Advertisement

ದಲಿತ ಪ್ರತಿಭಟನೆ: ಆದೇಶ ಪುನರ್‌ ವಿಮರ್ಶೆಗೆ ಸುಪ್ರೀಂ ಸಮ್ಮತಿ

11:17 AM Apr 03, 2018 | udayavani editorial |

ಹೊಸದಿಲ್ಲಿ : ನಿನ್ನೆ ಸೋಮವಾರ ನಡೆದಿದ್ದ ಭಾರತ್‌ ಬಂದ್‌ ಹಿಂಸಾತ್ಮಕ ಪ್ರತಿಭಟನೆಯಲ್ಲಿ ದೇಶಾದ್ಯಂತ 10 ಮಂದಿ ಬಲಿಯಾಗಿ ಪೊಲೀಸರ ಸಹಿತ 65 ಮಂದಿ ಗಾಯಗೊಂಡ ಬಳಿಕ ಎಚ್ಚೆತ್ತುಕೊಂಡ ಸರ್ವೋಚ್ಚ ನ್ಯಾಯಾಲಯ ಇಂದು ಮಂಗಳವಾರ ಕೇಂದ್ರ ಸರಕಾರ ಸಲ್ಲಿಸಿರುವ ಎಸ್‌ಸಿ/ಎಸ್‌ಟಿ ಕಾಯಿದೆಯ ಮೇಲಿನ ತನ್ನ ಆದೇಶದ ಪುನರ್‌ ವಿಮರ್ಶೆ ಕೋರಿಕೆಯ ಅರ್ಜಿಯ ವಿಚಾರಣೆಯನ್ನು ಕೈಗತ್ತಿಕೊಳ್ಳಲು ಒಪ್ಪಿಕೊಂಡಿದೆ. ಹಿಂಸಾತ್ಮಕ ಭಾರತ್‌ ಬಂದ್‌ನಿಂದಾಗಿ ದೇಶದಲ್ಲಿ ತುರ್ತು ಪರಿಸ್ಥಿತಿಯಂತಹ ಸನ್ನಿವೇಶ ತಲೆದೋರಿದೆ ಎಂದು ಅಟಾರ್ನಿ ಜನರಲ್‌ ಅವರು ಇಂದು ಸುಪ್ರೀಂ ಕೋರ್ಟಿಗೆ ತಿಳಿಸಿದರು. 

Advertisement

ಸುಪ್ರೀಂ ಕೋರ್ಟ್‌ ತೀರ್ಪಿನ ಪರಿಣಾಮವಾಗಿ ಎಸ್‌ಸಿ/ಎಸ್‌ಟಿ ಕಾಯಿದೆ ದುರ್ಬಲಗೊಂಡದ್ದನ್ನು ಪ್ರತಿಭಟಿಸಿ ನಿನ್ನೆ ನಡೆದಿದ್ದ ಭಾರತ ಬಂದ್‌  ವೇಳೆ ಉದ್ರಿಕ್ತ ಪ್ರತಿಭಟನಕಾರರು ಪಂಜಾಬ್‌, ಉತ್ತರ ಪ್ರದೇಶ, ಬಿಹಾರ ಗುಜರಾತ್‌, ಮಧ್ಯಪ್ರದೇಶ, ಜಾರ್ಖಂಡ್‌, ಉತ್ತರಾಖಂಡ ಮತ್ತು ಒಡಿಶಾದಲ್ಲಿ ರೈಲು ಹಳಿಗಳ ಮೇಲೆ ಮತ್ತು ರಸ್ತೆಗಳ ಮೇಲೆ ಧರಣಿ ಕುಳಿತು ರೈಲು ಮತ್ತು ಸಾರಿಗೆ ಸಂಚಾರವನ್ನು ತಡೆದಿದ್ದರು. ಹಲವಾರು ವಾಹನಗಳಿಗೆ ಬೆಂಕಿ ಕೊಟ್ಟಿದ್ದರು; ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದ್ದರು ಮತ್ತು ಪೊಲೀಸರ ಮೇಲೆ ಕಲ್ಲೆಸೆದು ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದರು. 

ಇಂದು ಕೂಡ ದೇಶದ ವಿವಿಧೆಡೆ ಪ್ರತಿಭಟನಕಾರರಿಂದ ಪ್ರತಿಭಟನೆ ಮುಂದುವರಿದಿದ್ದು ಅಲ್ಲಲ್ಲಿ ಗಲಭೆ, ಹಿಂಸೆ, ಕಲ್ಲೆಸತೆ, ವಾಹನಗಳಿಗೆ ಬೆಂಕಿ, ರಾಸ್ತಾ ರೋಕೋ ಮುಂತಾಗಿ ವಿವಿಧ ಬಗೆಯಲ್ಲಿ ಅಕ್ರೋಶ ವ್ಯಕ್ತವಾಗುತ್ತಿದೆ. 

ಕಳೆದ ಮಾರ್ಚ್‌ 20ರಂದು ಸರ್ವೋಚ್ಚ ನ್ಯಾಯಾಲಯ ಪ್ರಾಮಾಣಿಕ ಸರಕಾರಿ ಅಧಿಕಾರಿಗಳಿಗೆ ತಮ್ಮ ಕರ್ತವ್ಯಗಳನ್ನು ನಿರ್ಭಯದಿಂದ ನಿರ್ವಹಿಸಲು ಮತ್ತು ಬ್ಲಾಕ್‌ ಮೇಲ್‌ಗೆ ಗುರಿಯಾಗುವುದನ್ನು ತಪ್ಪಿಸಲು ಎಸ್‌ಸಿ/ಎಸ್‌ಟಿ ಕಾಯಿದೆಯ ಕಾಠಿನ್ಯವನ್ನು ಕಡಿಮೆ ಮಾಡುವ ಆದೇಶವನ್ನು ಪ್ರಕಟಿಸಿತ್ತು. ಇದರಿಂದಾಗಿ ಕಾಯಿದೆಯು ದುರ್ಬಲವಾಯಿತೆಂಬುದು ಮತ್ತು ತಮ್ಮ ವಿರುದ್ಧದ ತಾರತಮ್ಯಕ್ಕೆ ಅನುಕೂಲವಾಯಿತೆಂಬುದು ದಲಿತರ ಆರೋಪವಾಗಿದ್ದು ಅಂತೆಯೇ ಪ್ರತಿಭಟನೆ ನಡೆಸಲು ನಿನ್ನೆ ಮಂಗಳವಾರ ಭಾರತ್‌ ಬಂದ್‌ ನಡೆಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next