Advertisement

ಸಿಲ್ಕಿನ ನವಿರಾದ ಬಟ್ಟೆಯಲ್ಲಿ ಸುತ್ತಿ ಕಟ್ಟಿಟ್ಟ ಭಾಗವತ

10:01 AM Jan 13, 2020 | mahesh |

ನಿಜಜೀವನದ ಘಟನೆಗಳು, ಸಂಬಂಧಗಳು, ಸಂದಿಗ್ಧಗಳು- ಕತೆಗಾರರಿಗೆ ಕಥಾವಸ್ತುಗಳಾಗುತ್ತವೆ. ಕತೆ ಬರೆಯುವಾಗ ಕೃತಿಮ- ಅಸಹಜವೆನ್ನಿಸುವಂತಹ ಸನ್ನಿವೇಶಗಳು ಬಾರದಂತೆ ಪ್ರಯತ್ನಿಸುವುದು ಸಾಮಾನ್ಯ. ಕತೆಗೊಂದು ಅರ್ಥ, ಅಲ್ಲೊಂದು ತರ್ಕ ಇರಬೇಕಾಗುತ್ತದೆ. ಆದರೆ, ಬದುಕಿನ ಘಟನೆಗಳಿಗಾದರೋ ಅಂತಹ ಯಾವ ಬಾಧ್ಯತೆಯೂ ಇರುವುದಿಲ್ಲ. ಬದುಕು ಹೋದಲ್ಲಿ ಕತೆ ಸಾಗುತ್ತಿರುತ್ತದೆ. ಹೀಗಾಗಿ, ಎಷ್ಟೋ ಸಲ- ಯಾವ ಕತೆಗಾರನ ಕೈವಾಡವಿಲ್ಲದೆ ಬದುಕಿನಲ್ಲಿ ಹುಟ್ಟಿಕೊಳ್ಳುವ ಕತೆಗಳು- “ಹೀಗೂ ಇದೆಯೇ?’ ಎಂದು ಮೂಗಿನ ಮೇಲೆ ಬೆರಳಿಡುವ ಹಾಗಿರುವುದುಂಟು. ವಾಸ್ತವವು ಕತೆಗಳಿಗಿಂತ ವಿಚಿತ್ರ- ಎಂಬ ಮಾತೇ ಇಂಗ್ಲಿಷ್‌ ಭಾಷೆಯಲ್ಲಿದೆ. ಕೆಲಸಮಯದ ಹಿಂದೆ, ನಮ್ಮ ಅತ್ತೆಯವರ ಅಕ್ಕನ ಮಗಳು ನಮ್ಮಲ್ಲಿಗೆ ಬಂದಾಗ ಹೇಳಿದ ಕತೆ “ಹೀಗೂ-ಇದೆಯೆ!’ ಎಂಬ ಮಾದರಿಯದು. ಯಾವುದೋ ಕೆಲಸಕ್ಕೆಂದು ಮುಂಬಯಿಗೆ ಬಂದಿದ್ದ ಅವರು ನಾಲ್ಕೈದು ದಿನ ನಮ್ಮಲ್ಲಿ ಉಳಿಯುವಂತಾಗಿತ್ತು. ವರ್ಗಾವಣೆಗಳಿಂದಾಗಿ ಬೇರೆ ಬೇರೆ ಕಡೆ ಇರುತ್ತಿದ್ದುದರಿಂದ ಈ ರೀತಿಯಲ್ಲಿ ಮಾತನಾಡಲು ಸಿಗದೆ ತುಂಬ ಸಮಯವಾಗಿತ್ತು. ಆರಾಮದ ಪಂಚಾತಿಕೆಯಲ್ಲಿ ಅನೇಕ ವಿಷಯಗಳು ಬಂದು ಹೋಗುತ್ತಿದ್ದು, ತಾವು ಹೈದರಾಬಾದಿನಲ್ಲಿ¨ªಾಗ ನಡೆದ ಘಟನಾವಳಿಗಳ ವೃತ್ತಾಂತವನ್ನು ಹೇಳತೊಡಗಿ ದ್ದರು. ಅವರು ಕತೆ ಹೇಳುವ ಶೈಲಿಯೂ ವಿಶಿಷ್ಟ. ಸ್ವತಃ ಯಾವ ಭಾವನೆಯನ್ನೂ ಅತಿಯಾಗಿ ವ್ಯಕ್ತಪಡಿ ಸದೆ ನಮ್ಮನ್ನು ಕತೆಯಲ್ಲಿ ಭಾಗಿಯಾಗುವಂತೆ ಮಾಡಿಬಿಡುತ್ತಿದ್ದರು.

Advertisement

ಬರಹದಲ್ಲಾಗಲಿ, ಮಾತಿನ ಮೂಲಕವೇ ಆಗಲಿ, ಕತೆಗಳ ಸ್ವಾರಸ್ಯ ಇರುವುದೇ ಅದನ್ನು ಹೇಳುವ ರೀತಿಯಲ್ಲಿ. ಕೆಲವರು ಕತೆ ಹೇಳತೊಡಗಿದರೆಂದರೆ ಅದರ ಓಘವು ಕೇಳುವವರನ್ನು ಮೋಡಿಗೊಳಗಾಗಿಸುತ್ತದೆ. ಬರಹ ಹುಟ್ಟುವ ಮೊದಲು, ಇಂದಿಗೆ ಮಹಾನ್‌ ಕೃತಿಗಳೆಂದು ನಾವು ಪರಿಗಣಿಸುವ ರಚನೆಗಳು ಇಂಥ ಮೌಖೀಕ ವಕ್ತಾರರ ಕೈಯ್ಯಲ್ಲೇ ಇರುತ್ತಿದ್ದವು. ಹೋಮರನ ಇಲಿಯಡ್‌, ಒಡಿಸ್ಸಿಗಳು ಇದಕ್ಕೆ ದೊಡ್ಡ ಉದಾಹರಣೆ. ಹೀಗೆ ಕತೆಗಳನ್ನು ನೆನಪಿಟ್ಟುಕೊಂಡು ಸ್ವಾರಸ್ಯವಾಗಿ ಹೇಳಬಲ್ಲ ಕಲೆ ಇರುವವರು ನಮ್ಮ ಬಂಧುಗಳಲ್ಲಿ ಪರಿಚಿತ ವಲಯಗಳಲ್ಲಿ ಇದ್ದೇ ಇರುತ್ತಾರೆ. ಧ್ವನಿ, ಅಭಿನಯ, ಸ್ವರದ ಏರಿಳಿತಗಳಿರುವ ಈ ಕತೆಗಳೆದುರು ಕಾಗದದಲ್ಲಿ ಮೂಡುವ ಕತೆಗಳು ಸಪ್ಪೆಯೆನಿಸುವುದಿದೆ.

“ನಾವು ಆಗ ನಮ್ಮ ಕಂಪೆನಿಯ ಕಾಲನಿಯಲ್ಲಿದ್ದೆವು. ಹಾಗಾಗಿ, ಎಲ್ಲರಿಗೂ ಒಬ್ಬರಿಗೊಬ್ಬರ ಪರಿಚಯವಿತ್ತು.ಒಮ್ಮೆ ಕಾಲನಿಯ ಒಂದು ಮನೆಯವರ ಮಗ ಅಕಾಸ್ಮಾತ್ತಾಗಿ ತೀರಿಹೋಗಿದ್ದ. ಹೊಟ್ಟೆಯ ಮಗನನ್ನು ಕಳೆದುಕೊಂಡ ದುಃಖದ ಆಳವನ್ನು ಅಳೆಯಲಿಕ್ಕೆ ಸಾಧ್ಯವಿದೆಯೆ? ಕಾಲೇಜು ಕಲಿಯುತ್ತಿದ್ದ ಮಗ, ಇಪ್ಪತ್ತು ವರ್ಷ ಆಗಿತ್ತಷ್ಟೆ. ಆ್ಯಕ್ಸಿಡೆಂಟಿನಲ್ಲಿ ಸತ್ತದ್ದು ಪಾಪ’- ಹೀಗೆ ಸುರುವಾಗಿತ್ತು ಅವರ ಕಥನ, ಆ ಮನೆಯವರ ಮುಗಿಯದ ಅಳಲು ಕಾಲನಿಯವರಿಗೆ ಸಹಿಸಲಾಗುತ್ತಿರಲಿಲ್ಲ. ನೆರೆಹೊರೆಯವರ ಅನುಕಂಪದ ಕಟ್ಟೆ ಒಡೆಯುವಷ್ಟಾಗಿತ್ತು. ಆಗ ನೆರೆಯಲ್ಲಿದ್ದವರೊಬ್ಬರು, ತಮ್ಮೊಡನೆ ಇದ್ದ ಒಂದು ಪುಸ್ತಕವನ್ನು ಆ ಮನೆಯವರಿಗೆ ತಂದು ಕೊಟ್ಟು , “ಇದನ್ನು ಓದಿದರೆ ಮಗನನ್ನು ಕಳಕೊಂಡ ನಿಮ್ಮ ಮನಸ್ಸಿಗೆ ಸ್ವಲ್ಪ ನೆಮ್ಮದಿ ಸಿಗಬಹುದು’ ಎಂದು ಸಲಹೆ ಕೊಟ್ಟರು.

ಸಿಲ್ಕಿನ ನವಿರಾದ ಬಟ್ಟೆಯಲ್ಲಿ ಸುತ್ತಿ ಕಟ್ಟಿಟ್ಟ ದಪ್ಪ ಪುಸ್ತಕ. ಅದನ್ನು ತಂದುಕೊಟ್ಟವರು ಒಬ್ಬ ಮುಸ್ಲಿಂ ಮಹನೀಯರು. ಕೊಟ್ಟ ಪುಸ್ತಕ ನೋಡಿದರೆ, ಭಾಗವತ ಪುರಾಣ! ಆ ಪುಸ್ತಕದ್ದೂ ಒಂದು ಕತೆ. ಭಾರತ ವಿಭಜನೆಯ ಸಮಯದ ಗಲಾಟೆಯಲ್ಲಿ ಅವರಿಗೆ ರಸ್ತೆ ಬದಿಯಲ್ಲಿ ಸಿಕ್ಕಿದ್ದಂತೆ. ಏನು ಮಾಡುವುದೆಂದು ತಿಳಿಯದೆ ತಮ್ಮ ಹತ್ತಿರವೇ ಜೋಪಾನವಾಗಿ ಇಟ್ಟುಕೊಂಡಿದ್ದರಂತೆ.

ಇನ್ನು ಪುಸ್ತಕ ತೆರೆದು ನೋಡಿದರೆ ಅದು ಪೂರ್ತಿ ಗುಜರಾಥಿಯಲ್ಲಿತ್ತು. ಆ ಮನೆಯವರೋ ತೆಲುಗಿನವರು. ಹಾಗಾಗಿ, ಅವರು ಯಾರಿಗೂ ಗುಜರಾಥಿ ಬರುತ್ತಿರಲಿಲ್ಲ. ಈ ಸಮಸ್ಯೆಯ ಸುಳಿವು ಸಿಗುತ್ತಲೇ, ನೆರೆಹೊರೆಯವರು ಗುಜರಾಥಿ ಓದಲು ಗೊತ್ತಿದ್ದವರಿಗಾಗಿ ಹುಡುಕಾಟ ನಡೆಸಿದರು. ಅಲ್ಲಿ ಇಲ್ಲಿ ವಿಚಾರಿಸುವಾಗ ಕಾಲನಿಯಲ್ಲೇ ಇದ್ದ ಒಬ್ಬ ನಡುವಯಸ್ಸಿನ ಪಾರ್ಸಿ ಹೆಂಗಸು ತನಗೆ ಗುಜರಾತಿ ಗೊತ್ತಿದೆ, ತಾನು ಅದನ್ನ ಓದಿ ಹೇಳುತ್ತೇನೆಂದು ಮುಂದೆ ಬಂದಳು. ಭಾಗವತ ಪುರಾಣವು ಒಂದು ದಿನದಲ್ಲಿ ಹೇಳಿ ಮುಗಿಸುವ ಕತೆಯಲ್ಲ ತಾನೇ. ಹಾಗಾಗಿ, ಪ್ರತೀ ದಿನ ಅದರ ಒಂದೊಂದು ಭಾಗವನ್ನು ಓದಿ ಹೇಳಲು ಸುರುಮಾಡಿದಳು. ಬರೀ ಓದುತ್ತ ಹೋಗುತ್ತಿರಲಿಲ್ಲ. ಓದಿ ಸಾರವತ್ತಾಗಿ ಅರ್ಥ ಬಿಡಿಸಿ ಹೇಳತೊಡಗಿದಳು.

Advertisement

ಈ ವಿಚಾರ ಗೊತ್ತಾಗಿ ಅಕ್ಕಪಕ್ಕದ ಕೆಲವರು ಬಂದು ಕುಳಿತು ಕೇಳಲು ಆರಂಭಿಸಿದರು. ಎಷ್ಟು ಚೆನ್ನಾಗಿ ವಿವರಿಸಿ ಹೇಳುತ್ತ ಇದ್ದಳೆಂದರೆ, ಬಾಯಿಯಿಂದ ಬಾಯಿಗೆ ವಿಷಯ ಹಬ್ಬಿ ಜನ ಬರುವುದು ಹೆಚ್ಚೆಚ್ಚಾಗಿ, ವಠಾರದ ಅಂಗಳದಲ್ಲಿ ಸಣ್ಣ ಚಪ್ಪರ ಹಾಕಿ ಭಾಗವತ ಪಠಣ ಮಾಡಬೇಕಾಯಿತು. ನಡುವೆ ಕೆಲವು ದಿನಗಳ ಮಟ್ಟಿಗೆ ಆ ಪಾರ್ಸಿ ಮಹಿಳೆಗೆ ಎಲ್ಲಿಗೋ ಹೋಗಬೇಕಾಗಿತ್ತು. ಆಗ ಬೇರೊಬ್ಬಳು ಗುಜರಾಥಿ ಗೊತ್ತಿದ್ದವಳು ಅದನ್ನು ಓದಿದಳು. ಆದರೆ, ಅದು ಯಾರಿಗೂ ಅಷ್ಟೊಂದು ಹಿಡಿಸದೆ, ಎಲ್ಲರೂ ಆ ಪಾರ್ಸಿ ಮಹಿಳೆ ಬರುವುದನ್ನೇ ಕಾದು ಕುಳಿತರು. ಪುಸ್ತಕ ಪೂರ್ತಿ ಓದಿ ಮುಗಿಸಿದ ಮೇಲೆ ಆ ತೆಲುಗು ಕುಟುಂಬದವರಿಂದ ಪೂಜೆ, ಸಮಾರಾಧನೆಗಳೂ ನಡೆದುವು. ಅದೇ ಚಪ್ಪರದಡಿ ಕಾಲನಿಯವರಿಗೆಲ್ಲ ಊಟವೂ ಆಯಿತು.

ಕೃಷ್ಣನ ಬಾಲಲೀಲೆ, ಪವಾಡಗಳೆಲ್ಲ ಬರುವಾಗ ಕಾಲನಿಯ ಮಕ್ಕಳೂ ಬಂದು ಕುಳಿತು ಕೇಳುತ್ತಿದ್ದರು. ಪುಸ್ತಕ ತಂದುಕೊಟ್ಟಿದ್ದ ಮುಸ್ಲಿಮ್‌ ಕುಟುಂಬದ ಮಕ್ಕಳೂ ಬರುತ್ತಿದ್ದರು. ಪಾರ್ಸಿ ಮಹಿಳೆ ರಂಗಾಗಿ ಕತೆ ಹೇಳುತ್ತಿದ್ದಳಲ್ಲ, ಮಕ್ಕಳಿಗೆಲ್ಲ ಖುಶಿಯೇ ಖುಶಿ. ಇದೆಲ್ಲ ಆಗಿ ಒಂದು ವರ್ಷ ಆಗಿದೆಯೋ ಇಲ್ಲವೋ, ಆ ಪಾರ್ಸಿ ಮಹಿಳೆ ಗರ್ಭಿಣಿಯಾದಳು. ಕಾಲನಿಯವರಿಗೆಲ್ಲ ನಂಬಲಾಗಲಿಲ್ಲ. ಆಕೆಗೆ ಮಕ್ಕಳಿರಲಿಲ್ಲ. ಮಕ್ಕಳಾಗುವ ಆಸೆಯನ್ನೇ ಬಿಟ್ಟಿದ್ದಳು. ಪ್ರಾಯ ನಲ್ವತ್ತೈದರ ಮೇಲಾಗಿತ್ತು. “ಮಗುವನ್ನ ನೋಡಲಿಕ್ಕೆ ನಾವೆಲ್ಲ ಹೋಗಿದ್ದೆವು. ಹೆರಿಗೆ ಸ್ವಲ್ಪ ಕಷ್ಟ ಆಯ್ತಂತೆ. ಹೆಣ್ಣು ಮಗು. ಮುದ್ದಾಗಿ ಬೊಂಬೆಯ ಹಾಗಿತ್ತು’ ಎಂದು ಅವರು ಕತೆಯನ್ನು ಮುಗಿಸಿದ್ದರು.

ಕೆಲವರು ಇದು ಭಾಗವತವನ್ನು ಓದಿ ಹೇಳಿದ ಪುಣ್ಯಫ‌ಲ ಎಂದರಂತೆ. ಮತ್ತೆ ಕೆಲವರು, ಹಲವು ಕಾಲ ಮಕ್ಕಳಾಗದ ಮಹಿಳೆಯರು ದತ್ತು ತೆಗೆದುಕೊಂಡು ಮಕ್ಕಳನ್ನು ಸಾಕುವಾಗ ಮಮತೆಯ ಸೆಲೆ ಉಕ್ಕಿ ಗರ್ಭಿಣಿಯರಾದ ಕೆಲವು ಘಟನೆಗಳಿಗೆ ಹೋಲಿಸಿ, ಭಾಗವತದಲ್ಲಿ ಕೃಷ್ಣನ ಬಾಲಲೀಲೆಗಳನ್ನು ಓದಿದಾಗ ಆ ಮಹಿಳೆಯಲ್ಲಿ ಮಮತೆಯ ಉತ್ಕಟ ಭಾವವುಂಟಾಗಿ, ಅದು ದೈಹಿಕ ಇಚ್ಛೆಯಾಗಿ ಪರಿವರ್ತಿತಗೊಂಡು ಆಕೆ ಗರ್ಭಿಣಿಯಾಗಿರಬಹುದೆಂಬ ವೈಜ್ಞಾನಿಕವೆನ್ನಬಹುದಾದ ಕಾರಣ ನೀಡಿದರಂತೆ.

ಅಂತೂ ಈ ಎಲ್ಲ ಘಟನಾವಳಿಗಳಿಗೆ ಒಂದು ಅಚ್ಚರಿಯ ಸುಖಾಂತ ಸಿಕ್ಕಿತ್ತು.

ಮಿತ್ರಾ ವೆಂಕಟ್ರಾಜ್‌

Advertisement

Udayavani is now on Telegram. Click here to join our channel and stay updated with the latest news.

Next