Advertisement

ಸಂತ್ರಸ್ತರಲ್ಲಿ ಆಶಾಕಿರಣ ತಂದ ಗ್ರಾಮ ವಾಸ್ತವ್ಯ

10:16 AM Jun 24, 2019 | Team Udayavani |

ದುರ್ಯೋಧನ ಹೂಗಾರ
ಬೀದರ: ನಾಲ್ಕು ದಶಕಗಳಿಂದ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ಕಾರಂಜಾ ಮುಳುಗಡೆ ಸಂತ್ರಸ್ತರಿಗೆ ಈ ಹಿಂದೆ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇದೀಗ ಜಿಲ್ಲೆಗೆ ಗ್ರಾಮ ವಾಸ್ತವ್ಯಕ್ಕೆ ಆಗಮಿಸುತ್ತಿದ್ದು, ಕಾರಂಜಾ ಸಂತ್ರಸ್ತರಲ್ಲಿ ಹೊಸ ಆಶಾಕಿರಣ ಹುಟ್ಟಿಕೊಂಡಿದೆ.

Advertisement

ಕಳೆದ ವರ್ಷದ ನವೆಂಬರ್‌ ತಿಂಗಳಲ್ಲಿ ಸಹಕಾರ ಸಪ್ತಾಹ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ನಗರದ ನೆಹೆರೂ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರಂಜಾ ಸಂತ್ರಸ್ತರಿಗೆ ಸೂಕ್ತ ಪರಿಹಾರ ಜತೆಗೆ ವಿವಿಧ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರು. ನಂತರ ದಿನಗಳಲ್ಲಿ ಪರಿಹಾರ ಕಲ್ಪಿಸುವ ಕಾರ್ಯಕ್ಕೆ ಯಾವುದೇ ಚಾಲನೆ ದೊರೆಯದ ಹಿನ್ನೆಲೆಯಲ್ಲಿ ಸಂತ್ರಸ್ತರು ಮತ್ತೆ ಪ್ರತಿಭಟನೆ ಹಾದಿ ಹಿಡಿದರು.

ಇದೀಗ ಜಿಲ್ಲೆಗೆ ಮುಖ್ಯಮಂತ್ರಿ ಗ್ರಾಮ ವಾಸ್ತವ್ಯಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಹಿಂದೆ ಸಹಕಾರ ಹಾಗೂ ಜಿಲ್ಲಾ ಉಸ್ತುವಾರ ಸಚಿವ, ಸಂಸದ ಭಗವಂತ ಖೂಬಾ, ಜಿಲ್ಲಾಧಿಕಾರಿ ಡಾ|ಎಚ್.ಆರ್‌ ಮಹಾದೇವ ಸೇರಿದಂತೆ ವಿವಿಧ ಅಧಿಕಾರಿಗಳ ನೇತೃತ್ವದಲ್ಲಿ ಕಾರಂಜಾ ಸಂತ್ರಸ್ತರ ಸಭೆ ನಡೆಸಿದ್ದರು. ಮುಖ್ಯಮಂತ್ರಿಗಳು ಬರುವ ಮುನ್ನ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಉಪಸಮಿತಿಯೊಂದನ್ನು ರಚಿಸುವಂತೆ ಮುಖ್ಯಮಂತ್ರಿಗಳಿಗೆ ಒತ್ತಾಯಿಸುವುದಾಗಿ ಸಚಿವರು ಸಭೆಯಲ್ಲಿ ಭರವಸೆ ನೀಡಿದ್ದರು.

ಸಭೆಯ ನಂತರ ಸಧ್ಯ ಹೋರಾಟಗಾರರು ಅನೇಕ ಭರವಸೆಗಳನ್ನು ಇರಿಸಿಕೊಂಡಿದ್ದು, ಮುಖ್ಯಮಂತ್ರಿ ಬರುವ ಮುನ್ನ ಪರಿಹಾರ ಕಲ್ಪಿಸುವ ಹಾಗೂ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಸಂತ್ರಸ್ತರ ಬೇಡಿಕೆಗಳಿಗೆ ಮುಖ್ಯಮಂತ್ರಿ ಸ್ಪಂದನೆ ನೀಡದಿದ್ದರೆ ಅವರ, ಆಗಮನಕ್ಕೆ ಸಂತ್ರಸ್ತರ ಪ್ರತಿಭಟನೆಯ ಬಿಸಿ ತಟ್ಟುವ ಸಾಧ್ಯತೆ ಹೆಚ್ಚಿದೆ ಎಂದು ಮೂಲಗಳು ತಿಳಿಸಿದವೆ.

ಸಭೆಗೆ ಮಾಹಿತಿ ನೀಡಿದ ಅಧಿಕಾರಿಗಳ ಪ್ರಕಾರ ಸಧ್ಯ ಸಂತ್ರಸ್ತರಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿದ್ದು, ನ್ಯಾಯಾಲಯದ ಮೊರೆ ಹೊಗದ ರೈತರಿಗೆ ಪರಿಹಾರ ಕಲ್ಪಿಸುವುದಾದರೆ, ಒಟ್ಟು 1145 ಕೋಟಿ ರೂ. ಬೇಕು ಎಂದು ಈಗಾಗಲೇ ರಾಜ್ಯ ಸಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು.

Advertisement

3 ಸಾವಿರಕ್ಕೆ ಭೂಮಿ ಖರೀದಿ: 1981ರಿಂದ 1986ರ ವರೆಗೆ ಬೀದರ್‌ ಹಾಗೂ ಹುಮನಾಬಾದ ತಾಲೂಕಿನ 7 ಗ್ರಾಮಗಳ ಸುಮಾರು 1,514 ಮನೆಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಒಟ್ಟು 2,273 ಕುಟುಂಬಗಳು ಮನೆ ಕಳೆದುಕೊಂಡಿದ್ದಾರೆ. ಒಟ್ಟು 19,844.24 ಎಕರೆ ರೈತರ ಭೂಮಿ ಸ್ವಾಧಿನ ಪಡೆಸಿಕೊಂಡಿದ್ದು, ರೈತರಿಗೆ ಎಕರೆಗೆ 3,000 ಸಾವಿರದಿಂದ 3,600 ರೂ. ಪರಿಹಾರ ನೀಡಲಾಗಿದೆ. ಕೆಲ ಭೂ ಮಾಲೀಕರು ಮಾರುಕಟ್ಟೆ ಬೆಲೆ ನೀಡುವಂತೆ ಒತ್ತಾಯಿಸಿ ಸಿವಿಲ್ ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸಿ ಪ್ರತಿ ಎಕರೆಗೆ 6,000 ರಿಂದ 7,200 ಹಣ ಪಡೆದುಕೊಂಡಿದ್ದಾರೆ. ನಂತರ ಇನ್ನೂ ಕೆಲ ರೈತರು ಉಚ್ಛ ನ್ಯಾಯಾಲಯಕ್ಕೆ ಮೊರೆ ಹೋಗಿದ್ದು, ನ್ಯಾಯಾಲಯವು ಪ್ರತಿ ಎಕರೆಗೆ 46,200 ರೂ. ನೀಡುವಂತೆ ತೀರ್ಪು ನೀಡಿದೆ. ನಂತರ ಕೂಡ ರೈತರು ಭೂಮಿಗೆ ಮಾರುಕಟ್ಟೆ ಬೆಲೆ ನೀಡಬೇಕು ಎಂದು ಮೇಲ್ಮನವಿ ಸಲ್ಲಿಸಿ ಪ್ರತಿ ಎಕರೆಗೆ 88,000 ಸಾವಿರ ಪರಿಹಾರ ಪಡೆದುಕೊಂಡಿದ್ದು, ಇದೀಗ ಎಲ್ಲಾ ಸಂತ್ರಸ್ತರು ಏಕ ಮಾದರಿ ಪರಿಹಾರ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ.

ಕಾನೂನು ಅಡ್ಡಿ: ಸಧ್ಯ ಸಂತ್ರಸ್ತರ ಪೈಕಿ ಕೆಲ ರೈತರು ಮಾತ್ರ ನ್ಯಾಯಾಲಯದಲ್ಲಿ ಅರ್ಜಿಸಲ್ಲಿಸಿ ಪರಿಹಾರ ಪಡೆದುಕೊಂಡಿದ್ದು, ಈ ಆದೇಶದಂತೆ ಎಲ್ಲಾ ಸಂತ್ರಸ್ತರಿಗೆ ಪರಿಹಾರ ನೀಡಲು ಕಾನೂನು ಸಮಸ್ಯೆ ಉಂಟಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನ್ಯಾಯಾಲಯದ ಮೇಲ್ಮನವಿ ತೀರ್ಪು ಆಧರಿಸಿ ಏಕರೂಪದ ಭೂ ಪರಿಹಾರವನ್ನು ಭೂಸ್ವಾಧೀನ ಕಾಯ್ದೆಯ ಕಲಂ 28(ಎ) ಪ್ರಕಾರ ನಿಗದಿಪಡಿಸಿ ಪಾವತಿಸಲು ಅವಕಾಶ ಇಲ್ಲ. ಆದರೆ, 15-09-2005ರಲ್ಲಿ ರಾಜ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಭೆಯೊಂದು ನಡೆದಿದ್ದು, ಸಂತ್ರಸ್ತರ ಭೇಡಿಕೆಗಳ ಕುರಿತು ಚರ್ಚೆ ನಡೆಸಿ, ಆಲಮಟ್ಟಿ ಮಾದರಿಯಲ್ಲಿ ಪರಿಹಾರ ನೀಡುವ ವ್ಯವಸ್ಥೆ ಮಾಡುವುದು, ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ, ಪುನರ್‌ ವಸತಿ ಕೇಂದ್ರಗಳಲ್ಲಿ ಕೃಷ್ಣ ಮೇಲ್ಡಂಡೆ ಯೋಜನೆಯಡಿ ಸಂತ್ರಸ್ತರಿಗೆ ನೀಡಿರುವ ಮಾದರಿಯಲ್ಲಿ ಸಾರ್ವಜನಿಕ ಸೌಲಭ್ಯಗಳನ್ನು ನೀಡುವುದು, ಏಕರೂಪ ಪರಿಹಾರ ಬೆಲೆ ಒದಗಿಸುವ ಕುರಿತು ಚರ್ಚೆ ನಡೆದಿತ್ತು. ಆದರೆ, ಇಂದಿಗೂ ಕೂಡ ಆ ಕಾರ್ಯಗಳು ಅನುಷ್ಟಾನಗೊಳ್ಳದ ಹಿನ್ನೆಲೆಯಲ್ಲಿ ಸಂತ್ರಸ್ತರು 70 ದಿನಗಳ ಕಾಲ ಜಿಲ್ಲಾಡಳಿತ ಎದುರು ಅಹೋರಾತ್ರಿ ಪ್ರತಿಭಟನೆ ನಡೆಸಿದರು.

ಪರಿಹಾರ ನೀಡಲೇಬೇಕು
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಸಂತ್ರಸ್ತರಿಗೆ ನೀಡಿದ ಭರವಸೆ ಈಡೇರಿಸಬೇಕು. ಸಂತ್ರಸ್ತರಿಗೆ ಏಕರೂಪ ಪರಿಹಾರ ನೀಡುವ ಜತೆಗೆ ವಿವಿಧ ಸೌಲಭ್ಯಗಳನ್ನು ಒದಗಿಸಬೇಕು. ಕಾನೂನು ಸಮಸ್ಯೆ ಇದ್ದರೆ, ಸರ್ಕಾರ ಪ್ರತ್ಯೇಕ ಕಾನೂನು ರೂಪಿಸಬೇಕು. ಸಂತ್ರಸ್ತರಿಗೆ ನ್ಯಾಯ ನೀಡುವ ಕೆಲಸವನ್ನು ಸರ್ಕಾರ ಮಾಡಬೇಕು. 40 ವರ್ಷಗಳ ಹೋರಾಟಕ್ಕೆ ಅಂತ್ಯ ಹಾಡಬೇಕು. ಜಿಲ್ಲೆಯ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹೇರುವ ಮೂಲಕ ಸಂತ್ರಸ್ತರ ನೆರವಿಗೆ ಮುಂದಾಗಬೇಕು ಎಂದು ಸಂತ್ರಸ್ತರ ಮುಖಂಡ ಚಂದ್ರಶೇಖರ ಪಾಟೀಲ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next