Advertisement

ಅಂಗನವಾಡಿಗಳ ಸ್ಥಿತಿ ಶೋಚನೀಯ

12:05 PM Mar 11, 2020 | Naveen |

ಬೀದರ: ಸಮಾಜ ಬದಲಾವಣೆಯತ್ತ ಹೆಜ್ಜೆ ಹಾಕುತ್ತಿದ್ದರೂ ಎಳೆ ಕಂದಮ್ಮಗಳ ಜ್ಞಾನ ವಿಕಾಸಕ್ಕೆ ಪೂರಕವಾಗಬೇಕಾದ ಜಿಲ್ಲೆಯ ಅಂಗನವಾಡಿ ಕೇಂದ್ರಗಳು ಇಂದಿಗೂ ಶೋಚನೀಯ ಸ್ಥಿತಿಯಲ್ಲಿವೆ.

Advertisement

ಸ್ವಂತ ಸೂರು, ಅಸ್ವಚ್ಛತೆ ಮತ್ತು ಮೂಲ ಸೌಕರ್ಯಗಳ ಕೊರತೆಯಿಂದ ಅಂಗನವಾಡಿಗಳು ನಲುಗುತ್ತಿದ್ದು, ಪುಟ್ಟ ಮಕ್ಕಳು ಅವ್ಯವಸ್ಥೆ ನಡುವೆಯೇ ಪಾಠ ಕಲಿಯುವಂತಹ ಅನಿವಾರ್ಯತೆ ಇದೆ. ಗಡಿ ಜಿಲ್ಲೆ ಬೀದರನಲ್ಲಿ 1,893 ಅಂಗನವಾಡಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಆದರೆ, ಬಹುತೇಕ ಕೇಂದ್ರಗಳಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲ ಸೌಲತ್ತುಗಳ ಕೊರತೆ ವ್ಯಾಪಕವಾಗಿದೆ. ರಾಜ್ಯದಲ್ಲೇ ಅತಿಹೆಚ್ಚು ಅಪೌಷ್ಟಿಕ ಮಕ್ಕಳನ್ನು ಹೊಂದಿರುವ ಜಿಲ್ಲೆ ಎಂಬ ಅಪಖ್ಯಾತಿ ಹೊತ್ತಿದೆ. ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚಿಸಲು ಸರ್ಕಾರ ಸಾಕಷ್ಟು ಯೋಜನೆಗಳ ಮೂಲಕ ಹಣ ಖರ್ಚು ಮಾಡುತ್ತಿದೆ. ಆದರೂ ಅಂಗನವಾಡಿ ಮಕ್ಕಳಿಗೆ ಸಮರ್ಪಕ ಆಹಾರ ತಲುಪದಿರುವುದು ವಿಪರ್ಯಾಸದ ಸಂಗತಿ.

ಸೌಲತ್ತು ಸಂಪೂರ್ಣ ಮರೀಚಿಕೆ: ಜಿಲ್ಲೆಯಲ್ಲಿ ಒಟ್ಟು 1,893 ಅಂಗನವಾಡಿ ಕೇಂದ್ರಗಳ ಪೈಕಿ 1,251 ಕೇಂದ್ರಗಳಿಗೆ ಮಾತ್ರ ಸ್ವಂತ ಕಟ್ಟಡಗಳಿವೆ. ಇನ್ನುಳಿದಂತೆ 490 ಬಾಡಿಗೆ ಕಟ್ಟಡ, 81 ಶಾಲೆ, 30 ಸಮುದಾಯ ಕೇಂದ್ರ ಮತ್ತು 23 ಪಂಚಾಯತ್‌ ಗಳಲ್ಲಿ ಅಂಗನವಾಡಿಗಳನ್ನು ನಡೆಸಲಾಗುತ್ತಿದೆ. ಇನ್ನೂ 117 ಕಟ್ಟಡಗಳು ನಿರ್ಮಾಣ ಹಂತದಲ್ಲಿವೆ. ಇನ್ನೂ ಒಟ್ಟು ಕೇಂದ್ರಗಳಲ್ಲಿ 907 ಅಂಗನವಾಡಿಗಳಲ್ಲಿ ಅಡುಗೆ ಮನೆ, 287 ಶೌಚಾಲಯ, 804 ನೀರಿನ ವ್ಯವಸ್ಥೆ, 568 ಕಡೆ ವಿದ್ಯುತ್‌ ಸಂಪರ್ಕ, 475 ಕೇಂದ್ರಗಳಲ್ಲಿ ಮಾತ್ರ ಆಟದ ಮೈದಾನದ ವ್ಯವಸ್ಥೆ ಇದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಕಿ ಅಂಶಗಳೇ ಹೇಳುತ್ತಿದ್ದು, ಉಳಿದ ಕೇಂದ್ರಗಳಲ್ಲಿ ಈ ಸೌಲತ್ತುಗಳು ಸಂಪೂರ್ಣ ಮರೀಚಿಕೆಯಾಗಿವೆ.

ಕೇಂದ್ರಗಳಲ್ಲಿ 6 ತಿಂಗಳಿಂದ 3 ವರ್ಷದ ಮಕ್ಕಳಿಗೆ ಗೋಧಿ ಹಿಟ್ಟು, ಅಕ್ಕಿ ಹಿಟ್ಟು, ರಾಗಿ ಹಿಟ್ಟು, ಹೆಸರು ಬೇಳೆ ಹಿಟ್ಟು, ಸಕ್ಕರೆ, ಸೋಯಾ ಹಿಟ್ಟು ಮತ್ತು ಇಲಾಚಿ ಮನೆಗೆ ನೀಡಬೇಕು. 3ರಿಂದ 6 ವರ್ಷದ ಮಕ್ಕಳಿಗೆ ಒಂದು ವಾರದಲ್ಲಿ ಬೆಳಗ್ಗೆ ಶೆಂಗಾ ಚಿಕ್ಕಿ, ಬಹು ಮಿಶ್ರಿತ ಕಾಳು, ಗೋಧಿ ರವಾ ಪಾಯಿಸಾ ಹಾಗೂ ಮಧ್ಯಾಹ್ನ ಅನ್ನ ಸಾಂಬರ್‌, ಅನ್ನ ಖೀಚ್ಚಡಿ ನೀಡಬೇಕೆಂಬುದು ಆಹಾರ ಪಟ್ಟಿಯಲ್ಲಿದೆ. ಪೌಷ್ಠಿಕ ಆಹಾರದ ಜತೆಗೆ ವಾರದಲ್ಲಿ ಎರಡು ದಿನ ಮಕ್ಕಳಿಗೆ ಮೊಟ್ಟೆ ನೀಡುವ ಯೋಜನೆ ಜಾರಿಯಲ್ಲಿದೆ. ಇದರೊಟ್ಟಿಗೆ ಮಾತೃಪೂರ್ಣ ಯೋಜನೆಯಡಿ ಗರ್ಭೀಣಿ/ ಬಾಣಂತಿಯರಿಗೆ ಅಂಗನವಾಡಿಗಳಲ್ಲಿ ಪೌಷ್ಟಿಕ ಆಹಾರ ಪದಾರ್ಥ, ತರಕಾರಿ, ಮೊಟ್ಟೆ, ಹಾಲು ನೀಡಬೇಕೆಂಬ ನಿಯಮವಿದೆ.

ಆಹಾರ ಪದಾರ್ಥಗಳಿಗೆ ಕನ್ನ: ಆದರೆ, ಅಂಗನವಾಡಿ ಕೇಂದ್ರದಲ್ಲಿ ಮಕ್ಕಳು ಮತ್ತು ಗರ್ಭಿಣಿಯರಿಗೆ ಸಮರ್ಪಕವಾಗಿ ಪೌಷ್ಠಿಕ ಆಹಾರ ಸಿಗುತ್ತಿಲ್ಲ. ಕೆಲವೊಮ್ಮೆ ಪದಾರ್ಥಗಳ ಸರಬರಾಜಿಗೆ ವಿಳಂಬವಾಗುತ್ತಿದ್ದರೆ, ಹಲವೆಡೆ ಆಹಾರ ಪದಾರ್ಥಗಳನ್ನು ಅಂಗನವಾಡಿ ಶಿಕ್ಷಕಿಯರು, ಕಾರ್ಯಕರ್ತರು ಮನೆಗೆ ಕೊಂಡೊಯ್ಯುವುದು ಮತ್ತು ಆಯಾ ಗ್ರಾಮಗಳಲ್ಲೇ ಮಾರಾಟ ಮಾಡುವ ಆರೋಪಗಳು ಹೆಚ್ಚಿವೆ. ಇನ್ನೂ ಕೆಲವೆಡೆ ಅವಧಿ ಮೀರಿದ, ಸ್ವಚ್ಛಗೊಳಿಸದ ಹುಳು ಮಿಶ್ರೀತ ಆಹಾರ ಧಾನ್ಯಗಳನ್ನು ಅಡುಗೆಗೆ ಬಳಸಲಾಗುತ್ತಿದೆ.

Advertisement

ಕಲಿಕಾ ಚಟುವಟಿಕೆಗೆ ತೊಡಕು
ಸ್ವಂತ ಕಟ್ಟಡದಲ್ಲಿರುವ ಅಂಗನವಾಡಿ ಕೇಂದ್ರಗಳ ಪೈಕಿ ಕೆಲವು ಮಾತ್ರ ಸುಸಜ್ಜಿತವಾಗಿವೆ. ಹಲವು ಕಡೆಗಳಲ್ಲಿ ಸೂಕ್ತ ನಿರ್ವಹಣೆಯಿಲ್ಲದೆ ಕಟ್ಟಡಗಳು ದುರವಸ್ಥೆಯಲ್ಲಿವೆ. ಮಕ್ಕಳು ಕಲಿಯುವ ಕೊಠಡಿಯ ಮೂಲೆಯಲ್ಲಿಯೇ ದಾಖಲೆಗಳ ಭದ್ರತೆ, ಆಹಾರ ಪದಾರ್ಥ ಸಂಗ್ರಹ, ಅಡುಗೆ ತಯಾರಿಕೆ ಮಾಡಬೇಕಾಗಿದೆ. ಸಮರ್ಪಕ ಗಾಳಿ ಬೆಳಕಿನ ವ್ಯವಸ್ಥೆ, ಮುರಿದ ಕಿಟಕಿಗಳು, ಸಿಮೆಂಟ್‌ ಕಿತ್ತು ಹೋದ ಬೆಡ್‌ಗಳ ಅವ್ಯವಸ್ಥೆ. ಅಲ್ಲಿಯೇ ಉಪಾಹಾರ ವಿತರಣೆ ಮಾಡಲಾಗುತ್ತಿದೆ. ಕೋಣೆ ಸುತ್ತಲೂ ಗಿಡ ಗಂಟೆ ಬೆಳೆದು ಅಸ್ವಚ್ಛತೆ ಹೆಚ್ಚಿದೆ. ಬಹುತೇಕ ಕೇಂದ್ರಗಳಲ್ಲಿ ಶೌಚಾಲಯವಿಲ್ಲದ ಕಾರಣ ಮಕ್ಕಳು ಬಹಿರ್ದೆಸೆಗೆ ಬಯಲನ್ನೇ ಅವಲಂಬಿಸಬೇಕಾಗಿದೆ. ಇಂಥ ಅವ್ಯವಸ್ಥೆ ಮತ್ತು ಅನೈರ್ಮಲ್ಯ ವಾತಾವರಣದ ನಡುವೆ ಪುಟ್ಟ ಮಕ್ಕಳ ಪೂರ್ವ ಪ್ರಾಥಮಿಕ ಕಲಿಕಾ ಚಟುವಟಿಕೆಗಳಿಗೆ ತೊಡಕಾಗುತ್ತಿದೆ.

ಕನ್ನ ಹಾಕಿದರೆ ನಿರ್ದಾಕ್ಷಿಣ್ಯ ಕ್ರಮ
ಬೀದರ ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ಇಲ್ಲದಿರುವುದು ಮತ್ತು ಮೂಲಭೂತ ಸೌಕರ್ಯ ಕೊರತೆ ಇರುವುದು ನಿಜ. ಈ ಬಗ್ಗೆ ಪಟ್ಟಿ ತಯಾರಿಸಿ ಕೇಂದ್ರ ಕಚೇರಿಗೆ ಕಳುಹಿಸಲಾಗಿದ್ದು, ಅಗತ್ಯ ಸೌಲತ್ತುಗಳನ್ನು ಕಲ್ಪಿಸಲು ಶೀಘ್ರದಲ್ಲೇ ಅನುದಾನ ಲಭ್ಯವಾಗಲಿದೆ. ಕೇಂದ್ರಗಳಲ್ಲಿ ಮಕ್ಕಳು, ಗರ್ಭೀಣಿಯರಿಗೆ ಪೌಷ್ಟಿಕಾಂಶವುಳ್ಳ ಆಹಾರ ಪದಾರ್ಥ ವಿತರಣೆ ಮಾಡಲಾಗುತ್ತಿದೆ. ಆಹಾರಕ್ಕೆ ಕನ್ನ ಹಾಕುವವರನ್ನು ಅಮಾನತು ಮಾಡಲಾಗಿದ್ದು, ಇಂಥ ಪ್ರಕರಣಗಳು ವರದಿಯಾದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು.
ಶ್ರೀಕಾಂತ ಕುಲಕರ್ಣಿ,
ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೀದರ

„ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next