Advertisement

ಕಸ ಚೆಲ್ಲುವಲ್ಲಿ ರಂಗೋಲಿ ಬಿಡಿಸಿ ಜಾಗೃತಿ

11:45 AM Dec 14, 2019 | Naveen |

„ಶಶಿಕಾಂತ ಬಂಬುಳಗೆ
ಬೀದರ:
“ಸ್ವಚ್ಛ ಮತ್ತು ಸುಂದರ’ ಬೀದರ ನಗರಕ್ಕಾಗಿ ಪಣ ತೊಟ್ಟಿರುವ ನಗರಸಭೆ ಇಲ್ಲಿನ ರಸ್ತೆಬದಿಗಳಲ್ಲಿ ಕಸ ಹಾಕುವುದನ್ನು ತಡೆಗಟ್ಟಲು ವಿನೂತನ ಪ್ರಯತ್ನಕ್ಕೆ ಮುಂದಾಗಿದೆ. ಕಸ ಹಾಕುವ ಸ್ಥಳವನ್ನು ಸ್ವಚ್ಛಗೊಳಿಸಿ, ಅಲ್ಲಿ ರಂಗೋಲಿ ಬಿಡಿಸುವ ಮೂಲಕ ಜಾಗೃತಿಗೆ ಮುಂದಾಗಿದೆ.

Advertisement

ದಿನ ನಿತ್ಯ ರಸ್ತೆಗಳನ್ನು ಶುಚಿಗೊಳಿಸುವ ಕಾಯಕದಲ್ಲಿ ತೊಡಗುವ ಪೌರ ಕಾರ್ಮಿಕರು ಗುರುವಾರದಿಂದ ಬಣ್ಣ ಬಣ್ಣದ ರಂಗೋಲಿಯ ಚಿತ್ತಾರ ಬಿಡಿಸುತ್ತಿದ್ದಾರೆ. ಇದಕ್ಕೆ ಮಹಿಳಾ ಸಿಬ್ಬಂದಿ ಸಾಥ್‌ ನೀಡುತ್ತಿದ್ದಾರೆ. ದಿನಕ್ಕೊಂದು ವಾರ್ಡ್‌ನಲ್ಲಿ ಈ ಜಾಗೃತಿ ಕಾರ್ಯ ನಡೆಸುತ್ತಿದ್ದಾರೆ. ತ್ಯಾಜ್ಯ ಎಸೆಯೋ ಮುನ್ನ ಒಮ್ಮೆ ಈ ರಂಗೋಲಿನಾದ್ರು ನೋಡ್ರಪ್ಪಾ, ನಿಮಗೆ ಕಸ ಬಿಸಾಡುವ ಮನಸ್ಸು ಆಗುವುದಿಲ್ಲ ಎಂದು ಹೇಳುತ್ತಾ ನಿತ್ಯ ತ್ಯಾಜ್ಯ ಎಸೆಯುವ ಜಾಗದಲ್ಲಿ ರಂಗೋಲಿ ಬಿಡಿಸಿ ಅರಿವು ಮೂಡಿಸುತ್ತಿದ್ದಾರೆ.

ನಗರದ ಕೆಇಬಿ ರಸ್ತೆಯ ಬಳಿ ಗುರುವಾರ ವಿನೂತನ ಪ್ರಯೋಗ ಮಾಡಿದ್ದ ನಗರಸಭೆ ಶುಕ್ರವಾರ ಇಲ್ಲಿನ ಜನವಾಡಾ ರಸ್ತೆಯಲ್ಲಿ ಕೈಗೊಂಡಿದೆ. ಕಸ ಚೆಲ್ಲುವ ಗಲ್ಲಿ ಜಾಗದಲ್ಲಿ ರಂಗೋಲಿ ಬಿಡಿಸಿ ಸುತ್ತಮುತ್ತಲಿನ ಮನೆಗಳಲ್ಲಿ ಜಾಗೃತಿ ಮೂಡಿಸಿದ್ದಾರೆ. ತಾಜ್ಯದಿಂದ ನೈರ್ಮಲ್ಯ ವ್ಯವಸ್ಥೆ ಹದಗೆಡುವುದುರ ಜತೆಗೆ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಕಸವನ್ನು ನಗರಸಭೆ ವಾಹನದಲ್ಲಿ ಹಾಕಿ, ನಿಮ್ಮ ಸುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಿ ಎಂದು ತಿಳಿ ಹೇಳಿದ್ದಾರೆ.

ಕಾರ್ಮಿಕರು-ನಿರೀಕ್ಷಕರಿಗೆ ಸನ್ಮಾನ: ನಗರಸಭೆಯ ವಿನೂತನ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಅಲ್ಲಿನ ಸ್ಥಳೀಯ ಜನರು ಆರೋಗ್ಯ ನಿರೀಕ್ಷಕರು ಮತ್ತು ಪೌರ ಕಾರ್ಮಿಕರಿಗೆ ಹೂ ಹಾರ ಹಾಕಿ ಕೃತಜ್ಞತೆ ಸಲ್ಲಿಸಿದ್ದಾರೆ. ಇನ್ನುಮುಂದೆ ರಸ್ತೆ ಬದಿಗಳಲ್ಲಿ ಕಸವನ್ನು ಹಾಕುವುದಿಲ್ಲ ಎಂದು ಭರವಸೆ ಕೊಟ್ಟಿದ್ದಾರೆ.

ಕಸದ ರಾಶಿಯಿಂದಾಗಿ ಸದಾ ಗಬ್ಬು ನಾರುತ್ತಿದ್ದ ಪ್ರದೇಶಗಳಲ್ಲಿ ಜನ ಮೂಗು ಮುಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ಇತ್ತು. ಆದರೆ, ಗುರುವಾರ ನಗರಸಭೆಯ ವಿಶೇಷ ಕಾರ್ಯಕ್ರಮದಿಂದಾಗಿ ಈ ತಾಣಗಳ ಪರಿಸ್ಥಿತಿ ಕೊಂಚ ಬದಲಾಗಿತ್ತು. ಕಸ ಮಾಯವಾಗಿ ಅಲ್ಲಿ ಬಣ್ಣ ಬಣ್ಣದ ರಂಗೋಲಿ ಕಂಗೊಳಿಸುತ್ತಿತ್ತು. ಜನರಲ್ಲಿ ಪರಿಸರದ ಬಗೆಗೆ ಜಾಗೃತಗೊಂಡು, ನಗರಸಭೆ ಆರಂಭಿಸಿರುವ ವಿನೂತನ ಪ್ರಯತ್ನಕ್ಕೆ ಕೈಜೋಡಿಸಬೇಕಿದೆ. ಆಗ ಮಾತ್ರ ಮತ್ತೆ ಸ್ವಚ್ಛ ಬೀದರರನ್ನಾಗಿ ಕಾಣಲು ಸಾಧ್ಯವಿದೆ.

Advertisement

ಸ್ವಚ್ಛ ಬೀದರಗೆ ಅಪಖ್ಯಾತಿ
ಪ್ರವಾಸೋದ್ಯಮ ನಗರಿ ಬೀದರ ಈ ಹಿಂದೆ ಭಾರತದ 22ನೇ ಸ್ವಚ್ಛ ನಗರ ಮತ್ತು ಕರ್ನಾಟಕ ರಾಜ್ಯದ 5ನೇ ಸ್ವಚ್ಛ ನಗರ ಎಂಬ ಹೆಗ್ಗಳಿಕೆ ಪಡೆದಿತ್ತು. ಆದರೆ, ನಂತರದ ದಿನಗಳಲ್ಲಿ ಎಲ್ಲೆಂದರಲ್ಲಿ ರಾಶಿ ರಾಶಿ ತ್ಯಾಜ್ಯ, ಅದರ ನಿರ್ವಹಣೆ ಕೊರತೆಯಿಂದಾಗಿ ಬೀದರ ಈಗ ಅಸ್ವಚ್ಚತೆ ನಗರ ಎಂಬ ಅಪಖ್ಯಾತಿಗೆ ಒಳಗಾಗಿದೆ. ಮುಖ್ಯ ರಸ್ತೆ ಮತ್ತು ಜನನಿಬಿಡ ರಸ್ತೆಗಳ ಬದಿಗಳಲ್ಲಿ ಸಾರ್ವಜನಿಕರು ತಮ್ಮ ಮನೆಗಳಲ್ಲಿನ ಕಸ ತಂದು ಎಲ್ಲೆಂದರಲ್ಲಿ ಬಿಸಾಡುತ್ತಾರೆ. ನಗರಸಭೆಯಿಂದ ಕಸ ಸಂಗ್ರಹಿಸಲು ವಾಹನಗಳ ಮನೆ ಬಾಗಿಲಿಗೆ ಬಂದರೂ ಜನ ಮಾತ್ರ ಕಸವನ್ನು ಬೀದಿಗೆ ಚಲ್ಲುತ್ತಾರೆ. ಇದರಿಂದ ಕಸದ ರಾಶಿಗಳು ತುಂಬಿ ದುರ್ವಾಸನೆ ಬೀರುತ್ತಿದೆ. ಹಾಗಾಗಿ ಇದೀಗ ನಗರಸಭೆ ಕಸಮುಕ್ತ ಬೀದರರನ್ನಾಗಿ ಮಾಡಲು ಗುರುವಾರದಿಂದ ರಸ್ತೆ ಬದಿಗಳಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟಿದೆ. ರಸ್ತೆ ಬದಿಗಳಲ್ಲಿ ತಾಜ್ಯ ಹಾಕುವ ಜಾಗಗಳನ್ನು ಗುರುತಿಸಿ ಅಲ್ಲಿನ ಕಸವನ್ನು ಸ್ವಚ್ಛ ಮಾಡಿ, ಸಾರ್ವಜನಿಕರು ಮತ್ತೆ ಕಸ ಸುರಿಯದಂತೆ ಜಾಗೃತಿ ಮೂಡಿಸಲು ಆ ಸ್ಥಳದಲ್ಲಿ ನಗರಸಭೆಯ ಪೌರಕಾರ್ಮಿಕರಿಂದಲೇ ರಂಗೋಲಿ ಹಾಕಿಸಿ ರಸ್ತೆಯನ್ನು ಸುಂದರಗೊಳಿಸಿ ಗಮನ ಸೆಳೆಯಲಾಗುತ್ತಿದೆ.

ತಾಜ್ಯ ನಿರ್ವಹಣೆ ನೀಗಿಸಲು ರಂಗೊಲಿ ಒಂದು ಹೊಸ ಅಸ್ತ್ರವಾಗಿದೆ. ಕಸದ ರಾಶಿಯನ್ನು ಪೌರ ಕಾರ್ಮಿಕರು ಎಷ್ಟೇ ಬಾರಿ ತೆರವು ಮಾಡಿದರೂ ಜನ ಮತ್ತೆ ಅಲ್ಲಿ ಕಸ ಹಾಕುತ್ತಾರೆ. ಆದರೆ, ಅದೇ ಜಾಗದಲ್ಲಿ ರಂಗೋಲಿ ಇದ್ದರೆ, ದೈವಿಕ ಭಾವನೆಯಿಂದಾದರೂ ಕಸ ಹಾಕಲು ಯಾರಿಗೂ ಮನಸ್ಸು ಬರುವುದಿಲ್ಲ. ಈ ಪ್ರಯತ್ನ ಕೆಲವು ದಿನ ಮುಂದುವರೆದರೆ ರಸ್ತೆ ಬದಿಗಳಲ್ಲಿ ಕಸದ ರಾಶಿ ಉಂಟಾಗುವುದು ತಪ್ಪಬಹುದು ಎಂಬುದು ನಗರಸಭೆ ಉದ್ದೇಶ.
ಬಿ. ಬಸಪ್ಪ,
ನಗರಸಭೆ ಆಯುಕ್ತ, ಬೀದರ

Advertisement

Udayavani is now on Telegram. Click here to join our channel and stay updated with the latest news.

Next