ ಮೂಲಕ ಕುಟುಕಿದೆ.

ರಾಜ್ಯದಲ್ಲಿ ಹಬ್ಬದ ಸಂದರ್ಭದಲ್ಲಿ ಪತ್ರಕರ್ತರಿಗೆ ಸ್ವೀಟ್‌ ಬಾಕ್ಸ್‌ ಕೊಡುವ ಸಂಪ್ರದಾಯ ಮೊದಲಿನಿಂದಲೂ ಇದೆ. ಹಿಂದೆ ನಿಮ್ಮ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್‌ ಅವರು ಕೆಲವು ಪತ್ರಕರ್ತರಿಗೆ ಐಫೋನ್‌ ಕೊಟ್ಟಿದ್ದರು. ಮಾಜಿ ಸಚಿವರು ಲ್ಯಾಪ್‌ಟಾಪ್‌, ಗೋಲ್ಡ್‌ ಕಾಯಿನ್‌ ಹಂಚಿದ್ದರು. ಇದರ ಬಗ್ಗೆ ಮೊದಲು ತಿಳಿದುಕೊಳ್ಳಿ ಎಂದು ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next