Advertisement

ಮಕ್ಕಳ ಕಲಿಕೆಯಲ್ಲಿ ಪಾಲಕರ ಪಾತ್ರವೂ ಮುಖ್ಯ: ಶೆಟಕಾರ್‌

04:36 PM Dec 16, 2019 | Naveen |

ಬೀದರ: ವಿದ್ಯಾರ್ಥಿಗಳ ಕಲಿಕಾ ಅಭಿವ್ಯಕ್ತಿ ಹೆಚ್ಚಿಸುವಲ್ಲಿ ಶಿಕ್ಷಕರ ಜತೆಗೆ ಪಾಲಕರ ಪಾತ್ರವೂ ಬಹು ಮುಖ್ಯವಾಗಿದ್ದು, ಇದನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದು ವಿದ್ಯಾ ಸರಸ್ವತಿ ಶಿಕ್ಷಣ ಸಂಸ್ಥೆ ಟ್ರಸ್ಟಿ ಸೂರ್ಯಕಾಂತ ಶೆಟಕಾರ್‌ ಸಲಹೆ ನೀಡಿದರು.

Advertisement

ಇಲ್ಲಿನ ಶಿವನಗರದ ಪ್ಯೂಚರ್‌ ಕಿಡ್ಸ್‌ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಉಡಾನ್‌ (ವಾರ್ಷಿಕೋತ್ಸವ) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳನ್ನು ಶಾಲೆಗೆ ಕಳುಹಿಸಿದ ಮೇಲೆ ಎಲ್ಲವೂ ಶಿಕ್ಷಕರದ್ದೇ ಜವಾಬ್ದಾರಿ ಎಂಬ ಮನೋಭಾವದಿಂದ ಪಾಲಕರು ಹೊರಬರಬೇಕು. ಮಕ್ಕಳ ಶಿಕ್ಷಣ ಮತ್ತು ಬೆಳವಣಿಗೆ ಕುರಿತು ಕಾಳಜಿ ವಹಿಸಿಬೇಕು. ಆಗಾಗ ಶಾಲೆಗೆ ಸಂಪರ್ಕಿಸಿ ತಿಳಿದುಕೊಳ್ಳಬೇಕು. ಆಗ ಮಾತ್ರ ಮಕ್ಕಳ ಬೆಳವಣಿಗೆ ಸರಿಯಾಗಿ ಆಗಿ, ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ನಿವೃತ್ತ ಬ್ಯಾಂಕ್‌ ವ್ಯವಸ್ಥಾಪಕ ಚಂದ್ರಕಾಂತ ಶೆಟಕಾರ ಮಾತನಾಡಿ, ಮಕ್ಕಳ ಶಿಕ್ಷಣದ ಜತೆಗೆ ಬೆಳವಣಿಗೆಯ ಎಲ್ಲ ಜವಾಬ್ದಾರಿಯನ್ನು ಶಾಲೆಯವರ ಮೇಲೆ ಹಾಕುತ್ತಿರುವುದು ತಪ್ಪು. ಚಿಣ್ಣರಿಂದ ಮೊಬೈಲ್‌ ಬಳಕೆ ಹೆಚ್ಚುತ್ತಿರುವುದು ಆಘಾತಕಾರಿ ವಿಷಯವಾಗಿದ್ದು, ಇದಕ್ಕೆ ಕಡಿವಾಣ ಬೀಳಬೇಕು. ತಾಯಿಯಂತೆ ಮಕ್ಕಳು ಅನುಕರಣೆ ಮಾಡುತ್ತವೆ. ಹಿರಿಯರಾದ ನಾವು ಮೊಬೈಲ್‌ ಬಿಟ್ಟು ಪುಸ್ತಕ ಓದುತ್ತ ಕುಳಿತರೆ, ಅವರು ಸಹ ಅದನ್ನೇ ಮಾಡುತ್ತಾರೆ. ಅಭ್ಯಾಸ ಎನ್ನುವುದು ನಮ್ಮ ಮನೆಗಳಿಂದಲೇ ಬೆಳೆಯಬೇಕಿದೆ ಎಂದು ಕಿವಿ ಮಾತು ಹೇಳಿದರು.

ಶಾಲೆಯ ಪ್ರಾಚಾರ್ಯ ಚಿತ್ರಾ ಶೆಟಕಾರ ಮಾತನಾಡಿ, ಫ್ಯೂಚರ್‌ ಕಿಡ್ಸ್‌ ಇಂದು ನಗರದಲ್ಲಿ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾಗಿ ಬೆಳೆದಿದೆ. ಕೇವಲ 4 ಮಕ್ಕಳಿಂದ ಆರಂಭವಾದ ಶಾಲೆಯಲ್ಲಿ ನೂರಾರು ಮಕ್ಕಳು ಅಭ್ಯಾಸ ಮಾಡುತ್ತಿದ್ದು, ಒಟ್ಟು 3 ಶಾಖೆಗಳನ್ನು ಮುನ್ನಡೆಸಲಾಗುತ್ತಿದೆ. ಸಂಸ್ಥೆಯ ಬೆಳವಣಿಗೆಯಲ್ಲಿ ಶಿಕ್ಷಕರ ಶ್ರಮ ಮತ್ತು ಪಾಲಕರ ಸಹಕಾರ ಮುಖ್ಯವಾಗಿದೆ ಎಂದು ಹೇಳಿದರು.

ಇನ್ನೋರ್ವ ಟ್ರಸ್ಟಿ ಕುಲದೀಪ್‌ಸಿಂಗ್‌ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಸಂದೀಪ ಶೆಟಕಾರ ಮತ್ತಿತರರು ವೇದಿಕೆಯಲ್ಲಿದ್ದರು. ನಂತರ ಶಾಲಾ ಮಕ್ಕಳಿಂದ ಉಡಾನ್‌ ಹೆಸರಿನಲ್ಲಿ ವಿವಿಧ ಕಾರ್ಯಕ್ರಮಗಳು ನಡೆದವು. ಅತ್ಯಾಕರ್ಷಕ ವೇದಿಕೆಯಲ್ಲಿ ಫ್ಯೂಜನ್‌ ನೃತ್ಯ ಮೂಲಕ ಆರಂಭವಾದ ಸಾಂಸ್ಕೃತಿಕ ಸಮಾರಂಭದಲ್ಲಿ ಚಿಣ್ಣರ ನೃತ್ಯ ಜನರನ್ನು ಆಕರ್ಷಿಸಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next