Advertisement

ಹಾಸ್ಟೇಲ್‌ ದಾಖಲೆಗೆ ಕೇಳ್ತಾರೆ ಹಣ

11:57 AM Nov 20, 2019 | Naveen |

ಬೀದರ: ಜನವಾಡಾ ಗ್ರಾಮದಲ್ಲಿರುವ ಪರಿಶಿಷ್ಟ ಜಾತಿ- ಪಂಗಡದ ಮೆಟ್ರಿಕ್‌ ಪೂರ್ವ ವಸತಿ ನಿಲಯಕ್ಕೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಡಾ|ಜಯಶ್ರೀ ಹಾಗೂ ಎಚ್‌.ಸಿ. ರಾಘವೇಂದ್ರ ಅವರು ಭೇಟಿ ನೀಡಿ ಮಕ್ಕಳ ಸಮಸ್ಯೆಗಳನ್ನು ಆಲಿಸಿದರು.

Advertisement

ಸುಮಾರು ಮೂರು ಗಂಟೆಗೂ ಹೆಚ್ಚುಕಾಲ ವಸತಿ ನಿಲಯದ ಮಕ್ಕಳೊಂದಿಗೆ ಮಾತುಕತೆ ನಡೆಸಿದ ಸದಸ್ಯರು, ಮಕ್ಕಳ ಎಲ್ಲ ಸಮಸ್ಯೆಗಳನ್ನು ಸಮಚಿತ್ತದಿಂದ ಆಲಿಸಿದರು. ವಸತಿ ನಿಲಯದಲ್ಲಿ ಒಟ್ಟು 56 ಮಕ್ಕಳ ದಾಖಲಾತಿ ಇದ್ದು, 19 ಮಕ್ಕಳು ಮಾತ್ರ ವಸತಿ ನಿಲಯದಲ್ಲಿ ಇರುವುದನ್ನು ಕಂಡು ನಿಲಯ ಪಾಲಕರಿಂದ ವಿವರಣೆ ಪಡೆದರು. ಇದೇ ವೇಳೆ ಮಕ್ಕಳು ನಾನಾ ರೀತಿಯ ಸಮಸ್ಯೆಗಳ ಬಗ್ಗೆ ಸದಸ್ಯರ ಗಮನಕ್ಕೆ ತಂದರು. ವಸತಿ ನಿಲಯದ ದಾಖಲೆಗಾಗಿ ಕೆಲವು ಮಕ್ಕಳಿಂದ ಹಣ ಪಡೆಯುತ್ತಾರೆ ಎಂದು ದೂರಿದರು.

ಪೌಷ್ಠಿಕ ಆಹಾರ ಮತ್ತು ಸರಿಯಾದ ಸಮಯಕ್ಕೆ ಉಪಹಾರ ದೊರೆಯುವುದಿಲ್ಲ. ಈ ವರ್ಷ ನೋಟ್‌ ಬುಕ್‌ ನೀಡಿಲ್ಲ. ನಿಲಯಕ್ಕೆ ಸೋಲಾರ್‌ ವ್ಯವಸ್ಥೆ ಇದ್ದರೂ, ಮಕ್ಕಳಿಗೆ ಬಿಸಿ ನೀರು ಸಿಗುತ್ತಿಲ್ಲ. ವಿದ್ಯುತ್‌ ದೀಪಗಳು ಸರಿಯಾಗಿ ಕೆಲಸ ಮಾಡುವುದಿಲ್ಲ. ರಾತ್ರಿ ವೇಳೆ ಕುಡಿಯಲು ನೀರು ಸಿಗುವುದಿಲ್ಲ. ನಿಲಯ ಪಾಲಕರು ವಾರದಲ್ಲಿ ಕೇವಲ ಎರಡು ಭಾರಿ ಮಾತ್ರ ವಸತಿ ನಿಲಯಕ್ಕೆ ಬರುತ್ತಾರೆ. ಕೆಲವರಿಗೆ ಹಾಸಿಗೆ, ದಿಂಬು, ಬಕೆಟ್‌, ಬೆಡ್‌ಶೀಟ್‌ ನೀಡಿಲ್ಲ. ಆರೋಗ್ಯ ಸರಿಯಿಲ್ಲದ ಮಕ್ಕಳಿಗೆ ಚಿಕಿತ್ಸೆ ಕೊಡಿಸದೇ ಮನೆಗೆ ಕಳುಹಿಸುತ್ತಾರೆ. ವಸತಿ ನಿಲಯಕ್ಕೆ ಟ್ಯೂಷನ್‌ ಟೀಚರ್‌ಗಳನ್ನು ನೇಮಿಸಿಲ್ಲ. ವಸತಿ ನಿಲಯಕ್ಕೆ ಅಧಿ ಕಾರಿಗಳು ಬಂದಾಗ ಮಕ್ಕಳು ಸಮಸ್ಯೆಗಳನ್ನು ಹೇಳಿಕೊಂಡರೆ ಅಧಿಕಾರಿಗಳು ಹೋದ ನಂತರ ಹಿಂಸೆ ಕೊಡುತ್ತಾರೆ. ಹೀಗೆ ಹಲವು ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು.

ಇದೇ ವೇಳೆ ಪಿಎಸ್‌ಐ ಹಾಗೂ ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಮಕ್ಕಳಿಗೆ ರಕ್ಷಣೆ ನೀಡುವಂತೆ ಆದೇಶಿಸಿದರು. ವಸತಿ ನಿಲಯದ ದಾಸ್ತಾನಿನಲ್ಲಿ ವಿತರಸದೇ ಇರುವ ದಿಂಬು, ಬೆಡ್‌, ಗ್ಲೌಸ್‌, ಸೊಳ್ಳೆ ಪರದೆಗಳನ್ನು ಕಂಡು ಅವುಗಳನ್ನು ಸ್ಥಳದಲ್ಲಿಯೇ ಮಕ್ಕಳಿಗೆ ವಿತರಿಸಿದರು.

ಮಕ್ಕಳ ಸಮಸ್ಯೆಗಳ ಕರಿತು ಸೂಕ್ತ ಕ್ರಮಕ್ಕಾಗಿ ಜಿಪಂ ಸಿಇಒಗೆ ವರದಿ ಮಾಡಲಾಗುವುದು. ಇದೇ 28ರಂದು ರಾಯಚೂರಿನಲ್ಲಿ ನಡೆಯುವ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ವಿಶೇಷ ಸಭೆಗೆ ಖುದ್ದು ಹಾಜರಾಗಿ ಸಮನ್ಸ್‌ ನೀಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶಂಭುಲಿಂಗ ಹಿರೇಮಠ, ರಕ್ಷಣಾಧಿಕಾರಿ ಗೌರಿಶಂಕರ ಪರತಾಪೂರೆ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next