Advertisement

ಭಾಗವತ ಅಂದರೆ ಭಗವದ್ಭಕ್ತ ಎಂದರ್ಥ: ಪೊಲ್ಯ ಉಮೇಶ್‌ ಶೆಟ್ಟಿ

11:48 AM Aug 25, 2019 | Team Udayavani |

ಮುಂಬಯಿ, ಆ. 24: ಯಕ್ಷಗಾನ ಜಾಗೃತಿಯ ಜಾನಪದ ಕಲೆಯಾಗಿದೆ. ಭಾರತೀಯ ಜನಜೀವನದ ಜ್ಞಾನ ನಿಷ್ಠೆಯನ್ನು ಜನಮಾನಸದಲ್ಲಿ ಪಸರಿಸುವುದಕ್ಕಾಗಿಯೇ ಈ ಕಲೆ ಆರಾಧನೆಗಾಗಿ ಹುಟ್ಟಿದ್ದು. ನಮ್ಮ ಪೂರ್ವಜರ ಕಲ್ಪನೆಯಂತೆ ಸಾಂಸ್ಕೃತಿಕ ಮತ್ತು ಸಾಹಿತ್ಯಕ ಶಕ್ತಿಗಳನ್ನು ನಿರೀಕ್ಷಿಸುವಲ್ಲಿ ಜ್ಞಾನ ನಿರ್ಮಾಣ ಮಾಡುವ ಈ ಕಲೆ ರಾಷ್ಟ್ರದ ಪ್ರತಿಯೊಂದು ಗ್ರಾಮವೂ ಭಾರತೀಯ ಸಂಸ್ಕೃತಿ ಮತ್ತು ಕಲೆಯನ್ನು ರೂಪಿಸುವಂತೆ ಮಾಡುತ್ತಾ ಎಲ್ಲರನ್ನೂ ಕಲಾವಿದರನ್ನಾಗಿಸುವ ಉದ್ದೇಶವಾಗಿ ಹುಟ್ಟುಪಡೆದಿದೆ. ಸಾಹಿತ್ಯ ಮತ್ತು ಸಾಂಸ್ಕೃತಿಕ ಮೇಳೈಕೆಯುಳ್ಳ ಈ ಕಲೆ ಚಲಿಸುವ ವಿಶ್ವವಿದ್ಯಾಲಯವಾಗಿ ಸಾಗರ ಲೋಕದ ಸಮೃದ್ಧ ಕಲೆ ಇದಾಗಿದೆ ಎಂದು ಹೊಟೇಲ್ ಉದ್ಯಮಿ ಪೊಲ್ಯ ಉಮೇಶ್‌ ಶೆಟ್ಟಿ ತಿಳಿಸಿದರು.

Advertisement

ಆ. 23ರಂದು ಸಂಜೆ ಸಾಂತಾಕ್ರೂಜ್‌ ಪೂರ್ವ ಬಿಲ್ಲವರ ಭವನದ ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ನಿರ್ಮಿಸಿರುವ ಸ್ವರ್ಗೀಯ ಸೂರು ಸಿ. ಕರ್ಕೇರ ವೇದಿಕೆಯಲ್ಲಿ ಜಯ ಸಿ. ಸುವರ್ಣ ತನ್ನ ಮಾತೃಶ್ರೀ ದಿ| ಅಚ್ಚು ಸಿ. ಸುವರ್ಣ ಸ್ಮರಣಾರ್ಥ ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಸಂಚಾಲಕತ್ವದ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿ ವತಿಯಿಂದ ವಾರ್ಷಿಕವಾಗಿ ಕೊಡಮಾಡುವ ’15ನೇ ವಾರ್ಷಿಕ ಯಕ್ಷಗಾನ ಕಲಾ ಪ್ರಶಸ್ತಿ’ ಪ್ರಧಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಭಾಗವತ ಅಂದರೆ ಭಗವದ್ಭಕ್ತ ಎಂದರ್ಥ. ಓದು ಬಾರದ ಮಂದಿಯ ಮುಂದೆ ಮೌಲ್ಯಯುತವಾಗಿ ಮಂಡಿಸುವ ಸಾಧ್ವಿ ಶಿರೋಮಣಿಗಳ ಸಮಸ್ತ ಜೀವನ ಚಿತ್ರಣವನ್ನು ಬಿಡಿಬಿಡಿ, ಎಳೆಎಳೆಯಾಗಿ ಚಿತ್ರಿಸಿ ಜೀವನವನ್ನು ಎತ್ತರಕ್ಕೇರಿಸುವ ಈ ಕಲೆಯನ್ನು ಪ್ರಸ್ತುತ ಪಡಿಸುವಲ್ಲಿ ಭಾಗವತನ ಪಾತ್ರ ಹಿರಿದಾಗಿದೆ. ಭಾಗವತನು ಆಸ್ತಿಕನಾಗಿದ್ದು ಪುರಾತನಗಳ ಜ್ಞಾನ‌ವುಳ್ಳವನಾಗಿರಬೇಕು. ಆಗಿದ್ದಾಗ ಮಾತ್ರ ಕಲೆಯು ನಿಜಾರ್ಥದ ಮೌಲ್ಯವನ್ನು ಹೊಂದಿ ಪಾವಿತ್ರ್ಯತೆಯ ಕಲೆಯಾಗಿ ವಿಶ್ವಮಾನ್ಯವಾಗಿ ಬೆಳೆಯಬಲ್ಲದು. ಇದನ್ನು ಕನ್ನಡಿಕಟ್ಟೆ ಕರಗತಗೊಳಿಸಿದ ಕಾರಣ ಇಂತಹ ಪುರಸ್ಕಾರಕ್ಕೆ ಅರ್ಹರು. ಪರಮ ಭಾಗವತನ ಈ ಸಮ್ಮಾನ ಅಭಿನಂದನೀಯವಾಗಿದೆ ಎಂದು ನುಡಿದರು.

ಬಿಲ್ಲವರ ಅಸೋಸಿಯೇಶನ್‌ನ ಅಧ್ಯಕ್ಷ ಚಂದ್ರಶೇಖರ ಎಸ್‌. ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರೀ ಗುರುನಾರಾಯಣ ಗುರುಗಳ ಪ್ರೇರಣೆ ಹಾಗೂ ಮುಂಬಯಿಗರ ಸಹಕಾರ ಮತ್ತು ಕಲಾಭಿಮಾನಿಗಳ ಆಶೀರ್ವಾದದಿಂದ ಗುರುನಾರಾಯಣ ಯಕ್ಷಗಾನ ಮಂಡಳಿ ಈ ಮಟ್ಟಕ್ಕೆ ಬೆಳೆದಿದೆ. ಯಕ್ಷರಂಗದಲ್ಲಿ ಇನ್ನೂ ಪಳಗಿ, ಕಲಾಸೇವೆಯೊಂದಿಗೆ ಶತಮಾನಗಳತ್ತ ಸಾಗಲಿ ಎಂದು ಹಾರೈಸಿದರು.

ಪ್ರಶಸ್ತಿಯ ಪ್ರಾಯೋಜಕ, ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಜಯ ಸಿ. ಸುವರ್ಣ ಅವರ ಉಪಸ್ಥಿತಿಯಲ್ಲಿ ನಡೆದ ಸಮಾರಂಭದಲ್ಲಿ ಗೌರವ ಅತಿಥಿಗಳಾಗಿ ಮಾತನಾಡಿ, ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ, ಭಾರತ್‌ ಬ್ಯಾಂಕಿನ ನಿರ್ದೇಶಕಿ ಶಾರದಾ ಸೂರು ಕರ್ಕೇರ, ಬಿಲ್ಲವ ಛೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರೀ ಕಾರ್ಯಾಧ್ಯಕ್ಷ ಎನ್‌.ಟಿ ಪೂಜಾರಿ, ಕಾರ್ಯಕ್ರಮದ ಪ್ರಾಯೋಜಕ ಕಾಪು ಸದಾ ನಂದ್‌ ಅಂಚನ್‌ ಥಾಣೆ, ಅಸೋಸಿಯೇಶನ್‌ನ ಉಪಾಧ್ಯಕ್ಷರುಗಳಾದ ಶಂಕರ ಡಿ. ಪೂಜಾರಿ, ಹರೀಶ್‌ ಜಿ. ಅಮೀನ್‌, ಶ್ರೀನಿವಾಸ ಆರ್‌. ಕರ್ಕೇರ, ಗೌರವ ಪ್ರಧಾನ ಕೋಶಾಧಿಕಾರಿ ರಾಜೇಶ್‌ ಜೆ. ಬಂಗೇರ, ಸಾಂಸ್ಕೃತಿಕ ಸಮಿತಿಯ ಕಾರ್ಯದರ್ಶಿ ಅಶೋಕ್‌ ಕುಕ್ಯಾನ್‌ ಸಸಿಹಿತ್ಲು ವೇದಿಕೆಯಲ್ಲಿ ಉಪಸ್ಥಿತರಿದ್ದು, ಗಾನಸುರಭಿ ಬಿರುದಾಂಕಿತ ಯಕ್ಷಗಾನದ ಪ್ರಸಿದ್ಧ ಭಾಗವತ ರವಿಚಂದ್ರ ಕನ್ನಡಿಕಟ್ಟೆ ಅವರಿಗೆ ‘ಯಕ್ಷಗಾನ ಕಲಾ ಪ್ರಶಸ್ತಿ-2019’ನ್ನು ಪ್ರದಾನಿಸಿ ಶುಭಹಾರೈಸಿದರು.

ಭಾಗವತ ಮುದ್ದು ಅಂಚನ್‌ ಅವರು ಭಾಗವತಿಕೆ ಶೈಲಿಯಲ್ಲಿ ಪ್ರಾರ್ಥನೆಗೈದರು. ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ದಯಾನಂದ್‌ ಆರ್‌. ಪೂಜಾರಿ ಸ್ವಾಗತಿಸಿದರು. ಅಕ್ಷಯ ಮಾಸಿಕದ ಸಂಪಾದಕ ಹರೀಶ್‌ ಹೆಜ್ಮಾಡಿ ಕಾರ್ಯಕ್ರಮ ನಿರೂಪಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ ಎಸ್‌. ಶಾಂತಿ ಪ್ರಸ್ತಾವನೆಗೈದು ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಬಾಬು ಎಲ್. ಸಾಲ್ಯಾನ್‌, ವಿನೋದ್‌ ಅಮೀನ್‌, ಸದಾನಂದ್‌ ಅಂಚನ್‌ ಕಾಪು ಪ್ರಾಯೋಜಕತ್ವದಲ್ಲಿ ಕರ್ನಾಟಕ ಜಾನಪದ, ಯಕ್ಷಗಾನ ಅಕಾಡೆಮಿ ಸಾಹಿತ್ಯ ಪ್ರಶಸ್ತಿ ಹಾಗೂ ಶ್ರೀ ವಿಶ್ವೇಶ್ವರ ತೀರ್ಥ ಪ್ರಶಸ್ತಿ ಪುರಸ್ಕೃತ ಹಾಗೂ ಅತಿಥಿ ಕಲಾವಿದರಿಂದ ‘ಬೌಮಾಸುರ-ರಾಜಾ ಪರೀಕ್ಷಿತ‌’ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next