Advertisement

ವಿಧ-ವಿಧ ಗಣಪನಿಗೆಅಂತಿಮ ರೂಪ

03:49 PM Aug 30, 2019 | Naveen |
ಕೆ.ಎಸ್‌. ಸುಧಿಧೀಂದ್ರ, ಭದ್ರಾವತಿ
ಭದ್ರಾವತಿ:
ಗಣಪತಿ ಹಬ್ಬಕ್ಕೆ ಕೇವಲ ಎರಡೇ ದಿನಗಳು ಉಳಿದಿರುವಂತೆ ವಿವಿಧ ಸಂಘ-ಸಂಸ್ಥೆಗಳಿಂದ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಲಿರುವ‌ ಗಣಪತಿ ಮೂರ್ತಿಗಳು ಕಲಾವಿದರ ಕೈಯಲ್ಲಿ ಅಂತಿಮ ಸ್ಪರ್ಶ ಪಡೆಯುವ ಮೂಲಕ ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ತೆರಳಲು ಸಿದ್ಧಗೊಳ್ಳುತ್ತಿವೆ

ಮೂರು ತಿಂಗಳಿಂದಲೇ ತಯಾರಿ: ಗಣಪತಿ ಹಬ್ಬ ಬರುವ ಮುನ್ನ ಸುಮಾರು ಮೂರು ತಿಂಗಳಿಂದಲೇ ಕಲಾವಿದರು ನಿಗದಿತವಾದ ಕೆರೆಗಳಿಗೆ ತೆರಳಿ ಎತ್ತಿನ ಗಾಡಿ, ಟ್ರ್ಯಾಕ್ಟರ್‌ಗಳಲ್ಲಿ ಕರಿಜೇಡಿಮಣ್ಣನ್ನು ತಂದು ಗೌರಿ- ಗಣಪತಿ ಮೂರ್ತಿ ತಯಾರಿಸುವ ಕಾಯಕದಲ್ಲಿ ತೊಡಗುತ್ತಾರೆ. ಆ ಕಲಾವಿದರ ಕೈಯಲ್ಲಿ ಛೋಟುದ್ದ ಗಣಪತಿ ವಿಗ್ರಹದಿಂದ ಹಿಡಿದು ಆಳೆತ್ತರಕ್ಕಿಂತ ಎತ್ತರವಾದ ಬೃಹತ್‌ ಗಣಪತಿ ವಿಗ್ರಹಗಳು ವಿವಿಧ ಭಂಗಿಯಲ್ಲಿರುವ ರೀತಿ ತಯಾರಾಗಿ ಕುಳಿತಿವೆ.

Advertisement

ಮಳೆ ತಂದ ಆತಂಕ: ಈ ಬಾರಿ ತೀವ್ರ ಸ್ವರೂಪದಲ್ಲಿ ಸುರಿದ ಮಳೆಯ ಪರಿಣಾಮವಾಗಿ ಗಣಪತಿ ತಯಾರಕರಲ್ಲಿ ಆತಂಕ ಮನೆ ಮಾಡಿತ್ತು. ಹಬ್ಬಕ್ಕೆ ಕೆಲವೇ ದಿನಗಳು ಉಳಿದಿದ್ದು ಈ ರೀತಿ ಮಳೆ ಸುರಿದರೆ ಮಣ್ಣಿನಿಂದ ತಯಾರಾದ ಈ ಗಣಪತಿ ವಿಗ್ರಹಗಳು ಒಣಗುವುದೆಂದು ಎಂಬ ಆತಂಕ ಸೃಷ್ಟಿಸಿತ್ತು. ಆದರೆ ಗಣಪತಿ ದಯೆಯಿಂದ ಮಳೆ ನಿಂತು ಬಿಸಿಲು, ಗಾಳಿ ಮೂಡಿದ ಪರಿಣಾಮವಾಗಿ ಗಣಪತಿ ವಿಗ್ರಹಗಳು ಒಣಗಿ ಕಲಾವಿದರ ಆತಂಕವನ್ನು ದೂರ ಮಾಡಿದವು.

ಕೆಲವು ಸಂಘ-ಸಂಸ್ಥೆಗಳು ಪ್ರತಿಷ್ಠಾಪಿಸುವ ಗಣಪತಿ ವಿಗ್ರಹ ಹೀಗೇ ಇರಬೇಕು ಎಂದು ತಿಂಗಳ ಮುಂಚಿತವಾಗಿ ಆರ್ಡರ್‌ ನೀಡಿದ್ದರೆ, ಮತ್ತೆ ಕೆಲವರು ಕಲಾವಿದರು ತಯಾರಿಸಿ ಸಿದ್ಧಪಡಿಸಿರುವ ಮೂರ್ತಿಯನ್ನು ಹಬ್ಬಕ್ಕೆ ಎರಡು- ಮೂರು ದಿನ ಮುನ್ನ ಬಂದು ನೋಡಿ ಆರಿಸಿಕೊಂಡು ಕೊಂಡೊಯ್ಯುತ್ತಾರೆ. ಇಲ್ಲಿನ ಹಳೇನಗರದ ಕುಂಬಾರ ಬೀದಿಯಲ್ಲಿ ಕೆಲವು ಕುಟುಂಬಗಳವರು ಮಡಿಕೆ, ಕುಡಿಕೆ ತಯಾರಿಕೆಯ ಜೊತೆಗೆ ಗೌರಿ-ಗಣಪತಿ ವಿಗ್ರಹ, ಬಾಸಿಂಗ ತಯಾರಿಸುವ ಸಾಂಪ್ರದಾಯಿಕ ವೃತ್ತಿಯನ್ನು ಇಂದಿಗೂ ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಅಂತಹ ಕಲಾವಿದರ ಕೈ ಚಳಕದಲ್ಲಿ ವೈವಿಧ್ಯಮಯಗಣಪತಿ ಮೂರ್ತಿಗಳು ಸಿದ್ಧಗೊಂಡಿವೆ.

ಮಣ್ಣಿನ ಗಣಪತಿಯ ಶ್ರೇಷ್ಠತೆ: ಪುರಾಣಗಳಲ್ಲಿ ಹೇಳಿರುವಂತೆ ಗಣಪತಿ ಪೂಜೆಗೆ ಬೆಳ್ಳಿ, ಬಂಗಾರ, ಪಂಚಲೋಹದ ಗಣಪತಿ ಶ್ರೇಷ್ಠ. ಆದರೆ ಇದಾವುದೂ ಸಾಧ್ಯವಿಲ್ಲವಾದರೆೆ ಮಣ್ಣಿನಿಂದ ತಯಾರಿಸಿದ ಗಣಪತಿ ಪೂಜೆಗೆ ಶ್ರೇಷ್ಠ ಎಂದು ಹೇಳಿರುವ ಮೇರೆಗೆ ಮಣ್ಣಿನ ಗಣಪತಿಯನ್ನೇ ಎಲ್ಲರೂ ಪ್ರತಿಷ್ಠಾಪಿಸಿ ಪೂಜಿಸುವ ಪರಿಪಾಠ ನಡೆದುಕೊಂಡು ಬಂದಿದೆ.

ಮುಳುಗದ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌: ಕೆಲವು ವರ್ಷಗಳಿಂದ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಮಣ್ಣಿನಿಂದ ತಯಾರಿಸಿದ ಗಣಪತಿ ವಿಗ್ರಹಗಳು ಮಾರುಕಟ್ಟೆಯನ್ನು ಪ್ರವೇಶಿದ ಕಾರಣ ಜೇಡಿಮಣ್ಣಿನಿಂದ ತಯಾರಾದ ಗಣಪತಿ ವಿಗ್ರಹಕ್ಕೆ ಸ್ವಲ್ಪ ಬೇಡಿಕೆ ಕಡಿಮೆಯಾಗುವ‌ ಆತಂಕ ಸೃಷ್ಟಿಸಿತಾದರೂ ಜೇಡಿಮಣ್ಣಿನ ಗಣಪತಿಯಲ್ಲಿರುವ ನೀರಿನಲ್ಲಿ ಕರಗುವ ಮತ್ತು ಮುಳುಗುವ ಈ ಎರಡೂ ಸ್ವಭಾವಗಳೂ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ನಿಂದ ತಯಾರಾದ ಗಣಪತಿಯಲ್ಲಿ ಇಲ್ಲದಿರುವ ಕಾರಣ ಜೇಡಿಮಣ್ಣಿನ ಗಣಪತಿಯನ್ನೇ ಹೆಚ್ಚು ಜನರು ಖರೀದಿಸಿ ಪ್ರತಿಷ್ಠಾಪಿಸುವುದನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

Advertisement

ಪರಿಸರ ಸ್ನೇಹಿ ಗಣಪತಿ: ಅನೇಕರು ಮನೆಗಳಲ್ಲಿ ಗಣಪತಿ ಪೂಜೆಗೆ ಕರಿಮಣ್ಣಿನಿಂದ ತಯಾರಾದ ಯಾವುದೇ ಬಣ್ಣಲೇಪನ ಮಾಡದ ಗಣಪತಿಯನ್ನು ಬಳಸುತ್ತಾರೆ ಆದ ಕಾರಣ ಗಣಪತಿ ತಯಾರಕರು ವರ್ಣರಹಿತವಾದ ಗಣಪತಿ ವಿಗ್ರಹವನ್ನೂ ಸಹ ತಯಾರಿಸಿ ಮಾರುತ್ತಾರೆ. ಇದನ್ನು ನಿಜಕ್ಕೂ ಪರಿಶುದ್ಧವಾದ ಪರಿಸರ ಸ್ನೇಹಿ ಗಣಪತಿ ವಿಗ್ರಹ ಎನ್ನಬಹುದು.

ವಾಟರ್‌ ಪೈಂಟ್ ಬಳಕೆ: ಈ ಹಿಂದೆ ವಿವಿಧ ವರ್ಣಗಳ ಆಯಿಲ್ ಪೈಂಟ್ ಬಳಸಿ ಗಣಪತಿ ವಿಗ್ರಹಕ್ಕೆ ಮಾಡುತ್ತಿದ್ದ ಬಣ್ಣದ ಗಣಪತಿ ಹೆಚ್ಚು ಆಕರ್ಷಣೀಯವಾಗಿ ಕಾಣುತ್ತಿತ್ತಾದರೂ ಈ ಗಣಪತಿ ವಿಗ್ರಹಗಳನ್ನು ಕೆರೆ, ನದಿ, ಬಾವಿಗಳಲ್ಲಿ ವಿಸರ್ಜಿಸಿದಾಗ ಅವುಗಳಲ್ಲಿನ ಬಣ್ಣದ ರಾಸಾಯನಿಕ ದ್ರವ್ಯಗಳು ನೀರಿನಲ್ಲಿ ಕರಗದೆ ಕೆರೆ, ನದಿ, ಬಾವಿಗಳಲ್ಲಿನ ಜಲಚರಗಳ ಜೀವಕ್ಕೆ ಹಾನಿಯುಂಟು ಮಾಡುವುದರ ಜೊತೆಗೆ ನೀರನ್ನು ಅಶುದ್ಧಗೊಳಿಸುವ ಮೂಲಕ ಜಲಮಾಲಿನ್ಯಕ್ಕೂ ಕಾರಣವಾಗುತ್ತಿತ್ತು ಎಂಬ ಕಾರಣಕ್ಕೆ ಜಿಲ್ಲಾಡಳಿತ ಗಣಪತಿ ತಯಾರಿಕೆಯಲ್ಲಿ ಆಯಿಲ್ ಪೈಂಟನ್ನು ಬಳಸದೆ ವಾಟರ್‌ ಪೈಂಟ್ ಮಾತ್ರ ಬಳಸಿ ಗಣಪತಿ ತಯಾರಿಸಬೇಕೆಂದು ನೀಡಿದ ಸಲಹೆ- ಸೂಚನೆ ಮೇರೆಗೆ ಕಲಾವಿದರು ವಾಟರ್‌ ಪೈಂಟನ್ನು ಮಾತ್ರ ಬಳಸಿ ಗಣಪತಿ ತಯಾರಿಸಿ ಮಾರುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next