Advertisement

ಕೊರೊನಾ ಭೀತಿಗೆ ಜನ ಸಂಚಾರ ವಿರಳ

11:36 AM Mar 16, 2020 | Naveen |

ಬೀದರ: ಜಗತ್ತಿನಲ್ಲಿ ತಲ್ಲಣ ಮೂಡಿಸಿರುವ ಕೊರೊನಾ ವೈರಸ್‌ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಒಂದು ವಾರ ಸಾರ್ವಜನಿಕ ಸಂಪರ್ಕಕ್ಕೆ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ಎರಡನೇ ದಿನವಾದ ರವಿವಾರವೂ ಬೀದರ ನಗರದಲ್ಲಿ ಸೋಂಕಿನ ಭೀತಿ ಮುಂದುವರಿಸಿದ್ದು, ಜನರ ಓಡಾಟ ತೀರಾ ಇಳಿಮುಖವಾಗಿದೆ.

Advertisement

ಸೋಂಕು ವ್ಯಾಪಿಸದಂತೆ ಸರ್ಕಾರ ಕೈಗೊಂಡಿರುವ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮಗಳಿಗೆ ಜನ ಸಾಮಾನ್ಯರಿಂದ ಸ್ಪಂದನೆ ವ್ಯಕ್ತವಾಗುತ್ತಿದೆ. ರವಿವಾರ ಹಿನ್ನೆಲೆಯಲ್ಲಿ ನಿನ್ನೆಗಿಂತ ಜನರ ಸಂಚಾರ ಮತ್ತಷ್ಟು ಕಡಿಮೆ ಇತ್ತು. ವಾಹನಗಳ ಸಂಚಾರ ದಿನ ನಿತ್ಯದಂತಿತ್ತು.

ತರಕಾರಿ ಮಾರುಕಟ್ಟೆ, ದಿನಸಿ ಅಂಗಡಿ ಮುಗ್ಗಟ್ಟುಗಳು ಎಂದಿನಂತಿದ್ದರೂ ಸಹ ಖರೀದಿಗೆ ಹೆಚ್ಚು ಗ್ರಾಹಕರು ಅತ್ತ ಸುಳಿಯಲೇ ಇಲ್ಲ. ಸರ್ಕಾರದ ನಿರ್ದೇಶನದಂತೆ ಚಲನಚಿತ್ರ ಮಂದಿರಗಳು, ಶಾಪಿಂಗ್‌ ಮಾಲ್‌ ಮತ್ತು ರೆಸ್ಟೊರೆಂಟ್‌ಗಳು ಬಂದ್‌ ಆಗಿದ್ದವು. ನಷ್ಟದಲ್ಲಿ ಹೊಟೇಲ್‌ ಉದ್ಯಮ: ಕೊರೊನಾ ಭೀತಿಯಿಂದ ಹೊಟೇಲ್‌ ಉದ್ಯಮದ ಮೇಲೆ ಪರಿಣಾಮ ಬೀರಿದೆ.

ಟಿಫಿನ್‌ ಸೆಂಟರ್‌, ಉಪಹಾರ ಹೋಟೆಲ್‌ ಮತ್ತು ಖಾನಾವಳಿಗಳಲ್ಲಿ ಗ್ರಾಹಕರಿಲ್ಲದೇ ಬೀಕೋ ಎನ್ನುತ್ತಿದ್ದವು. ಜನ ತಿಂಡಿ- ಊಟಕ್ಕೆ ಬರಬಹುದೆಂಬ ನಿರೀಕ್ಷೆಯಲ್ಲಿ ಆಹಾರ ಪದಾರ್ಥ ಸಿದ್ಧಪಡಿಸಿಕೊಂಡಿದ್ದ ಪದಾರ್ಥಗಳಲ್ಲಿ ಅರ್ಧಪಾಲು ಚೆಲ್ಲುವಂತಾಗಿ ಆರ್ಥಿಕ ನಷ್ಟ ಆಗುವಂತಾಗಿದೆ. ಇನ್ನೂ ರಸ್ತೆ ಬದಿಯ ತಿಂಡಿ ವ್ಯಾಪಾರ ಸಹ ಜನರಿಲ್ಲದೇ ಬಿಕೋ ಎನ್ನುತ್ತಿದ್ದವು.

ಪ್ರಯಾಣಿಕರಿಲ್ಲದೇ ಬಸ್‌ಗಳು ಖಾಲಿ ಇದ್ದು, ಬಸ್‌ ನಿಲ್ದಾಣ ಭಣಗುಡುತ್ತಿತ್ತು. ನೆರೆಯ ಕಲಬುರಗಿ ಮತ್ತು ಹೈದ್ರಾಬಾದ್‌ನಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ನಗರಗಳಿಗೆ ಬೀದರನಿಂದ ನಿತ್ಯ 100ಕ್ಕೂ ಹೆಚ್ಚು ಬಸ್‌ಗಳ ಕಾರ್ಯಾಚರಣೆ ನಡೆಯುತ್ತದೆ. ಆದರೆ, ಪ್ರಯಾಣಿಕರ ಓಡಾಟ ಅರ್ಧಕ್ಕಿಂತ ಕಡಿಮೆಯಾಗಿದೆ.

Advertisement

ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ: ಜಿಲ್ಲೆಯಲ್ಲಿ ಸೋಂಕು ಹರಡದಂತೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ. ಬ್ರಿಮ್ಸ್‌ ಸೇರಿದಂತೆ ಪ್ರತಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಐಸೋಲೇಶನ್‌ ವಾರ್ಡ್‌ಗಳನ್ನು ಸ್ಥಾಪಿಸಿದ್ದು, ಅಗತ್ಯ ಸಿಬ್ಬಂದಿ ಮತ್ತು ಔಷಧೋಪಚಾರಕ್ಕೆ ವ್ಯವಸ್ಥೆ ಮಾಡಿಕೊಂಡಿದೆ.

ವೈರಸ್‌ ಭೀತಿ ಹಿನ್ನೆಲೆಯಲ್ಲಿ ಶನಿವಾರದ ವರೆಗೆ ಜಿಲ್ಲೆಗೆ ವಿದೇಶಗಳಿಂದ ವಾಪಸ್ಸಾಗಿರುವ 14 ಜನರನ್ನು ಜಿಲ್ಲಾಡಳಿತ ಪತ್ತೆ ಹಚ್ಚಿದೆ. ಅದರಲ್ಲಿ ಇಬ್ಬರಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿರುವುದರಿಂದ ಬಸವಕಲ್ಯಾಣ ಆಸ್ಪತ್ರೆಯ ಐಸೋಲೇಶನ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ರಕ್ತ ಮತ್ತು ಗಂಟಲು ದ್ರವ ಮಾದರಿಯ ಪರೀಕ್ಷಾ ವರದಿ ಇನ್ನೂ ಬರಬೇಕಿದೆ. ಇನ್ನುಳಿದ 12 ಜನರ ಮೇಲೆ ನಿಗಾ ವಹಿಸಲಾಗಿದೆ.

ಪ್ರವಾಸಿಗರೇ ಇಲ್ಲ
ಕೊರೊನಾ ಸೋಂಕು ಮಹಾಮಾರಿ ಬೀದರನ ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರಿದ್ದು, ಐತಿಹಾಸಿಕ ತಾಣಗಳು ಜನರಿಲ್ಲದೇ ಬಿಕೋ ಎನ್ನುತ್ತಿವೆ. ಬೀದರ ನಗರದ ಬಹುಮನಿ ಕೋಟೆ, ಗುರುದ್ವಾರ, ಗವಾನ್‌ ಮದರಸಾ, ಅಷ್ಟೂರಿನ ಗುಂಬಜ್‌, ಚೌಖಂಡಿ, ನರಸಿಂಹ ಝರಣಾ, ಪಾಪನಾಶಿನಿ ಸೇರಿದಂತೆ ಹಲವು ಐತಿಹಾಸಿಕ ತಾಣಗಳನ್ನು ಹೊಂದಿದ್ದು, ಶನಿವಾರ ಮತ್ತು ರವಿವಾರ ಹೈದ್ರಾಬಾದ್‌ ಸೇರಿದಂತೆ ಮತ್ತಿತರ ಕಡೆಗಳಿಂದ ಪ್ರವಾಸಿಗರ ದಂಡೆ ಸೇರುತ್ತದೆ. ಆದರೆ, ಕೊರೊನಾ ಭೀತಿಯಂದಾಗಿ ತಾಣಗಳೆಲ್ಲವೂ ಖಾಲಿ ಇದ್ದದ್ದು ಕಂಡಿತು. ಪ್ರವಾಸಿ ತಾಣಗಳಲ್ಲಿಯೂ ಆರೋಗ್ಯ ತಪಾಸಣೆಗಾಗಿ ಇಲಾಖೆ ಅಗತ್ಯ ಕ್ರಮ ವಹಿಸಿದೆ.

ವಿದೇಶಗಳಿಂದ ಆಗಮಿಸಿರುವ ಜಿಲ್ಲೆಯ 90 ಜನರನ್ನು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಈವರೆಗೆ ಪತ್ತೆ ಹಚ್ಚಿದೆ. ಅದರಲ್ಲಿ 50ಕ್ಕೂ ಹೆಚ್ಚು ಜನರು ಬಂದು ಈಗಾಗಲೇ 15 ದಿನಗಳು ಕಳೆದಿವೆ. ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಲ್ಲ. ಆದರೂ ಅವರ ಮೇಲೆ ಆರೋಗ್ಯ ತಂಡಗಳು ನಿಗಾ ವಹಿಸಿದ್ದು, ಅವರು ಕೆಲ ದಿನಗಳ ಕಾಲ ಮನೆಯಲ್ಲಿ ಇರಲು ಮತ್ತು ಮಾಸ್ಕ್ ಧರಿಸುವುದು ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಲು ಸೂಚಿಸಿದ್ದೇವೆ. ದುಬೈನಿಂದ ಆಗಮಿಸಿರುವ ಸಿಂದೋಲ್‌ ಗ್ರಾಮದ ವ್ಯಕ್ತಿ ಮತ್ತು ಕುಟುಂಬದ ಇಬ್ಬರು ಸದಸ್ಯರಿಗೆ ಕೆಮ್ಮು, ನೆಗಡಿ ಕಾಣಿಸಿಕೊಂಡ ಹಿನ್ನಲೆಯಲ್ಲಿ ತಪಾಸಣೆ ನಡೆಸಿದ್ದು, ಕೊರೊನಾದ ಲಕ್ಷಣಗಳು ಕಂಡು ಬಂದಿಲ್ಲ. ಬಸವಕಲ್ಯಾಣದಲ್ಲಿ ಶನಿವಾರ ಐಸೋಲೇಶನ್‌ದಲ್ಲಿ ದಾಖಲಾಗಿರುವ ಇಬ್ಬರ ಶಂಕಿತರ ವರದಿ ಇನ್ನೂ ಬರಬೇಕಾಗಿದೆ. ಅವರ ಆರೋಗ್ಯದಲ್ಲಿ ಸಂಪೂರ್ಣ ಚೇತರಿಕೆ ಕಂಡಿದೆ.
ಡಾ| ವಿ.ಜಿ. ರೆಡ್ಡಿ,
ಡಿಎಚ್‌ಒ, ಬೀದರ

ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next