Advertisement

ಮನುಕುಲ ಸಮಸ್ಯೆಗೆ ಬಸವ ತತ್ವದಲ್ಲಿದೆ ಪರಿಹಾರ

01:29 PM Jun 03, 2019 | Naveen |

ಬೀದರ: ಪ್ರಸಕ್ತ ಸಂದರ್ಭದಲ್ಲಿ ಮನುಕುಲ ಎದುರಿಸುತ್ತಿರುವ ಸಮಸ್ಯೆಗಳಿಗೆ ಬಸವ ತತ್ವದಿಂದ ಮಾತ್ರ ಪರಿಹಾರ ಸಾಧ್ಯವಿದೆ ಎಂದು ಭಾಲ್ಕಿ ಹಿರೇಮಠದ ಶ್ರೀ ಬಸವಲಿಂಗ ಪಟ್ಟದೇವರು ಹೇಳಿದರು.

Advertisement

ಬಾವಗಿ ಗ್ರಾಮದಲ್ಲಿ ಜಗಜ್ಯೋತಿ ಬಸವೇಶ್ವರರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಬಸವಣ್ಣನವರ ವಿಚಾರಧಾರೆಗಳು, ಸಿದ್ಧಾಂತಗಳು ಅನುಕರಣೆಯಾದರೆ, ದೇಶದಲ್ಲಿ ಸಮಾನತೆಯ ಹೊಸ ಕ್ರಾಂತಿ ಶುರುವಾಗುತ್ತದೆ. ಬಸವ ತತ್ವ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಲು ಯಾವುದೇ ಶ್ರೇಷ್ಠತೆಯ ಅಗತ್ಯತೆಯಿಲ್ಲ. ಆದರೆ, ಬಸವ ತತ್ವದ ಮೇಲೆ ಸಂಪೂರ್ಣ ನಂಬಿಕೆ, ವಿಶ್ವಾಸಗಳ ಅಗತ್ಯವಿದೆ. ಬಸವ ತತ್ವಗಳ ಅಳವಡಿಕೆಯಿಂದ ಮಾತ್ರ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯ. ಬಸವ ತತ್ವಗಳು ಪ್ರಚಾರದ ಸರಕಾಗದೇ ನಿತ್ಯ ಜೀವನದಲ್ಲಿ ಹಾಸು ಹೊಕ್ಕಾಗಬೇಕು ಎಂದು ಕಿವಿಮಾತು ಹೇಳಿದರು.

ಲಿಂಗಾಯತ ಮಠದ ಅಕ್ಕ ಅನ್ನಪೂರ್ಣ ಮಾತನಾಡಿ, ಬಸವಣ್ಣ ಸಮಾಜ ಸುಧಾರಕರಾಗಿ ಬದುಕಿನ ಸತ್ಯ ದರ್ಶನ ಮಾಡಿಸಿದ್ದಾರೆ. ಅವರು ಯಾವುದೇ ಒಂದು ಜಾತಿ, ವರ್ಗಕ್ಕೆ ಸೀಮಿತರಲ್ಲ. ಬಸವ ತತ್ವದಿಂದ ಅಸಮಾನತೆ ಕಳೆದು ಮಾನವೀಯ ಮೌಲ್ಯ ಜಾಗೃತವಾಗುತ್ತದೆ. ಬಸವಣ್ಣ ಮನುಕುಲದ ಶಕ್ತಿಯಾಗಿದ್ದಾರೆ. ಅನುಭವ ಮಂಟಪ ಸ್ಥಾಪಿಸಿ ಶೋಷಿತ ಸಮಾಜಗಳಿಗೆ ಮನ್ನಣೆ ನೀಡಿದ ಸಮಾಜ ಸುಧಾರಕ. ವಚನಗಳ ಮೂಲಕ ಸಮಾಜದ ಅಂಕುಡೊಂಕು ತಿದ್ದುವ ಪ್ರಾಮಾಣಿಕ ಪ್ರಯತ್ನ ಶರಣರ ಕಾಲದಲ್ಲಿ ನಡೆದಿದ್ದು, ಶರಣರ ಚಿಂತನೆಗಳನ್ನು ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಂಡ ಜೀವನ ಸಾಗಿಸಬೇಕು ಎಂದು ಸಲಹೆ ನೀಡಿದರು.

ಮಾಜಿ ಶಾಸಕ ಅಶೋಕ ಖೇಣಿ ಮಾತನಾಡಿ, 12ನೇ ಶತಮಾನದಲ್ಲೇ ಸಾಮಾಜಿಕ ಕ್ರಾಂತಿ ನಡೆಸಿದ ಮಹಾನ್‌ ದಾರ್ಶನಿಕ ಬಸವಣ್ಣನವರ ತತ್ವಾದರ್ಶ ಎಲ್ಲ ಕಾಲಕ್ಕೂ ಅನುಕರಣೀಯ. ಬಸವಣ್ಣನವರ ವಿಚಾರಗಳು ಅನುಭವದಿಂದ ಕೂಡಿದ್ದು, ವಾಸ್ತವಿಕತೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಬಸವ ಸಿದ್ಧಾಂತ ಅರಿತು ಅನುಸರಿಸಿದಲ್ಲಿ ಬದುಕು ಹಸನಾಗುವುದರಲ್ಲಿ ಸಂಶಯವೇ ಇಲ್ಲ. ಬಸವಾದಿ ಪ್ರಥಮರು ರಚಿಸಿದ ವಚನ ಸಾಹಿತ್ಯ ಮಾನವೀಯ ಮೌಲ್ಯಗಳನ್ನು ಒಳಗೊಂಡಿದೆ ಎಂದು ಹೇಳಿದರು.

ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಮಾತನಾಡಿ, ಶರಣರ ತತ್ವಗಳನ್ನು ಪ್ರತಿಯೊಬ್ಬರು ಅರ್ಥೈಸಿಕೊಳ್ಳಬೇಕಾಗಿದೆ. ಬಸವ ತತ್ವದಿಂದ ಮಾತ್ರ ಸಮಾನತೆ, ಜಾತ್ಯತೀತ ಮನೋಭಾವ ರೂಪಿಸಿಕೊಳ್ಳಲು ಸಾಧ್ಯ ಎಂದರು. ಬಹುದಿನಗಳಿಂದ ಬಸವೇಶ್ವರ ಮೂರ್ತಿ ಅನಾವರಣ ಕುರಿತು ಚರ್ಚೆ ನಡೆಯುತ್ತಿತ್ತು. ಆದರೆ, ಇದೀಗ ಅಶೋಕ ಖೇಣಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆದಿರುವುದು ಸಂತಸ ತಂದಿದೆ ಎಂದರು.

Advertisement

ಬಾವಗಿ ಬಸವ ಜಯಂತಿ ಉತ್ಸವ ಸಮಿತಿಯ ಗೌರವಾಧ್ಯಕ್ಷ ಲೋಕೇಶ ಕನ್ನಶೆಟ್ಟಿ, ಗುಂಡಯ್ಯ ಸ್ವಾಮಿ, ಅನೀಲ ಹಜ್ಜರಗಿ, ಅನೀಲಕುಮಾರ ಪನ್ನಾಳೆ, ರಾಜಕುಮಾರ ಪಸಾರ, ಚನ್ನಮಲ್ಲಪ್ಪಾ ಹಜ್ಜರಗಿ, ಚಂದ್ರಶೇಖರ, ತಾಜೋದ್ದೀನ್‌ ಬಾವಗಿ, ಅರವಿಂದ ಕುಲಕರ್ಣಿ, ವೈಜನಾಥ ಸಜ್ಜನಶೆಟ್ಟಿ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next