Advertisement

ರಾಗಿ ತಂದೀರಾ ಭಿತ್ತನೆಗೆ ರಾಗಿ ತಂದೀರಾ?

03:45 AM Jan 23, 2017 | Harsha Rao |

ರಾಗಿಗೂ ಬಂತು ಹನಿ ನೀರಾವರಿ!

Advertisement

“ಇಲ್ಲಿ ನೋಡಿ. ಹನಿ ನೀರಾವರಿಯಲ್ಲಿ ರಾಗಿ ಹೇಗೆ ಬೆಳೆದಿದೆ ಅಂತ’ ಮಹೇಶ್‌ ತಮ್ಮ ಹೊಲದ ಮಧ್ಯೆ ನಿಂತು ವಿವರಿಸುತ್ತಿದ್ದರು. ಹನಿ ನೀರಾವರಿಯಲ್ಲಿ ಟೊಮೇಟೊ ಮಾತ್ರ ಬೆಳೆಯುತ್ತಿದ್ದ ಅವರಿಗೆ ಇದು ಹೊಸ ಅನುಭವ. ಏನೋ ಹೊಸದನ್ನು ಸಾಧಿಸಿದ್ದೇನೆಂಬ ಖುಷಿ. ಚಿಕ್ಕ ಮುಕ್ಕೋಡ್ಲು ಗ್ರಾಮದಲ್ಲೇ ಈ ರೀತಿ ರಾಗಿ ಬೆಳೆದ ಮೊದಲಿಗ ನಾನು ಎನ್ನುವ ಹೆಮ್ಮೆ.

ಇದೇನಪ್ಪಾ ಮಳೆಯಾಶ್ರಿತ ಬೆಳೆಯಾದ ರಾಗಿಗೆ ಇಷ್ಟೆಲ್ಲಾ ಆರೈಕೆ.  ಮುಂಗಾರು ಮಳೆ ಎಷ್ಟೆಲ್ಲಾ ಸತಾಯಿಸಿದರೂ ಒಂದಿಷ್ಟು ಕಾಳು, ಮೆದೆ ತುಂಬಾ ಹುಲ್ಲು ಸಿಕ್ಕದ ವರ್ಷವೇ ಇಲ್ಲ. ಆದರೆ ಈ ವರ್ಷ ಹಾಗೆ ಆಗಿಲ್ಲ. ರಾಗಿ ಬಿತ್ತನೆಗೆ ಸರಿಯಾದ ಮಳೆಯೇ ಬರಲಿಲ್ಲ. ಹೇಗೋ ಒಂದಿಷ್ಟು ಹುಟ್ಟಿ ಬೆಳೆದ ಪೈರು ನೆಲ ಬಿಟ್ಟು ಮೇಲೆ ಏಳಲೇ ಇಲ್ಲ. ಮಘ ಮಳೆ ಬರುತ್ತೆ, ಹುಬ್ಬೆ ಮಳೆ ಬರುತ್ತೆ ಅಂತ ರೈತರು ಕಾತರದಿಂದ ಲೆಕ್ಕ ಹಾಕುತ್ತಾ ಕೂತರು. ಎಲ್ಲಾ ಮಳೆಗಳೂ ಸದ್ದಿಲ್ಲದೆ ಹೋದವು.

ಬರ ಅಂದರೆ ಏನು ಎಂಬುದು ಈಗ ಎಲ್ಲರಿಗೂ ಗೊತ್ತಾಗತೊಡಗಿದೆ. ಅರವತ್ತು ವರ್ಷಗಳ‌ ಹಿಂದೆ ಒಮ್ಮೆ ಇದೇ ರೀತಿ ಬರ ಬಂದಿತ್ತು. ಆವಾಗ ಕೂಡಾ ಒಂಚೂರೂ ರಾಗಿ ಬೆಳೆ ಆಗಲಿಲ್ಲ. ಆದರೆ ಆಗ ಕೆರೆ ತುಂಬಾ ನೀರಿತ್ತು. ಕುಡಿಯೋ ನೀರಿಗೆ ತೊಂದರೆ ಇರಲಿಲ್ಲ. ದನಕರುಗಳಿಗೆ ಬೇಕಾದಷ್ಟು ಒಣ ಹುಲ್ಲು ದಾಸ್ತಾನು ಇತ್ತು. ಮನುಷ್ಯನಿಗೆ ಮಾತ್ರ ಆಹಾರದ ಅಭಾವವಿತ್ತು.   ಹೀಗೆ ನೆನಪಿನಾಳಕ್ಕೆ ಇಳಿಯುತ್ತಾರೆ ಎಂಭತ್ತು ವರ್ಷ ಪ್ರಾಯದ ಮಹದೇವಯ್ಯನವರು.

ರಾಮನಗರ ಜಿಲ್ಲೆಯ ಯುವ ರೈತರಿಗೆ ಇದು ಬರದ ಹೊಸ ಅನುಭವ. ನಮಗೆ ತಿನ್ನೋಕೆ ಎರಡು ವರ್ಷಕ್ಕಾಗುವಷ್ಟು ರಾಗಿ ಕಾಳಿದೆ. ಆದರೆ ದನಕರುಗಳಿಗೆ ಸ್ವಲ್ಪ ಹುಲ್ಲು ಕೂಡಾ ಇಲ್ಲ. ನಮಗೆ ಈಗ ಅದೇ ಚಿಂತೆಯಾಗಿದೆ ಆತಂಕ ವ್ಯಕ್ತಪಡಿಸುತ್ತಾರೆ ಮಹೇಶ್‌. ಇಪ್ಪತ್ತು ಸಾವಿರ ರೂಪಾಯಿ ಬಾಳುವ ಹಸೂನ ಈಗ ಆರು ಸಾವಿರಕ್ಕೂ ಕೇಳ್ಳೋರಿಲ್ಲ. ಎಲ್ಲಾರೂ ದನಕರು ಮಾರೋರೇ. ಮುಂಗಾರಿನ ಮಳೆ ಹುಟ್ಟೋವರೆY ಸಾಕಿದ್ರೆ ಇದೇ ಹಸೂವಿಗೆ ಅರುವತ್ತು ಸಾವಿರ ಸಿಗೋದು ಗ್ಯಾರಂಟಿ. ಹಸೂನ ಮಾರಿದ್ರೆ ಮತ್ತೆ ಖರೀದಿ ಮಾಡೋದು ಕಷ್ಟ. ಅನ್ನೋದು ಗೊತ್ತಿದೆ. 

Advertisement

ಇದೀಗ ಟೊಮೆಟೊ ಬೆಳೆಯುತ್ತಿದ್ದ ಜಾಗದಲ್ಲಿ ಉಳುಮೆ ಮಾಡಿ ರಾಗಿ ನಾಟಿ ಮಾಡಿದ್ದಾರೆ. ಒಂದೆಡೆ ನಾಟಿ ಮಾಡಲೆಂದು ರಾಗಿ ಪೈರಿನ ಮಡಿ ಎದ್ದು ನಿಂತಿದೆ. ಟೊಮೆಟೊ ಸಾಲುಗಳ ನಡುವೆ ಹಾದು ಹೋಗಿದ್ದ ಡ್ರಿಪ್‌ ಪೈಪ್‌ಗ್ಳು ಈಗ ರಾಗಿ ಪೈರಿನ ಮಧ್ಯೆ ಇವೆ. ಮೂರ್‍ನಾಲ್ಕು ದಿವಸಕ್ಕೊಮ್ಮೆ ಹೊಲ ಪೂರ್ತಿ ನೆನಸಿದರೆ ರಾಗಿ ಚೆನ್ನಾಗಿ ಬರುತ್ತದೆ ಎನ್ನುವ ಆತ್ಮವಿಶ್ವಾಸ ಅವರಿಗೆ.

ಮುಂಗಾರು ಹಂಗಾಮಿನ ರಾಗಿ ಕೈಕೊಡ್ತಾ ಇದೆ ಎಂದು ಗೊತ್ತಾಗುತ್ತಿದ್ದಂತೆ ಅದರಲ್ಲೇ ಸ್ವಲ್ಪ ಭಾಗಕ್ಕೆ ಡ್ರಿಪ್‌ ಪೈಪ್‌ನಲ್ಲಿ ನೀರು ಹಾಯಿಸುವ ಪ್ರಯೋಗ ಮಾಡಿದ್ದರು ಮಹೇಶ್‌. ನೀರುಣಿಸಿದ ಪೈರು ಚೆನ್ನಾಗಿ ಬೆಳೆದು ಕಾಳು ಕಟ್ಟಿತ್ತು. ಹದಿನೈದು ಗುಂಟೆ ಜಮೀನಿನಲ್ಲಿ ಹತ್ತು ಚೀಲ ರಾಗಿ ಬರಬಹುದೆಂಬ ಲೆಕ್ಕಾಚಾರ ಹೇಳುತ್ತಾರೆ. ಒಂದು ಟ್ರ್ಯಾಕ್ಟರ್‌ ಲೋಡ್‌ ಹುಲ್ಲು ಸಿಗಬಹುದೆಂಬ ಅಂದಾಜು ಮಾಡುತ್ತಾರೆ. ಒಕ್ಕಣೆ ಮಾಡಲೆಂದು ಹರಡಿದ್ದ ಹುಲ್ಲಿನ ರಾಶಿಯಿಂದ ಒಂದು ತೆನೆ ಕಿತ್ತು ಅಂಗೈಯಿಂದ ಉಜ್ಜಿ ಕಾಳು ವಿಂಗಡಿಸಿ ನೋಡಿ ಕಾಳು ಎಷ್ಟು ಕೆಂಪಗಿದೆ. ಇದನ್ನು ಮಾರಿದ್ರೆ ಕೇಜಿಗೆ ನಲ್ವತ್ತು ರೂ. ಖಂಡಿತಾ ಸಿಗುತ್ತೆ ಎಂದು ವಿವರಣೆ ನೀಡುತ್ತಾರೆ. 

ಈ ಒಂದು ಸಣ್ಣ ಪ್ರಯೋಗದ ಯಶಸ್ಸೇ ಅವರನ್ನು ಹನಿ ನೀರಾವರಿಯಲ್ಲಿ ರಾಗಿ ಬೆಳೆಯುವಂತೆ ಪ್ರೇರೇಪಿಸಿತು. ಟೊಮೆಟೊ ಬೆಳೆಗೆ ವಿರಾಮ ಕೊಟ್ಟು ರಾಗೀನೇ ಸೈ ಎನ್ನುವಂತೆ ಮಾಡಿತು. ಕಳೆದ ಒಂದೆರಡು ತಿಂಗಳುಗಳಿಂದ ಟೊಮೆಟೊ ಬೆಳೆದವರೂ ಕೂಡಾ ಏನು ಸಂಪಾದನೆ ಮಾಡಲಾಗುತ್ತಿಲ್ಲ. ಟೊಮೆಟೊ ಮಾರುಕಟ್ಟೆ ತಳ ಕಂಡಿದ್ದು ಇನ್ನೂ ತೇಜಿ ಬಂದಿಲ್ಲ. ಆದ್ದರಿಂದ ಆದ್ಯತೆಗಳು ಬದಲಾಗಿವೆ. ರಾಗಿ ಯಾವುದೇ ಖರ್ಚಿಲ್ಲದ ಬೆಳೆ. ನೀರು ಕಡಿಮೆ ಇದ್ದರೂ ಬೆಳೆಯಬಹುದು. ಕಾಳಿಗಂತೂ ದಾಖಲೆಯ ಬೆಲೆ ಬಂದಿದೆ. ರಾಗಿಗೆ ಈಗ ಅಕ್ಕಿಯ ಬೆಲೆ. ಹುಲ್ಲಿಗೂ ಅಷ್ಟೆ. ಕೇಳಿದಷ್ಟು ದುಡ್ಡು ಕೊಟ್ಟು ಒಯ್ಯಲು ಜನರು ಬರುತ್ತಾರೆ. ಒಂದು ಲೆಕ್ಕದಲ್ಲಿ ನೋಡಿದರೆ ಈಗ ರಾಗಿಗೆ ವಾಣಿಜ್ಯ ಬೆಳೆ ಪಟ್ಟ ಕಟ್ಟಿದರೂ ತಪ್ಪಿಲ್ಲ ಅನಿಸುತ್ತದೆ.

ಹಾಗೆ ನೋಡಿದ್ರೆ ರಾಗಿ ವರ್ಷವಿಡೀ ಬೆಳೆಯಬಹುದಾದ ಸರ್ವಋತು ಬೆಳೆ. ಮೊದಲೆಲ್ಲಾ ಬೇಸಿಗೆಯಲ್ಲಿ ಕೆರೆಯ ಕೆಳಗಿರುವ ಗದ್ದೆಗಳಲ್ಲಿ ಭತ್ತ ಕಟಾವಾದ ನಂತರ ರಾಗಿ ಬೆಳೆಯುತ್ತಿದ್ದರು. ಅದನ್ನೇ “ಕಾರ್‌ರಾಗಿ’ ಎನ್ನುತ್ತಿದ್ದರು. ಆದರೆ ಕೆರೆಗಳು ತುಂಬಿ ಅದೆಷ್ಟು ವರುಷಗಳಾದವೋ ! 

ಇದು ಬರದಿಂದಾಗಿ ಆಗಿರುವ ಬವಣೆ. ಬದಲಾವಣೆ ಕೂಡಾ ಹೌದು. ನಮ್ಮ ರೈತರು ಈಗ ಚಿಂತಿಸುತ್ತಿರುವುದು ದನಕರುಗಳ ಜೀವ ಉಳಿಸಿಕೊಳ್ಳುವುದರ ಬಗ್ಗೆ ಮಾತ್ರ. ತರಕಾರಿ ಬೆಳೆದು ದುಡ್ಡು ಮಾಡಬೇಕೆಂಬ ಆಸೆ ಕೈ ಬಿಟ್ಟಿದ್ದಾರೆ. ಅದಕ್ಕೇ ಬರವನ್ನು ಎದುರಿಸಲು ಸಜಾjಗುತ್ತಿದ್ದಾರೆ. ಹೊಸ ಹೊಸ ಪ್ರಯೋಗಕ್ಕೆ ಚಾಲನೆ ನೀಡುತ್ತಿದ್ದಾರೆ. ಸರ್ಕಾರದ ಬರ ಪರಿಹಾರ ಕಾರ್ಯಕ್ರಮಕ್ಕೆ ಕಾಯುತ್ತಾ ಕೂರುವುದರ ಬದಲು ಇಂತಹ ಪ್ರಯೋಗಕ್ಕೆ ಸಿದ್ದರಾಗುವುದು ಲೇಸು.

Advertisement

Udayavani is now on Telegram. Click here to join our channel and stay updated with the latest news.

Next