Advertisement

ದೂರು ಪೆಟ್ಟಿಗೆಯಲ್ಲಿ ಬೇಡಿಕೆಗಳ ಮಹಾಪೂರ

04:12 PM Dec 02, 2019 | Team Udayavani |

ಬೀದರ: ಜಿಲ್ಲೆಯ ಎಲ್ಲ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರು ಕಳೆದ ತಿಂಗಳಷ್ಟೇ ಸ್ಥಾಪಿಸಿದ್ದ ದೂರುಪೆಟ್ಟಿಗೆಯಲ್ಲಿ ಜಿಲ್ಲೆಯ ಸಾರ್ವಜನಿಕರಿಂದ ಹಲವಾರು ರೀತಿಯ ಬೇಡಿಕೆಗಳು ದಾಖಲಾಗಿವೆ.

Advertisement

ಸಲಹೆಗಳ ಮಹಾಪೂರವೇ ಹರಿದು ಬಂದಿದೆ. ಈ ಹಿಂದೆ ದೂರು ದಾಖಲಾದ 24 ಗಂಟೆಯೊಳಗಡೆಯೇ ಪರಿಹಾರ ಕಲ್ಪಿಸಿದ ಸಚಿವ ಚವ್ಹಾಣ ಅವರ ಮುಂದೆ, ಮತ್ತೀಗ ಸಾರ್ವಜನಿಕರು ಸಾಲು ಸಾಲು ಬೇಡಿಕೆಗಳು, ದೂರುಗಳು, ಸಲಹೆಗಳನ್ನು ಇಟ್ಟಿದ್ದಾರೆ. ಇದೆಲ್ಲವನ್ನು ಸರಿಪಡಿಸುವ ಬಹುದೊಡ್ಡ ಹೊಣೆ ಸಚಿವರ ಮೇಲಿದೆ. ತಾಲೂಕು ಮಟ್ಟದ ಅಧಿಕಾರಿಗಳು ಆಯಾ ತಾಲೂಕಿನಲ್ಲಿ ವಾಸಿಸದಿರುವ ಬಗ್ಗೆ, ಜಿಲ್ಲೆಯಲ್ಲಿ ಉಲ್ಬಣಗೊಂಡಿರುವ ಡೆಂಘೀ, ಟೈಫಾಯಿಡ್‌, ಮಲೇರಿಯಾ ರೋಗಗಳ ನಿಯಂತ್ರಣ ಮತ್ತು ಜಾಗೃತಿ, ರೈತರ ಸಾಲ ಮನ್ನಾ, ಕಬ್ಬಿನ ವೈಜ್ಞಾನಿಕ ಬೆಲೆ ನಿಗದಿ, ಬೆಳೆಹಾನಿ ಪರಿಹಾರ ಒದಗಿಸುವುದು, ಕಾರಂಜಾ ಜಲಾಶಯದಲ್ಲಿ ಭೂಮಿ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ಒದಗಿಸುವುದು ಸೇರಿದಂತೆ ಹಲವಾರು ರೀತಿಯ ದೂರುಗಳು ಮತ್ತು ಬೇಡಿಕೆಗಳು ದೂರು ಪೆಟ್ಟಿಗೆಯಲ್ಲಿ ದಾಖಲಾಗಿವೆ.

ಇನ್ನೂ ಹಲವು ದೂರುಗಳು: ಬೀದರ-ಔರಾದ ಚತುಷ್ಪಥ ರಸ್ತೆ ನಿರ್ಮಾಣ, ಜಿಲ್ಲೆಯಲ್ಲಿ ಬ್ಯಾರೇಜ್‌ಗಳ ನಿರ್ಮಾಣ, ನಾಂದೇಡ-ಬೀದರ ರೈಲ್ವೆ ಪ್ರಾರಂಭಿಸುವುದು, ಜಿಲ್ಲೆಯ ಶೈಕ್ಷಣಿಕ ಪ್ರಗತಿ, ಮರಾಠ ಸಮುದಾಯಕ್ಕೆ ರಕ್ಷಣೆ, ಜಿಲ್ಲೆ ಮತ್ತು ನಗರದಲ್ಲಿರುವ ರಸ್ತೆ ಮತ್ತು ಚರಂಡಿ ಸ್ವಚ್ಚತೆ, ವಿದ್ಯುದ್ದೀಪ ಅಳವಡಿಸುವುದು, ಸಾರ್ವಜನಿಕ ಉದ್ಯಾನವನ ನಿರ್ವಹಣೆ, ಒಳಚರಂಡಿ ವ್ಯವಸ್ಥೆಯ ಸೂಕ್ತ ನಿರ್ವಹಣೆ, ಬಿಎಸ್‌ ಎಸ್‌ಕೆ ಕಾರ್ಖಾನೆಯ ಪುನಶ್ಚೇತನ, ಭಾಲ್ಕಿಯಲ್ಲಿ ಜನೌಷ ಧ ಮಳಿಗೆ ಪ್ರಾರಂಭ, ಕಮಲನಗರದಲ್ಲಿ ಮಿನಿ ವಿಧಾನಸೌಧ ನಿರ್ಮಿಸುವ ಬಗ್ಗೆ, ಜಿಲ್ಲೆಯಲ್ಲಿ ಬ್ಯಾರೇಜ್‌ ಗಳ ನಿರ್ಮಾಣ, ಕಮಲನಗರ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ನೇಮಕಾತಿ ಮಾಡಬೇಕು ಎನ್ನುವ ಕುರಿತಂತೆ ಹಲವು ರೀತಿಯ ಬೇಡಿಕೆಗಳು ಹಾಗೂ ಸಲಹೆಗಳು ಕೇಳಿ ಬಂದಿವೆ.

ಅವ್ಯವಸ್ಥೆಯ ಬಗ್ಗೆ ದೂರು: ಬಸವಕಲ್ಯಾಣದಲ್ಲಿ ಸ್ವಚ್ಛತೆ ಇಲ್ಲದಿರುವ ಬಗ್ಗೆ, ಜಿಲ್ಲೆಯಲ್ಲಿರುವ ಪಿಡಿಒ, ತಲಾಟಿಗಳು ಸರಿಯಾಗಿ ಕೆಲಸ ನಿರ್ವಹಿಸದಿರುವ ಬಗ್ಗೆ, ಚಿಟಗುಪ್ಪ ಆಸ್ಪತ್ರೆಯಲ್ಲಿರುವ ಸಮಸ್ಯೆಗಳ ಬಗ್ಗೆ, ಬೀದರ ಬ್ರಿಮ್ಸ್‌ ಆಸ್ಪತ್ರೆಯ ಸಮಸ್ಯೆಗಳು ಮತ್ತು ಭ್ರಷ್ಟಾಚಾರ, ಹುಮನಾಬಾದ ಆಸ್ಪತ್ರೆಯ ಅವ್ಯವಸ್ಥೆ ಮತ್ತು ವೈದ್ಯರ ಅಲಭ್ಯತೆ, ಅಲ್ಲದೇ 3-4 ವರ್ಷಗಳಿಂದ ಒಂದೇ ಸ್ಥಳದಲ್ಲಿ ಕೆಲಸ ಮಾಡುತ್ತ ಅವ್ಯವಹಾರ ಮಾಡುತ್ತಿರುವ ಅಧಿಕಾರಿಗಳನ್ನು ಎತ್ತಂಗಡಿ ಮಾಡಬೇಕು ಎನ್ನುವ ದೂರುಗಳು ಬಂದಿವೆ.

ಕಲ್ಯಾಣ ಕರ್ನಾಟಕ ಭಾಗದ ನೌಕರರಿಗೆ 371(ಜೆ) ಪ್ರಕಾರ ನೀಡಲಾಗುತ್ತಿರುವ ಮೀಸಲಾತಿ ನ್ಯೂನತೆಯ ಬಗ್ಗೆ, ವಿಕಲಚೇತನರಿಗೆ ಸರ್ಕಾರದ ಸೌಲಭ್ಯಗಳ ನೀಡುವಿಕೆಯಲ್ಲಿ ಎಸುಗುತ್ತಿರುವ ತಾರತಮ್ಯ, ಬೀದರ ಜಿಲ್ಲೆಯ ಭೂಮಾಪನ ಶಾಖೆಗಳನ್ನು ಆಧುನೀಕರಣಗೊಳಿಸುವುದು, ಬೀದರ ಜಿಲ್ಲೆಯ ಸಾಕ್ಷರತಾ ಪ್ರೇರಕರನ್ನು ನೇಮಕ ಮಾಡಬೇಕು ಎನ್ನುವ ಹಲವಾರು ಬೇಡಿಕೆಗಳು, ಸಚಿವರು ಅಳವಡಿಸಿರುವ ದೂರುಪೆಟ್ಟಿಗೆಯಲ್ಲಿ ದಾಖಲಾಗಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next