Advertisement

ಮನಗೆದ್ದ ಮಹಿಳೆಯರ ಭೀಷ್ಮ ವಿಜಯ

05:57 PM Sep 12, 2019 | mahesh |

ಕಾರ್ಕಳ ಸಾಹಿತ್ಯ ಸಂಘದ ಸದಸ್ಯರು ನಡೆಸಿಕೊಟ್ಟ ರಸಾನಂದಕರ ತಾಳಮದ್ದಳೆ ಭೀಷ್ಮ ವಿಜಯ ರಸಪೂರ್ಣವಾಗಿ ಮೂಡಿಬಂತು.

Advertisement

ಆರಂಭದಲ್ಲಿ ಭೀಷ್ಮ ಹಾಗೂ ಅಂಬೆ ನಡುವಿನ ಸಂಭಾಷಣೆ ಅರ್ಥಗರ್ಭಿತವಾಗಿತ್ತು. ಭೀಷ್ಮನಾಗಿ ಜ್ಯೋತಿ ಶೆಟ್ಟಿ ಅವರು ಆರಂಭದಿಂದ ಅತ್ಯಂತವರೆಗೂ ನಿರ್ಗಳವಾದ ವಾಗ್ಜರಿಯಿಂದ ಮನಗೆದ್ದರು. ಅಂಬೆಯಾಗಿ ವೃಂದಾ ಶೆಟ್ಟಿಯವರು ತಮ್ಮ ತೂಕದ ಮಾತುಗಳಿಂದ ರಂಜಿಸಿದರು. ವೃದ್ಧ ಪುರೋಹಿತರಾಗಿ ಜಯಶ್ರೀ ಶೆಟ್ಟಿಯವರು ಹಾಸ್ಯಮಿಶ್ರಿತ ಮಾತುಗಳಿಂದ ಸೀಮಿತ ಅವಕಾಶವನ್ನು ಯಶಸ್ವಿಯಾಗಿ ಬಳಸಿಕೊಂಡರು. ಅನಂತರ ಸಾಲ್ವನ ಪ್ರವೇಶದೊಂದಿಗೆ ಪ್ರಸಂಗಕ್ಕೆ ವಿಶೇಷ ಕಳೆ ಬಂತು. ಸಾಲ್ವನಾಗಿ ವನಿತಾ ಹೆಗ್ಡೆ ಅವರು ಗಾಂಭೀರ್ಯಯುಕ್ತ ಮಾತುಗಳಿಂದ ಮಿಂಚಿದರು. ಅನಂತರ ಪರಶುರಾಮ ಹಾಗೂ ಭೀಷ್ಮರೊಳಗಿನ ಸಂಭಾಷಣೆ ಯುದ್ಧದ ಹಂತಕ್ಕೆ ತಲುಪಿ ಕೊನೆಗೂ ಭೀಷ್ಮನ ಪ್ರತಿಜ್ಞೆ ನೆರವೇರುತ್ತದೆ.ಪರಶುರಾಮನಾಗಿ ಶಾಲಿನಿ ಆಳ್ವರ ಮಾತುಗಳು ಮನೋಜ್ಞವಾಗಿದ್ದವು. ಇದು ಭೀಷ್ಮ ವಿಜಯ ಎಂದು ಗುರುಗಳಾದ ಪರಶುರಾಮನಿಂದ ಹೇಳಲ್ಪಡುತ್ತದೆ. ಸುಮಾರು 3 ಗಂಟೆಗಳ ಈ ಪ್ರಸಂಗದಲ್ಲಿ ಭಾಗವತಿಕೆಯಲ್ಲಿ ಭವ್ಯಶ್ರೀ ಮಂಡೆಕೋಲು ಅವರ ಏರಿಳಿತಗಳಿಂದ ಕೂಡಿದ ಅಪೂರ್ವವಾದ ಕಂಠಸಿರಿ ನಿರಂತರ ಚಪ್ಪಾಳೆಗೆ ಪಾತ್ರವಾಯಿತು.

ಮದ್ದಳೆಯಲ್ಲಿ ರವಿರಾಜ್‌ ಜೈನ್‌, ಚಂಡೆಯಲ್ಲಿ ದೇವಾನಂದ ಭಟ್‌, ಚಕ್ರತಾಳದಲ್ಲಿ ದ್ವಿಜೇತ್‌ ಭಟ್‌ ಸಾಥ್‌ ನೀಡಿದರು. ರಾಮ ಭಟ್‌ ತಾಳಮದ್ದಳೆಯ ನಿರ್ದೇಶಕರಾಗಿದ್ದರು.

ಕೆ.ಕೆ. ನಂಬಿಯಾರ್‌

Advertisement

Udayavani is now on Telegram. Click here to join our channel and stay updated with the latest news.

Next