ನವದೆಹಲಿ: ದೇಶದ ಅರ್ಥ ವ್ಯವಸ್ಥೆ ಗಂಭೀರ ಪರಿಸ್ಥಿತಿಯಲ್ಲಿದೆ. ಚುನಾವಣೆಯಲ್ಲಿ ಜನರು ನೀಡಿದ ಮತಾದೇಶವನ್ನು ಬಿಜೆಪಿ ಅತಿ ಅಪಾಯಕಾರಿಯಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದ್ದಾರೆ.
ನವದೆಹಲಿಯಲ್ಲಿ ಗುರುವಾರ ನಡೆದ ಕಾಂಗ್ರೆಸ್ ನಾಯಕರ ಸಭೆಯಲ್ಲಿ ಮಾತನಾಡಿದ ಅವರು, ಸದ್ಯದಲ್ಲೇ ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಕಾರ್ಯಪ್ರವೃತ್ತವಾಗಲಿದೆ. ಮೋದಿ ನೇತೃತ್ವದ ಸರ್ಕಾರ ಅವಧಿಯಲ್ಲಿ ಪ್ರಜಾಪ್ರಭುತ್ವ ಅತ್ಯಂತ ಅಪಾಯದ ಸ್ಥಿತಿಯಲ್ಲಿದೆ. ಹಾಲಿ ಸರ್ಕಾರ ಜನರು ನೀಡಿದ ಅಧಿಕಾರವನ್ನು ಅಪಾಯಕಾರಿ ರೀತಿಯಲ್ಲಿ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ವಾಗ್ಧಾಳಿ ನಡೆಸಿದ್ದಾರೆ.
ಬಿಜೆಪಿ ಆಡಳಿತದ ಅವಧಿಯಲ್ಲಿ ದೇಶದ ಅರ್ಥ ವ್ಯವಸ್ಥೆ ಆತಂಕಕಾರಿಯಾಗಿದೆ ಮತ್ತು ಅದು ತನ್ನ ಅಪಾಯಕಾರಿ ಅಜೆಂಡಾ ಜಾರಿ ನಿಟ್ಟಿನಲ್ಲಿ ಎಲ್ಲಾ ಸತ್ಯಾಂಶಗಳನ್ನು ಉದ್ದೇಶಪೂರ್ವಕವಾಗಿ ತಿರುಚುತ್ತಿದೆ ಎಂದೂ ಆರೋಪಿಸಿದ್ದಾರೆ. ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್, ಗುಲಾಂ ನಬಿ ಸೇರಿದಂತೆ ಪ್ರಮುಖ ನಾಯಕರು ಇದ್ದರು. ಕಾಂಗ್ರೆಸ್ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಈ ಸಭೆಯಲ್ಲಿ ಉಪಸ್ಥಿತರಿರಲಿಲ್ಲ.
ದೇಶಾದ್ಯಂತ ಪ್ರತಿಭಟನೆಗೆ ಕಾಂಗ್ರೆಸ್ ನಿರ್ಧಾರ: ದೇಶವನ್ನು ಆರ್ಥಿಕ ಹಿಂಜರಿತದ ಕೂಪಕ್ಕೆ ತಳ್ಳಿರುವಂಥ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳನ್ನು ಖಂಡಿಸಿ ಅಕ್ಟೋಬರ್ 15ರಿಂದ 25ರವರೆಗೆ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸುವುದಾಗಿ ಕಾಂಗ್ರೆಸ್ ಘೋಷಿಸಿದೆ. ಸೆ.20ರಿಂದ 30ರವರೆಗೆ ದೇಶಾದ್ಯಂತದ ಪ್ರದೇಶ ಕಾಂಗ್ರೆಸ್ ಸಮಿತಿಗಳು ಸಮಾವೇಶ ನಡೆಸಲಿದೆ. ಅದಾದ ಬಳಿಕ, ಅ.15ರಿಂದ 20ರವರೆಗೆ ಬೃಹತ್ ಪ್ರತಿಭಟನೆಗಳು ನಡೆಯಲಿವೆ. ಮಹಾತ್ಮನ 150ನೇ ಜನ್ಮದಿನದ ಹಿನ್ನೆಲೆ ಅ.2ರಿಂದ 9ರವರೆಗೆ ಪಾದಯಾತ್ರೆಯನ್ನು ಕೂಡ ಕಾಂಗ್ರೆಸ್ ಹಮ್ಮಿಕೊಳ್ಳಲಿದೆ ಎಂದು ಪಕ್ಷದ ವಕ್ತಾರ ಆರ್ಪಿಎನ್ ಸಿಂಗ್ ಮಾಹಿತಿ ನೀಡಿದ್ದಾರೆ.