Advertisement

ಜೋಗ ಪ್ಲಾಸ್ಟಿಕ್‌ ಮುಕ್ತ ವಲಯ: ಡಿಸಿ ಘೋಷಣೆ

07:23 PM Mar 19, 2020 | Naveen |

ಸಾಗರ: ತಾಲೂಕಿನ ವಿಶ್ವವಿಖ್ಯಾತ ಜೋಗ ಜಲಪಾತ ಪ್ರದೇಶವನ್ನು ಸಂಪೂರ್ಣ ಪ್ಲಾಸ್ಟಿಕ್‌ ಮುಕ್ತ ವಲಯವಾಗಿ ಘೋಷಣೆ ಮಾಡಲು ಜೋಗ ನಿರ್ವಹಣಾ ಪ್ರಾಧಿಕಾರ ಮಹತ್ವದ ನಿರ್ಣಯ ಕೈಗೊಂಡಿದೆ ಎಂದು ಕಾರ್ಯದರ್ಶಿ ಮತ್ತು ಜಿಲ್ಲಾ ಧಿಕಾರಿ ಕೆ.ಬಿ. ಶಿವಕುಮಾರ್‌ ತಿಳಿಸಿದರು.

Advertisement

ತಾಲೂಕಿನ ಜೋಗದ ಲೋಕೋಪಯೋಗಿ ಇಲಾಖೆಯ ನಿರೀಕ್ಷಣಾ ಗೃಹದಲ್ಲಿ ನಡೆದ ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಅವರು, ಪ್ರಕೃತಿದತ್ತವಾದ ಹಸಿರು ಸೌಂದರ್ಯವನ್ನು ಉಳಿಸುವಲ್ಲಿ ಪ್ಲಾಸ್ಟಿಕ್‌ ಮುಕ್ತ ಪರಿಸರ ನಿರ್ಮಾಣ ಮಾಡಬೇಕಾದ ಅನಿವಾರ್ಯತೆ ಇದೆ ಎಂದರು.

ಸೀತಾಕಟ್ಟೆ ಸೇತುವೆಯಿಂದ ಪ್ರಾಧಿಕಾರದ ಪ್ರಮುಖ ದ್ವಾರದವರೆಗೆ ಅತ್ಯಾಧುನಿಕ ಮಾದರಿಯ ಬೀದಿ ದೀಪಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು. ರಸ್ತೆಯ ಇಕ್ಕೆಲಗಳಲ್ಲಿ ಇಂಟರ್‌ ಲಾಕ್‌ ಅಳವಡಿಸಿ ರಸ್ತೆ ಅಭಿವೃದ್ಧಿಪಡಿಸಲಾಗುವುದು. ರಾಣಿ ಜಲಪಾತದ ನೆತ್ತಿಯ ಮೇಲಿನ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಪಾರ್ಕಿಂಗ್‌ ಲಾಟ್‌ ಗೆ ಕಾಯಕಲ್ಪ ನೀಡಿ, ಪ್ರವಾಸಿ ವಾಹನಗಳ ನಿಲುಗಡೆ ವ್ಯವಸ್ಥೆಗೆ ಪೂರಕ ವಾತಾವರಣವನ್ನು ಪ್ರಸಕ್ತ ಮುಂಗಾರಿನ ಆಗಮನದ ಒಳಗೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ತ್ಯಾಜ್ಯಗಳ ನಿರ್ವಹಣೆ ಮತ್ತು ಸ್ವಚ್ಛತೆಗಾಗಿ ಅಲ್ಲಲ್ಲಿ ಇರಿಸಿರುವ ಕಸದ ಬುಟ್ಟಿಗಳಿಂದ ಮಂಗಗಳು ಆಹಾರ ಪದಾರ್ಥಗಳನ್ನು ಹುಡುಕಿ ಹೊರಹಾಕುವ ಸಂದರ್ಭದಲ್ಲಿ ಕಸ ಕಡ್ಡಿಗಳು ಎಲ್ಲೆಡೆ ಹರಡಿ ಜಲಪಾತ ಪ್ರದೇಶದ ಸ್ವಚ್ಛತೆಗೆ ತುಂಬಾ ತೊಡಕನ್ನು ಉಂಟು ಮಾಡುತ್ತಿವೆ. ಇದನ್ನು ತಡೆಯುವ ನಿಟ್ಟಿನಲ್ಲಿ ಕಸದ ಡಬ್ಬಿಗಳಿಗೆ ಕಬ್ಬಿಣದ ಮುಳ್ಳಿನ ಹೊದಿಕೆಗಳನ್ನು ಅಳವಡಿಸಿ ಮಂಗಗಳನ್ನು ನಿಯಂತ್ರಿಸಲು ಸಾಧ್ಯವೇ ಎಂದು ಪ್ರಾಯೋಗಿಕವಾಗಿ ಯೋಜನೆ ರೂಪಿಸಲಾಗುವುದು ಎಂದರು.

ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಮೀಸಲಿಡುವ ಅನುದಾನಗಳಿಗೆ ಪೂರಕವಾಗಿ ಜೋಗದ ಸಮಗ್ರ ಅಭಿವೃದ್ಧಿಗೆ 60 ಕೋಟಿ ರೂ. ವಿಸ್ತೃತ ಯೋಜನೆಯನ್ನು ಜಿಎನ್‌ ಆರ್ಕಿಟೆಕ್ಟ್ ಸಂಸ್ಥೆಯವರು ಸಿದ್ಧಪಡಿಸುತ್ತಿದ್ದು, ಆದ್ಯತೆಯ ಮೇರೆಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು
ಎಂದು ತಿಳಿಸಿದರು.

Advertisement

ಸಹಾಯಕ ಆಯುಕ್ತ ನಾಗರಾಜ್‌ ನಾಯ್ಕ, ತಹಶೀಲ್ದಾರ್‌ ಚಂದ್ರಶೇಖರ್‌ ನಾಯ್ಕ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ರಾಮಕೃಷ್ಣ, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ ದಿನೇಶ್‌, ಕೆಪಿಸಿ, ಅರಣ್ಯ, ಪೊಲೀಸ್‌, ಪಪಂ, ಮೆಸ್ಕಾಂ, ನಿರ್ಮಿತಿ ಕೇಂದ್ರ ಮತ್ತು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next