Advertisement

ಖೂಬಾಗೆ ಪ್ರತಿಷ್ಠೆ, ಖಂಡ್ರೆಗೆ ಅಗ್ನಿಪರೀಕ್ಷೆ

11:27 AM Apr 19, 2019 | Naveen |

ಬೀದರ: ಗಡಿ ಜಿಲ್ಲೆ ಬೀದರ ಆರು ವಿಧಾನಸಭೆ ಕ್ಷೇತ್ರ ಹಾಗೂ ಕಲಬುರಗಿ ಜಿಲ್ಲೆಯ 2 ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿರುವ ಬೀದರ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್‌ ಅಭ್ಯರ್ಥಿಗಳಾದ
ಭಗವಂತ ಖೂಬಾ ಹಾಗೂ ಈಶ್ವರ ಖಂಡ್ರೆ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.

Advertisement

ಬೀದರ ಕ್ಷೇತ್ರದಲ್ಲಿ 1952ರ ಚುನಾವಣೆ ಹೊರತುಪಡಿಸಿದರೆ 1957ರಿಂದ 2009ರ ತನಕ ಅಂದರೆ ಕಳೆದ 52 ವರ್ಷಗಳಲ್ಲಿ ನಡೆದ 14 ಲೋಕಸಭೆ ಚುನಾವಣೆಗಳು ಮೀಸಲು ಕ್ಷೇತ್ರಕ್ಕೆ ಒಳಪಟ್ಟಿದ್ದವು.
2009ರಲ್ಲಿ ಸಾಮಾನ್ಯ ಕ್ಷೇತ್ರವಾಗಿ ಬದಲಾದ ನಂತರ ಚುನಾವಣೆ ತೀವ್ರ ಹಣಾಹಣಿ ಏರ್ಪಡುತ್ತಿದೆ. 2014ರ ಚುನಾವಣೆ ಯಲ್ಲಿ ಮೋದಿ ಅಲೆಯಲ್ಲಿ ಜಯ ಗಳಿಸಿದ ಭಗವಂತ ಖೂಬಾ ಈ ಬಾರಿಯೂ ಮೋದಿ ಅಲೆಯಲ್ಲಿಯೇ ಗೆಲ್ಲುತ್ತೇನೆ ಎಂಬ ವಿಶ್ವಾಸ ಹೊಂದಿದ್ದಾರೆ.

ಆದರೆ, ಚುನಾವಣೆ ಕಣಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಭಾಲ್ಕಿ ಕ್ಷೇತ್ರದಲ್ಲಿ ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಗೊಂಡಿರುವ ಈಶ್ವರ ಖಂಡ್ರೆ ಎಂಟ್ರಿ ನೀಡಿರುವ ಹಿನ್ನೆಲೆಯಲ್ಲಿ ಚುನಾವಣೆ ಕಾವು ಹೆಚ್ಚಾಗಿದೆ. ಎರಡೂ ಪಕ್ಷಗಳು ಈ ಚುನಾವಣೆಯನ್ನು ಪ್ರತಿಷ್ಠೆ
ಕಣವಾಗಿ ತೆಗೆದುಕೊಂಡಿವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಆರು ಹಾಗೂ ಕಲಬುರಗಿಯ ಎರಡು ಕ್ಷೇತ್ರಗಳು ಸೇರಿದಂತೆ 8 ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ 5 ಕಡೆ ಶಾಸಕರನ್ನು
ಹೊಂದಿದ್ದರೆ ಬಿಜೆಪಿ ಇಬ್ಬರು ಹಾಗೂ ಜೆಡಿಎಸ್‌ ಓರ್ವ ಶಾಸಕರನ್ನು ಹೊಂದಿದೆ. ಈ ಮಧ್ಯೆ ಚಿಂಚೋಳಿ ಶಾಸಕ ಸ್ಥಾನಕ್ಕೆ ಜಾಧವ್‌ ರಾಜೀನಾಮೆ ನೀಡಿ ಲೋಕಸಭೆ ಕಣಕ್ಕೆ ಧುಮುಕಿದ್ದಾರೆ.

ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆಯಾದ ನಂತರ ಜಿಲ್ಲೆಯ ಮೂವರು ಶಾಸಕರು ಸಚಿವರಾಗಿ ಆಯ್ಕೆ ಆಗಿದ್ದಾರೆ. ಕ್ರೀಡಾ, ಗಣಿ ಮತ್ತು ಭೂ ವಿಜ್ಞಾನ ಹಾಗೂ ಸಹಕಾರ ಸಚಿವರು ಜಿಲ್ಲೆಯವರಾಗಿದ್ದಾರೆ. ಅಲ್ಲದೇ, ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಹಿನ್ನೆಲೆಯಲ್ಲಿ ಈ ಚುನಾವಣೆ ಮೈತ್ರಿ ಪಕ್ಷಕ್ಕೆ ಸವಾಲಾಗಿದೆ. ಸದ್ಯ ಈಶ್ವರ ಖಂಡ್ರೆ ಅವರನ್ನು ಶತಾಯಗತಾಯ ಚುನಾವಣೆಯಲ್ಲಿ ಗೆಲ್ಲಿಸಲೇಬೇಕು ಎಂದು ಕಾಂಗ್ರೆಸ್‌ ಶಾಸಕರು ಶ್ರಮಿಸುತ್ತಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಸೋತರೆ ಜಿಲ್ಲೆಗೆ ನೀಡಿದ ಕೆಲ ಸಚಿವ ಸ್ಥಾನಗಳನ್ನು ಕಳೆದುಕೊಳ್ಳಬೇಕಾಗುವ ಸ್ಥಿತಿ ಎದುರಾಗಬಹುದೆಂಬ ಭೀತಿ ಸಚಿವರನ್ನು ಕಾಡುತ್ತಿದೆ.

ದೇಶಕ್ಕಾಗಿ ಮತ ನೀಡಿ: ಐದು ವರ್ಷಗಳಲ್ಲಿ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ಜಿಲ್ಲೆಯ ಅರ್ಹ ಫಲಾನುಭವಿಗಳಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ನಯಾ ಪೈಸೆ ಭ್ರಷ್ಟಾಚಾರ ನಡೆಸದೇ ಆಡಳಿತ ನೀಡಿದ್ದೇನೆ ಎಂದು ಹೇಳುತ್ತಿರುವ
ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ, ದೇಶಕ್ಕೆ ಇನ್ನೊಮ್ಮೆ ಮೋದಿ ಪ್ರಧಾನಿಯನ್ನಾಗಿ ಮಾಡಬೇಕು. ದೇಶಕ್ಕಾಗಿ, ಅಭಿವೃದ್ಧಿಗಾಗಿ ಮತ ನೀಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇತ್ತೀಚೆಗೆ ನಡೆದ ಜಿಪಂ ಚುನಾವಣೆಯಲ್ಲಿ
ಬಿಜೆಪಿ ಸದಸ್ಯರು ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ, ಚುನಾವಣೆ ಸಂದರ್ಭದಲ್ಲಿ ಪಕ್ಷದ ಕೆಲ ಮುಖಂಡರು ಇತರೆ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಭೀತಿ ಕೂಡ ಬಿಜೆಪಿಗೆ ಕಾಡುತ್ತಿದೆ.

Advertisement

ಕ್ಷೇತ್ರ ವ್ಯಾಪ್ತಿ: ಬೀದರ ಲೋಕಸಭೆ ಕ್ಷೇತ್ರ ವ್ಯಾಪ್ತಿಗೆ ಒಟ್ಟು 8 ವಿಧಾನಸಭೆ ಕ್ಷೇತ್ರಗಳಿದ್ದು, ಬೀದರ, ಬೀದರ (ದ), ಹುಮನಾಬಾದ, ಭಾಲ್ಕಿ, ಬಸವಕಲ್ಯಾಣ, ಔರಾದ ಹಾಗೂ ಕಲಬುರಗಿ ಜಿಲ್ಲೆಯ ಚಿಂಚೋಳಿ ಮತ್ತು ಆಳಂದ ವಿಧಾನಸಭೆ ಕ್ಷೇತ್ರಗಳು ಒಳಪಟ್ಟಿವೆ.

ನಿರ್ಣಾಯಕ ಅಂಶ
ಕ್ಷೇತ್ರದಲ್ಲಿ ಪ್ರಬಲವಾಗಿ ಲಿಂಗಾಯತರಿದ್ದು, ಅವರ ಸಮನಾಗಿ ಎಸ್‌ಸಿ-ಎಸ್‌ಟಿ ಸಮುದಾಯದವರೂ ಇದ್ದಾರೆ. ಈ ಎರಡು
ಸಮುದಾಯದವರು ಯಾವ ಪಕ್ಷದ ಕಡೆಗೆ ಒಲವು ತೋರುತ್ತಾರೋ ಅವರು ಚುನಾವಣೆಯಲ್ಲಿ ಗೆಲುವು ಸಾಧಿಸಬಹುದು. ಕಣದಲ್ಲಿ ಕಾಂಗ್ರೆಸ್‌-ಬಿಜೆಪಿ ಇಬ್ಬರು ಅಭ್ಯರ್ಥಿಗಳು ಲಿಂಗಾಯತ ಸಮುದಾಯದವರಾಗಿದ್ದಾರೆ. ಈಶ್ವರ ಖಂಡ್ರೆ ಅಖಿಲ ಭಾರತೀಯ ವೀರಶೈವ ಮಹಾಸಭಾ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಕಣದಲ್ಲಿ ಮುಸ್ಲಿಂ ಸಮುದಾಯದ 9 ಅಭ್ಯರ್ಥಿಗಳು ಕಣದಲ್ಲಿರುವುದು ವಿಶೇಷ. ಕಾಂಗ್ರೆಸ್‌ ಪಕ್ಷಕ್ಕೆ, ದಲಿತ, ಅಲ್ಪಸಂಖ್ಯಾತ ಸೇರಿದಂತೆ ಇತರೆ ಹಿಂದುಳಿದ ವರ್ಗ ಜನರು ಬೆಂಬಲ ನೀಡಬಹುದೆಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಬಿಜೆಪಿಯವರೂ ಪ್ರಮುಖವಾಗಿ ಲಿಂಗಾಯತ, ಮರಾಠ ಸೇರಿ
ಇತರೆ ಜಾತಿಗಳ ಮತ ಪಡೆಯಬಹುದಾಗಿದೆ ಎಂಬ ಲೆಕ್ಕಾಚಾರವೂ ಇದೆ.

ದುರ್ಯೋಧನ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next