Advertisement

ಕನಸುಗಳನ್ನು ಹೊತ್ತ ಭರತನಾಟ್ಯದ “ದಿವ್ಯ’ಪ್ರತಿಭೆ

01:02 AM Nov 23, 2019 | Team Udayavani |

ನೃತ್ಯವು ನನಗೆ ದೇವರಿದ್ದಂತೆ. ನಾನು ನೃತ್ಯವನ್ನು ಪೂಜಿಸುತ್ತೇನೆ. ಆಡುವ ನೂರಾರು ಮಾತುಗಳನ್ನು ಭಾವದ ಮೂಲಕ ನೋಡುಗರ ಮನಮುಟ್ಟುವಂತೆ ಮಾಡುವ ಅಪಾರ ಶಕ್ತಿ ನೃತ್ಯಕ್ಕಿದೆ. ನೃತ್ಯವೆಂಬ ಹೊಸ್ತಿಲಿಗೆ ಈಗಷ್ಟೇ ಅಂಬೆಗಾಲಿಡುತ್ತಿರುವ ನಾನು ಮುಂದೆ ಇದೇ ಕ್ಷೇತ್ರದಲ್ಲಿ ದೊಡ್ಡ ಸಾಧನೆಯನ್ನು ಮಾಡಬೇಕೆಂಬ ತುಡಿತದಲ್ಲಿದ್ದೇನೆ ಎನ್ನುತ್ತಲೇ ಮಾತಿಗಿಳಿಯುವ ದಿವ್ಯಾ, ನೃತ್ಯಲೋಕದ ಹಲವಾರು ಕನಸುಗಳನ್ನು ತುಂಬಿಕೊಂಡು ಪ್ರಯತ್ನಪಡುತ್ತಿರುವ ಅರಳು ಪ್ರತಿಭೆ.

Advertisement

ಸ್ಪೆಶಲ್‌ ಅವಾರ್ಡ್‌
ತನ್ನ 5ನೇ ವಯಸ್ಸಿನಲ್ಲಿ ನೃತ್ಯಾಭ್ಯಾಸದಲ್ಲಿ ತೊಡಗಿಸಿಕೊಂಡ ಅವರು ಮೂಲತಃ ಕಾಸರಗೋಡಿನ ಬದಿಯಡ್ಕ ನಿವಾಸಿ. ನೃತ್ಯದಲ್ಲಿ ಗಂಗೂಬಾಯಿ ಹಾನಗಲ್‌ ಫೌಂಡೇಷನ್‌ ವತಿಯಿಂದ “ಸ್ಪೆಶಲ್‌ ಅವಾರ್ಡ್‌’ ಪಡೆದುಕೊಂಡ ಗರಿಮೆ ಇವರದು. ಹಲವಾರು ನೃತ್ಯ ಕಾರ್ಯಕ್ರಮಗಳಲ್ಲಿ ಹಾಗೂ ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ನೂರಕ್ಕೂ ಹೆಚ್ಚು ಬಹುಮಾನಗಳನ್ನು ತಮ್ಮದಾಗಿಸಿ ಕೊಂಡಿದ್ದಾರೆ.

ಬಹುಮುಖ ಪ್ರತಿಭೆಯಾದ ಅವರು ಕಲಿಕೆಯಲ್ಲೂ ಪ್ರತಿಭಾವಂತ ವಿದ್ಯಾರ್ಥಿನಿ. ಇದರ ಜತೆಗೆ ಸಂಗೀತದ ಆಸಕ್ತಿ ಅವರನ್ನು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಜೂನಿಯರ್‌ ಗ್ರೇಡ್‌ ಪಡೆಯುವ ವರೆಗೂ ಕೊಂಡೊಯ್ದಿದೆ. ಚಿತ್ರಕಲೆಯಲ್ಲೂ ತುಂಬಾ ಆಸಕ್ತಿಯಿದೆ. ಪೆನ್ಸಿಲ್‌ ಸ್ಕೆಚ್‌, ಕಲರ್‌ ಪೈಂಟಿಂಗ್‌ನಲ್ಲಿ ಪ್ರಕೃತಿಯ ಮನ ಸೆಳೆಯುವ ದೃಶ್ಯಗಳಿಗೆ ಅವರು ಬಣ್ಣ ತುಂಬುತ್ತಾರೆ. ಚಿತ್ರಕಲೆಯಲ್ಲಿಯೂ ರಾಜ್ಯಮಟ್ಟದ ಬಹುಮಾನವನ್ನು ಗಳಿಸಿದ್ದಾರೆ. ವೇದಿಕೆಯಲ್ಲಿ ನಿರರ್ಗಳವಾಗಿ ಮಾತನಾಡಬಲ್ಲ ಚಾಕಚಕ್ಯತೆ ಹೊಂದಿರುವ ಅವರು, ಹಲವಾರು ಚರ್ಚಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದುಕೊಂಡಿದ್ದಾರೆ. “ಉತ್ತಮ ವಾಗ್ಮಿ’ ಎಂಬ ಬಿರುದನ್ನು ಗಳಿಸಿಕೊಂಡಿದ್ದಾರೆ.

ಉತ್ತಮ ವಿದ್ಯಾರ್ಥಿನಿ
ಹೀಗೆ ಹಲವಾರು ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ದಿವ್ಯಾ ಅವರು ಆಸಕ್ತಿ ಹಾಗೂ ಮನಸ್ಸೊಂದಿದ್ದರೆ ಏನನ್ನೂ ಸಾಧಿಸಬಹುದು ಎಂಬುದಕ್ಕೆ ಮಾದರಿಯಾಗಿದ್ದಾರೆ. ಹುಬ್ಬಳ್ಳಿಯ ಜಗದ್ಗುರು ಗಂಗಾಧರ ಕಾಲೇಜಿನಲ್ಲಿ ತಮ್ಮ ಪದವಿ ಶಿಕ್ಷಣವನ್ನು ಉತ್ತಮ ಫ‌ಲಿತಾಂಶಗಳೊಂದಿಗೆ ಪೂರ್ತಿಗೊಳಿಸುವುದರ ಜತೆಗೆ ಕಾಲೇಜಿನ “ಉತ್ತಮ ವಿದ್ಯಾರ್ಥಿನಿ’ ಎಂಬ ಬಿರುದಿಗೆ ಪಾತ್ರರಾಗಿದ್ದಾರೆ. ಸ್ನಾತಕೋತ್ತರ ಪದವಿಗೆ ಕಾಲಿಟ್ಟ ದಿವ್ಯಾ ಅವರು ಧಾರವಾಡದ ಜೆ.ಎಸ್‌.ಎಸ್‌. ಕಾಲೇಜಿನಲ್ಲಿ ಪ್ರಥಮ ವರ್ಷದ ವಾಣಿಜ್ಯ ವಿಭಾಗದಲ್ಲಿ ಎಂ.ಕಾಂ. ಓದುತ್ತಿದ್ದಾರೆ. ಪ್ರಸ್ತುತ ಹುಬ್ಬಳ್ಳಿಯ ವೆಂಕಟೇಶ್ವರ ನಗರದಲ್ಲಿ ವಾಸವಾಗಿದ್ದಾರೆ. ಸುಬ್ರಹ್ಮಣ್ಯ ಭಟ್‌ ಹಾಗೂ ಸುಲೋಚನಾ ಎಸ್‌. ಭಟ್‌ ದಂಪತಿಯ ಪುತ್ರಿ ದಿವ್ಯಾ ಮುಂದೆ ಭರತನಾಟ್ಯ ಶಾಲೆಯೊಂದನ್ನು ಆರಂಭಿಸಿ ತಾನು ಕಲಿತಂತಹ ಕಲೆಯನ್ನು ಇನ್ನೂ ನಾಲ್ಕು ಮಂದಿಗೆ ಧಾರೆಯರೆಯಬೇಕೆಂಬ ಹಂಬಲ ವನ್ನಿಟ್ಟುಕೊಂಡಿದ್ದಾರೆ.

ಈ ಅಪೂರ್ವ ಕಲೆಯೊಂದಿಗೆ ಈಕೆಗೆ ಪ್ರಾಣಿಗಳೆಂದರೆ ಅಚ್ಚುಮೆಚ್ಚು. ಅವುಗಳಿಗೆ ತನ್ನ ಕೈಲಾದಷ್ಟು ಒಳಿತು ಮಾಡಬೇಕೆಂಬ ಆಸೆಯೂ ಇದೆ. ಇಂತಹಾ ಬಹುಮುಖ ಪ್ರತಿಭೆ ದಿವ್ಯಾ ಅವರ ಕನಸುಗಳೆಲ್ಲವು ನನಸಾಗಲಿ ಹಾಗೂ ಅವರ ಕೀರ್ತಿ ಎಲ್ಲೆಲ್ಲೂ ಹರಡಲಿ ಎಂದು ಹಾರೈಸೋಣ.

Advertisement

ವಿದ್ವತ್‌ ಪರೀಕ್ಷೆಯಲ್ಲೂ ಸೈ
ಹುಬ್ಬಳ್ಳಿಯ ನಾಟ್ಯಾಂಜಲಿ ಕಲಾಮಂದಿರ ನೃತ್ಯ ಶಾಲೆಯಲ್ಲಿ ಗುರುಗಳಾದ ವಿದುಷಿ ವನಿತಾ ಮಹಾಲೆಯವರ ಬಳಿ ನೃತ್ಯಾಭ್ಯಾಸವನ್ನು ಮಾಡುತ್ತಿದ್ದು, ಭರತನಾಟ್ಯದ ಜೂನಿಯರ್‌ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ, ಹುಬ್ಬಳ್ಳಿ – ಧಾರವಾಡ ಕೇಂದ್ರಕ್ಕೆ ದ್ವಿತೀಯ ಸ್ಥಾನವನ್ನೂ ಮತ್ತು ಭರತನಾಟ್ಯ ಸೀನಿಯರ್‌ ಪರೀಕ್ಷೆಯಲ್ಲಿ ಹುಬ್ಬಳ್ಳಿ – ಧಾರವಾಡ ಕೇಂದ್ರಕ್ಕೆ ತೃತೀಯ ಸ್ಥಾನವನ್ನೂ ಪಡೆದು ಉತ್ತಮ ಅಂಕಗಳೊಂದಿಗೆ ಉತ್ತೀರ್ಣಗೊಂಡಿದ್ದಾರೆ. 2018-19ರ ಸಾಲಿನಲ್ಲಿ ನಡೆದ ಪೂರ್ವ ಹಂತದ ವಿದ್ವತ್‌ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಪ್ರಸ್ತುತ ಭರತನಾಟ್ಯದ ಮುಂದಿನ ಹಂತವಾದ ಅಂತಿಮ ವಿದ್ವತ್‌ ಪರೀಕ್ಷೆಯ ತಯಾರಿಯಲ್ಲಿ ತೊಡಗಿದ್ದಾರೆ.

-  ಪಲ್ಲವಿ ಕೋಂಬ್ರಾಜೆ, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next