Advertisement

ನಾಟಕ ರಂಜನೆಯಷ್ಟೇ ಅಲ್ಲ ಬದುಕಿನ ಶಿವರಂಜನೆ

06:18 PM Nov 29, 2019 | Naveen |

ಬೀದರ: ಇಂದು ಆಧುನಿಕ ತಂತ್ರಜ್ಞಾನ ಬೆಳೆದಿದ್ದು, ಜೀವನ ಶೈಲಿ ಬದಲಾಗುತ್ತಿದೆ. ಸಾಮಾಜಿಕ ಜಾಲತಾಣ ಹಾಸು ಹೊಕ್ಕಾಗಿದೆ. ಇಂಥ ಸಂದರ್ಭದಲ್ಲಿ ನಾಟಕ ನಮಗೆ ರಂಜನೆ ಎಂದು ಭಾವಿಸದೇ ಅದು ಬದುಕಿನ ಶಿವರಂಜನೆ ಆಗಬಲ್ಲದೆಂದು ಭಾವಿಸಬೇಕು ಎಂದು ಬೈಲೂರ ನಿಷ್ಕಲ್‌ ಮಂಟಪದ ಶ್ರೀ ನಿಜಗುಣ ಪ್ರಭು ಸ್ವಾಮಿಗಳು ನುಡಿದರು.

Advertisement

ಜಿಲ್ಲಾ ಕಸಾಪ ಹಾಗೂ ಸಂಚಾರಿ ರಂಗ ಘಟಕ ರಂಗಾಯಣ ಮೈಸೂರು ಆಶ್ರಯದಲ್ಲಿ ನಗರದ ರಂಗ ಮಂದಿರದಲ್ಲಿ ನಡೆದ ಗಿರೀಶ ಕಾರ್ನಾಡ್‌ ರಚಿತ “ಬೆಂದಕಾಳು ಆನ್‌ ಟೋಸ್ಟ್‌’ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕರ್ನಾಟಕದಲ್ಲಿ ನಾಟಕದ ಒಂದು ಪರಂಪರೆ ಇದ್ದು, ಅನೇಕ ಸಂಸ್ಥೆಗಳು ಈ ದಿಶೆಯಲ್ಲಿ ಕಾರ್ಯ ನಿರ್ವಹಿಸುತ್ತಿವೆ ಎಂದರು.

ನಾಗರೀಕತೆ, ಮನುಷ್ಯನ ಅಸ್ಮಿತೆ ಅವಲೋಕಿಸಲು ನಾಟಕ ಸಹಾಯಕ. ಒಬ್ಬ ಕಲಾವಿದನ ಕಲೆಯನ್ನು ನಾಟಕದಲ್ಲಿ ನೋಡಬಹುದು. ಉಮಾಶ್ರೀ ಅವರ ಬದುಕು ಪ್ರೇರಣೆಯಾಗಿ ಎಲ್ಲರಿಗೆ ಮಾದರಿಯಾಗಿದೆ. ನಾಟಕದಲ್ಲಿ ಪ್ರೀತಿ, ಪ್ರೇಮ, ವಾತ್ಸಲ್ಯ ಇದ್ದು, ಇದು ಅನುಭಾವಿ ಅನುಭವಿಸುವ ಅಭ್ಯಾಸ ನಮ್ಮ ಜೀವನದ ಪ್ರತಿಯೊಂದು ಮಗ್ಗಲು ನಾಟಕ. ಇದಕ್ಕೆ ದೇವರೇ ನಿರ್ದೇಶಕರಾಗಿದ್ದು, ಅವರು ಆಡಿಸಿದಂತೆ ನಾವು ಪಾತ್ರ ನಿರ್ವಹಿಸುತ್ತೇವೆ. ನಾಟಕ ಪರದೆ ಮೇಲಷ್ಟೆ ಅಲ್ಲ. ಅದು ಜೀವನದ ಪ್ರತಿಯೊಂದು ಹಂತದಲ್ಲಿ ಹುದುಗಿ ಹೋಗಿದೆ. ಗಿರೀಶ ಕಾರ್ನಾಡ್‌ ನಮಗೆ ಒಬ್ಬ ಸಾಂಸ್ಕೃತಿಕ ನಾಯಕ ಎಂದು ಹೇಳಿದರು.

ನಾಟಕ ಮನೋರಂಜನೆ ಜೊತೆಗೆ ಜೀವನದಲ್ಲಿ ಬೆಳಕು ಚೆಲ್ಲಲಿದೆ. ಯುವಕರು ಉದ್ವೇಗಕ್ಕೆ ಒಳಗಾಗದೆ, ಅವರ ಶಕ್ತಿ ಸದ್ಬಳಕೆಯಾಗಿ ಸಮಾಕ್ಕೆ ಬೆಳಕಾಗಲಿ. ಎಲ್ಲರೂ ಕುಟುಂಬ ಧರ್ಮಪಾಲಿಸಲಿ ಎಂದು ಹೇಳಿದರು.

ಜಿಲ್ಲಾ ಹಿಂದುಳಿದ ವರ್ಗಗಳ ಅಧಿಕಾರಿ ರಮೇಶ ದೇವಮಾನೆ ಮಾತನಾಡಿ, ನಾಟಕ ಒಂದು ವಿಷಯಕ್ಕೆ ಸೀಮತವಾದರೂ ಅದರ ಹಿನ್ನೆಲೆ ಅರಿತವರಿಗೆ ಅದರ ಅರ್ಥವಾಗಬಲ್ಲದು. ಪ್ರಗತಿ ಪರ ಚಿಂತನೆ, ವೈಚಾರಿಕ ಮನೋಭಾವನೆ ನಮ್ಮ ಮಕ್ಕಳಲ್ಲಿ ಬೇರೂರಬೇಕಾಗಿದೆ. ಮಕ್ಕಳು ಶೈಕ್ಷಣಿಕ ಪ್ರಗತಿಯೊಂದಿಗೆ ಕಲೆ, ಸಾಹಿತ್ಯ, ಸಂಸ್ಕೃತಿ ಅಳವಡಿಸಿಕೊಂಡರೆ ಬದುಕು ಆನಂದಮಯ. ಇಂದು ಪಾಶ್ವಾತ್ಯ ಸಂಸ್ಕೃತಿ ನಮ್ಮನ್ನು ಹಾಳು ಮಾಡುತ್ತಿದ್ದು, ಯುವಕರಾದವರು ನಮ್ಮತನ ಬಿಡದೆ ಭವ್ಯ ಕನ್ನಡ ಸಂಸ್ಕೃತಿ ಬೆಳೆಸಲು ಇಂಥ ನಾಟಕಗಳು ಪ್ರೇರಣೆಯಾಗಲಿವೆ ಎಂದು ಹೇಳಿದರು.

Advertisement

ಜಿಪಂ ಮಾಜಿ ಅಧ್ಯಕ್ಷ ಕುಶಾಲ ಪಾಟೀಲ ಗಾದಗಿ, ತಾಲೂಕು ಬಿಸಿಎಂ ಅಧಿಕಾರಿ ಅಶೋಕ ಶೇರಿಕಾರ, ರಾಜ್ಯ ಶುಶ್ರೂಷಕರ ಸಂಘದ ರಾಜ್ಯಾಧ್ಯಕ್ಷ ರಾಜಕುಮಾರ ಮಾಳಗೆ, ಪ್ರೊ| ಸಂಗ್ರಾಮ ಎಂಗಳೆ, ಎಸ್‌.ಬಿ. ಕುಚಬಾಳ, ಸತೀಶ ಬೆಳಕುಂಟೆ ವೇದಿಕೆಯಲ್ಲಿದ್ದರು. ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚೆನಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಇದೇ ವೇಳೆ ಡಾಕ್ಟರ್‌ ಪದವಿ ಪಡೆದಿರುವ ನಾಗಶೆಟ್ಟಿ ಪಾಟೀಲ, ಸಂಜೀವಕುಮಾರ ಅತಿವಾಳೆ, ಶಾಮ ನೆಲವಾಡೆ ಅವರನ್ನು ಸನ್ಮಾನಿಸಲಾಯಿತು. ಬಿದರಿ ಸಂಸ್ಥೆಯ ರೇಖಾ ಸೌದಿ ಸಂಗೀತ ಕಾರ್ಯಕ್ರಮ ಆಕರ್ಷಿಸಿತು. ಕ.ಸಾ.ಪ. ತಾಲೂಕು ಅಧ್ಯಕ್ಷ ಎಂ.ಎಸ್‌. ಮನೋಹರ ಸ್ವಾಗತಿಸಿದರು. ಸಂಚಾಲಕ ಶಿವಶಂಕರ ಟೋಕರೆ ನಿರೂಪಿಸಿದರು. ಸಚಿನ ಮಠಪತಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next