Advertisement

141.62 ಕೋಟಿ ರೂ. ಬೆಳೆ ಪರಿಹಾರ ಬಾಕಿ: ರೈತರ ಆಕ್ರೋಶ

11:08 AM May 04, 2019 | Naveen |

ಬೀದರ: ಕಳೆದ ವರ್ಷ ಮುಂಗಾರು ಹಾಗೂ ಹಿಂಗಾರು ಮಳೆ ಕೊರತೆಯಿಂದ ಬೆಳೆ ಕಳೆದುಕೊಂಡ ರೈತರಿಗೆ ಸರ್ಕಾರ ನೀಡಬೇಕಾಗಿರುವ ಸುಮಾರು 141.62 ಕೋಟಿ ರೂ. ಬರ ಪರಿಹಾರ ಇಂದಿಗೂ ಸಿಗದಿರುವುದು ಜಿಲ್ಲೆಯಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಕಡಿಮೆಯಾಗಿ ಸಂಕಷ್ಟಕ್ಕೆ ಈಡಾಗುತ್ತಿದ್ದರು ಕೂಡ ಸರ್ಕಾರ ಮಾತ್ರ ನೋವಿಗೆ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ ಎಂದು ರೈತರು ದೂರುತ್ತಿದ್ದಾರೆ.

ಕಳೆದ ವರ್ಷ ಮುಂಗಾರು ಹಾಗೂ ಹಿಂಗಾರು ಬೆಳೆಗಳು ಮಳೆ ಕೊರತೆ ಹಿನ್ನೆಲೆಯಲ್ಲಿ ಬಾಡಿ ಹೋಗಿವೆ. ಸರ್ಕಾರ ಇಂದಿಗೂ ಬರ ಪರಿಹಾರ ನೀಡುವ ಕಾರ್ಯಕ್ಕೆ ಮುಂದಾಗದಿರುವುದು ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಮುಂಗಾರು ಬೆಳೆ ಹಾನಿ ಸಂಭವಿಸಿ 8 ತಿಂಗಳು ಕಳೆದಿದೆ. ಹಿಂಗಾರು ಬೆಳೆ ಹಾನಿ ಸಂಭವಿಸಿ ನಾಲ್ಕು ತಿಂಗಳಾಗಿದೆ. ಆದರೂ ಸರ್ಕಾರ ಬರ ಪರಿಹಾರ ವಿತರಣೆಗೆ ಮುಂದಾಗುತ್ತಿಲ್ಲ. ಅಧಿಕಾರಿಗಳು ಲೋಕಸಭಾ ಚುನಾವಣಾ ನೀತಿ ಸಂಹಿತೆ ನೆಪ ಹೇಳುತ್ತಿದ್ದಾರೆ. ಆದರೆ ಬರ ಪರಿಹಾರ ವಿತರಣೆ ಯಾವ ನೀತಿ ಸಂಹಿತೆ ಅಡ್ಡಿ ಬರುತ್ತದೆ ಎಂದು ರೈತರು ಪ್ರಶ್ನಿಸುತ್ತಿದ್ದಾರೆ.

ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ರೈತರ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂಬುವುದಕ್ಕೆ ಬರ ಪರಿಹಾರ ಹಣ ಬಾರದಿರುವುದೇ ಸಾಕ್ಷಿಯಾಗಿದೆ ಎಂದು ಆರೋಪಿಸುತ್ತಿದ್ದಾರೆ.

Advertisement

ಬೆಳೆ ವಿಮೆ ಬಂದಿಲ್ಲ: ಮುಂಗಾರು ಹಾಗೂ ಹಿಂಗಾರು ಬೆಳೆಗಳಿಗೆ ಜಿಲ್ಲೆಯ ರೈತರು ಬೆಳೆ ವಿಮೆ ಮಾಡಿಸಿದ್ದಾರೆ. ಬೆಳೆ ಹಾನಿ ಸಂಭವಿಸಿ ಸರ್ವೆ ಕಾರ್ಯ ಆದರೂ ಇಂದಿಗೂ ಬೆಳೆ ವಿಮೆ ಮೊತ್ತ ರೈತರಿಗೆ ಬಂದಿಲ್ಲ. ವಿಮೆ ಕಟ್ಟಿಸಿಕೊಳ್ಳುವಾಗ ಇರುವ ಕಾಳಜಿ ಪಾವತಿಸುವಾಗ ಕಂಪನಿಗಳು ಆಸಕ್ತಿ ತೊರುತ್ತಿಲ್ಲ. ಯಾವ ಕಾರಣಕ್ಕೆ ವಿಮೆ ಹಣ ಪಾವತಿಯಾಗುತ್ತಿಲ್ಲ ಎಂದು ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಪ್ರಶ್ನಿಸುತ್ತಿಲ್ಲ. ಈ ಬಗ್ಗೆ ಸರ್ಕಾರ ಯಾಕೆ ಮೌನ ವಹಿಸಿದೆ ಎಂದು ರೈತರು ಪ್ರಶ್ನಿಸುತ್ತಿದ್ದಾರೆ.

ಬೆಳೆ ಹಾನಿ: ಕಳೆದ ಮುಂಗಾರಿನಲ್ಲಿ ಜಿಲ್ಲೆಯ ಒಟ್ಟಾರೆ 3,38,399 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಈ ಪೈಕಿ ಮಳೆ ಕೊರತೆಯಿಂದ 1,40,452 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿತ್ತು. ಅದೇ ರೀತಿ ಕಳೆದ ವರ್ಷ ಜಿಲ್ಲೆಯ ಒಟ್ಟಾರೆ 73,459 ಹೆಕ್ಟೇರ್‌ ಪ್ರದೇಶದಲ್ಲಿ ಹಿಂಗಾರು ಬಿತ್ತನೆ ಮಾಡಲಾಗಿತ್ತು. ಈ ಪೈಕಿ 69,488 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ. ಜಿಲ್ಲೆಯ ರೈತರು ಸರ್ಕಾರದ ಕಡೆ ಮುಖ ಮಾಡಿದ್ದು, ಬರ ಪರಿಹಾರಕ್ಕೆ ಎದುರು ನೋಡುತ್ತಿದ್ದಾರೆ.

ಸರ್ಕಾರ ಮಾತ್ರ ರೈತರ ಹೆಸರು ಬಳಸಿಕೊಳ್ಳುತ್ತಿದೆ ಹೊರತು ನ್ಯಾಯ ನೀಡುತ್ತಿಲ್ಲ. ಮುಂಗಾರು ಮತ್ತು ಹಿಂಗಾರು ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಸದ್ಯ ರೈತರಿಗೆ ಬರದ ಕರಿನೆರಳು ಕಾಡುತ್ತಿದೆ. ಒಂದು ಕಡೆ ನೀರಿನ ಬವಣೆ ಇದ್ದರೆ, ಇನ್ನೊಂದು ಕಡೆ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಮುಂದಿನ ತಿಂಗಳಲ್ಲಿ ಮತ್ತೆ ಮುಂಗಾರು ಆರಂಭವಾಗಲ್ಲಿದ್ದು, ರೈತರು ಹೇಗೆ ಉಳುಮೆ ಮಾಡಬೇಕು? ಬ್ಯಾಂಕ್‌ಗಳಲ್ಲಿ ರೈತರಿಗೆ ಸಾಲ ದೊರೆಯುತ್ತಿಲ್ಲ. ರೈತರಿಗೆ ಬ್ಯಾಂಕ್‌ಗಳು ಸ್ಪಂದಿಸುತ್ತಿಲ್ಲ. ರೈತರ ಕೈಯಲ್ಲಿ ಹಣ ಇಲ್ಲದೆ ಮತ್ತೆ ಆತ್ಮಹತ್ಯೆಕಡೆ ಮುಖ ಮಾಡುವ ದಿನಗಳು ಎದುರಾಗುತ್ತಿವೆ. ಸರ್ಕಾರ ಕೂಡಲೇ ಬರ ಪರಿಹಾರ, ಕಬ್ಬಿನ ಬಾಕಿ ಹಣ, ಬೆಳೆ ವಿಮೆ ಪಾವತಿಗೆ ಮುಂದಾಗಬೇಕು. ಇಲ್ಲವಾದರೆ ರಾಜ್ಯದಲ್ಲಿ ಮತ್ತೆ ರೈತರ ಚಳವಳಿ ಶುರುವಾಗುತ್ತದೆ.
ಮಲ್ಲಿಕಾರ್ಜುನ ಸ್ವಾಮಿ,
ಜಿಲ್ಲಾ ರೈತ ಸಂಘದ ಅಧ್ಯಕ್ಷ

ದುರ್ಯೋಧನ ಹೂಗಾರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next