Advertisement

ಬೀದರ್‌ ಉದ್ವಿಗ್ನ, ಕಲ್ಲು ತೂರಾಟ, ಲಾಠಿ ಚಾರ್ಜ್‌

07:34 AM Jan 31, 2018 | Team Udayavani |

ಬೀದರ: ಭಾಲ್ಕಿ ತಾಲೂಕಿನ ಕೋಸಂ ಗ್ರಾಮದ ವಿದ್ಯಾರ್ಥಿನಿಯ ಹತ್ಯೆ ಘಟನೆ ಖಂಡಿಸಿ ವಿವಿಧ ಹಿಂದೂಪರ ಸಂಘಟನೆಗಳು ಮಂಗಳವಾರ ಕರೆ ನೀಡಿದ್ದ ಬಂದ್‌ವೇಳೆ ಪ್ರತಿಭಟನೆ ವಿಕೋಪಕ್ಕೆ ತಿರುಗಿದ ಪರಿಣಾಮ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಈ ವೇಳೆ ಸಂಸದ ಖೂಬಾ ಸೇರಿದಂತೆ 10ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಕೋಸಂ ಗ್ರಾಮದ ವಿದ್ಯಾರ್ಥಿನಿಯನ್ನು ಶನಿವಾರ ಅದೇ ಗ್ರಾಮದ ಯುವಕ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದ. ಘಟನೆ ಹಿಂದೆ ಲವ್‌ ಜಿಹಾದ್‌ ಶಂಕೆ ಹಿನ್ನೆಲೆಯಲ್ಲಿ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಹಿಂದೂ ಪರ ಸಂಘಟನೆ ಗಳು ಬೀದರ, ಭಾಲ್ಕಿ ಹಾಗೂ ಬಸವಕಲ್ಯಾಣ ಬಂದ್‌ಗೆ ಕರೆ ನೀಡಿದ್ದವು. ಬಿಜೆಪಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಇದಕ್ಕೆ ಬೆಂಬಲ ಸೂಚಿಸಿದ್ದವು.

Advertisement

ಬಂದ್‌ ಹಿನ್ನೆಲೆಯಲ್ಲಿ ಬೀದರ ನಗರ ಸಂಜೆವರೆಗೆ ಸ್ತಬ್ಧವಾಗಿತ್ತು. ಸಾರಿಗೆ ಸಂಚಾರ ಸ್ಥಗಿತಗೊಂಡಿತ್ತು. ಖಾಸಗಿ ಶಾಲಾ- ಕಾಲೇಜುಗಳಿಗೆ ಮುಂಜಾಗ್ರತಾ ಕ್ರಮವಾಗಿ ರಜೆ ಘೋಷಿಸಲಾಗಿತ್ತು. ಹಿಂದೂ ಸಂಘಟನೆ ಮುಖಂಡ ಈಶ್ವರಸಿಂಗ್‌ ಠಾಕೂರ, ವಿಜಯಕುಮಾರ ಪಾಟೀಲ ಗಾದಗಿ ನೇತೃತ್ವದಲ್ಲಿ ನಗರದ ಅಂಬೇಡ್ಕರ್‌ ವೃತ್ತದಲ್ಲಿ ಜಮಾಯಿಸಿದ್ದ 2 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಪ್ರತಿಭಟನೆ  ನಡೆಸಿದರು. ಬಳಿಕ ಜಿಲ್ಲಾ ಧಿಕಾರಿ ಕಚೇರಿಗೆ ತೆರಳಿ  ಅಲ್ಲಿಂದ ಹಳೆ ನಗರದ ಮೂಲಕ ರ್ಯಾಲಿ ನಡೆಸಲು ಮುಂದಾದರು. ಈ ವೇಳೆ ಪೊಲೀಸ್‌ ವರಿಷ್ಠಾಧಿಕಾರಿ ಡಿ. ದೇವರಾಜ್‌, “ಇದಕ್ಕೆ ಅವಕಾಶ ಕೊಡುವುದಿಲ್ಲ. ಬಂದ್‌ಗೂ ಮುನ್ನ ಪಡೆದಿರುವ ಅನುಮತಿಯಂತೆ ಪ್ರತಿಭಟನೆ ನಡೆಸಬೇಕು’ ಎಂದು ಸೂಚಿಸಿದರು.

ಆಕ್ರೋಶ, ಕಲ್ಲು ತೂರಾಟ: ಲಾಠಿ ಬೀಸಿದ ಪೊಲೀಸರ ವರ್ತನೆಗೆ ಆಕ್ರೋಶಗೊಂಡ ಕಾರ್ಯಕರ್ತರು ಸಿಬ್ಬಂದಿ ಮತ್ತು ಜೀಪ್‌ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಎಸ್‌ಪಿ ವಿರುದ್ಧ ಘೋಷಣೆ ಕೂಗಿದರು. ಘಟನೆಯಿಂದ ನಗರದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ 
ನಿರ್ಮಾಣವಾಗಿತ್ತು. ಇದೇ ಸಂದರ್ಭದಲ್ಲಿ ಸಂಸದ ಭಗವಂತ ಖೂಬಾ ನೇತೃತ್ವದಲ್ಲಿ ಪ್ರಮುಖರು ಜಿಲ್ಲಾಧಿಕಾರಿ ಡಾ.ಮಹದೇವ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ವಿದ್ಯಾರ್ಥಿನಿ ಕೊಲೆಯ ಹಿಂದೆ ವ್ಯವಸ್ಥಿತ ಸಂಚು ಇರುವುದು ಮೇಲ್ನೊಟಕ್ಕೆ ಕಂಡುಬಂದಿದೆ. ಹಾಗಾಗಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ ತಪ್ಪಿತಸ್ಥ ಆರೋಪಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಹಾಗೂ ವಿದ್ಯಾರ್ಥಿನಿಯ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಸಂಸದ ಭಗವಂತ ಖೂಬಾಗೆ ಪೆಟ್ಟು
ಉದ್ರಿಕ್ತ ಕಾರ್ಯರ್ಕರು ಹಳೆ ನಗರದತ್ತ ರ್ಯಾಲಿ ನಡೆಸಲು ಮುಂದಾದಾಗ ಸ್ವತಃ ಎಸ್‌ಪಿ ದೇವರಾಜ್‌ ಕೈಯಲ್ಲಿ ಲಾಠಿ ಹಿಡಿದು ಚದುರಿಸಲು ಪ್ರಯತ್ನಿಸಿದರು. ಇದರಿಂದ ಕಾರ್ಯಕರ್ತರು ಚೆಲ್ಲಾಪಿಲ್ಲಿಯಾಗಿ ಓಡಿ ಹೋದರು. ಈ ವೇಳೆ ಸಂಸದ ಭಗವಂತ ಖೂಬಾ ಅವರ ಮುಖಕ್ಕೆ ಗಾಯವಾಗಿದ್ದು, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ, ವಿಎಚ್‌ಪಿ ಅಧ್ಯಕ್ಷ ರಾಮಕೃಷ್ಣ ಸಾಳೆ ಸೇರಿದಂತೆ 10ಕ್ಕೂ ಹೆಚ್ಚು ಜನರಿಗೆ ಪೆಟ್ಟುಗಳಾಗಿವೆ. ಯುವಕನೊಬ್ಬ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next